ದೇಶದ ಅಭಿವೃದ್ಧಿಯಲ್ಲಿ ಶ್ರಮಿಕರ ಪಾತ್ರ ಮಹತ್ವದ್ದಾಗಿದೆ. ಆದರೆ ಇತಿಹಾಸದಲ್ಲಿ ಶ್ರಮಿಕರ ಹೆಸರಿಲ್ಲದಿರುವುದು ದುರಂತದ ಸಂಗತಿಯಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಪರಶುರಾಮ ದೊಡ್ಡಮನಿ ಹೇಳಿದರು.
ಧಾರವಾಡ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ, ಪೊಲೀಸ್ ಇಲಾಖೆ, ಕಾರ್ಮಿಕ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಕಟ್ಟಡ ಕಾರ್ಮಿಕರಿಗಾಗಿ ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ನಗರದ ಲಕ್ಷ್ಮಿಸಿಂಗನಕೇರಿಯ ಮಹಾಲಕ್ಷ್ಮಿ ಗುಡಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.
18 ವರ್ಷದ ಒಳಗಿನ ಮಕ್ಕಳು ಕೂಲಿ ಕಾರ್ಮಿಕರಾಗಿದ್ದರೆ, ಬಡತನದ ಕಾರಣಕ್ಕಾಗಿ ಮಕ್ಕಳ ಜೀವನ ಹಾಳು ಮಾಡಬಾರದು. ಬಾಲ್ಯ ವಿವಾಹಕ್ಕೆ ಕಡಿವಾಣ ಹಾಕಬೇಕು. ಅಂಬೇಡ್ಕರ್ ಅನೇಕ ಕಷ್ಟಗಳನ್ನು ಅನುಭವಿಸಿ ಇವತ್ತು ಅತ್ಯಂತ ಉನ್ನತ ಸ್ಥಾನದಲ್ಲಿದ್ದಾರೆ. ಅಂಬೇಡ್ಕರ್ ಭಾವಚಿತ್ರ ಎಲ್ಲರ ಮನೆಯಲ್ಲೂ ಇರಬೇಕು. ಶಿಕ್ಷಣ ಕಲಿಸಿದರೆ ಜಗತ್ತಿನಲ್ಲಿ ಯಾವುದೇ ಮೂಲೆಯಲ್ಲಾದರೂ ಬದುಕಬಹುದು. ಮತ್ತು ದೇಶದ ಅಭಿವೃದ್ಧಿಯಲ್ಲಿ ಶ್ರಮಿಕರ ಪಾತ್ರ ಮಹತ್ವದ್ದಾಗಿದೆ. ಆದರೆ ಇತಿಹಾಸದಲ್ಲಿ ಶ್ರಮಿಕರ ಹೆಸರಿಲ್ಲದಿರುವುದು ದುರಂತದ ಸಂಗತಿಯಾಗಿದೆ ಎಂದರು.
ಇಂಡಿಯನ್ ಲೇಬರ್ ಲೈನ್ ಸಂಯೋಜಕ ಆನಂದ್ ಸವಣೂರ ಪ್ರಾಸ್ತಾವಿಕವಾಗಿ ಮಾತನಾಡಿ, ಅಸಂಘಟಿತ ಕಾರ್ಮಿಕರಿಗೆ ಕೂಲಿ ವಂಚನೆ, ಪಿಎಫ್, ಕೆಲಸದ ಸ್ಥಳದಲ್ಲಿ ಕಾರ್ಮಿಕರು ಹಿಂಸೆಗೆ ಒಳಗಾದಾಗ ಅವರಿಗೆ ನೆರವು ನೀಡುವ ಉದ್ದೇಶದಿಂದ ಲೇಬರ್ ಲೈನ್ ಸಂಘಟನೆಯಿಂದ ಅವಳಿ ನಗರದಲ್ಲಿ ಸುಮಾರು 487 ದಾಖಲಾಗಿರುವ ದೂರುಗಳಲ್ಲಿ 102 ದೂರುಗಳನ್ನು ಇತ್ಯರ್ಥಗೊಳಿಸಿ ₹79,152.46 ರೂಪಾಯಿ, ಅಸಂಘಟಿತ ಇಬ್ಬರು ಮಹಿಳೆಯರಿಗೆ ₹20,000 ರೂಪಾಯಿಗಳನ್ನು ಕೊಡಿಸಲಾಗಿದೆ. ವಲಸೆ ಕಾರ್ಮಿಕರು ಮಾಲೀಕರಿಂದ ಕೂಲಿ ವಂಚನೆ, ಕೆಲಸದ ಸ್ಥಳದಲ್ಲಿ ಕಿರುಕುಳ ಅನುಭವಿಸಿದಲ್ಲಿ ಲೇಬರ್ ಲೈನ್ಗೆ ಸಂಪರ್ಕಿಸಬೇಕು ಎಂದರು.
ಪಾಲಿಕೆಯ ಸದಸ್ಯ ತುಳಸಪ್ಪ ಪೂಜಾರ್ ಮಾತನಾಡಿ, ತಳಸಮುದಾಯದ ಮಕ್ಕಳೂ ಉನ್ನತ ಹುದ್ದೆಗೆ ಏರಬಹುದು. ಸರ್ಕಾರದ ಬಹುತೇಕ ಸವಲತ್ತುಗಳು ಬಡವರಿಗಾಗಿವೆ. ಕೆಳವರ್ಗದಲ್ಲಿ ಬಹುತೇಕ ಮಹಿಳೆಯರು ಕೂಲಿ ಮಾಡುತ್ತಾರೆ. ಹೀಗಾಗಿ ಮಹಿಳೆಯರಿಗೂ ಲೇಬರ್ ಕಾರ್ಡ್ ಕೊಡುವಂತಾಗಬೇಕು ಎಂದರು.
ಪಾಲಿಕೆ ಮಾಜಿ ಸದಸ್ಯ ಬಸವರಾಜ್ ಮುತ್ತಳ್ಳಿ ಮಾತನಾಡಿ, ಕಷ್ಟದಿಂದ ಮೇಲೆ ಬಂದವರ ಮಾರ್ಗದರ್ಶನದ ಸದುಪಯೋಗ ಪಡೆದುಕೊಳ್ಳಬೇಕು. ಯುವಕರು ದುಶ್ಚಟಗಳಿಂದ ದೂರವಿರಬೇಕು ಎಂದರು.
ಎಸ್ ಸಿ ಎಲ್ ಪಿ ಯೋಜನಾ ನಿರ್ದೇಶಕ ಬಸವರಾಜ್ ಪಂಚಾಕ್ಷರಿ ಮಠ ಮಾತನಾಡಿ, ಯಾವುದೇ ಕೆಲಸವಾದರೂ ಕಾರ್ಮಿಕರು ಮುಖ್ಯ ಆಧಾರಸ್ತಂಭವಾಗಿದ್ದಾರೆ. ಕಾರ್ಮಿಕರು ಕಾರ್ಮಿಕ ಇಲಾಖೆಯಿಂದ ದೊರಕುವ ಎಲ್ಲ ಯೋಜನೆಗಳ ಬಗ್ಗೆ ತಿಳಿದುಕೊಳ್ಳಬೇಕು. ಕಾರ್ಮಿಕ ಇಲಾಖೆಯಲ್ಲಿ ನೊಂದಣಿ ಮಾಡಿಸಿಕೊಂಡರೆ ವೈದ್ಯಕೀಯ, ಶೈಕ್ಷಣಿಕ, ಮದುವೆ ಧನಸಹಾಯ ಸಿಗುತ್ತದೆ. ಬಡತನವನ್ನು ಮೆಟ್ಟಿನಿಂತು ಕೂಲಿ ಕಾರ್ಮಿಕರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವಲ್ಲಿ ಮುಂದಾಗಬೇಕು. ಮಕ್ಕಳ ಭವಿಷ್ಯ ಪಾಲಕರ ಕೈಯಲ್ಲಿದೆ ಎಂದರು.