ಉಡುಪಿ ಜಿಲ್ಲಾ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘದ ವತಿಯಿಂದ ಇಂದು ಉಡುಪಿ ಜಿಲ್ಲಾಧಿಕಾರಿ ಕಛೇರಿ ಮುಂಭಾಗದಲ್ಲಿ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಬೃಹತ್ ಪ್ರತಿಭಟನಾ ಸಭೆ ನಡೆಯಿತು.
ಪ್ರತಿಭಟನಾ ಸಭೆಯ ಕುರಿತು ಈದಿನ.ಕಾಮ್ ಜೊತೆ ಪ್ರತಿಕ್ರಿಯಿಸಿದ ಉಡುಪಿ ಜಿಲ್ಲಾ ಅಂಗನವಾಡಿ ಕಾರ್ಯಕರ್ತೆಯರ ಸಂಘದ ಜಿಲ್ಲಾಧ್ಯಕ್ಷೆ ಫೆನೋಮೆನಾ ಫರ್ನಾಂಡೀಸ್, ಮಕ್ಕಳು ಮತ್ತು ಮಹಿಳೆಯರ ಅಭಿವೃದ್ಧಿಗಾಗಿ ಸರ್ಕಾರ ಜಾರಿಗೊಳಿಸುವ ಅನೇಕ ಕಾರ್ಯಕ್ರಮಗಳ ಅನುಷ್ಠನಕ್ಕಾಗಿ 1975ರಲ್ಲಿ ಪ್ರಾರಂಭವಾಗಿರುವ ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಅಡಿಯಲ್ಲಿ ರಾಜ್ಯದಲ್ಲಿ 1ಲಕ್ಷದ 30 ಸಾವಿರದಷ್ಟು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಕನಿಷ್ಠ ಪ್ರಮಾಣದ ಆಧಾರದಲ್ಲಿ ನಿಸ್ವಾರ್ಥತೆಯಿಂದ ದುಡಿಯುತ್ತಿದ್ದಾರೆ. ಅಂಗನವಾಡಿ ಉದ್ಯೋಗಿಗಳಿಗೆ ಸರ್ಕಾರಗಳು ಸಾಮಾಜಿಕ ಆರ್ಥಿಕ, ಮತ್ತು ಭದ್ರತೆಯನ್ನು ಒದಗಿಸುವ ಕಾಳಜಿ ತೋರದೆ, ಕೇವಲ ದುಡಿಮೆಗಾಗಿ ಬಳಕೆಯ ವಸ್ತುಗಳಂತೆ ಬಳಸಿಕೊಳ್ಳುತ್ತಿರುವುದು ಶೋಷಣಾತ್ಮಕ ಧೋರಣೆಯೇ ಆಗಿದೆ. ಆದುದರಿಂದ ಅಂಗನವಾಡಿ ವ್ಯವಸ್ಥೆಯನ್ನು ಉಳಿಸಿ, ಬೆಳೆಸಲು ಪೂರಕವಾಗಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯ ಸರ್ಕಾರವನ್ನು ಆಗ್ರಹಿಸಿ, ಈ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಸಂಘದ ಜಿಲ್ಲಾ ಕೋಶಾಧಿಕಾರಿ ಹಾಗೂ ಕಾರ್ಕಳ ತಾಲೂಕಿನ ಅಧ್ಯಕ್ಷೆ ಪದ್ಮಾವತಿ ಮಾತನಾಡಿ, “ಅಂಗವಾಡಿ ಕಾರ್ಯಕರ್ತೆಯರು ಇದೇ ಮೊದಲಲ್ಲ. ಸಾವಿರಾರು ಬಾರಿ ಬೀದಿಗೆ ಇಳಿದು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದ್ದೇವೆ. ಆದರೆ ಸರ್ಕಾರ ಮಾತ್ರ ನಮ್ಮ ಸಮಸ್ಯೆಗಳತ್ತ ಗಮನವೇ ನೀಡುತ್ತಿಲ್ಲ” ಎಂದು ಹೇಳಿದರು.
“ಈ ಬಾರಿ ನಮ್ಮ ಬೇಡಿಕೆಗಳನ್ನು ಸರ್ಕಾರ ಈಡೇರಿಸಲೇಬೇಕು. ಅದರಲ್ಲಿ ಮುಖ್ಯವಾಗಿ ಅಂಗನವಾಡಿ ಕಾರ್ಯಕರ್ತೆಯರನ್ನು ಖಾಯಂ ಗೊಳಿಸಬೇಕು. 6ನೇ ಗ್ಯಾರಂಟಿಯಾಗಿ ಸರ್ಕಾರವು ಕಾರ್ಯಕರ್ತೆಯರಿಗೆ ₹15,000 ಮತ್ತು ಸಹಾಯಕಿಯರಿಗೆ ₹10,000 ಗೌರವಧನ ಹೆಚ್ಚಿಸಬೇಕು. ನಿವೃತ್ತಿಯಾದವರಿಗೆ 3 ಲಕ್ಷ ಇಡಿಗಂಟು ಜಾರಿಗೊಳಿಸಬೇಕು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಗ್ರಾಜ್ಯುಟಿ ಪಡೆಯಲು ಅರ್ಹರು ಎಂಬ ಸುಪ್ರೀಂ ಕೋರ್ಟಿನ ತೀರ್ಪನ್ನು ಎಲ್ಲರಿಗೂ ಅನ್ವಯಿಸುವಂತೆ ಜಾರಿಗೊಳಿಸಬೇಕು, 01-04-2023 ರಿಂದ ನಿವೃತ್ತಿಯಾದವರಿಗೆ ಗಾಜ್ಯುವಿಟಿ ನೀಡಬೇಕೆಂಬ ಆದೇಶವನ್ನು ಹಿಂದಿನ ಸರ್ಕಾರ ನೀಡಿದೆ. ಇದುವರೆಗೂ ಯಾರಿಗೂ ಗ್ರಾಜ್ಯುವಿಟಿ ಹಣ ನೀಡಿಲ್ಲ. ಇಲಾಖೆ ಕೂಡಲೇ ಹಣ ಬಿಡುಗಡೆ ಮಾಡಬೇಕು” ಎಂದು ಹೇಳಿದರು.

ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಗಳು
- ಪ್ರತಿ ತಿಂಗಳು 5ನೇ ತಾರೀಕಿನೊಳಗೆ ಗೌರವ ಧನ ನೀಡಬೇಕು. ಈಗಾಗಲೇ 2 ತಿಂಗಳಿನಿಂದ ಗೌರವಧನ ನೀಡದಿರುವುದರಿಂದ ಈ ತಿಂಗಳ ಒಳಗೆ ನೀಡಬೇಕು.
- ಈಗಾಗಲೇ ನಿವೃತ್ತಿಯಾದ ಅಂಗನವಾಡಿ ಕಾರ್ಯಕರ್ತೆಯರಿಗೆ ಹಾಗೂ ಸಹಾಯಕಿಯರಿಗೆ ಎನ್.ಪಿ.ಎಸ್. ಹಾಗೂ ಇಡಿಗಂಟು ಕೂಡಲೇ ಪಾವತಿ ಮಾಡಬೇಕು.
- ಫಲಾನುಭವಿಗಳಿಗೆ ಮೊಟ್ಟೆಯ ಹಣವನ್ನು ಪ್ರತಿ ತಿಂಗಳಿಗೆ ಪಾವತಿ ಆಗಲೇಬೇಕು.
- ಇಡಿ ಜಿಲ್ಲೆಯಲ್ಲಿ ಒಂದೇ ತಾಲೂಕಿನಲ್ಲಿ 10 ವರ್ಷಕ್ಕೂ ಮೇಲ್ಪಟ್ಟು ಮೇಲ್ವಿಚಾರಕರು ಕೆಲಸ ನಿರ್ವಹಿಸುತ್ತಿದ್ದು, ಅಂತಹ ಮೇಲ್ವಿಚಾರಕರನ್ನು ತಕ್ಷಣವೇ ವರ್ಗಾವಣೆ ಮಾಡಬೇಕು.
- ಪ್ರತಿ ತಾಲೂಕಿನಲ್ಲಿ ಮೇಲ್ವಿಚಾರಕರು ಅಲ್ಲಿಂದ ಅಲ್ಲಿಯೇ ವಲಯವಾರು ಬದಲಾವಣೆಗೆ ಅವಕಾಶ ನೀಡಬಾರದು.
- ಪೋಷಣ್ ಅಭಿಯಾನ ಸಂಯೋಜಕರಾಗಿ ಪ್ರತಿ ತಾಲೂಕಿನಲ್ಲಿ ಕೆಲಸ ನಿರ್ವಹಿಸುವವರು ಮಹಿಳಾ ಸಿಬ್ಬಂದಿಯೇ ಆಗಿರಬೇಕು. ಕಾರಣ ಪುರುಷ ಸಿಬ್ಬಂದಿಯಿಂದ ಅಂಗನವಾಡಿ ಕಾರ್ಯಕರ್ತೆಯರಿಗೆ ತುಂಬಾ ತೊಂದರೆ ಆಗುತ್ತಿರುವ ದೂರುಗಳು ಕಂಡುಬಂದಿದ್ದು ಅಂತವರನ್ನು ಬದಲಾವಣೆ ಮಾಡಿಕೊಡಬೇಕು.
- ಕಳಪೆ ಗುಣಮಟ್ಟದ ಸಮವಸ್ತ್ರ ವಾಪಸ್ಸು ಪಡೆಯಬೇಕು ಹಾಗೂ ಪ್ರತಿ ವರ್ಷ ಒಂದೇ ತರಹದ ಸಮವಸ್ತ್ರ ನೀಡಬೇಕೆಂದು ಮನವಿ ಮಾಡಿದರೂ ಈ ಬಾರಿಯೂ ಬದಲಾವಣೆ ಮಾಡಿ ಕಾರ್ಯಕರ್ತೆಯರಿಗೆ ಹಾಗೂ ಸಹಾಯಕರಿಗೆ ವಿವಿಧ ರೀತಿಯ ಸಮವಸ್ತ್ರ ನೀಡಲಾಗಿದೆ. ಕೂಡಲೇ ವಾಪಸ್ಸು ಪಡೆದು ಸರಿಯಾದ ಸಮವಸ್ತ್ರ ನೀಡಬೇಕು.
- ಯಾವುದೇ ಕಾರ್ಯಕ್ರಮಗಳು ನಡೆಸಬೇಕಾದರೆ ಇಲಾಖೆಯಿಂದಲೇ ಜವಾಬ್ದಾರಿ ತೆಗೆದುಕೊಂಡು ಕಾರ್ಯಕ್ರಮಗಳು ನಡೆಸಬೇಕು. ಅಂಗನವಾಡಿ ಕಾರ್ಯಕರ್ತೆಯರನ್ನು ಹೊಣೆಗಾರಿಕೆ ಮಾಡಬಾರದು.
- ಬಿ.ಎಲ್.ಓ ಕಾರ್ಯಕ್ಕೆ ನಿಯೋಜನೆ ಮಾಡಿರುವ ಕಾರ್ಯಕರ್ತೆಯರಿಗೆ ಪ್ರತಿ ವರ್ಷದ ಸಂಭಾವನೆ ಕಾಲಕಾಲಕ್ಕೆ ಸರಿಯಾಗಿ ನೀಡಬೇಕು.
- ಪ್ರಭಾರ ಕಾರ್ಯಕರ್ತೆಯರಿಗೆ ಇದುವರೆಗು 50/-ರೂ ನೀಡುತ್ತಿದ್ದು, ಕನಿಷ್ಠ 3000/-ರೂ ಪ್ರಭಾರ ಭತ್ಯೆ ನೀಡಬೇಕು.
- ಅಂಗನವಾಡಿ ಕೇಂದ್ರಗಳಲ್ಲಿ ತೆರವಾದ ಹುದ್ದೆಗಳಿಗೆ ಕನಿಷ್ಠ 2 ತಿಂಗಳ ಒಳಗಡೆ ಜಿಲ್ಲಾ ಮಟ್ಟದಲ್ಲಿ ಆಯ್ಕೆ ಪ್ರಕ್ರಿಯೆ ನಡೆಸಬೇಕು.
- ಜಿಲ್ಲಾಮಟ್ಟದ ಕುಂದುಕೊರತೆ ಸಭೆಯನ್ನು ಪ್ರತಿ 3 ತಿಂಗಳಿಗೆ ಕಡ್ಡಾಯವಾಗಿ ಮಾಡಬೇಕು.
ಈ ಮೇಲಿನ ಬೇಡಿಕೆಗಳನ್ನು ಈಡೆರಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿ ಉಡುಪಿ ಅಪರ ಜಿಲ್ಲಾಧಿಕಾರಿ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು.

