ಎನ್ಇಪಿಯ ಶಿಫಾರಸ್ಸಿನ ಅನುಸಾರ 14,500 ಶಾಲೆಗಳನ್ನು 'ಉತ್ತಮ ದರ್ಜೆಗೇರಿಸುವ' ಪಿಎಂಶ್ರೀ ಯೋಜನೆಗೆ ಕೇಂದ್ರದ 'ತಿಳಿವಳಿಕೆ ಪತ್ರ'ಕ್ಕೆ (ಎಂಒಯು) ರಾಜ್ಯಗಳು ಸಹಿ ಹಾಕಬೇಕು. ವಿರೋಧ ಪಕ್ಷಗಳು ಆಡಳಿತದಲ್ಲಿರುವ ತಮಿಳುನಾಡು, ಕೇರಳ, ಪಂಜಾಬ್, ಪಶ್ಚಿಮ ಬಂಗಾಳ, ದೆಹಲಿ ಸರ್ಕಾರಗಳು ಈ ಎಂಒಯುಗೆ ಸಹಿ ಹಾಕಿಲ್ಲ. ಹಾಗಾಗಿ ಅವರಿಗೆ ಅನುದಾನ ಬಿಡುಗಡೆ ಮಾಡಿಲ್ಲ. ಕೇಂದ್ರ ಸರ್ಕಾರದ ಈ ದ್ವೇಷ ಧೋರಣೆ, ಒಕ್ಕೂಟ ವ್ಯವಸ್ಥೆಯನ್ನೇ ಛಿದ್ರಗೊಳಿಸುತ್ತಿದೆಯಲ್ಲವೇ?
18 ಜುಲೈ 2024ರಂದು ದಿನಪತ್ರಿಕೆಗಳಲ್ಲಿ ಪ್ರಕಟವಾದ ವರದಿಯ ಪ್ರಕಾರ ಕೇಂದ್ರ ಶಿಕ್ಷಣ ಇಲಾಖೆಯು ದೆಹಲಿ, ಪಂಜಾಬ್, ಪಶ್ಚಿಮ ಬಂಗಾಳ ರಾಜ್ಯಗಳಿಗೆ ಸಮಗ್ರ ಶಿಕ್ಷಣ ಅಭಿಯಾನದ(ಎಸ್ಎಸ್ಎ) ಅಡಿಯಲ್ಲಿ ಆರ್ಥಿಕ ಅನುದಾನವನ್ನು ನಿಲ್ಲಿಸಿದೆ. ಈ ಮೂರು ರಾಜ್ಯಗಳು ಪಿಎಂಶ್ರೀ(ಪ್ರಧಾನ ಮಂತ್ರಿ ಸ್ಕೂಲ್ ಫಾರ್ ರೈಸಿಂಗ್ ಇಂಡಿಯಾ) ಯೋಜನೆಯನ್ನು ತಮ್ಮ ರಾಜ್ಯಗಳಲ್ಲಿ ಜಾರಿಗೊಳಿಸಲು ಆಸಕ್ತಿ ವಹಿಸದೆ ಇರುವ ಕಾರಣಕ್ಕೆ ಅವರ ವಿರುದ್ಧ ಈ ರೀತಿಯ ದ್ವೇಷದ ಧೋರಣೆ ಪ್ರದರ್ಶಿಸಿದ್ದಾರೆ.
ಮುಂದಿನ ಐದು ವರ್ಷಗಳಿಗೆ 27,000 ಕೋಟಿ ನಿಗದಿಪಡಿಸಲಾಗಿರುವ ಈ ಪಿಎಂಶ್ರೀ ಯೋಜನೆಗೆ ಕೇಂದ್ರ ಶೇ. 60ರಷ್ಟು ರಾಜ್ಯಗಳು ಶೇ. 40ರಷ್ಟು ಅನುದಾನ ಹಂಚಿಕೆ ಮಾಡಬೇಕಿದೆ. ಎನ್ಇಪಿಯ ಶಿಫಾರಸ್ಸಿನ ಅನುಸಾರ 14,500 ಶಾಲೆಗಳನ್ನು ‘ಉತ್ತಮ ದರ್ಜೆಗೇರಿಸುವ’ ಈ ಯೋಜನೆಗೆ ಕೇಂದ್ರದ ‘ತಿಳಿವಳಿಕೆ ಪತ್ರ’ಕ್ಕೆ (ಎಂಒಯು) ರಾಜ್ಯಗಳು ಸಹಿ ಹಾಕಬೇಕು. ವಿರೋಧ ಪಕ್ಷಗಳು ಆಡಳಿತದಲ್ಲಿರುವ ತಮಿಳುನಾಡು, ಕೇರಳ, ಪಂಜಾಬ್, ಪಶ್ಚಿಮ ಬಂಗಾಳ, ದೆಹಲಿ ಸರ್ಕಾರಗಳು ಈ ಎಂಒಯುಗೆ ಸಹಿ ಹಾಕಿಲ್ಲ. ತಮಿಳುನಾಡು, ಕೇರಳ ಸಹಿ ಹಾಕಲು ಮುಂದಾಗಿವೆ, ಆದರೆ ಉಳಿದ ಎರಡು ರಾಜ್ಯಗಳು ನಿರಾಕರಿಸಿರುವುದರಿಂದ ಎಸ್ಎಸ್ಎ ಅನುದಾನವನ್ನೇ ಸ್ಥಗಿತಗೊಳಿಸಲಾಗಿದೆ.
ಪಂಜಾಬ್, ಪಶ್ಚಿಮ ಬಂಗಾಳ, ದೆಹಲಿ ರಾಜ್ಯಗಳಿಗೆ 2023-24ರ ಅಕ್ಟೋಬರ್-ಡಿಸೆಂಬರ್ ಮತ್ತು ಜನವರಿ-ಮಾರ್ಚ್ ಎರಡು ತ್ರೈಮಾಸಿಕ ಅವಧಿಗೆ ಮೂರು ಮತ್ತು ನಾಲ್ಕನೆ ಕಂತಿನ ಮತ್ತು 2024-25ರ ಎಪ್ರಿಲ್-ಜೂನ್ ತ್ರೈಮಾಸಿಕದ ಮೊದಲ ಕಂತಿನ ಅನುದಾನ ನಿರಾಕರಿಸಿದ್ದಾರೆ. ಕೇಂದ್ರ ಶಿಕ್ಷಣ ಇಲಾಖೆಗೆ ಹಲವು ಬಾರಿ ಜ್ಞಾಪನಾ ಪತ್ರಗಳನ್ನು ಬರೆದರೂ ಪ್ರಯೋಜನವಾಗಲಿಲ್ಲ.
ದಿನಪತ್ರಿಕೆಗಳಲ್ಲಿನ ವರದಿಯ ಪ್ರಕಾರ ದೆಹಲಿಗೆ 330 ಕೋಟಿ, ಪಂಜಾಬ್ಗೆ 515 ಕೋಟಿ, ಪಶ್ಚಿಮ ಬಂಗಾಳಕ್ಕೆ 1,000 ಕೋಟಿ ಅನುದಾನ ಬಿಡುಗಡೆಯಾಗಬೇಕಿತ್ತು, ಆಗಲಿಲ್ಲ. ಶಿಕ್ಷಣ ಇಲಾಖೆಯ ಮೂಲಗಳ ಪ್ರಕಾರ ಪಿಎಂಶ್ರೀ ಯೋಜನೆ ಅಳವಡಿಸಿಕೊಳ್ಳದೆ ಇರುವ ಕಾರಣ ಅನುದಾನ ಕೊಡುತ್ತಿಲ್ಲ ಎಂದು ವರದಿಯಾಗಿದೆ. ಈ ರಾಜ್ಯಗಳು ‘ನಾವೂ ಸಹ ಶೇ. 40ರಷ್ಟು ಅನುದಾನ ಕೊಡುವುದರಿಂದ ಪಿಎಂಶ್ರೀ ಎಂದು ಹೆಸರಿಡುವುದನ್ನು ತಿರಸ್ಕರಿಸುತ್ತೇವೆ’ ಎಂದು ಹೇಳುತ್ತಾರೆ. ಗಾಯದ ಮೇಲೆ ಬರೆ ಎಳೆದಂತೆ ಎನ್ಇಪಿಯನ್ನು ಜಾರಿಗೊಳಿಸದ ರಾಜ್ಯಗಳಿಗೆ ಅನುದಾನ ಕಡಿತಗೊಳಿಸಲಾಗುತ್ತಿದೆ ಎನ್ನುವ ಆರೋಪಗಳು ಕೇಳಿ ಬರುತ್ತಿದೆ.

9 ಸೆಪ್ಟೆಂಬರ್ 2024ರ ‘ದ ಹಿಂದೂ’ ದಿನಪತ್ರಿಕೆಯಲ್ಲಿ ಪ್ರಕಟವಾದ ವಿಶ್ಲೇಷಣೆಯಲ್ಲಿ 22 ಮುಖ್ಯ ರಾಜ್ಯಗಳನ್ನು ಸಮಗ್ರ ಶಿಕ್ಷಣ ಅಭಿಯಾನದ 20 ಗುರಿಗಳೊಂದಿಗೆ ಹೋಲಿಸಿದ್ದಾರೆ. ಎಲ್ಲಾ 20 ಗುರಿಗಳಲ್ಲಿ ಕೇರಳವು ಉತ್ತಮವಾಗಿ ಕಾರ್ಯ ನಿರ್ವಹಿಸಿದ 11 ರಾಜ್ಯಗಳಲ್ಲಿ ಮೊದಲನೆಯ ಸ್ಥಾನದಲ್ಲಿದ್ದರೆ ತಮಿಳುನಾಡು 19 ಗುರಿಗಳನ್ನು, ದೆಹಲಿ 18, ಪಶ್ಚಿಮ ಬಂಗಾಳ 15 ಗುರಿಗಳನ್ನು, ಪಂಜಾಬ್ 12 ಗುರಿಗಳನ್ನು ಸಾಧಿಸಿದೆ. ಆದರೆ ಈ ರಾಜ್ಯಗಳಿಗೆ ಎಸ್ಎಸ್ಎ ಅನುದಾನವನ್ನು ತಡೆಹಿಡಿಯಲಾಗಿದೆ. 20ರ ಪೈಕಿ ಕೇವಲ 8 ಗುರಿಗಳನ್ನು ಸಾಧಿಸಿದ ಗುಜರಾತ್, 3 ಗುರಿಗಳನ್ನು ಸಾಧಿಸಿದ ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶ ಮತ್ತು 2 ಗುರಿಗಳನ್ನು ಸಾಧಿಸಿದ ಬಿಹಾರ್ ರಾಜ್ಯಗಳಿಗೆ ಅನುದಾನ ಹಂಚಿಕೆ ಮಾಡಿದ್ದಾರೆ.
ಇದನ್ನು ಓದಿದ್ದೀರಾ?: ವಾಟ್ಸಾಪ್, ಗೂಗಲ್ ಸರ್ಚ್ ಬಗ್ಗೆ ತಿಳಿದು ಅನುಸರಿಸಬೇಕಾದ ಮುಖ್ಯ ವಿಷಯಗಳು ಇಲ್ಲಿವೆ ನೋಡಿ
ಉದಾಹರಣೆಗೆ ಉತ್ತಮ 11 ರಾಜ್ಯಗಳ ಪೈಕಿ ತಮಿಳುನಾಡು, ಕೇರಳದಲ್ಲಿ 6-10 ವಯಸ್ಸಿನ ಮಕ್ಕಳು ಹೆಚ್ಚಿನ ಪ್ರಮಾಣದಲ್ಲಿ ಪ್ರಾಥಮಿಕ ಶಾಲೆಗೆ ಹಾಜರಾಗಿದ್ದರೆ ಕೆಳಸ್ತರದ 11 ರಾಜ್ಯಗಳ ಪೈಕಿ ಬಿಹಾರ್, ಉತ್ತರ ಪ್ರದೇಶದಲ್ಲಿ ಕಡಿಮೆ ಪ್ರಮಾಣದಲ್ಲಿ ಹಾಜರಾಗಿದ್ದಾರೆ. ಉತ್ತಮ 11 ರಾಜ್ಯಗಳ ಪೈಕಿ ದೆಹಲಿ, ಕೇರಳದಲ್ಲಿ 6-10 ವಯಸ್ಸಿನ ಬಾಲಕಿಯರು ಹೆಚ್ಚಿನ ಪ್ರಮಾಣದಲ್ಲಿ ಪ್ರಾಥಮಿಕ ಶಾಲೆಗೆ ಹಾಜರಾಗಿದ್ದರೆ ಕೆಳಸ್ತರದ 11 ರಾಜ್ಯಗಳ ಪೈಕಿ ಬಿಹಾರ್, ಉತ್ತರ ಪ್ರದೇಶದಲ್ಲಿ ಕಡಿಮೆ ಪ್ರಮಾಣದಲ್ಲಿ ಹಾಜರಾಗಿದ್ದಾರೆ. ಉತ್ತಮ 11 ರಾಜ್ಯಗಳ ಪೈಕಿ ಪಶ್ಚಿಮ ಬಂಗಾಳ, ಕೇರಳದಲ್ಲಿ 6-17 ವಯಸ್ಸಿನ ಪ.ಜಾತಿ ಮಕ್ಕಳು ಹೆಚ್ಚಿನ ಪ್ರಮಾಣದಲ್ಲಿ ಪ್ರಾಥಮಿಕ ಶಾಲೆಗೆ ಹಾಜರಾಗಿದ್ದರೆ ಕೆಳಸ್ತರದ 11 ರಾಜ್ಯಗಳ ಪೈಕಿ ಪಂಜಾಬ್, ಉತ್ತರ ಪ್ರದೇಶದಲ್ಲಿ ಕಡಿಮೆ ಪ್ರಮಾಣದಲ್ಲಿ ಹಾಜರಾಗಿದ್ದಾರೆ. ಉತ್ತಮ 11 ರಾಜ್ಯಗಳ ಪೈಕಿ ಪಶ್ಚಿಮ ಬಂಗಾಳ, ಕೇರಳದಲ್ಲಿ 6-17 ವಯಸ್ಸಿನ ಪ.ಪಂಗಡದ ಮಕ್ಕಳು ಹೆಚ್ಚಿನ ಪ್ರಮಾಣದಲ್ಲಿ ಪ್ರಾಥಮಿಕ ಶಾಲೆಗೆ ಹಾಜರಾಗಿದ್ದರೆ ಕೆಳಸ್ತರದ 11 ರಾಜ್ಯಗಳ ಪೈಕಿ ಮಹಾರಾಷ್ಟ್ರ, ಮಧ್ಯ ಪ್ರದೇಶದಲ್ಲಿ ಕಡಿಮೆ ಪ್ರಮಾಣದಲ್ಲಿ ಹಾಜರಾಗಿದ್ದಾರೆ. ಉತ್ತಮ 11 ರಾಜ್ಯಗಳ ಪೈಕಿ ತಮಿಳುನಾಡಿನಲ್ಲಿ 6-17 ವಯಸ್ಸಿನ ಮುಸ್ಲಿಂ ಮಕ್ಕಳು ಹೆಚ್ಚಿನ ಪ್ರಮಾಣದಲ್ಲಿ ಪ್ರಾಥಮಿಕ ಶಾಲೆಗೆ ಹಾಜರಾಗಿದ್ದರೆ ಕೆಳಸ್ತರದ 11 ರಾಜ್ಯಗಳ ಪೈಕಿ ಹರಿಯಾಣ, ಉತ್ತರ ಪ್ರದೇಶದಲ್ಲಿ ಕಡಿಮೆ ಪ್ರಮಾಣದಲ್ಲಿ ಹಾಜರಾಗಿದ್ದಾರೆ. ಉತ್ತಮ 11 ರಾಜ್ಯಗಳ ಪೈಕಿ ಜಮ್ಮು- ಕಾಶ್ಮೀರ, ಕೇರಳದಲ್ಲಿ 6-17 ವಯಸ್ಸಿನ ಹಿಂದುಳಿದ ಜಾತಿಗಳ ಮಕ್ಕಳು ಹೆಚ್ಚಿನ ಪ್ರಮಾಣದಲ್ಲಿ ಪ್ರಾಥಮಿಕ ಶಾಲೆಗೆ ಹಾಜರಾಗಿದ್ದರೆ ಕೆಳಸ್ತರದ 11 ರಾಜ್ಯಗಳ ಪೈಕಿ ಗುಜರಾತ್, ಉತ್ತರ ಪ್ರದೇಶದಲ್ಲಿ ಕಡಿಮೆ ಪ್ರಮಾಣದಲ್ಲಿ ಹಾಜರಾಗಿದ್ದಾರೆ.

ಮೋದಿ ನೇತೃತ್ವದ ಸಮ್ಮಿಶ್ರ ಸರ್ಕಾರವು ವಿರೋಧ ಪಕ್ಷಗಳ ರಾಜ್ಯಗಳ ವಿರುದ್ಧ ದ್ವೇಷದ ರಾಜಕಾರಣ ಮಾಡುತ್ತಿದೆ ಎಂಬುದು ಮೇಲಿನ ಅಂಕಿಅಂಶಗಳಿಂದ ಸ್ಪಷ್ಟವಾಗುತ್ತದೆ. ಒಕ್ಕೂಟ ವ್ಯವಸ್ಥೆಯ ಆಶಯವನ್ನೇ ಭಗ್ನಗೊಳಿಸುವ ಈ ನೀತಿಯಿಂದ ಪ್ರಜಾಪ್ರಭುತ್ವದ ಬುನಾದಿಯೇ ದುರ್ಬಲಗೊಳ್ಳುತ್ತದೆ. ಸಮತಲವಾದ(ಹಾರಿಜಂಟಲ್) ‘ಸಹಕಾರಿ ಒಕ್ಕೂಟ ವ್ಯವಸ್ಥೆ’ ಅವನತಿಗೊಂಡು ಮೇಲಿನಿಂದ ನಿಯಂತ್ರಣಕ್ಕೊಳಪಟ್ಟ ಲಂಬವಾದ(ವರ್ಟಿಕಲ್) ವ್ಯವಸ್ಥೆ ಪ್ರಾಬಲ್ಯ ಸಾಧಿಸಿದೆ. ಇಲ್ಲಿ ವಿರೋಧ ಪಕ್ಷಗಳೂ ಸಹ ಒಗ್ಗಟ್ಟಾಗಿ ಒಕ್ಕೂಟ ವ್ಯವಸ್ಥೆಯ ಪರವಾಗಿ ಜನಾಂದೋಲನ ರೂಪಿಸಬೇಕಾಗಿದೆ. ಜೊತೆಗೆ 16ನೆ ಹಣಕಾಸು ಆಯೋಗವು ರಾಜ್ಯಗಳೊಂದಿಗೆ ಸಮಾಲೋಚನೆ ನಡೆಸುತ್ತಿದೆ. ರಾಜ್ಯ ಸರ್ಕಾರಗಳು ಸೆಸ್ ಮತ್ತು ಸರ್ಚಾರ್ಜ್ನ ಶೇ.3ರಷ್ಟು ಮಾತ್ರ ಕೇಂದ್ರ ಉಳಿಸಿಕೊಂಡು ಮಿಕ್ಕ ಮೊತ್ತವನ್ನು ರಾಜ್ಯಗಳ ಬಾಬತ್ತಿಗೆ ಹಂಚಬೇಕು, ತೆರಿಗೆಯ ಶೇ. 50ರಷ್ಟು ಪ್ರಮಾಣವನ್ನು ರಾಜ್ಯಗಳಿಗೆ ಹಂಚಿಕೆ ಮಾಡಬೇಕು ಮುಂತಾದ ವಿಷಯಗಳ ಕುರಿತಾಗಿಯೂ ಹಕ್ಕೊತ್ತಾಯ ಮಂಡಿಸಬೇಕಿದೆ. ಯಾಕೆಂದರೆ ಒಕ್ಕೂಟ ವ್ಯವಸ್ಥೆ ಉಳಿಯಬೇಕಲ್ಲವೇ?

ಬಿ. ಶ್ರೀಪಾದ ಭಟ್
ಶಿಕ್ಷಣ ತಜ್ಞರಾದ ಶ್ರೀಪಾದ ಭಟ್ ಅವರು, ಮೂಲತಃ ವಿಜಯನಗರ ಜಿಲ್ಲೆಯವರು. ದಲಿತ ಮತ್ತು ಪ್ರಗತಿಪರ ಚಳವಳಿಗಳಲ್ಲಿ ಸಕ್ರಿಯರಾಗಿರುವ ಇವರು, 'ಹಿಂದುತ್ವ ರಾಜಕಾರಣ - ಅಂದು ಇಂದು ಮುಂದು', 'ಬಿಸಿಲು, ಬಯಲು, ನೆಳಲು - ಹೊಸ ಅಲೆ ಸಿನಿಮಾ ಕುರಿತಾದ ಕಥನ', 'ಕಣ್ಕಟ್ಟು', 'ಸಾವಿತ್ರಿಬಾಯಿ ಫುಲೆ ಬದುಕು ಬರಹ' ಮೊದಲಾದ ಕೃತಿಗಳನ್ನು ಬರೆದಿದ್ದಾರೆ