ಮುಸ್ಲಿಂ ಸಮುದಾಯದ ಕ್ಷೇಮಾಭಿವೃದ್ಧಿಗಿರುವ ವಕ್ಫ್ ಆಸ್ತಿಗಳನ್ನು ಕಸಿದುಕೊಳ್ಳುವ ಹುನ್ನಾರ ಬಿಜೆಪಿ ಪಕ್ಷದ ಹಿಡನ್ ಅಜೆಂಡವಾಗಿದ್ದು, ವಕ್ಫ್ ಮಸೂದೆ – 2024 ಜಾರಿಗೆ ತರಲು ಹೊರಟಿರುವುದು ಖಂಡನೀಯ ಎಂದು ಎಸ್ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಪ್ಸರ್ ಕೊಡ್ಲಿಪೇಟೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಹಾವೇರಿ ಜಿಲ್ಲೆಯ ಶಿಗ್ಗಾವಿಯಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ, ಬಳಿಕ ತಹಶೀಲ್ದಾರ್ ಮುಖಾಂತರ ಜಂಟಿ ಸಂಸದೀಯ ಸಮಿತಿಯ ಅಧ್ಯಕ್ಷರು ಮತ್ತು ಸಮಿತಿ ಸದಸ್ಯರಿಗೆ ಮನವಿ ಸಲ್ಲಿಸಿದರು.
“ವಕ್ಫ್ ಆಸ್ತಿಗಳ ಸಂರಕ್ಷಣೆ ಹಾಗೂ ವಕ್ಫ್ ಸುಧಾರಣೆಗಳ ಹೆಸರಿನಲ್ಲಿ ಇತ್ತೀಚೆಗೆ ನರೇಂದ್ರ ಮೋದಿ ನೇತೃತ್ವದ ಒಕ್ಕೂಟ ಸರ್ಕಾರ ವಕ್ಫ್ ಮಸೂದೆ-2024 ತಂದಿರುವುದು ಅತ್ಯಂತ ಆತಂಕಕಾರಿ ವಿಷಯವಾಗಿದೆ. ಹಾಲಿಯಿರುವ ವಕ್ಫ್ ಮಸೂದೆಗೆ ಸರಿಸುಮಾರು 150 ತಿದ್ದುಪಡಿಗಳನ್ನು ಮಾಡುವ ಮೂಲಕ ಇಡೀ ವಕ್ಫ್ ಮಸೂದೆ ಕಾಯಿದೆಯನ್ನೇ ನಾಶಗೊಳಿಸಲು ಈ ವಕ್ಫ್ ಮಸೂದೆ-2024 ತಂದಿದ್ದಾರೆ. ಇದು ಜಾತ್ಯತೀತ ಮೌಲ್ಯಗಳ ವಿರುದ್ಧವಾಗಿದೆ ಹಾಗೂ ತಾರತಾಮ್ಯಗಳೊಂದಿಗೆ ಕೂಡಿದೆ. ಆದುದರಿಂದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಈ ಮಸೂದೆಯನ್ನು ತೀವ್ರವಾಗಿ ಖಂಡಿಸುತ್ತದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ನ್ಯಾಯ ಮಂಡಳಿಯು ನ್ಯಾಯಾಂಗ ವ್ಯವಸ್ಥೆಯ ಸಂಸ್ಥೆಯಾಗಿದ್ದು, ಸದರಿ ವಕ್ಫ್ ಮಸೂದೆಯು ನ್ಯಾಯಾಂಗ ಮಂಡಳಿಯ ಅಧಿಕಾರವನ್ನು ಕಸಿದುಕೊಳ್ಳುತ್ತದೆ. ಇದು ಸಾಮಾನ್ಯ ಕಾನೂನು ನಿಯಮಕ್ಕೆ ವಿರುದ್ಧವಾಗಿದೆ ಮತ್ತು ಕಾನೂನು ಉಲ್ಲಂಘನೆಯಾಗಿದೆ. ಹಿಂದೂಗಳಲ್ಲದ ಬೌದ್ಧರು, ಜೈನರು ಮತ್ತು ಸಿಖ್ಖರಿಗೂ ಸಹ ದೇವಸ್ಥಾನದ ಆಡಳಿತದ ಸದಸ್ಯತ್ವವನ್ನು ನಿಷೇಧಿಸಿರುವುದರಿಂದ ಹಿಂದೂಗಳಿಗೆ ವಕ್ಫ್ ಮಂಡಳಿಯ ಸದಸ್ಯರಾಗಿ ಜವಾಬ್ದಾರಿ ನೀಡುವುದು ಸಂಪೂರ್ಣ ತಾರತಮ್ಯದಿಂದ ಕೂಡಿದೆ” ಎಂದರು.
“ವಕ್ಫ್ ಅಧಿಕಾರ ವ್ಯಾಪ್ತಿಯಿಂದ ಶತ್ರುಗಳ ಆಸ್ತಿಗಳೆಂದು ಪರಿಗಣಿಸಿ ಸದರಿ ಆಸ್ತಿಗಳನ್ನು ವಕ್ಫ್ ನಿಯಂತ್ರಣದಿಂದ ಹೊರಗಿಡುವುದು ದೊಡ್ಡ ಪ್ರಮಾಣದ ಹಾನಿಯನ್ನು ಉಂಟುಮಾಡುತ್ತದೆ. ಭೂಪರಿವರ್ತನೆಗೆ ನೀಡಿರುವ 90 ದಿನಗಳ ಅವಧಿಯನ್ನು ವಕ್ಫ್ ಭೂಮಿಯ ಅಗಾಧತೆಯ ದೃಷ್ಟಿಕೋನದಲ್ಲಿ ಹೇಳುವುದಾದರೆ, ಅದು ತೀರಾ ಸಾಕಾಗದು. ನಾವು ಅರಿಕೆ ಮಾಡುವುದೇನೆಂದರೆ, ವಕ್ಫ್ ಕಾನೂನಿನ ಉದ್ದೇಶವು ವಕ್ಫ್ ಭೂಮಿಯ ರಕ್ಷಣೆ ಎಂದಾಗಿರುವಾಗ, ಈ ದುರುದ್ದೇಶಿತ ಮಸೂದೆಯು ಮುಸಲ್ಮಾನರನ್ನು ಎರಡನೇ ದರ್ಜೆಯ ನಾಗರಿಕರನ್ನಾಗಿ ಮಾಡುವ ಸಾಲು ಸಾಲು ಕಾನೂನುಗಳ ಸಂದೇಶವನ್ನು ಸಾರುತ್ತಿದೆ. ಮುಸಲ್ಮಾನರು ಕೆಳ ದರ್ಜೆಯವರೆಂದು ಬಿಂಬಿಸಿ, ಅವರ ಮೇಲೆ ವಿವಿಧ ಅಸಮಾನ ಕಾನೂನುಗಳನ್ನು ಹೇರಲಾಗುತ್ತಿದೆ. ಈ ಬಗ್ಗೆ ಜಂಟಿ ಸಮಿತಿಯು ಸಕಾಲಿಕ ಮುಂಜಾಗರೂಕತೆಯನ್ನು ಪಾಲಿಸಿ, ಸಮಾಜದ ಹಾಗೂ ದೇಶದ ಹಿತದೃಷ್ಟಿಯಿಂದ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಚಿಕ್ಕಮಗಳೂರು | ದುರುದ್ದೇಶ, ಪ್ರತಿಕಾರದ ವಕ್ಫ್ ಮಸೂದೆ ಹಿಂಪಡೆಯಿರಿ: ಎಸ್ಡಿಪಿಐ ಆಕ್ರೋಶ
ಜಿಲ್ಲಾಧ್ಯಕ್ಷ ಖಾಸಿಂ ರಬ್ಬಾನಿ ಅಧ್ಯಕ್ಷೀಯ ಭಾಷಣ ಮಾಡಿ, “ನಿರ್ದಿಷ್ಟವಾಗಿ ಬರಿ ಒಂದು ಕೋಮಿನವರನ್ನು ಗುರಿ ಮಾಡಿಕೊಂಡು ಅವರನ್ನು ತುಳಿಯುವ ಪ್ರಯತ್ನವನ್ನು ಫ್ಯಾಸಿಸ್ಟ್ ಬಿಜೆಪಿ ಸರ್ಕಾರವು ಮಾಡುತ್ತಿದೆ. ನಮ್ಮಿಂದ 2ಬಿ ಮೀಸಲಾತಿಯನ್ನು ಕಸಿದುಕೊಂಡರು, ಮಸೀದಿ ಮದರಸಾಗಳ ಮೇಲೆ ಬುಲ್ಡೋಜರ್ ಹರಿಸಿದರು. ನಮ್ಮ ಅಕ್ಕ ತಂಗಿಯರ ಹಿಜಾಬ್ ತೆಗೆಸಿದರು, ನಮ್ಮ ಪ್ರವಾದಿಯ ಬಗ್ಗೆ ಕೀಳಾಗಿ ಮಾತನಾಡುವುದು, ನಮ್ಮ ಉಲಮಾಗಳನ್ನು ಜೈಲಿಗಟ್ಟುವುದು ಇವರ ಷಡ್ಯಂತ್ರ. ಅದೇರೀತಿ ಈಗ ಮತ್ತೊಂದು ವಕ್ಫ್ ಮಸೂದೆ-2024 ತರಲು ಹೊರಟಿರುವುದು ಇದೆಲ್ಲಾ ಫ್ಯಾಸಿಸ್ಟ್ ಬಿಜೆಪಿ ಸರ್ಕಾರದ ಷಡ್ಯಂತ್ರ” ಎಂದು ಹೇಳಿದರು.
ಪಕ್ಷದ ಜಿಲ್ಲಾ ಉಪಾಧ್ಯಕ್ಷ ಜಬಿಉಲ್ಲಾ ಹಿರೇಕೆರೂರ, ಪ್ರಧಾನ ಕಾರ್ಯದರ್ಶಿ ಜಿಲಾನಿ ಮೆದೂರ, ಜಿಲ್ಲಾ ಕಾರ್ಯದರ್ಶಿ ಯಾಸಿರ್ ಇರ್ಷಾದ್ ಮತ್ತು ಅಂಜುಮನ್, ಇಸ್ಲಾಂ ಕಮಿಟಿ ಶಿಗ್ಗಾವಿ ಉಪಾಧ್ಯಕ್ಷ ಅಬ್ದುಲ್ ಮಜೀದ್, ಎಸ್ಡಿಪಿಐ ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಅಕ್ಬರ್ ಅಲಿ, ಎಐಎಂಐಎಂ ಶಿಗ್ಗಾವಿ ಅಧ್ಯಕ್ಷ ಅಲ್ತಾಫ್ ದುಕಾಂದಾರ, ಸ್ಥಳೀಯ ಮಸೀದಿಯ ಧಾರ್ಮಿಕ ಗುರು ಮುಖಿಮ್ ಆಶ್ರಫಿ, ರಬ್ಬಾನಿ ಮುವಝನ್ ಹಾಗೂ ಎಸ್ಡಿಪಿಐ ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ನಾಯಕರು, ಕಾರ್ಯಕರ್ತರು ಇದ್ದರು.