ಜಾತಿ ಹಾಗೂ ಲಿಂಗ ತಾರತಮ್ಯ ಮತ್ತು ಅಸ್ಪೃಶ್ಯಾಚರಣೆ, ಪ್ರಬಲ ಜಾತಿಗಳ ದೌರ್ಜನ್ಯ ಖಂಡಿಸಿ ದಲಿತ ಹಕ್ಕುಗಳ ಸಮಿತಿ ಕರ್ನಾಟಕ(ಡಿಎಚ್ಎಸ್), ದೇವದಾಸಿ ಮಹಿಳಾ ವಿಮೋಚನಾ ಸಂಘ, ಕರ್ನಾಟಕ ರಾಜ್ಯ ಮಸಣ ಕಾರ್ಮಿಕರ ಸಂಘ ಕಲಬುರಗಿ ಜಿಲ್ಲಾ ಸಮಿತಿಯಿಂದ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ಬಳಿಕ ಜಿಲ್ಲಾಧಿಕಾರಿ ಮುಖಾಂತರ ಮುಖ್ಯಮಂತ್ರಿ ಸಿದ್ದರಾಮಯ್ಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಹಾಗೂ ಐಟಿಐಟಿ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಎಂ ಖರ್ಗೆಯವರಿಗೆ ಮನವಿ ಪತ್ರ ಸಲ್ಲಿಸಿದರು.
ರಾಜ್ಯ ಸಂಚಾಲಕ ಯು ಬಸವರಾಜ ಮಾತನಾಡಿ, “ದೇಶಕ್ಕೆ ಸ್ವಾತಂತ್ರ್ಯ ಬಂದು 77ವರ್ಷಗಳು ಪೂರೈಸುತ್ತಿದ್ದರೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈವರೆಗೆ ಅಭಿವೃದ್ಧಿ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿದರೂ, ಅದರ ಫಲ ಬಹುತೇಕರಿಗೆ ಸಿಗದೆ, ದಲಿತರ ಹೊಟ್ಟೆಯ ಸಮಸ್ಯೆ ಪರಿಹಾರವಾಗಲಿಲ್ಲ. ಹಸಿವಿನ ಸಾವುಗಳು ನಿಲ್ಲಲಿಲ್ಲ. ಜಾತಿ ಹಾಗೂ ಲಿಂಗ ತಾರತಮ್ಯ, ಅಸ್ಪೃಶ್ಯಾಚರಣೆಗಳು, ಪ್ರಬಲ ಜಾತಿಗಳ ದೌರ್ಜನ್ಯ ನಿಲ್ಲದೆ ಮುಂದುವರೆಯುತ್ತಿದೆ. ಇದೆಲ್ಲವೂ ತೀವ್ರ ಖಂಡನೀಯ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈ ದೌರ್ಜನ್ಯವನ್ನು ಪರಿಣಾಮಕಾರಿಯಾಗಿ ತಡೆಯಲು ಗಂಭೀರ ಕ್ರಮಗಳನ್ನು ತೆಗೆದುಕೊಳ್ಳದೆ, ಅವುಗಳೂ ಕೂಡಾ ತಾರತಮ್ಯ ನೀತಿಯಲ್ಲಿ ಮುಂದುವರೆಸಿರುವುದು ವಿಷಾಧನೀಯವಾಗಿದೆ” ಎಂದು ತಿಳಿಸಿದರು.
“ದೇವದಾಸಿ ಮಹಿಳೆಯರ ಮಾಸಿಕ ಪಿಂಚಣಿ ಬಾಕಿ ತಕ್ಷಣವೇ ಬಿಡುಗಡೆ ಮಾಡಬೇಕು. ಬಿಟ್ಟು ಹೋದ ದೇವದಾಸಿ ಮಹಿಳೆಯರ ಮತ್ತು ಅವರ ಗಂಡ ಬಿಟ್ಟ ಹೆಣ್ಣುಮಕ್ಕಳು ಸೇರಿದಂತೆ ಕುಟುಂಬದ ಎಲ್ಲ ಸದಸ್ಯರ ಗಣತಿ ಆರಂಭಿಸಬೇಕು. ಅವರಿಗೆ ಪುನರ್ ವಸತಿ ಸೌಲಭ್ಯ ಒದಗಿಸಬೇಕು. ಮಸಣ ಕಾರ್ಮಿಕರನ್ನು ಗಣತಿ ಮಾಡಿ 45 ವರ್ಷ ಮೇಲ್ಪಟ್ಟವರಿಗೆ ಮಾಸಿಕ ₹3000 ಪಿಂಚಣಿ ಜಾರಿಗೊಳಿಸಬೇಕು. ಪ್ರತಿ ಗುಂಡಿ ಅಗೆದು ಮುಚ್ಚುವ ಕೆಲಸವನ್ನು ರಾಷ್ಟ್ರೀಯ ಉದ್ಯೋಗ ಖಾತ್ರಿ ಕೆಲಸವೆಂದು ಪರಿಗಣಿಸಿ ಕನಿಷ್ಠ ₹3000 ಒದಗಿಸಬೇಕು ಹಾಗೂ ಸುರಕ್ಷತಾ ಕ್ರಮಗಳನ್ನು ಒದಗಿಸಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಬೆಳಗಾವಿ | ಮಾಧ್ಯಮಗಳು ಜನಪರವಾಗಿ ಇರಬೇಕು: ರಿಷಿಕೇಶ್ ದೇಸಾಯಿ
“ದಲಿತ ವಿದ್ಯಾವಂತ ನಿರುದ್ಯೋಗ ಯುವಕ/ಯುವತಿಯರಿಗೆ ಮಾಸಿಕ ₹10,000 ನಿರುದ್ಯೋಗ ಭತ್ಯೆ ಒದಗಿಸಬೇಕು. ದಲಿತ ಮಹಿಳೆಯರ ಸ್ವಾವಲಂಬಿ ಬದುಕಿಗಾಗಿ ಶೇ.75ರಷ್ಟು ಸಹಾಯಧನದ ಬಡ್ಡಿರಹಿತ ₹10 ಲಕ್ಷ ಸರಕಾರದ ಗ್ಯಾರಂಟಿ ಸಾಲ ಕೊಡಬೇಕು. ಬೇಸಾಯ ಮಾಡಲು ಬಯಸುವ ಎಲ್ಲ ದಲಿತ ಕುಟುಂಬಗಳಿಗೆ ತಲಾ 5 ಎಕರೆ ಜಮೀನನ್ನು ಭೂಸ್ವಾಧೀನದ ಮೂಲಕ ಒದಗಿಸಬೇಕು” ಎಂಬುದು ಸೇರಿದಂತೆ ಬಹುತೇಕ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕಾರ್ಯದರ್ಶಿ ಪಾಂಡುರಂಗ ಮಾವಿನಕರ್, ಅಧ್ಯಕ್ಷೆ ಚಂದಮ್ಮ ಗೋಳಾ, ಸುಧಾಮ ಧನ್ನಿ, ಸುಗಂಧಾ ಪಿ ಮಾವಿನಕರ್ ಸೇರಿದಂತೆ ಇತರರು ಇದ್ದರು.