ಬುಡಕಟ್ಟು ಮತ್ತು ಮೈತೇಯ್ ಸಮುದಾಯದ ನಡುವಿನ ಹಿಂಸಾಚಾರದಿಂದ ಹೊತ್ತಿ ಉರಿಯುತ್ತಿರುವ ಈಶಾನ್ಯ ರಾಜ್ಯ ಮಣಿಪುರದಲ್ಲಿ, ಪರಿಸ್ಥಿತಿ ಕೈ ಮೀರಿ ಹೋದರೆ ʻಕಂಡಲ್ಲಿ ಗುಂಡುʼ ಹಾರಿಸಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಹಿಂಸಾಚಾರ ಪೀಡಿತ ಪ್ರದೇಶಗಳಲ್ಲಿ ಪ್ರತಿಭಟನಾಕಾರರನ್ನು ಎಲ್ಲ ರೀತಿಯಲ್ಲೂ ಮನವೊಲಿಸಿ, ಎಚ್ಚರಿಕೆ ನೀಡಿ, ಸಮಂಜಸವಾದ ಬಲ ಪ್ರಯೋಗ ಮಾಡಿ. ಇದ್ಯಾವುದಕ್ಕೂ ಬಗ್ಗದೇ ಹೋದರೆ, ಪರಿಸ್ಥಿತಿ ಕೈ ಮೀರಿದರೆ ಗುಂಡು ಹಾರಿಸಿ ಎಂದು ರಾಜ್ಯಪಾಲರು ಆದೇಶ ಹೊರಡಿಸಿದ್ದಾರೆ.
ರಾಜ್ಯದಲ್ಲಿ ಸಾರ್ವಜನಿಕ ಸುವ್ಯವಸ್ಥೆ ಮತ್ತು ನೆಮ್ಮದಿಯನ್ನು ಕಾಪಾಡುವ ಸಲುವಾಗಿ, ಎಲ್ಲಾ ಜಿಲ್ಲಾ ಮ್ಯಾಜಿಸ್ಟ್ರೇಟ್, ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಹಾಗೂ ಎಲ್ಲಾ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್/ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ಗಳಿಗೆ ಪರಿಸ್ಥಿತಿ ಕೈ ಮೀರಿದ ಸಂದರ್ಭದಲ್ಲಿ ಆದೇಶ ನೀಡಲು ರಾಜ್ಯಪಾಲರು ಅಧಿಕಾರ ನೀಡಿದ್ದಾರೆ.
ಪರಿಸ್ಥಿತಿಯನ್ನು ನಿಯಂತ್ರಿಸಲು ಸೇನೆ ಮತ್ತು ಅಸ್ಸಾಂ ರೈಫಲ್ಸ್, ಅರೆಸೇನಾ ಪಡೆಗಳು ಹಾಗೂ ರಾಜ್ಯ ಪೊಲೀಸರ ಜಂಟಿ ಪಡೆ ಹಿಂಸಾಚಾರ ಪೀಡಿತ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸುತ್ತಿವೆ. ಇದರ ಹೊರತಾಗಿ ಕ್ಷಿಪ್ರ ಕಾರ್ಯಾಚರಭಣೆ ಪಡೆ (ಆರ್ಎಎಫ್) ತಂಡಗಳನ್ನು ಈಶಾನ್ಯ ರಾಜ್ಯದ ಹಿಂಸಾಚಾರ ಪೀಡಿತ ಪ್ರದೇಶಗಳಲ್ಲಿ ನಿಯೋಜಿಸಲಾಗಿದೆ.
ಬಹುಸಂಖ್ಯಾತ ಮೈತೇಯ್ ಸಮುದಾಯದ ಪರಿಶಿಷ್ಟ ಪಂಗಡದ ಸ್ಥಾನಮಾನದ ಬೇಡಿಕೆಯ ಕುರಿತು ನಾಲ್ಕು ವಾರಗಳಲ್ಲಿ ಕೇಂದ್ರಕ್ಕೆ ಶಿಫಾರಸನ್ನು ಕಳುಹಿಸುವಂತೆ ಮಣಿಪುರ ಹೈಕೋರ್ಟ್ ಕಳೆದ ತಿಂಗಳು ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿತ್ತು.
ಆದರೆ ನ್ಯಾಯಾಲಯದ ಆದೇಶಕ್ಕೆ ಬುಡಕಟ್ಟು ಜನಾಂಗದವರ ತೀವ್ರ ವಿರೋಧ ವ್ಯಕ್ತವಾಗಿತ್ತು. ಅಖಿಲ ಬುಡಕಟ್ಟು ವಿದ್ಯಾರ್ಥಿ ಒಕ್ಕೂಟ ಮಣಿಪುರ (ಎಟಿಎಸ್ಯುಎಮ್) ಸಂಘಟನೆಯು ಬುಧವಾರ ರಾಜ್ಯದ ಹತ್ತು ಜಿಲ್ಲೆಗಳಲ್ಲಿ ‘ಬುಡಕಟ್ಟು ಐಕ್ಯತಾ ಮೆರವಣಿಗೆ’ಯನ್ನು ಆಯೋಜಿಸಿತ್ತು.
ಮೆರವಣಿಗೆಯ ವೇಳೆ ಹಿಂಸಾಚಾರ ಭುಗಿಲೆದ್ದಿತು. ಇದು ಅನೇಕ ಜಿಲ್ಲೆಗಳಲ್ಲಿ ಪ್ರತಿಸ್ಪರ್ಧಿ ಸಮುದಾಯಗಳಿಂದ ಪ್ರತೀಕಾರದ ದಾಳಿಗೆ ಕಾರಣವಾಯಿತು, ಅಲ್ಲದೇ ರಾಜ್ಯದಾದ್ಯಂತ ಹಿಂಸಾಚಾರ ಉಲ್ಬಣಗೊಳ್ಳಲು ಕಾರಣವಾಯಿತು ಎಂದು ಪೊಲೀಸರು ಹೇಳಿದ್ದಾರೆ.
ಮಣಿಪುರದ ಎಂಟು ಜಿಲ್ಲೆಗಳಲ್ಲಿ ಕರ್ಫ್ಯೂ ಹೇರಲಾಗಿದೆ. ರಾಜ್ಯದಲ್ಲಿ ಮುಂದಿನ 5 ದಿನಗಳ ಕಾಲ ಮೊಬೈಲ್ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಿದೆ.
ದಯವಿಟ್ಟು ಸಹಾಯ ಮಾಡಿ: ಮೇರಿ ಕೋಮ್ ಮನವಿ
ʻನನ್ನ ರಾಜ್ಯ ಮಣಿಪುರ ಹಿಂಸಾಚಾರದಿಂದ ಹೊತ್ತಿ ಉರಿಯುತ್ತಿದ್ದು, ದಯವಿಟ್ಟು ಸಹಾಯ ಮಾಡಿʼ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ,ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಒಲಿಂಪಿಕ್ ಪದಕ ವಿಜೇತೆ, ಹಿರಿಯ ಮಹಿಳಾ ಬಾಕ್ಸರ್ ಹಾಗೂ ರಾಜ್ಯಸಭಾ ಸದಸ್ಯೆ ಮೇರಿ ಕೋಮ್, ಟ್ವಟಿರ್ ಮೂಲಕ ಮನವಿ ಮನವಿ ಮಾಡಿದ್ದಾರೆ.
9,000 ಕ್ಕೂ ಹೆಚ್ಚು ಅಧಿಕ ನಾಗರಿಕರ ಸ್ಥಳಾಂತರ
ಹಿಂಸಾಚಾರ ಪೀಡಿತ ಪ್ರದೇಶಗಳಲ್ಲಿ ರಾತ್ರಿಯಿಡೀ ರಕ್ಷಣಾ ಕಾರ್ಯಾಚರಣೆ ನಡೆಸಿರುವ ಸೇನಾ ಪಡೆಗಳು, ಈಗಾಗಲೇ 9 ಸಾವಿರಕ್ಕೂ ಅಧಿಕ ನಾಗರಿಕರನ್ನು ಸ್ಥಳಾಂತರಿಸಲಾಗಿದ್ದು, ಇವರಿಗೆ ಸೇನಾ ಶಿಬಿರಗಳು ಮತ್ತು ಸರ್ಕಾರಿ ಕಟ್ಟಡಗಳಲ್ಲಿ ಆಶ್ರಯ ನೀಡಲಾಗಿದೆ.
Save Manipur;Save India…