ಮೋದಿ ಸರ್ಕಾರದ ಜನವಿರೋಧಿ, ಫ್ಯಾಸಿಸ್ಟ್ ಆಡಳಿತವನ್ನು ಗಟ್ಟಿಧ್ವನಿಯಲ್ಲಿ ವಿರೋಧಿಸುತ್ತಿದ್ದವರಲ್ಲಿ ಖಾಲಿದ್ ಕೂಡ ಒಬ್ಬರು. ಅವರ ಧನಿಯನ್ನು ಹತ್ತಿಕ್ಕಲು ದೆಹಲಿ ಪೊಲೀಸರು ಭಾರೀ ಕಸರತ್ತು ನಡೆಸಿದ್ದರು. ಅವರಿಗೆ ಅಸ್ತ್ರವಾಗಿ ಸಿಕ್ಕಿದ್ದು, 2020ರಲ್ಲಿ ನಡೆದ ದೆಹಲಿ ಗಲಭೆ, ಅದನ್ನೇ ನೆಪವಾಗಿಟ್ಟುಕೊಂಡು ಖಾಲಿದ್ ಅವರನ್ನು ಬಂಧಿಸಿ, ಯುಎಪಿಎ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.
2020ರ ದೆಹಲಿ ಗಲಭೆ ಪ್ರಕರಣದಲ್ಲಿ ಬಂಧಿತರಾಗಿರುವ ವಿದ್ಯಾರ್ಥಿ ನಾಯಕ, ಯುವ ಹೋರಾಟಗಾರ ಉಮರ್ ಖಾಲಿದ್ ಜೈಲು ಸೇರಿ ಬರೋಬ್ಬರಿ ನಾಲ್ಕು ವರ್ಷಗಳಾಗಿವೆ. ಯಾವುದೇ ವಿಚಾರಣೆಗಳಿಲ್ಲದೆ, ಜಾಮೀನೂ ಸಿಗದೆ ಸೆರೆವಾಸ ಅನುಭವಿಸುತ್ತಿದ್ದಾರೆ. ವಿಚಾರಣೆ, ತೀರ್ಪು, ಬಿಡುಗಡೆ, ಜಾಮೀನು ಯಾವುದಾದರೂ ತ್ವರಿತವಾಗಿ ದೊರೆಯುವುದೇ ಎಂದು ಎದುರು ನೋಡುತ್ತಿದ್ದಾರೆ. ಆದರೆ, ಅವರ ಪಾಲಿಗೆ ನ್ಯಾಯಾಂಗ ಮೌನವಾಗಿದೆ. ಕಾಣದಂತಾಗಿದೆ.
2020ರಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋದ್ಧ ನಡೆಯುತ್ತಿದ್ದ ಪ್ರತಿಭಟನೆ ವೇಳೆ ದೆಹಲಿಯಲ್ಲಿ ಕೆಲ ಕಿಡಿಗೇಡಿಗಳಿಂದ ಹಿಂಚಾಸಾರ ಭುಗಿಲೆದ್ದಿತ್ತು. ಆ ಗಲಭೆಗೆ ಸಂಚು ರೂಪಿಸಿದ ಆರೋಪದ ಮೇಲೆ ವಿದ್ಯಾರ್ಥಿ ನಾಯಕ ಉಮರ್ ಖಾಲಿದ್ ಅವರನ್ನು 2020ರ ಸೆ.13ರಂದು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಮಾತ್ರವಲ್ಲದೆ, ಅವರ ವಿರುದ್ಧ ಧಾರ್ಮಿಕ ಭಾವನೆ ಕದಡಿದ್ದಾರೆ ಎಂಬ ಆರೋಪ ಹೊರಿಸಿ, ‘ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ’ (ಯುಎಪಿಎ) ಅಡಿ ಪ್ರಕರಣವನ್ನೂ ದಾಖಲಿಸಿದ್ದಾರೆ.
ಉಮರ್ ಖಾಲಿದ್ ಬಂಧನವಾಗಿ ಈ ವರ್ಷ ಸೆಪ್ಟೆಂಬರ್ 13ಕ್ಕೆ ಅಂದರೆ, ನಿನ್ನೆಗೆ ನಾಲ್ಕು ವರ್ಷಗಳಾಗಿವೆ. ನಾಲ್ಕು ವರ್ಷಗಳಿಂದ ಖಾಲಿದ್ ದೆಹಲಿಯ ತಿಹಾರ್ ಜೈಲಿನಲ್ಲಿದ್ದಾರೆ. ಖಾಲಿದ್ ವಿರುದ್ಧ ದೆಹಲಿ ಪೊಲೀಸರು ಯುಎಪಿಎ ಅಡಿ ಪ್ರಕರಣ ದಾಖಲಿಸಿ, ನಾಲ್ಕೂವರೆ ವರ್ಷಗಳಾಗಿವೆ. ಆದರೆ, ಇನ್ನೂ ಕೂಡ ಈ ಪ್ರಕರಣ ವಿಚಾರಣೆಗೆ ಬಂದಿಲ್ಲ. ದೆಹಲಿ ಪೊಲೀಸರು ಪರಿಪೂರ್ಣ ಜಾರ್ಜ್ಶೀಟ್ ಅನ್ನೂ ಸಲ್ಲಿಸಿಲ್ಲ. ದೆಹಲಿ ಗಲಭೆ ಆರೋಪದ ಮೇಲೆ ಖಾಲಿದ್ ಜೊತೆ ಬಂಧಿತರಾಗಿರುವ ಇತರ 18 ಆರೋಪಿಗಳಲ್ಲಿ 12 ಮಂದಿ ಇನ್ನೂ ಜಾಮೀನು ಪಡೆಯುವುದಕ್ಕಾಗಿ ಹೋರಾಡುತ್ತಿದ್ದಾರೆ. ಖಾಲಿದ್ ಸೈಫಿ ಮತ್ತು ಗುಲ್ಫಿಶಾ ಫಾತಿಮಾ ಅವರಂತಹ ಸಾಮಾಜಿಕ ಕಾರ್ಯಕರ್ತರು ನಾಲ್ಕು ವರ್ಷ ಐದು ತಿಂಗಳಿಂದ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ.
ದೇಶದ ಅತ್ಯಂತ ಕಠಿಣ ಕಾನೂನುಗಳಲ್ಲಿ ಯುಎಪಿಎ ಮೊದಲನೆಯದ್ದು. ಜಾಮೀನು ಕಷ್ಟಸಾಧ್ಯವಾದ ಈ ಕಾಯ್ದೆಯಡಿ ಸಾವಿರಾರು ಮಂದಿ ಬಂಧನದಲ್ಲಿದ್ದಾರೆ. ತನಿಖೆ ಮತ್ತು ವಿಚಾರಣೆ ಪೂರ್ಣಗೊಳ್ಳದೆ ತೀರ್ಪು ವಿಳಂಬವಾಗುತ್ತಿರುವ ಕಾರಣ ಸಾವಿರಾರು ಆರೋಪಿಗಳು ಹಲವು ವರ್ಷಗಳಿಂದ ಕಾಲ ಸೆರೆವಾಸ ಅನುಭವಿಸುತ್ತಿದ್ದಾರೆ. ತನ್ನ ವಿರುದ್ಧ ಮಾತನಾಡುವವರನ್ನು ಹತ್ತಿಕ್ಕಲು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಈ ಕಾಯ್ದೆಯನ್ನು ತನ್ನ ಅಸ್ತ್ರವನ್ನಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂಬ ಆರೋಪ ಕೂಡ ಇದೆ.
ಯುಎಪಿಎ ಕಾಯ್ದೆಯಡಿ ಖಾಲಿದ್ ಬಂಧನವಾಗಿ ನಾಲ್ಕು ವರ್ಷಗಳು ಕಳೆದರೂ, ಸರಿಯಾದ ವಿಚಾರಣೆ ನಡೆದಿಲ್ಲ. ಹಲವು ಪ್ರಕರಣಗಳಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆಧಾರದಲ್ಲಿ ಜಾಮೀನು ನೀಡುವ ನ್ಯಾಯಾಲಯಗಳು, ಖಾಲಿದ್ ವಿಚಾರದಲ್ಲಿ ಮಾತ್ರ ಮೌನಕ್ಕೆ ಜಾರಿವೆ. ಜಾಮೀನು ಅರ್ಜಿ, ಪ್ರಕರಣದ ವಿಚಾರಣೆಯನ್ನು ಪದೇ-ಪದೇ ಮುಂದೂಡುತ್ತಲೇ ಬಂದಿವೆ.
ಖಾಲಿದ್ ಮತ್ತು ಇತರರ ವಿರುದ್ಧ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಕಠಿಣ ಯುಎಪಿಎ, ಭಯೋತ್ಪಾದನಾ-ವಿರೋಧಿ ಕಾನೂನು ಹಾಗೂ ಐಪಿಸಿ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದಲ್ಲಿ ಮೊದಲ ಚಾರ್ಜ್ಶೀಟ್ ಅನ್ನು 2020ರ ನವೆಂಬರ್ 20ರಂದು ಸಲ್ಲಿಸಲಾಗಿತ್ತು. ಅಲ್ಲದೆ, ನಾಲ್ಕನೇ ಪೂರಕ ಚಾರ್ಜ್ ಶೀಟ್ ಅನ್ನು 2023ರ ಜೂನ್ 8 ರಂದು ಸಲ್ಲಿಸಲಾಗಿದೆ.
ಅದಾಗ್ಯೂ, ಪರಿಪೂರ್ಣ ಚಾರ್ಜ್ಶೀಟ್ ಸಲ್ಲಿಕೆಯಾಗಿಲ್ಲ. 2021ರ ಜುಲೈ ತಿಂಗಳಿನಲ್ಲಿ ಖಾಲಿದ್ ಮೊದಲ ಬಾರಿಗೆ ಜಾಮೀನು ಅರ್ಜಿ ಸಲ್ಲಿಸಿದ್ದರು. ಅದೇ ವರ್ಷದ ಆಗಸ್ಟ್ನಲ್ಲಿ ಅರ್ಜಿಯ ವಿಚಾರಣೆ ನಡೆಯಿತು. ಅದಾದ ಎಂಟು ತಿಂಗಳ ನಂತರ, ಅಂದರೆ, 2022ರ ಮಾರ್ಚ್ 24ರವರೆಗೂ ವಿಚಾರಣೆ ಮುಂದುವರೆದು, ಅಂದು ದೆಹಲಿ ಸೆಷನ್ಸ್ ನ್ಯಾಯಾಲಯವು ಜಾಮೀನು ನಿರಾಕರಿಸಿತು. ಅಲ್ಲದೆ, ಖಾಲಿದ್ ಅವರ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ನಲ್ಲಿ 14 ಬಾರಿ ಮರು ನಿಗದಿಪಡಿಸಲಾಗಿದೆ. ಸೆಷನ್ಸ್ ನ್ಯಾಯಾಲಯ ಎರಡು ಬಾರಿ ಮತ್ತು ದೆಹಲಿ ಹೈಕೋರ್ಟ್ ಒಮ್ಮೆ ಜಾಮೀನು ತಿರಸ್ಕರಿಸಿದೆ. ಹೀಗಾಗಿ, ಖಾಲಿದ್ ಕಂಬಿಗಳ ಹಿಂದೆ ದಿನ ದೂಡುತ್ತಿದ್ದಾರೆ.
ಇನ್ನು ರೋಹಿತ್ ಕುಮಾರ್ ಎಂಬವರು ಉಮರ್ ಖಾಲಿದ್ ಅವರಿಗೆ 2022ರ ಆಗಸ್ಟ್ 15ರಂದು ಪತ್ರ ಬರೆದಿದ್ದರು. ಅವರ ಪತ್ರಕ್ಕೆ ಉಮರ್ ಖಾಲಿದ್ ಬರೆದ ಪ್ರತ್ಯುತ್ತರವು ರೋಹಿತ್ ಅವರಿಗೆ 2022ರ ಸೆಪ್ಟೆಂಬರ್ 12 ರಂದು ತಲುಪಿತ್ತು.
ಆ ಪತ್ರದಲ್ಲಿ, “ನಿತ್ಯ ಜೈಲಿನಲ್ಲಿ ಬಿಡುಗಡೆಯಾಗುವವರ ಹೆಸರುಗಳ ಪಟ್ಟಿಯನ್ನ ಮೈಕ್ನಲ್ಲಿ ಹೇಳುತ್ತಾರೆ. ನಾನು ಕೂಡ ನನ್ನ ಹೆಸರು ಬರುವುದಾ ಎಂದು ಕಾಯುತ್ತಿರುತ್ತೇನೆ. ಹಲವು ಬಾರಿ ಈ ಜೈಲಿನ ಕಗ್ಗತ್ತಲೂ ಇನ್ನೂ ಎಷ್ಟು ದೂರ ಇರಬಹುದು ಎಂದು ಯೋಚಿಸುತ್ತೇನೆ. ಎಂದಾದರೂ ಈ ಸುರಂಗದ ಕೊನೆಯಲ್ಲಿ ಬೆಳಕು ಕಾಣಸಿಗಬಹುದೇ? ನಾನು ಸುರಂಗದ ಕೊನೆಯಲ್ಲಿದ್ದೇನೋ? ಅಥವಾ ನಡುವೆ ಸಿಲುಕಿದ್ದೇನೋ? ಅಥವಾ ನನ್ನ ಸುದೀರ್ಘ ಪ್ರಯಾಣವೇ ಈಗ ಪ್ರಾರಂಭವಾಗಿದೆಯೋ? ಗೊತ್ತಿಲ್ಲ. ಕೆಲವೊಮ್ಮೆ ನಾನು ಹತಾಶನಾಗುತ್ತೇನೆ. ಏಕಾಂಗಿ ಏನಿಸತೋಡಗುತ್ತೇ” ಎಂದು ಖಾಲಿದ್ ಅವರು ಎರಡು ವರ್ಷಗಳ ಜೈಲು ವಾಸದ ಬಗ್ಗೆ ಪತ್ರದಲ್ಲಿ ಹೇಳಿಕೊಂಡಿದ್ದರು.
ಇನ್ನು ಅಕ್ಟೋಬರ್ 2022ರಲ್ಲಿ ಮಾಜಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರು, ಮೂವರು ನಿವೃತ್ತ ಹೈಕೋರ್ಟ್ ನ್ಯಾಯಾಧೀಶರು ಹಾಗೂ ಮಾಜಿ ಕೇಂದ್ರ ಗೃಹ ಕಾರ್ಯದರ್ಶಿಗಳು ಉಮರ್ ಖಾಲಿದ್ ವಿರುದ್ಧದ ಯುಎಪಿಎ ಪ್ರಕರಣವನ್ನು ಪರಿಶೀಲಿಸಿದ್ದರು. ಖಾಲಿದ್ ವಿರುದ್ಧ ಭಯೋತ್ಪಾದನೆಯ ಆರೋಪಗಳನ್ನು ವಿಧಿಸಲು ಯಾವುದೇ ಸಮರ್ಥನೀಯ ಪುರಾವೆಗಳಿಲ್ಲ ಎಂಬುದನ್ನ ಅವರು ಗಮನಿಸಿದ್ದರು. ಅದರೂ, ಖಾಲಿದ್ ಜಾಮೀನು ದೊರೆತಿಲ್ಲ.
ಅಂದಹಾಗೆ, ಖಾಲೀದ್ ಅವರು ದೆಹಲಿ ವಿಶ್ವವಿದ್ಯಾಲಯದ ಕಿರೋರಿ ಮಾಲ್ ಕಾಲೇಜಿನಲ್ಲಿ ಇತಿಹಾಸ ಅಧ್ಯಯನ ಮಾಡಿದವರು. ನಂತರ, ಅವರು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ (ಜೆಎನ್ಯು) ಇತಿಹಾಸದಲ್ಲಿ ತಮ್ಮ ಸ್ನಾತಕೋತ್ತರ ಮತ್ತು ಎಂಫಿಲ್ ಪದವಿ ಪಡೆದುಕೊಂಡವರು. ಲೋಕಜ್ಞಾನ ಹೊಂದಿರುವ ಖಾಲಿದ್, ಉತ್ತಮ ವಿಚಾರಧಾರೆಗಳನ್ನ ಹೊಂದಿರುವ ವ್ಯಕ್ತಿ. ‘ಜಾರ್ಖಂಡ್ನ ಆದಿವಾಸಿಗಳ ಬದುಕಿನ ಬಗ್ಗೆ ಅಧ್ಯಯನ ಮಾಡಿ ಜೆಎನ್ಯು ವಿಶ್ವವಿದ್ಯಾನಿಲಯದಲ್ಲಿ ಪಿಎಚ್ಡಿ ಪಡೆದಿದ್ದಾರೆ. ಗಮನಿಸಬೇಕಾದ ವಿಚಾರವೆಂದರೆ, ಜೆಎನ್ಯು ಕೂಡ ಆರಂಭದಲ್ಲಿ ಖಾಲೀದ್ ಅವರ ಸಂಶೋಧನಾ ಪ್ರಬಂಧವನ್ನ ಸ್ವೀಕರಿಸಲು ನಿರಾಕರಿಸಿತ್ತು. 2018ರಲ್ಲಿ ನ್ಯಾಯಾಲಯದ ಸೂಚನೆಯ ಮೇರೆಗೆ ಅವರ ಪ್ರಬಂಧವನ್ನು ಅಂಗಿಕರಿಸಿತ್ತು.

ಜೆಎನ್ಯು ಕ್ಯಾಂಪಸ್ನಲ್ಲಿ ಫೆಬ್ರುವರಿ 9ರ 2016ರಂದು ನಡೆದ ಪ್ರತಿಭಟನೆ ಮತ್ತು ಘಟನೆಗಳ ತನಿಖೆಗಾಗಿ ಜೆಎನ್ಯು ಸಮಿತಿಯೊಂದನ್ನು ರಚಿಸಿತ್ತು. ಆ ಸಮಿತಿ ಖಾಲಿದ್ ಅವರನ್ನ ಕ್ಯಾಂಪಸ್ನಿಂದ ಅಮಾನತು ಮಾಡಿತ್ತು. ತಮ್ಮ ಅಮಾನತನ್ನು ಪ್ರಶ್ನಿಸಿ ಪ್ರತಿಭಟನೆ ನಡೆಸಿದ್ದ ಖಾಲಿದ್, ಜೆಎನ್ಯುನ ಇತರ ವಿದ್ಯಾರ್ಥಿ ನಾಯಕರಾದ ಕನ್ಹಯ್ಯಾ ಕುಮಾರ್ ಮತ್ತು ಶೆಹ್ಲಾ ರಶೀದ್ ಅವರೊಂದಿಗೆ ಮುನ್ನೆಲೆಗೆ ಬಂದರು. ಈ ವಿದ್ಯಾರ್ಥಿ ನಾಯಕರು ತಮ್ಮದೇ ರಾಜಕೀಯ ವಿಚಾರ, ತಿಳುವಳಿಕೆಯಲ್ಲಿ ಮುಂದೆ ಸಾಗಿದ್ದಾರೆ. ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಜನವಿರೋಧಿ, ಫ್ಯಾಸಿಸ್ಟ್ ಧೋರಣೆ, ಹಿಂದುತ್ವವಾದಿ ಕೋಮು ರಾಜಕಾರಣವನ್ನು ತೀವ್ರವಾಗಿ ಟೀಕಿಸುವ ಮೂಲಕ, ದೇಶದ ಗಮನ ಸೆಳೆದಿದ್ದಾರೆ.
ಈ ಸುದ್ದಿ ಓದಿದ್ದೀರಾ? ಅತ್ಯಾಚಾರ ಬೆಂಬಲಿಗನಿಗೆ ಕಾಂಗ್ರೆಸ್ ಟಿಕೆಟ್ ಖಂಡನೀಯ ರಾಹುಲ್-ಜೀ
ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಹೋರಾಟ ರೂಪಿಸುವಲ್ಲಿ ಉಮರ್ ಖಾಲಿದ್ ಕೂಡ ಮುಂಚೂಣಿಯಲ್ಲಿದ್ದರು. ಅವರು ಜೆಎನ್ಯುನಲ್ಲಿ ಸಿಎಎ ವಿರುದ್ಧ ಮಾಡಿದ್ದ ಭಾಷಣ ಇಡೀ ದೇಶದ ಗಮನ ಸೆಳೆದಿತ್ತು.
ಆ ಕಾರಣದಿಂದಲೇ ಅವರನ್ನು ಹತ್ತಿಕ್ಕಲು ದೆಹಲಿ ಪೋಲೀಸರು ಭಾರೀ ಕಸರತ್ತು ನಡೆಸಿದ್ದರು. ಅವರಿಗೆ ಅಸ್ತ್ರವಾಗಿ ಸಿಕ್ಕಿದ್ದು, 2020ರಲ್ಲಿ ನಡೆದ ದೆಹಲಿ ಗಲಭೆ, ಅದನ್ನೇ ನೆಪವಾಗಿಟ್ಟುಕೊಂಡು ಖಾಲಿದ್ ಅವರನ್ನು ಬಂಧಿಸಿರುವ ಪೊಲೀಸರು, ಅವರ ವಿರುದ್ಧ ಯುಎಪಿಎ ಕಾಯ್ದೆಯಡಿ ಪ್ರಕರಣ ದಾಖಲಿಸಿ, ಜೈಲಿನಲ್ಲಿ ಕೂಡಿ ಹಾಕಿದ್ದಾರೆ. “ಜೈಲಿನಲ್ಲಿರುವ ಖಾಲಿದ್ ಉತ್ಸಾಹವು ಇನ್ನೂ ಹೆಚ್ಚಾಗುತ್ತಿದೆ. ಆದರೂ ವಿಳಂಬಗಳು ಕೆಲವೊಮ್ಮೆ ಅವರನ್ನು ಕುಗ್ಗಿಸುತ್ತಿದೆ. ಮಿತಿಮೀರಿದ ವಿಳಂಬಗಳು ಪರಿಸ್ಥಿತಿಯನ್ನು ಅತ್ಯಂತ ನಿರಾಶಾದಾಯಕವಾಗಿಸಿದೆ” ಎಂದು ಉಮರ್ ಅವರನ್ನು ಒತ್ತೀಚೆಗೆ ಜೈಲಿನಲ್ಲಿ ಭೇಟಿಯಾಗಿದ್ದ ಅವರ ಒಡನಾಡಿ ಬನೋಜ್ಯೋತ್ಸ್ನಾ ಲಾಹಿರಿ ಹೇಳಿದ್ದಾರೆ.
“ಸದ್ಯ ಕೆಲವು ಗೊಂದಲಗಳಿವೆ; ಶೀಘ್ರವೇ ಹೈಕೋರ್ಟ್ ಮೆಟ್ಟಿಲೇರಲು ಮುಂದಾಗಿದ್ದೇವೆ. ಅದಕ್ಕೂ ಮೊದಲು ನಾವು ಬೆಂಚ್ ಅನ್ನು ತಿಳಿದುಕೊಳ್ಳಬೇಕು. ಈ ಹಿಂದೆ ಪ್ರಕರಣಗಳ ವಿಚಾರಣೆ ನಡೆಸುತ್ತಿದ್ದ ನ್ಯಾಯಾಧೀಶರನ್ನು ವರ್ಗಾವಣೆ ಮಾಡಲಾಗಿದೆ” ಎಂದು ಲಾಹಿರಿ ತಿಳಿಸಿದ್ದಾರೆ.
ಅಂದಹಾಗೆ, ಕಳೆದ ವರ್ಷ ಆಗಸ್ಟ್ನಲ್ಲಿ ಕರ್ಕರ್ಡೂಮಾ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಅಮಿತಾಭ್ ರಾವತ್ ಅವರು ಪ್ರಕರಣವನ್ನು ದೈನಂದಿನ ವಿಚಾರಣೆ ನಡೆಸಬೇಕೆಂದು ಹೇಳಿದ್ದರು. ಅವರ ಆದೇಶದಂತೆ ದೈನಂದಿನ ವಿಚಾರಣೆ ಆರಂಭವಾಗಿತ್ತು. ಅದರೆ, ಅವರನ್ನು ವರ್ಗಾವಣೆ ಮಾಡಲಾಗಿದ್ದು, ಹೊಸದಾಗಿ ಬಂದ ನ್ಯಾಯಾಧೀಶರು ಪ್ರಕರಣವನ್ನು ಮತ್ತೆ ಮೊದಲಿನಿಂದ ವಿಚಾರಣೆ ನಡೆಸುತ್ತಿದ್ದಾರೆ. ಆರೋಪಿಗಳ ಪರ ವಕೀಲರು ತನಿಖೆ ಮತ್ತು ಬಹು ಆರೋಪಪಟ್ಟಿಗಳನ್ನು ಸಲ್ಲಿಸುವಲ್ಲಿ ದೆಹಲಿ ಪೊಲೀಸರು ತೋರುತ್ತಿರುವ ವಿಳಂಬ ಧೋರಣೆಯನ್ನು ಪ್ರಶ್ನಿಸಿದ್ದಾರೆ.
ತನಿಖಾ ಸಂಸ್ಥೆಯು ಪೂರಕ ಆರೋಪ ಪಟ್ಟಿಗಳನ್ನು ಸಲ್ಲಿಸುವುದನ್ನು ಮುಂದುವರಿಸಬಾರದು. ತನಿಖೆಯ ಸ್ಥಿತಿಯನ್ನು ನ್ಯಾಯಾಲಯಕ್ಕೆ ತಿಳಿಸಬೇಕು ಎಂದು ಖಾಲಿದ್ ಹಾಗೂ ಇತರ ಆರೋಪಿಗಳಾದ ನತಾಶಾ ನರ್ವಾಲ್, ದೇವಾಂಗನಾ ಕಲಿತಾ, ಆಸಿಫ್ ಇಕ್ಬಾಲ್ ತನ್ಹಾ, ಅಥರ್ ಖಾನ್ ಮತ್ತು ಮೀರನ್ ಹೈದರ್ ಒತ್ತಾಯಿಸುತ್ತಿದ್ದಾರೆ.
ಈ ವರ್ಷದ ಫೆಬ್ರವರಿ ಅಂತ್ಯದಲ್ಲಿ ಉಮರ್ ಖಾಲಿದ್ ಅವರು ಎಎಸ್ಜೆ ಬಾಜ್ಪೇಯ್ ಅವರ ಮುಂದೆ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಬಹು ವಿಚಾರಣೆಗಳ ನಂತರ, ಮೇ 28ರಂದು ಅವರ ಜಾಮೀನು ಅರ್ಜಿಯನ್ನು ನ್ಯಾಯಾಧೀಶರು ತಿರಸ್ಕರಿಸಿದ್ದಾರೆ. ಸೆಪ್ಟೆಂಬರ್ 4ರಂದು ದೆಹಲಿ ಪೊಲೀಸ್ ವಿಶೇಷ ಘಟಕವು ಎಎಸ್ಜೆ ಬಾಜ್ಪೇಯ್ ಅವರಿಗೆ ಪ್ರಕರಣದ ತನಿಖೆ ಪೂರ್ಣಗೊಂಡಿದೆ ಎಂದು ತಿಳಿಸಿದೆ. ಇದರ ನಂತರ, ನ್ಯಾಯಾಧೀಶರು ಸೆಪ್ಟೆಂಬರ್ 5 ರಿಂದ ಆರೋಪದ ಮೇಲಿನ ವಾದಗಳನ್ನು ಪ್ರಾರಂಭಿಸಲು ಆದೇಶಿಸಿದ್ದರು. ಆದರೆ, ಎಸ್ಪಿಪಿ ಅನಾರೋಗ್ಯಕ್ಕೆ ಒಳಗಾಗಿದ್ದರಿಂದ ವಿಚಾರಣೆಯನ್ನು ಮುಂಡೂಡಲಾಗಿದೆ.
ಪ್ರಕರಣದ ತನಿಖೆ ನಾಲ್ಕು ವರ್ಷಗಳಿಂದ ಆಮೆಯಂತೆ ಸಾಗುತ್ತಿದೆ. ಪೊಲೀಸರು ತನಿಖೆಯಲ್ಲಿ ವಿಳಂಬ ಮಾಡುತ್ತಿದ್ದಾರೆ. ಪರಿಪೂರ್ಣ ಚಾರ್ಜ್ಶೀಟ್ ಅನ್ನೂ ಸಲ್ಲಿಸಿಲ್ಲ. ನ್ಯಾಯಾಲಯಗಳು ಜಾಮೀನು ಕೊಡಲೂ ಹಿಂದೇಟು ಹಾಕುತ್ತಿವೆ. ಪರಿಣಾಮವಾಗಿ ಖಾಲಿದ್ ಜೈಲಿನಲ್ಲಿ ಸೆರೆವಾಸ ಅನುಭವಿಸುತ್ತಿದ್ದಾರೆ. ಸುಳ್ಳು ಆರೋಪ ಮತ್ತು ಪ್ರಕರಣಗಳಲ್ಲಿ ಜೈಲು ಸೇರಿರುವ ಖಾಲಿದ್, ಜೈಲಿನಿಂದ ಶೀಘ್ರವೇ ಹೊರಬರಲೆಂದು ಹಲವಾರು ಹೋರಾಟಗಾರರು ಎದುರು ನೋಡುತ್ತಿದ್ದಾರೆ. ನ್ಯಾಯಾಲಯಗಳು ತ್ವರಿತ ವಿಚಾರಣೆ ನಡೆಸಿ, ತೀರ್ಪು ನೀಡಬೇಕು. ಇಲ್ಲವೇ, ಜಾಮೀನನ್ನಾದರೂ ನೀಡಿ, ಖಾಲಿದ್ ಅವರಿಗೆ ಸೆರೆವಾಸದಿಂದ ಮುಕ್ತಿ ನೀಡಬೇಕು.