ಜಮ್ಮು ಮತ್ತು ಕಾಶ್ಮೀರದ ಯುವಜನರು ಪ್ರಜಾಪ್ರಭುತ್ವದಲ್ಲಿ ಮತ್ತೆ ವಿಶ್ವಾಸ ಕಂಡುಕೊಂಡಿದ್ದಾರೆ. ಯುವಜನರು ಮತ್ತು ಮತದಾರರ ಮತವು ಮುಂದಿನ ದಿನಗಳಲ್ಲಿ ಬದಲಾವಣೆ ತರಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಕಾಶ್ಮೀರದಲ್ಲಿ ನಡೆದ ಬಿಜೆಪಿ ಪರ ಚುನಾವಣಾ ಪ್ರಚಾರದಲ್ಲಿ ಅವರು ಮಾತನಾಡಿದರು. “ಜಮ್ಮು ಮತ್ತು ಕಾಶ್ಮೀರದ ರಾಜ್ಯತ್ವವನ್ನು ಮರುಸ್ಥಾಪಿಸುವ ಭರವಸೆಯನ್ನು ಬಿಜೆಪಿ ಈಡೇರಿಸುತ್ತದೆ” ಎಂದರು.
“ನನ್ನ ಜಮ್ಮು ಮತ್ತು ಕಾಶ್ಮೀರದ ಯುವಜನರು ಮೋದಿ ಸರ್ಕಾರದ ಅಡಿಯಲ್ಲಿ ಅಧಿಕಾರ ಪಡೆಯುತ್ತಿದ್ದಾರೆ. ಜಮ್ಮು-ಕಾಶ್ಮೀರ ಬಿಜೆಪಿಯು ಯುವಜನರಿಗೆ ಉದ್ಯೋಗ ನೀಡಲು ಬೃಹತ್ ಘೋಷಣೆಗಳನ್ನು ಮಾಡಿದೆ. ಅವರ ಕೌಶಲ್ಯ ಅಭಿವೃದ್ಧಿಯಾಗಲಿ ಅಥವಾ ಕುಶಲತೆಯಿಲ್ಲದೆಯೂ ಉದ್ಯೋಗಗಳು ದೊರೆಯಲಿ. ಇವೆಲ್ಲವನ್ನೂ ಬಿಜೆಪಿ ಮಾಡಲಿದೆ’’ ಎಂದು ಮೋದಿ ಹೇಳಿದ್ದಾರೆ.
ಕಾಂಗ್ರೆಸ್, ನ್ಯಾಷನಲ್ ಕಾನ್ಫರೆನ್ಸ್ ಮತ್ತು ಪಿಡಿಪಿ ವಿರುದ್ಧ ವಾಗ್ದಾಳಿ ನಡೆಸಿದ ಮೋದಿ, “ಈ ಮೂರು ಪಕ್ಷಗಳು ಮತ್ತು ಕುಟುಂಬಗಳು ತಮ್ಮ ಲಾಭಕ್ಕಾಗಿ ಪ್ರಜಾಪ್ರಭುತ್ವ ಮತ್ತು ಕಾಶ್ಮೀರವನ್ನು ತುಳಿದು ಹಾಕಿವೆ. 1980ರ ದಶಕದಲ್ಲಿ ಅವರು ಮಾಡಿದ್ದೇನು ಎಂಬುದು ನಿಮಗೆ ನೆನಪಿದೆಯೇ? ಅವರು ಜಮ್ಮು ಮತ್ತು ಕಾಶ್ಮೀರದ ರಾಜಕೀಯವನ್ನು ತಮ್ಮ ಸ್ವಂತ ದುರಾಸೆಗಾಗಿ ಬಳಸಿಕೊಂಡರು. ಅವರು ತಮ್ಮ ಕುಟುಂಬವನ್ನು ಹೊರತುಪಡಿಸಿ ಯಾರೂ ಮುಂದೆ ಬರಬೇಕೆಂದು ಬಯಸಲಿಲ್ಲ? ತಮ್ಮ ಸ್ವಾರ್ಥದ ಫಲವಾಗಿ ಈ ಮೂರು ಪಕ್ಷಗಳ ಮೂರು ಕುಟುಂಬಗಳು ಮಾತ್ರ ಅಧಿಕಾರಕ್ಕೆ ಬರುತ್ತವೆ ಎಂಬುದನ್ನು ಅರಿತ ಯುವಜನರು ಪ್ರಜಾಪ್ರಭುತ್ವದ ಮೇಲಿನ ನಂಬಿಕೆಯನ್ನೇ ಕಳೆದುಕೊಂಡಿದ್ದರು” ಎಂದಿದ್ದಾರೆ.
ಈ ವರದಿ ಓದಿದ್ದೀರಾ?: ಬಿಜೆಪಿ ನಾಯಕರಿಂದ ರಾಹುಲ್ ಗಾಂಧಿಯನ್ನು ಮುಗಿಸುವ ಸಂಚು ನಡೆದಿದೆಯೇ?
“ಕಳೆದ ಐದು ವರ್ಷಗಳಲ್ಲಿ ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿಯು ಸಾಕಷ್ಟು ಬದಲಾಗಿದೆ. ಇದು ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ಯುವಜನರ ವಿಶ್ವಾಸವನ್ನು ಪುನಃಸ್ಥಾಪಿಸಿದೆ. ಯುವಜನರು ತಮ್ಮ ಮತ, ಪ್ರಜಾಪ್ರಭುತ್ವದ ಹಕ್ಕು ಹಾಗೂ ಬದಲಾವಣೆಯನ್ನು ತರಬಹುದು ಎಂದು ಭಾವಿಸಿದ್ದಾರೆ. ಇದು ಸಬಲೀಕರಣದ ಮೊದಲ ಹೆಜ್ಜೆಯಾಗಿದೆ” ಮೋದಿ ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು 2019ರಲ್ಲಿ ಕಸಿದುಕೊಂಡ ಮೋದಿ ಸರ್ಕಾರ, 370ನೇ ವಿಧಿಯನ್ನು ರದ್ದುಗೊಳಿಸಿತು. ಬಳಿಕ, ರಾಜ್ಯವನ್ನು ಇಬ್ಬಾಗ ಮಾಡಿ, ಕಾಶ್ಮೀರ ಮತ್ತು ಲಡಾಕ್ಅನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಿತು. ಅಂದಿನಿಂದ ಈವರೆಗೆ ಜಮ್ಮು ಮತ್ತು ಕಾಶ್ಮೀರದ ಮೇಲೆ ರಾಷ್ಟ್ರಪತಿ ಆಳ್ವಿಕೆಯನ್ನು ಹೇರಲಾಗಿದ್ದು, ವಿಧಾನಸಭಾ ಚುನಾವಣೆ ನಡೆದಿಲ್ಲ. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸದೆ, ಚುನಾವಣಾ ಕಣದಿಂದ ಪರಾರಿಯಾಗಿತ್ತು. ಇದೀಗ, ವಿಧಾನಸಭಾ ಚುನಾವಣೆ ನಡೆಯುತ್ತಿದ್ದು, ಬಿಜೆಪಿ ಸೋಲಿನ ಆತಂಕದಲ್ಲಿಯೇ ಚುನಾವಣೆಯನ್ನು ಎದುರಿಸುತ್ತಿದೆ. ಹೀಗಾಗಿ, ಸ್ವತಃ ಮೋದಿಯವರೇ ಜಮ್ಮು-ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನವನ್ನು ಮರಳಿ ಕೊಡುತ್ತೇವೆಂಬ ಮಾತನ್ನಾಡುತ್ತಿದ್ದಾರೆ.