ಶರತ್ ಬಾಬು ಆರೋಗ್ಯದ ಬಗ್ಗೆ ವದಂತಿ ಹಬ್ಬಿಸಿದ್ದ ಕಿಡಿಗೇಡಿಗಳು
ಸಂತಾಪ ಸೂಚಿಸಿದ್ದ ಖುಷ್ಬೂ ಸುಂದರ್, ಕಮಲ್ ಹಾಸನ್
ಕಳೆದ ಕೆಲ ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಬಹುಭಾಷಾ ನಟ ಶರತ್ ಬಾಬು ಬುಧವಾರ ತಡರಾತ್ರಿ ನಿಧನರಾಗಿದ್ದಾರೆಂದು ಕೆಲವು ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಈ ವದಂತಿಯನ್ನು ತಳ್ಳಿ ಹಾಕಿರುವ ನಟನ ಕುಟುಂಬಸ್ಥರು ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿದ್ದಾರೆ.
ಶರತ್ ಬಾಬು ಆರೋಗ್ಯ ಸ್ಥಿತಿಯ ಬಗ್ಗೆ ಅವರ ಸಹೋದರಿ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, “ಶರತ್ ಬಾಬು ಅವರ ಬಗ್ಗೆ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಸುದ್ದಿಗಳು ಸುಳ್ಳು. ಅವರ ಆರೋಗ್ಯದಲ್ಲಿ ಕೊಂಚ ಮಟ್ಟಿಗೆ ಸುಧಾರಣೆ ಕಂಡುಬಂದಿದೆ. ಶೀಘ್ರದಲ್ಲೇ ಅವರು ಗುಣಮುಖರಾಗಲಿದ್ದಾರೆ. ದಯವಿಟ್ಟು ಯಾರೂ ವದಂತಿಗಳನ್ನು ನಂಬಬೇಡಿ” ಎಂದು ಮನವಿ ಮಾಡಿದ್ದಾರೆ.
ಏಪ್ರಿಲ್ ಮೊದಲ ವಾರದಲ್ಲಿ ಶರತ್ ಬಾಬು ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿತ್ತು. ಆಗ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸ್ವಲ್ಪ ಚೇತರಿಕೆ ಕಾಣುತ್ತಲೇ ಹೈದರಾಬಾದ್ನ ʼಎಐಜಿʼ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಸದ್ಯ ಇದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆಯುತ್ತಿದ್ದು, ನಟನ ಸ್ಥಿತಿ ಸುಧಾರಿಸಿದೆ ಎನ್ನಲಾಗಿದೆ.
1973ರಲ್ಲಿ ತೆರೆಕಂಡ ತೆಲುಗಿನ ʼರಾಮ ರಾಜ್ಯಂʼ ಚಿತ್ರದ ಮೂಲಕ ಬೆಳ್ಳಿತೆರೆ ಪ್ರವೇಶಿಸಿದ ಶರತ್ ಬಾಬು, 4 ದಶಕಗಳ ಸಿನಿ ಪಯಣದಲ್ಲಿ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಕೇವಲ ತೆಲುಗು ಮಾತ್ರವಲ್ಲದೆ ಕನ್ನಡ ಮತ್ತು ತಮಿಳು ಚಿತ್ರರಂಗದಲ್ಲೂ ಅವರು ಗುರುತಿಸಿಕೊಂಡಿದ್ದರು. ʼಶಕ್ತಿʼ, ʼರಣಚಂಡಿʼ, ʼಕಂಪನʼ, ʼಗಾಯʼ, ʼತುಳಸಿ ದಳʼ, ʼಹೃದಯ-ಹೃದಯʼ, ʼನೀಲʼ, ʼನಮ್ಮೆಜಮಾನ್ರುʼ, ʼಅಮೃತ ವರ್ಷಿಣಿʼ ಮುಂತಾದ ಚಿತ್ರಗಳಲ್ಲಿ ನಟಿಸುವ ಮೂಲಕ ಕನ್ನಡದಲ್ಲೂ ಭಾರೀ ಜನಪ್ರಿಯತೆ ಗಳಿಸಿದ್ದರು.
ಶರತ್ ಬಾಬು ಅವರ ನಿಧನದ ವದಂತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಲೇ ಖ್ಯಾತ ನಟಿ, ಬಿಜೆಪಿ ನಾಯಕಿ ಖುಷ್ಬೂ ಸುಂದರ್, ತಮಿಳಿನ ಸ್ಟಾರ್ ನಟ ಕಮಲ್ ಹಾಸನ್ ಸೇರಿದಂತೆ ಹಲವರು ಹಿರಿಯ ನಟನಿಗೆ ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದಾರೆ. ಸುಳ್ಳು ಸುದ್ದಿಯ ಬಗ್ಗೆ ತಿಳಿಯುತ್ತಲೇ ಟ್ವೀಟ್ಗಳನ್ನು ಡಿಲೀಟ್ ಮಾಡಿದ್ದಾರೆ.