ಕೋಮುಗಲಭೆಗಳನ್ನು ತಡೆಯಲಾಗದ ನಾಲಾಯಕ ಸರ್ಕಾರ, ಮತಾಂಧರ ಹೆಡೆಮುರಿ ಕಟ್ಟಲಾಗದ ನಿಸ್ತೇಜ ಸರ್ಕಾರ ನನ್ನ ಮೇಲೆ ಎಫ್ಐಆರ್ ಹಾಕಿರುವುದು ಹೇಡಿತನದ ಲಕ್ಷಣ. ಇಂತಹ ಒಂದಲ್ಲ ನೂರು ಎಫ್ಐಆರ್ ಹಾಕಿದರೂ ನನ್ನ ದನಿ ಅಡಗಿಸಲು ಸಾಧ್ಯವಿಲ್ಲ. ನಿಮ್ಮ ಗೊಡ್ಡು ಬೆದರಿಕೆಗಳಿಗೆ ಹೆದರುವುದಿಲ್ಲ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ತಿರುಗೇಟು ನೀಡಿದ್ದಾರೆ.
“ನಮ್ಮ ದೇಶ, ಧರ್ಮದ ರಕ್ಷಣೆ ವಿಚಾರದಲ್ಲಿ, ಹಿಂದೂಗಳ ರಕ್ಷಣೆ ವಿಚಾರದಲ್ಲಿ, ಹಿಂದೂಗಳ ಹಬ್ಬ, ಉತ್ಸವಗಳ ವಿಚಾರದಲ್ಲಿ ರಾಜಿ ಆಗುವ ಪ್ರಶ್ನೆಯೇ ಇಲ್ಲ. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ, ರಾಮಜನ್ಮಭೂಮಿ ಹೋರಾಟದ ಸಂದರ್ಭದಲ್ಲಿ ದೇಶಕ್ಕಾಗಿ ಧರ್ಮಕ್ಕಾಗಿ ಜೈಲು ವಾಸ ಅನುಭವಿಸಿದವನು ನಾನು” ಎಂದು ಎಕ್ಸ್ ತಾಣದಲ್ಲಿ ಬರೆದುಕೊಂಡಿದ್ದಾರೆ.
“ಕೈಲಾಗದವನು ಮೈಪರಚಿಕೊಂಡ” ಎಂಬಂತೆ ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದ ಕೋಮುದಳ್ಳುರಿಗೆ ಕಾರಣರಾದ ಮತಾಂಧರನ್ನು ಪತ್ತೆ ಹಚ್ಚಿ ಅವರ ಹೆಡೆಮುರಿ ಕಟ್ಟಬೇಕಾದ ಗೃಹ ಸಚಿವ ಪರಮೇಶ್ವರ್ ಅವರು ವಿಪಕ್ಷ ನಾಯಕರ ಮೇಲೆ ಎಫ್ಐಆರ್ ಹಾಕಿರುವುದು ಹೇಡಿತನದ ಪರಮಾವಧಿ” ಎಂದು ಟೀಕಿಸಿದ್ದಾರೆ.
“ಅಸಮರ್ಥ ಗೃಹ ಸಚಿವ ಪರಮೇಶ್ವರ್ ಅವರೇ, ಕಳೆದ ಬುಧವಾರ ರಾತ್ರಿ ಬೆಂಗಳೂರಿನಿಂದ ಕೇವಲ 130 ಕಿಮೀ ದೂರದಲ್ಲಿರುವ ನಾಗಮಂಗಲದಲ್ಲಿ ರಾಜ್ಯವೇ ಬೆಚ್ಚಿಬೀಳುವಂತಹ ಘಟನೆ ನಡೆದು ಒಂದು ವಾರ ಕಳೆದಿದ್ದರೂ ಈವರೆಗೂ ತಾವು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವ ಕೆಲಸ ಮಾಡಿಲ್ಲ. ಘಟನಾ ಸ್ಥಳಕ್ಕೆ ಹೋಗಿ ಅಲ್ಲಿ ಆಸ್ತಿ-ಪಾಸ್ತಿ ಕಳೆದುಕೊಂಡು, ಭಯಭೀತರಾಗಿರುವ ಸ್ಥಳೀಯರ ಅಳಲು, ದುಮ್ಮಾನ, ಆತಂಕ, ಆಕ್ರೋಶ ಕೇಳಿದ್ದಿದ್ದರೆ ತಮಗೆ ಪರಿಸ್ಥಿತಿಯ ಗಂಭೀರತೆ ಅರ್ಥವಾಗುತ್ತಿತ್ತು. ಆದರೆ ತಮಗೆ ಕರ್ತವ್ಯ ಪ್ರಜ್ಞೆಯೇ ಇಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮೋಶಾ ಮಸಲತ್ತು-ಕೇಜ್ರೀವಾಲ್ ಸವಾಲು
“ನನ್ನ ಮೇಲೆ ಎಫ್ಐಆರ್ ಹಾಕಿ ಏನು ಸಾಧಿಸಲು ಹೊರಟಿದ್ದೀರಿ? ನಾನು ಘಟನಾ ಸ್ಥಳಕ್ಕೆ ಭೇಟಿ ನೀಡಿದಾಗ ಸ್ಥಳೀಯರು, ಪ್ರತ್ಯಕ್ಷದರ್ಶಿಗಳು, ಪತ್ರಕರ್ತರು ವ್ಯಕ್ತಪಡಿಸಿರುವ ಅನುಮಾನವನ್ನ ನನ್ನ ಎಕ್ಸ್ ಖಾತೆ ಪೋಸ್ಟ್ ಮೂಲಕ ಸರ್ಕಾರದ ಗಮನಕ್ಕೆ ತರುವ ಪ್ರಯತ್ನ ಮಾಡಿದ್ದೇನೆಯೇ ಹೊರತು, ಯಾವುದೇ ಸುಳ್ಳು ಮಾಹಿತಿ ಹಂಚಿಕೊಂಡಿಲ್ಲ” ಎಂದಿದ್ದಾರೆ.
“ಇಷ್ಟಕ್ಕೂ ಎಫ್ಐಆರ್ ಹಾಕಿರುವ ಪೊಲೀಸರು ನನ್ನ ಪೋಸ್ಟ್ ನಲ್ಲಿರುವ ಮಾಹಿತಿಯನ್ನ ಪೂರ್ತಿಯಾಗಿ ಓದಿದ್ದಾರೋ ಇಲ್ಲವೋ ಅಥವಾ ಅವರಿಗೆ ಕನ್ನಡ ಸರಿಯಾಗಿ ಬರುತ್ತೋ ಇಲ್ಲವೋ ಅರ್ಥವಾಗುತ್ತಿಲ್ಲ” ಎಂದು ವ್ಯಂಗ್ಯವಾಡಿದ್ದಾರೆ.
“ನಾನು ಹಂಚಿಕೊಂಡಿರುವ ದೃಶ್ಯಾವಳಿಗಳು ಚಿಕ್ಕಮಗಳೂರಿನಲ್ಲಿ ಮತಾಂಧರು ಪ್ಯಾಲೆಸ್ಟೈನ್ ಧ್ವಜ ಹಿಡಿದು ಮಾಡಿದ ಪುಂಡಾಟಿಕೆ, ದಾವಣಗೆರೆಯಲ್ಲಿ ಕೇಸರಿ ಧ್ವಜ ಹಾರಿಸಿದ ಹಿಂದೂಗಳ ಮೇಲೆ ಮತಾಂಧರು ಹಲ್ಲೆ ಮಾಡಿರುವ ಘಟನೆಗಳದ್ದು. ನನ್ನ ಪೋಸ್ಟ್ ನಲ್ಲಿ ನಾನು ಉಲ್ಲೇಖ ಮಾಡಿರುವುದೂ ಅದನ್ನೇ” ಎಂದಿದ್ದಾರೆ.
“ರಾಜ್ಯದ ಅನೇಕ ಕಡೆಗಳಲ್ಲಿ ಗಣೇಶೋತ್ಸವವನ್ನೇ ಗುರಿಯಾಗಿಟ್ಟುಕೊಂಡು ನಡೆದಿರುವ ಇಂತಹ ಪ್ರಚೋದನಕಾರಿ ಘಟನೆಗಳ ಹಿಂದೆ ಮತೀಯ ಮೂಲಭೂತವಾದಿ ಸಂಘಟನೆಗಳ ಕೈವಾಡ ಇರಬಹುದು ಎಂದು ಜವಾಬ್ದಾರಿಯುತ ಪ್ರತಿಪಕ್ಷ ನಾಯಕನಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದೇನೆಯೇ ಹೊರತು ನಾನು ಯಾವುದೇ ಸುಳ್ಳು ಮಾಹಿತಿ ಹಂಚಿಕೊಂಡಿಲ್ಲ” ಎಂದು ಹೇಳಿದ್ದಾರೆ.
“ನಾಗಮಂಗಲದಲ್ಲಿ ಪೆಟ್ರೋಲ್ ಬಾಂಬ್ ಹಾಕಿರುವ ದೃಶ್ಯಗಳು, ಕಲ್ಲು ಎಸೆದಿರುವ ದೃಶ್ಯಗಳು, ವಾಹನ, ಅಂಗಡಿಗಳನ್ನ ಧ್ವಂಸ ಮಾಡಿದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ, ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದರೂ ಇದೊಂದು ‘ಸಣ್ಣ’ ಘಟನೆ, ‘ಆಕಸ್ಮಿಕ’ ಘಟನೆ ಎಂದು ಜನರಿಗೆ ಸುಳ್ಳು ಮಾಹಿತಿ ನೀಡಿದ್ದಕ್ಕೆ ಅಸಲಿಗೆ ಗೃಹ ಸಚಿವ ಪರಮೇಶ್ವರ್ ಅವರ ಮೇಲೆ ಮೊದಲು ಎಫ್ಐಆರ್ ದಾಖಲಿಸಬೇಕು. ಸಚಿವರಿಗೆ ತಪ್ಪು ಮಾಹಿತಿ ನೀಡಿದ ಪೊಲೀಸರ ಮೇಲೆ ಎಫ್ಐಆರ್ ಹಾಕಬೇಕು” ಎಂದು ಆಗ್ರಹಿಸಿದ್ದಾರೆ.
ನಾಗಮಂಗಲ ಟೌನ್ ಠಾಣೆಯಲ್ಲಿ ಎಫ್ಐಆರ್
ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಪಕ್ಷ ನಾಯಕ ಆರ್. ಅಶೋಕ್ ಹಾಗೂ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ಎಫ್ಐಆರ್ ದಾಖಲಾಗಿದೆ. ನಾಗಮಂಗಲ ಗಲಭೆಗೆ ಪ್ರಕರಣಕ್ಕೆ ಸಂಬಂಧಿಸಿಲ್ಲದ ವಿಡಿಯೋ, ಫೋಟೋ ಪೋಸ್ಟ್ ಮಾಡುವ ಮೂಲಕ ದೊಂಬಿ, ಗಲಭೆಗೆ ಪ್ರಚೋದನೆ ಆರೋಪಡಿ ಅಶೋಕ್ ಮತ್ತು ಶೋಭಾ ಕರಂದ್ಲಾಜೆ ವಿರುದ್ಧ ನಾಗಮಂಗಲ ಟೌನ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.