- ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್ ವರಿಷ್ಠ ನಾಯಕರು
- ನಿಮ್ಮ ಬಗ್ಗೆ ಮಾತನಾಡುವ ಬದಲು ಕರ್ನಾಟಕದ ಸಮಸ್ಯೆ ಬಗ್ಗೆ ಮಾತನಾಡಿ
ಬಿಜೆಪಿ ಹಾಗೂ ನರೇಂದ್ರ ಮೋದಿಯವರು ಒಂದೇ ಒಂದು ಚುನಾವಣೆಯನ್ನು ಜನರ ಸಮಸ್ಯೆಗಳ ಮೇಲೆ ಹೋರಾಟ ನಡೆಸುವ ಮೂಲಕ ಗೆದ್ದು ತೋರಿಸಲಿ ಎಂದು ಕಾಂಗ್ರೆಸ್ ನಾಯಕರಾದ ರಾಹುಲ್, ಪ್ರಿಯಾಂಕಾ ಗಾಂಧಿ ಸವಾಲೆಸೆದರು.
ಕರುನಾಡ ಚುನಾವಣಾ ರಣಕಣದಲ್ಲಿ ಬಿರುಸಿನ ಪ್ರಚಾರದಲ್ಲಿರುವ ಕಾಂಗ್ರೆಸ್ನ ಸ್ಟಾರ್ ಪ್ರಚಾರಕರು ಹಾಗೂ ಪಕ್ಷ ಪ್ರಮುಖರೂ ಆಗಿರುವ ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿ, ಆಡಳಿತ ಪಕ್ಷದ ವಿರುದ್ಧ ಹರಿಹಾಯ್ದರು.
ಮಂಡ್ಯದಲ್ಲಿನ ಪಕ್ಷದ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಿಯಾಂಕಾ ಗಾಂಧಿ ವಾದ್ರಾ, ದೇಶದಲ್ಲಿ ಮುಕ್ತವಾಗಿ ಮಾತನಾಡುವ ಅವಕಾಶ ಇಲ್ಲವಾಗಿದೆ. ನಮ್ಮ ಸಮಸ್ಯೆಗಳನ್ನು ನೇರವಾಗಿ ಹೇಳಲೂ ಅವಕಾಶ ಇಲ್ಲವಾಗಿದೆ. ಚುನಾವಣೆ ನಡೆಯುತ್ತಿರುವುದು ಕರ್ನಾಟಕದಲ್ಲಿ. ಇಲ್ಲಿನ ಜನರ ಸಮಸ್ಯೆಗೆ ಹಾಗೂ ಅಭಿವೃದ್ದಿ ಬಗ್ಗೆ ಮಾತನಾಡಬೇಕಾದ ಮೋದಿ ಮತ್ತವರ ಪಕ್ಷ ಕೇವಲ ತಮ್ಮ ಹೊಗಳಿಕೆಯಲ್ಲೇ ನಿರತವಾಗಿದೆ.
ಪ್ರಧಾನಿಯಂತೂ ನನ್ನನ್ನು ಹಾಗಂದರು, ಹೀಗಂದರು ಎಂದುಕೊಂಡೇ ಜನರ ಬಳಿ ಅಲವತ್ತುಕೊಳ್ಳುತ್ತಿದ್ದಾರೆ. ನಮ್ಮ ಸಮಸ್ಯೆಗಳಿಗೆ ಕಿವಿಯಾಗಬೇಕಾದವರು ತಮ್ಮದೇ ದೊಡ್ಡ ಸಮಸ್ಯೆ ಎಂಬಂತೆ ಬಿಂಬಿಸಿಕೊಳ್ಳುತ್ತಿದ್ದಾರೆ. ಇದು ಬಿಜೆಪಿಯ ಜನಪರ ಆಡಳಿತ ಎಂದು ವ್ಯಂಗ್ಯವಾಡಿದರು.
ಬಿಜೆಪಿ ವಿರುದ್ದ ಹರಿಹಾಯ್ದ ಅವರು ಜನರ ಸಮಸ್ಯೆ ಮೇಲೆ ಒಂದೇ ಒಂದು ಚುನಾವಣೆ ಗೆದ್ದು ತೋರಿಸಿ ಎಂದು ಸವಾಲೆಸೆದರು.
ಮತ್ತೊಂದೆಡೆ ಶಿವಮೊಗ್ಗದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ ರಾಹುಲ್ ಗಾಂಧಿ. ಮೋದಿಯವರಿಗೆ ನೇರ ಪ್ರಶ್ನೆಗಳನ್ನು ಹಾಕಿದರು.
ಈ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ರಾಜ್ಯದ ಗೃಹ ಸಚಿವರು ಈ ಚುನಾವಣೆಯನ್ನು ಎದುರಿಸುತ್ತಿದ್ದಾರೆ. ಪಿಎಸ್ಐ ನೇಮಕಾತಿ ಹಗರಣದಲ್ಲಿ ಭಾರೀ ಭ್ರಷ್ಟಾಚಾರ ನಡೆದಿದೆ. ಪ್ರಧಾನಿ ಮೋದಿ ಅವರು ಈ ಭ್ರಷ್ಟ ಗೃಹ ಸಚಿವರ ಹೆಸರನ್ನು ಎಲ್ಲೂ ಹೇಳಲ್ಲ ಎಂದು ಕುಟುಕಿದರು.
ಪ್ರಧಾನಿಗಳು ಈ ಬಗ್ಗೆ ಮಾತನಾಡದಿದ್ದುದಕ್ಕೆ ಎರಡು ಕಾರಣಗಳಿವೆ. ಒಂದು, ನರೇಂದ್ರ ಮೋದಿ ಅವರು ನರೇಂದ್ರ ಮೋದಿ ಅವರ ಬಗ್ಗೆ ಮಾತನಾಡುತ್ತಾರೆ.
ಕರ್ನಾಟಕ ರಾಜ್ಯದ ವಿಕಾಸದ ಬಗ್ಗೆ ಮತ್ತು ಭ್ರಷ್ಟಾಚಾರದ ಬಗ್ಗೆ ಉತ್ತರ ಕೊಡಿ ಎಂದರೆ, ಅವರು ಕೇವಲ ಪ್ರಧಾನಿಯ ಬಗ್ಗೆಯೇ ಮಾತನಾಡುತ್ತಾರೆ. ಕಳೆದ 3 ವರ್ಷಗಳಲ್ಲಿ ಇಲ್ಲಿ ಕಳ್ಳಹಾದಿಯಲ್ಲಿ ಅಧಿಕಾರ ಹಿಡಿದ ಸರ್ಕಾರದ ಬಗ್ಗೆ ಯಾಕೆ ಮೋದಿ ಚಕಾರವೆತ್ತುತ್ತಿಲ್ಲ ಎಂದು ಕೇಳಿದರು.
ಗೋವಾ, ಮಹಾರಾಷ್ಟ್ರ, ಕರ್ನಾಟಕದ ನೀರು ಹಂಚಿಕೆಯ ಬಗ್ಗೆ ಕನಿಷ್ಠ ನಿಮ್ಮ ಸ್ಪಷ್ಟ ನಿಲುವನ್ನು ವ್ಯಕ್ತಪಡಿಸಿ ಎಂದು ಪ್ರಧಾನಿಯನ್ನು ಆಗ್ರಹಿಸಿದ ರಾಹುಲ್ ಗಾಂಧಿ, ರಾಜ್ಯದಲ್ಲಿ ಪ್ರವಾಹ ಬಂದಾಗಲೂ ನೀವು ಕರ್ನಾಟಕಕ್ಕೆ ಯಾಕೆ ಭೇಟಿ ನೀಡಿಲ್ಲ. ಕರ್ನಾಟಕದಿಂದ ತೆರಿಗೆಯ ಹೆಚ್ಚಿನ ಪಾಲನ್ನು ಪಡೆಯುತ್ತೀರಾ ಆದರೆ ಕಡಿಮೆ ಹಣವನ್ನು ಕರ್ನಾಟಕಕ್ಕೆ ಕೊಡುತ್ತಿದ್ದೀರಾ ಇದೇಕೆ ಎಂದು ರಾಹುಲ್ ಕಿಡಿ ಕಾರಿದರು.
ಪ್ರಧಾನಿ ಮೋದಿಯವರೇ ರಾಜ್ಯದ ರೈತರ ಬೆಳೆ ಮತ್ತದರ ಬೆಲೆಯ ಬಗ್ಗೆ ಮಾತನಾಡಿ, ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಉಕ್ಕಿನ ಕಾರ್ಖಾನೆ ಉಳಿಸಲು ಏನು ಮಾಡಿದ್ದೀರಿ ಅಂತ ಜನತೆಗೆ ತಿಳಿಸಿ ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ?:ಕಾಂಗ್ರೆಸ್ ಜೆಡಿಎಸ್ ಎರಡೂ ಕುಟುಂಬವಾದಿ ಪಕ್ಷಗಳು : ಪ್ರಧಾನಿ…
ಪ್ರತಿಸಲ ಇಲ್ಲಿಗೆ ಬಂದಾಗಲೂ ಕಾಂಗ್ರೆಸ್ನವರು ಇದುವರೆಗೂ ನನ್ನನ್ನು 91 ಬಾರಿ ಬೈದಿದ್ದಾರೆ ಎಂದು ಪ್ರಧಾನಿ ಮೋದಿ ಹೇಳ್ತಾರೆ. ಅದನ್ನು ಬಿಟ್ಟು ಅಭಿವೃದ್ದಿ ಬಗ್ಗೆ ಏನನ್ನೂ ಮಾತನಾಡುವುದಿಲ್ಲ ಎಂದು ರಾಹುಲ್ ಆಕ್ರೋಶ ವ್ಯಕ್ತಪಡಿಸಿದರು.
ಇದು ಪ್ರಧಾನಮಂತ್ರಿ ಅವರ ಪ್ರಶ್ನೆ ಅಲ್ಲ. ಇದು ಕರ್ನಾಟಕ ಜನತೆಯ ಪ್ರಶ್ನೆ. ಆದರೆ ಪ್ರಧಾನಿ ಇಲ್ಲಿಗೆ ಬಂದಾಗ ಇಲ್ಲಿನ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಮಾತನಾಡಲ್ಲ, ಇಲ್ಲಿನ ಸರ್ಕಾರದ ದುರಾಡಳಿತದ ಬಗ್ಗೆ ಮಾತನಾಡಲ್ಲ. ಆದರೆ ಕನಿಷ್ಠ ನಿಮ್ಮ ಸರ್ಕಾರ ಬಂದರೆ ಮುಂದಿನ ಐದು ವರ್ಷದಲ್ಲಿ ರಾಜ್ಯದ ಜನತೆಗೆ ಏನು ಮಾಡುತ್ತೀರಾ ಎಂಬುದನ್ನಾದರೂ ಹೇಳಿ ಎಂದು ಪ್ರಶ್ನಿಸಿದರು.
ಬಿಜೆಪಿಯವರಿಗೆ 40 ಸಂಖ್ಯೆ ಅಂದರೆ ಬಹಳ ಇಷ್ಟ. ಪೊಲೀಸ್ ಠಾಣೆ ಹೋದರೂ 40%, ಸರ್ಕಾರಿ ಕಚೇರಿಯಲ್ಲೂ 40ರಷ್ಟು ಭ್ರಷ್ಟಾಚಾರ. ಹಾಗಾಗಿ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಗೆ 40 ಕ್ಷೇತ್ರಗಳನ್ನು ಮಾತ್ರ ನೀಡಿ ಎಂದು ರಾಹುಲ್ ಗಾಂಧಿ ಹೇಳಿದರು.