- ಪ್ರಧಾನಿ ಮೋದಿ ವಿರುದ್ಧ ಹರಿಹಾಯ್ದ ಗೌರವ್ ವಲ್ಲಭ್
- ದಲಿತರು ಹಿಂದೂಗಳಲ್ಲವೇ ಎಂದು ಪ್ರಶ್ನಿಸಿದ ಕಾಂಗ್ರೆಸ್ ವಕ್ತಾರ
ಚುನಾವಣೆ ಸಮಯದಲ್ಲಿ ಬಿಜೆಪಿ ಸಮಾಜವನ್ನು ಒಡೆಯುವ ಪ್ರಯತ್ನ ಮಾಡುತ್ತಿದೆ ಎಂದು ಎಐಸಿಸಿ ವಕ್ತಾರ ಗೌರವ್ ವಲ್ಲಭ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪ್ರಣಾಳಿಕೆಯ ಭಜರಂಗದಳ ನಿಷೇಧದ ಕುರಿತು ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.
“ಪ್ರಧಾನಿ ಮೋದಿ ಕೆಲ ತಿಂಗಳಿಂದ ರಾಜ್ಯಕ್ಕೆ ಬರುತ್ತಿದ್ದಾರೆ. ಅವರು 40% ಕಮಿಷನ್ ಸರ್ಕಾರದ ಬಗ್ಗೆ ಮಾತನಾಡಿಲ್ಲ. ರಾಜ್ಯದಲ್ಲಿ ಬೆಲೆ ಏರಿಕೆ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ, ಚುನಾವಣೆಯನ್ನು ಧಾರ್ಮಿಕ ವಿಚಾರದ ಮೇಲೆ ನಡೆಸಲು ಪ್ರಯತ್ನಿಸುತ್ತಿದ್ದಾರೆ” ಎಂದು ಹೇಳಿದ್ದಾರೆ.
“ಮೋದಿ ಅವರು ಹನುಮಂತನಿಗೆ ಅಪಮಾನ ಮಾಡಿದ್ದಾರೆ. ನೀವು ಒಂದು ಸಂಘಟನೆ ಮತ್ತು ಕೆಲವು ವ್ಯಕ್ತಿಗಳನ್ನು ಭಗವಂತ ಹನುಮಂತನಿಗೆ ಹೋಲಿಕೆ ಮಾಡಿದ್ದೀರಿ. ಇದನ್ನು ಕನ್ನಡಿಗರು ನಿಮ್ಮನ್ನು ಕ್ಷಮಿಸುವುದಿಲ್ಲ” ಎಂದು ಹೇಳಿದ್ದಾರೆ.
“ಹನುಮಂತ ರಾಜಧರ್ಮ ಪಾಲನೆಯ ಪ್ರತೀಕ, ಹನುಮಂತ ಗೌರವ ಮತ್ತು ಕರ್ತವ್ಯದ ಪ್ರತೀಕ, ಸೇವೆ ಮತ್ತು ತ್ಯಾಗ ಪ್ರತೀಕ. ಜಾತಿ ಹಾಗೂ ಧರ್ಮದ ಹೆಸರಿನಲ್ಲಿ ಸಮಾಜದಲ್ಲಿ ದ್ವೇಷ, ಶತೃತ್ವವನ್ನು ಬಿತ್ತುವ, ಸಂಘಟನೆಗಳ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಹಲವು ಬಾರಿ ಹೇಳಿದರೂ ನೀವು ಅದನ್ನು ಪಾಲಿಸಲಿಲ್ಲ” ಎಂದು ಗೌರವ್ ವಲ್ಲಭ್ ಹೇಳಿದ್ದಾರೆ.
“ದೇಶದಲ್ಲಿ ಜಾತಿ ಧರ್ಮದ ಆಧಾರದ ಮೇಲೆ ಒಡೆಯುವ ಸಂಘಟನೆಗಳನ್ನು ಹನುಮಂತನಿಗೆ ಹೋಲಿಕೆ ಮಾಡಿದ್ದೀರಿ. ಹನುಮಂತ ಪವಿತ್ರತೆಯ ಪ್ರತೀಕ. ಇಂತಹವರನ್ನು ಹನುಮಂತನ ಜತೆ ಹೋಲಿಕೆ ಮಾಡಿ ತಪ್ಪು ಮಾಡಿದ್ದೀರಿ” ಎಂದು ಮೋದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ನಿರುದ್ಯೋಗ, ಬೆಲೆ ಏರಿಕೆ ಬಗ್ಗೆ ಮಾತಾಡಿ: ಮೋದಿಗೆ ರಾಹುಲ್-ಪ್ರಿಯಾಂಕಾ ಸವಾಲು
“ಪ್ರಧಾನ ಮಂತ್ರಿಗಳೇ ದಲಿತ ಯುವಕನೊಬ್ಬನನ್ನು ಭಜರಂಗದಳ ಸಂಘಟನೆ ಹತ್ಯೆ ಮಾಡಿದೆ. ಇಂತಹ ಸಂಘಟನೆಯನ್ನು ನೀವು ಹನುಮಂತನ ಜತೆ ಹೋಲಿಕೆ ಮಾಡುತ್ತೀರಾ? ನೀವು ಈ ಮೃತ ಯುವಕನ ಮನೆಗೆ ಭೇಟಿ ನೀಡಿದ್ದೀರಾ? ಈತನ ಹತ್ಯೆ ಮಾಡಿದವರ ವಿರುದ್ದ ಪ್ರಕರಣ ದಾಖಲಿಸಲು ನಿಮ್ಮ 40% ಸರ್ಕಾರಕ್ಕೆ ಮನವಿ ಮಾಡಿದ್ದೀರಾ? ನಿಮ್ಮ ಪ್ರಕಾರ ದಲಿತರು ಹಿಂದೂಗಳಲ್ಲವೇ” ಎಂದು ಪ್ರಶ್ನಿಸಿದ್ದಾರೆ.
“ಪ್ರಧಾನಮಂತ್ರಿಗಳು ಹನುಮಂತನನ್ನು ಈ ಸಂಘಟನೆಗಳಿಗೆ ಹೋಲಿಕೆ ಮಾಡಿರುವ ಪಾಪವನ್ನು ಹನುಮಂತನ ಭಕ್ತರು ಕ್ಷಮಿಸುವುದಿಲ್ಲ. ಹನುಮಂತನ ಭಕ್ತರು ಈ 40% ಕಮಿಷನ್ ಸರ್ಕಾರದ ವಿರುದ್ಧ ಗಧಾಪ್ರಹಾರ ನಡೆಸಲಿದ್ದಾರೆ” ಎಂದಿದ್ದಾರೆ.