ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ (ಸಿಬಿಐ), ತನ್ನ ಇತ್ತೀಚಿನ ಚಾರ್ಜ್ಶೀಟ್ನಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ದೆಹಲಿಯ ಅಬಕಾರಿ ನೀತಿಯ ರಚನೆ ಮತ್ತು ಜಾರಿಯಲ್ಲಿ ‘ಅಪರಾಧ ಸಂಚಿನಲ್ಲಿ ಭಾಗಿ’ಯಾಗಿದ್ದಾರೆ ಎಂದು ಆರೋಪಿಸಿದೆ.
ಪ್ರಕರಣದಲ್ಲಿ ತನ್ನ ಐದನೇ ಮತ್ತು ಅಂತಿಮ ಚಾರ್ಜ್ ಶೀಟ್ ಸಲ್ಲಿಕೆಯೊಂದಿಗೆ, ಸಿಬಿಐ ತನ್ನ ತನಿಖೆಯನ್ನು ಮುಕ್ತಾಯಗೊಳಿಸಿದೆ. ಕೇಜ್ರಿವಾಲ್ ಅವರು ಅಬಕಾರಿ ನೀತಿಯನ್ನು ಖಾಸಗೀಕರಣಗೊಳಿಸುವ ಪೂರ್ವ ಯೋಜನೆ ಹೊಂದಿದ್ದರು. ಅದಾದ ಬಳಿಕ ಭ್ರಷ್ಟಾಚಾರದ ಆರೋಪಗಳು ಕೇಳಿ ಬಂದಾಗ ಆ ಯೋಜನೆಯನ್ನು ರದ್ದುಗೊಳಿಸಲಾಗಿದೆ ಎಂದು ಸಿಬಿಐ ಹೇಳಿದೆ.
ಸಹ-ಆರೋಪಿ ಮನೀಶ್ ಸಿಸೋಡಿಯಾ ನೇತೃತ್ವದ ದೆಹಲಿ ಸಚಿವರ ತಂಡ ಈ ಅಬಕಾರಿ ನೀತಿಯನ್ನು ರೂಪಿಸುತ್ತಿರುವಾಗ ಅವರು (ಕೇಜ್ರಿವಾಲ್) ಮಾರ್ಚ್ 2021ರಲ್ಲಿ ತಮ್ಮ ಎಎಪಿಗೆ ಹಣಕಾಸು ಬೆಂಬಲವನ್ನು ಕೋರಿದ್ದರು. ಬಳಿಕ ಕೇಜ್ರಿವಾಲ್ ನಿಕಟ ಮತ್ತು ಎಎಪಿಯ ಮಾಧ್ಯಮ ಮತ್ತು ಸಂವಹನದ ಉಸ್ತುವಾರಿ ವಿಜಯ್ ನಾಯರ್ ದೆಹಲಿಯ ಅಬಕಾರಿ ವ್ಯವಹಾರದ ವಿವಿಧ ಪಾಲುದಾರರನ್ನು ಸಂಪರ್ಕಿಸಿದ್ದಾರೆ. ಈ ಉದ್ಯಮಿಗಳಿಗೆ ಅನುಕೂಲವಾಗುವಂತಹ ಅಬಕಾರಿ ನೀತಿ ಜಾರಿ ಮಾಡಿ ಅದರ ಬದಲಿಗೆ ಅಕ್ರಮ ಹಣವನ್ನು ಪಡೆದಿದ್ದಾರೆ ಎಂದು ತನಿಖಾ ಸಂಸ್ಥೆ ಆರೋಪಿಸಿದೆ. ಆದರೆ ಆಮ್ ಆದ್ಮಿ ಪಕ್ಷ (ಎಎಪಿ) ಆರೋಪವನ್ನು ನಿರಾಕರಿಸಿದೆ.
ಇದನ್ನು ಓದಿದ್ದೀರಾ? ಅಬಕಾರಿ ಪ್ರಕರಣ | ಅರವಿಂದ್ ಕೇಜ್ರಿವಾಲ್ ಜಾಮೀನು ಅರ್ಜಿ ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್
ಜಾರಿ ನಿರ್ದೇಶನಾಲಯ (ಇಡಿ) ತನಿಖೆ ನಡೆಸುತ್ತಿರುವ ಅಬಕಾರಿ ನೀತಿ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ದೆಹಲಿ ಸಿಎಂ ಕೇಜ್ರಿವಾಲ್ ಅವರನ್ನು ಜೂನ್ 26ರಂದು ತಿಹಾರ್ ಜೈಲಿನಲ್ಲಿ ಸಿಬಿಐ ಬಂಧಿಸಿದೆ. ಸಿಬಿಐ ಬಂಧನವನ್ನು ಪ್ರಶ್ನಿಸಿ ಕೇಜ್ರಿವಾಲ್ ಸಲ್ಲಿಸಿರುವ ಅರ್ಜಿಯ ತೀರ್ಪನ್ನು ಸುಪ್ರೀಂ ಕೋರ್ಟ್ ಸೋಮವಾರ ನೀಡಲಿಲ್ಲ.
ಇನ್ನು ಸಿಬಿಐ ತನ್ನ ಚಾರ್ಜ್ಶೀಟ್ನಲ್ಲಿ ಬಿಆರ್ಎಸ್ ನಾಯಕಿ ಕೆ ಕವಿತಾ ನೇತೃತ್ವದ ‘ಸೌತ್ ಗ್ರೂಪ್’ನ ಮಾತುಕತೆ ನಡೆಸಲು ವಿಜಯ್ ನಾಯರ್ ಕೇಜ್ರಿವಾಲ್ಗೆ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ಆರೋಪಿಸಿದೆ. ಅಬಕಾರಿ ನೀತಿ ಬದಲಾಗಿ ನೂರು ಕೋಟಿ ರೂಪಾಯಿ ಪಡೆಯಲು ನಾಯರ್ ಅನುಕೂಲ ಮಾಡಿಕೊಟ್ಟಿದ್ದರು ಎಂದು ಸಂಸ್ಥೆ ಹೇಳಿಕೊಂಡಿದೆ.
ಮುಖ್ಯಮಂತ್ರಿಯಾಗಿ ತಿರುಚಿತ ಅಬಕಾರಿ ನೀತಿಯ ಪ್ರಕ್ರಿಯೆ ಮತ್ತು ಅನುಮೋದನೆಯಲ್ಲಿ ಕೇಜ್ರಿವಾಲ್ ಭಾಗಿಯಾಗಿದ್ದಾರೆ. ಹವಾಲಾ ಮಾರ್ಗವನ್ನು ಬಳಸಿಕೊಂಡು ಇತರ ಇಬ್ಬರು ಆರೋಪಿಗಳಾದ ವಿನೋದ್ ಚೌಹಾಣ್ ಮತ್ತು ಆಶಿಶ್ ಮಾಥುರ್ ಮೂಲಕ ಗೋವಾಕ್ಕೆ ಅಕ್ರಮವಾಗಿ ಗಳಿಸಿದ ಹಣವನ್ನು ವರ್ಗಾವಣೆ ಮಾಡುವಲ್ಲಿ ಕೇಜ್ರಿವಾಲ್ ಪಾತ್ರವು ಬೆಳಕಿಗೆ ಬಂದಿದೆ ಎಂದು ಸಿಬಿಐ ಆರೋಪಿಸಿದೆ.
ಅಬಕಾರಿ ನೀತಿಯನ್ನು ತನಗೆ ಅನುಕೂಲವಾಗಿ ಮಾಡುವಂತೆ ರಚಿಸಲು ‘ಸೌತ್ ಗ್ರೂಪ್’ ಪಾವತಿಸಿದ 90-100 ಕೋಟಿ ರೂಪಾಯಿಗಳಲ್ಲಿ 44.5 ಕೋಟಿ ರೂ.ಗಳನ್ನು ಚುನಾವಣಾ ವೆಚ್ಚವನ್ನು ಭರಿಸಲು ಗೋವಾಕ್ಕೆ ಕಳುಹಿಸಲಾಗಿದೆ ಎಂದು ಸಂಸ್ಥೆ ಹೇಳಿಕೊಂಡಿದೆ.
ಈ ‘ಕ್ರಿಮಿನಲ್ ಪಿತೂರಿ’ಯಲ್ಲಿ ಎಲ್ಲಾ ಪಿತೂರಿದಾರರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಇದು ದೆಹಲಿ ಸರ್ಕಾರದ ಬೊಕ್ಕಸಕ್ಕೆ ಗಮನಾರ್ಹ ನಷ್ಟ ಉಂಟು ಮಾಡಿದೆ. ಹಾಗೆಯೇ ಇತರ ಆರೋಪಿಗಳಿಗೆ ಅನಗತ್ಯ ಹಣಕಾಸು ಲಾಭ ನೀಡಿದೆ ಎಂದು ಸಿಬಿಐ ದೂರಿದೆ.
