ರಾಜಕೀಯ ಪಿತೂರಿಗಳು ಮತ್ತು ಲಾಭದಾಸೆಯ ಗುಂಪುಗಳು ಕೋಮುಗಲಭೆಗಳನ್ನು ಎಬ್ಬಿಸುವ ಮೂಲಕ ಶಾಂತಿ ಭಂಗ ಉಂಟು ಮಾಡುತ್ತಿರುವುರಿಂದ ಇಂದು ಗಂಭೀರ ಸಮಸ್ಯೆಯಾಗಿದೆ ಎಂದು ಕೆಆರ್ಎಸ್ ಪಕ್ಷದ ರಾಜ್ಯ ಉಪಾಧ್ಯಕ್ಷ ಎಸ್ ಹೆಚ್ ಲಿಂಗೇಗೌಡ ಆರೋಪಿಸಿದರು.
ನಾಗಮಂಗಲ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶೇಷ ದಿನಗಳಲ್ಲಿ ಕೋಮು ಹಿಂಸೆಯನ್ನು ಉಂಟುಮಾಡಲು ರಾಜಕೀಯ ಪಕ್ಷಗಳ ಪ್ರಚೋದನೆಯೊಂದಿಗೆ ಕ್ರಿಯಾಶೀಲವಾಗಿರುವ ಗುಂಪುಗಳು ಈ ಗಲಭೆಗಳಲ್ಲಿ ಪ್ರಮುಖ ಪಾತ್ರವಹಿಸುತ್ತಿವೆ. ಈ ಗುಂಪುಗಳ ಹಲವು ಸದಸ್ಯರು ಮದ್ಯ, ಡ್ರಗ್ಸ್ಗಳಿಗೆ ದಾಸರಾಗಿದ್ದು, ತಮ್ಮ ಕೃತ್ಯಗಳಿಂದ ಸಮುದಾಯದ ಮೇಲೆ ಉಂಟಾಗುವ ದುಷ್ಪರಿಣಾಮಗಳ ಅರಿವಿಲ್ಲದೆ ಓಡಾಡುತ್ತಿದ್ದಾರೆ ಎಂದರು.
ಇಲ್ಲಿಯೂ, ಕೆಲವರು ತಮ್ಮ ಸಮುದಾಯದ ಜನರ ಬದುಕನ್ನು ಬಲಿಪಡೆದು ಹಣ ಗಳಿಸುವ ಹಪಾಹಪಿಯವರಾಗಿದ್ದಾರೆ. ರಾಜಕೀಯ ನಾಯಕರ ಆದೇಶದಂತೆ ಈ ಗುಂಪುಗಳು ಕಾರ್ಯನಿರ್ವಹಿಸುತ್ತಿದ್ದು, ಕೋಮುಗಲಭೆಗಳನ್ನು ಪ್ರಚೋದಿಸುವಲ್ಲಿ ತೊಡಗಿವೆ. ಈ ಕಾರ್ಯವು ಖಾಸಗಿಯಾಗಿ, ಕೆಲವು ಪಕ್ಷಗಳ ಹಣವನ್ನೂ ಪಡೆಯುತ್ತಿದೆ. ಹಿಂದೂ ಸಮುದಾಯವನ್ನು ಕೆರಳಿಸಲು ಮುಸ್ಲಿಂ ಮತದವರನ್ನು ಬಳಸುವುದು ಹಾಗೂ ಮುಸ್ಲಿಂ ಸಮುದಾಯವನ್ನು ಕೆರಳಿಸಲು ಹಿಂದೂಗಳನ್ನು ಬಳಸುವ ರಾಜಕೀಯ ತಂತ್ರಗಳು ಇತ್ತೀಚೆಗೆ ಹೆಚ್ಚಾಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾಧ್ಯಕ್ಷ ಡಿ ಜಿ ನಾಗರಾಜು ಮಾತನಾಡಿ, ಈ ಗಲಭೆಗಳಲ್ಲಿ ಭಾಗಿಯಾಗಿರುವವರ ಹಣಕಾಸು ಪರಿಸ್ಥಿತಿಗಳನ್ನು ಗಮನಿಸಿದರೆ ರಾಜಕೀಯ ಲಾಭಕ್ಕಾಗಿ ನಡೆಯುವ ಪಿತೂರಿಗಳು ಎಷ್ಟು ಗಂಭೀರವಾಗಿವೆ ಎಂಬುದು ಸ್ಪಷ್ಟವಾಗುತ್ತದೆ. ಅನೇಕರಿಗೆ ಹಣ ಕೊಡಿಸಿ ಗಲಭೆಗಳಲ್ಲಿ ಭಾಗಿಯಾಗಲು ಪ್ರಚೋದಿಸುತ್ತಾರೆ ಎಂದರು.
ನಾಗಮಂಗಲ ತಾಲೂಕು ಅಧ್ಯಕ್ಷ ಬಾಲರಾಜು ಮಾತನಾಡಿ, ನಾಗಮಂಗಲದ ಘಟನೆ ಕೇವಲ ರಾಜಕಾರಣಿಗಳ ಪಿತೂರಿಯೇ ಅಲ್ಲ, ಪೊಲೀಸ್ ಇಲಾಖೆಯ ವೈಫಲ್ಯವೂ ಆಗಿದೆ. ಪೊಲೀಸ್ ಅಧಿಕಾರಿಗಳ ಮೇಲೆ ರಾಜಕಾರಣಿಗಳ ಒತ್ತಡದಿಂದಾಗಿ, ಕಾನೂನು ಕ್ರಮಗಳನ್ನು ಸರಿಯಾಗಿ ಕೈಗೊಳ್ಳದಿರುವುದೇ ಇಂತಹ ಅನೈತಿಕತೆಯ ಚಟುವಟಿಕೆಗಳನ್ನು ಪ್ರಚೋದಿಸುತ್ತಿದೆ. ಹಿಂದೆ ನಡೆದ ಕೋಮುಗಲಭೆಗಳಲ್ಲಿ ಭಾಗವಹಿಸಿದವರ ವಿರುದ್ಧದ ಕ್ರಮ ಕೈಗೊಳ್ಳುವಲ್ಲಿ ಪೊಲೀಸ್ ಇಲಾಖೆಯ ವೈಫಲ್ಯ ಮತ್ತು ಇಂತಹವರನ್ನು ಬೆಂಬಲಿಸುವ ರಾಜಕಾರಣಿಗಳ ಕಾರಣದಿಂದ ಈ ಸಮಸ್ಯೆ ಇನ್ನಷ್ಟು ದೊಡ್ಡದಾಗಿದೆ ಎಂದರು.
ಇದನ್ನು ಓದಿದ್ದೀರಾ? ದಾವಣಗೆರೆ | ವಿಶೇಷ ಕಾರ್ಯಕ್ರಮದ ಮೂಲಕ ಸಾರ್ವಜನಿಕರಿಗೆ ಬಾಗಿಲು ತೆರೆದಿಟ್ಟ ‘ಮಸೀದಿ’
ನಾಗಮಂಗಲ ತಾಲೂಕು ಕಾರ್ಯದರ್ಶಿ ಸಿರಾಜ್ ಅಹಮದ್ ಮಾತನಾಡಿ, ಇಂಟೆಲಿಜೆನ್ಸ್, ಪೊಲೀಸ್ ವೈಫಲ್ಯವು ಸಹ ಇಂತಹ ಗಲಭೆಗಳನ್ನು ತಡೆಯುವಲ್ಲಿ ವಿಫಲವಾಗಿವೆ. ಇದರಿಂದಾಗಿ ಸಮಾಜದಲ್ಲಿ ಶಾಂತಿ ಸ್ಥಾಪನೆ ಕಷ್ಟವಾಗುತ್ತಿದೆ. ಈ ವೈಫಲ್ಯಗಳಿಗೆ ಸರ್ಕಾರ ಮತ್ತು ಜನರು ಗಟ್ಟಿಯಾಗಿ ಪ್ರತಿರೋಧವೊಡ್ಡಿ, ಶಿಸ್ತಾಗಿ ಕಾನೂನು ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ರೈತ ಅಧ್ಯಕ್ಷ ಮುರುಗೇಶ್, ಜಿಲ್ಲಾ ಉಪಾಧ್ಯಕ್ಷ ಮಲ್ಲೇಶ್ ಹೆಬ್ಬಕವಾಡಿ, ಮಂಡ್ಯ ಅಧ್ಯಕ್ಷ ರವೀಂದ್ರ ಕೊತ್ತತ್ತಿ ಹಾಗೂ ಇನ್ನಿತರ ಪದಾಧಿಕಾರಿಗಳು ಹಾಜರಿದ್ದರು.
