ಗೌರವಯುತವಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ಕೊಟ್ಟು ಬೇರೆಯವರಿಗೆ ಅವಕಾಶ ಮಾಡಿಕೊಡಲಿ. ಅವರು ಸುಪ್ರೀಂ ಕೋರ್ಟ್ಗೆ ಹೋದರೂ ಅಲ್ಲಿ ಕೂಡ ಮುಖಭಂಗ ಅನುಭವಿಸುತ್ತಾರೆ ಎಂದು ವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ್ ಹೇಳಿದರು.
ಮೈಸೂರಿನಲ್ಲಿ ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿ, “ಹಠ ಮಾಡಿ ಅಧಿಕಾರದಲ್ಲಿ ಮುಂದುವರಿದರೆ ಮುಂದೆ ವೇದನೆ ಪಡುತ್ತಾರೆ. ಇವತ್ತಿನ ಹೈಕೋರ್ಟ್ ತೀರ್ಪು ಸಿದ್ದರಾಮಯ್ಯ ಮತ್ತು ಸರ್ಕಾರಕ್ಕೆ ಎಚ್ಚರಿಕೆಯ ಗಂಟೆ” ಎಂದರು.
“ಸಿದ್ದರಾಮಯ್ಯ ಅವರು ಮುಂದೆ ವೇದನೆ ಪಡುವುದು ಬೇಡ. ಆ ಪರಿಸ್ಥಿತಿ ಸಿದ್ದರಾಮಯ್ಯ ಅವರಿಗೆ ಬರಬಾರದು ಎಂದರೆ ಈಗಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಬೇರೆಯವರಿಗೆ ಮಾರ್ಗದರ್ಶನ ಮಾಡಬೇಕು” ಎಂದು ಸಲಹೆ ನೀಡಿದರು.
“ಮುಡಾದಿಂದ ಸಿದ್ದರಾಮಯ್ಯ ಕುಟುಂಬ ಪಡೆದ 14 ನಿವೇಶನಗಳನ್ನು ಹಿಂತಿರುಗಿಸಿ ತನಿಖೆ ಎದುರಿಸಲು ಈ ಹಿಂದೆಯೇ ಸಲಹೆ ನೀಡಿದ್ದೆ. ಆದರೆ ಅವರು ಅದನ್ನು ನಿರ್ಲಕ್ಷಿಸಿದ್ದರು. ಪಕ್ಕದಲ್ಲಿರುವವರ ಬುದ್ಧಿವಾದವನ್ನು ಕೇಳಿ ತಮ್ಮ 50 ವರ್ಷದ ರಾಜಕೀಯವನ್ನು ನೀರಿನಲ್ಲಿ ಹೋಮ ಮಾಡಿದ್ದಾರೆ” ಎಂದರು.
“ಕರ್ನಾಟಕದ ಎಲ್ಲ ಮುಖ್ಯಮಂತ್ರಿಗಳು ಈ ರಾಜ್ಯದ ಘನತೆ ಎತ್ತಿ ಹಿಡಿದಿದ್ದರು. ಅದನ್ನು ಮಣ್ಣುಪಾಲು ಮಾಡಿದ ಕೀರ್ತಿ ಸಿದ್ದರಾಮಯ್ಯರಿಗೆ ಸಲ್ಲುತ್ತದೆ. ಕುರುಬರೂ ಸೇರಿದಂತೆ ಅಹಿಂದ ಸಮುದಾಯಗಳು ಅವರನ್ನು ಎರಡನೇ ಬಾರಿಗೆ ಮುಖ್ಯಮಂತ್ರಿಯನ್ನಾಗಿ ಮಾಡಿದ್ದವು. ಆದರೆ ಸಿದ್ದರಾಮಯ್ಯ ದುರಂಹಕಾರ, ಧೋರಣೆಗಳ ಮೂಲಕ ಈ ಸಮುದಾಯಗಳಿಗೆ ಮಸಿ ಬಳೆದಿದ್ದಾರೆ ” ಎಂದು ಕುಟುಕಿದರು.