ಗೋಣಿಕೊಪ್ಪಲು-ಕುಟ್ಟ ಮಾರ್ಗದ ರಸ್ತೆಯನ್ನು ಮೇಲ್ದರ್ಜೆಗೇರಿಸಲು ಕೇಂದ್ರ ಸರ್ಕಾರದಿಂದ ಅನುಮತಿ ದೊರೆತಿದ್ದು, ಶೀಘ್ರವಾಗಿ ರಸ್ತೆ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಸಂಸದ ಯದುವೀರ್ ಒಡೆಯರ್ ಹೇಳಿದರು.
ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲೂಕಿನ ಹುದಿಕೇರಿ ಕೊಡವ ಸಮಾಜದಲ್ಲಿ ಮೈಸೂರು-ಕೊಡಗು ಲೋಕಸಭಾ ಸದಸ್ಯ ಯದುವೀರ್ ಕೃಷ್ಣದತ್ತ ಚಾಮರಾಜೇಂದ್ರ ಒಡೆಯರ್ ಅವರಿಗೆ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
“ಭಾರತೀಯ ಜನತಾ ಪಕ್ಷದ ಭದ್ರಕೋಟೆಯಾಗಿರುವ ಕೊಡಗು ಲೋಕಸಭಾ ಕ್ಷೇತ್ರವನ್ನು ಪುನಶ್ಚೇತನಗೊಳಿಸಿ ಸಂಘಟಿತವಾಗುವಂತೆ ಮಾಡುವುದು ತೀರಾ ಅವಶ್ಯಕವಾಗಿದೆ” ಎಂದು ಹೇಳಿದರು.
“ಕೊಡಗು ಭಾಗದ ಜ್ವಲಂತ ಸಮಸ್ಯೆಗಳಾದ ಮಾನವ ಪ್ರಾಣಿ ಸಂಘರ್ಷ, ದೂರಸಂಪರ್ಕ ಸಮಸ್ಯೆ, ಕುಡಿಯುವ ನೀರಿನ ಸಮಸ್ಯೆ ಮತ್ತು ರಸ್ತೆ ಸಮಸ್ಯೆಯನ್ನು ಹಂತಹಂತವಾಗಿ ಅಭಿವೃದ್ಧಿಪಡಿಸಲಾಗುವುದು” ಎಂದು ತಿಳಿಸಿದರು.
ವಿಧಾನಸಭಾದ ಮಾಜಿ ಅಧ್ಯಕ್ಷ ಕೆ ಜಿ ಬೋಪಯ್ಯ ಮಾತನಾಡಿ, “ಪಕ್ಷದ ಕಾರ್ಯಕರ್ತರು ವಿಧಾನಸಭಾ ಚುನಾವಣೆಯ ಸೋಲನ್ನು ಪರಾಮರ್ಶಿಸಿ ಪಕ್ಷದ ಸಂಘಟನೆ ಹಾಗೂ ಒಗ್ಗಟ್ಟಿನಿಂದ ಶ್ರಮಿಸಬೇಕು” ಎಂದು ಕೋರಿದರು.
“ಭಾರತೀಯ ಜನತಾ ಪಕ್ಷ ಕಳೆದ ಬಾರಿ ಅಧಿಕಾರದಲ್ಲಿದ್ದಾಗ ಇಂದಿನ ಕಾಂಗ್ರೆಸ್ ಸರ್ಕಾರದಂತೆ ಎಂದೂ ಪಕ್ಷ ರಾಜಕಾರಣ ಮಾಡಲಿಲ್ಲ. ಭಾರತೀಯ ಜನತಾ ಪಕ್ಷ ಅಧಿಕಾರದಲ್ಲಿದ್ದಾಗ ನಲವತ್ತು ಪರ್ಸೆಂಟ್(40%) ಸರ್ಕಾರವೆಂದು ದೂರುತಿದ್ದವರು, ಇಂದು ಆಡಳಿತಕ್ಕೆ ಬಂದಾಗಿನಿಂದ ವಾಲ್ಮೀಕಿ ಹಗರಣ, ಮುಡಾ ಹಗರಣದಂತಹ ಹಲವಾರು ಹಗರಣಗಳಲ್ಲಿ ಸಿಲುಕಿ ರಾಜ್ಯದ ಜನತೆಗೆ ವಿಶ್ವಾಸದ್ರೋಹ ಎಸಗಿದ್ದಾರೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
“ತಮ್ಮ ಅವಧಿಯಲ್ಲಿ ವನ್ಯಪ್ರಾಣಿಗಳ ಉಪಟಳದಿಂದ ಉಂಟಾಗಿದ್ದ ಮಾನವ ಸಂಘರ್ಷಕ್ಕೆ ತಂದಿದ್ದ ಹಲವಾರು ಕ್ರಮಗಳನ್ನು ಕೈಬಿಟ್ಟಿದ್ದಾರೆ. ಕಸ್ತೂರಿ ರಂಗನ್ ವರದಿಯ ಬಗ್ಗೆ ಇಂದು ಬೊಬ್ಬೆ ಹೊಡೆಯುತ್ತಿರುವ ಸರ್ಕಾರ 2010ರಲ್ಲಿ ತನ್ನದೇ ಕೇಂದ್ರ ಸರ್ಕಾರ ಇದ್ದಾಗ ಕಸ್ತೂರಿರಂಗನ್ ವರದಿಗೆ ತನ್ನ ಅನುಮೋದನೆಯನ್ನು ನೀಡಿ ಇಂದು ಜನರಿಗೆ ಕಣ್ಣೊರೆಸುವ ನಾಟಕವಾಡುತ್ತಿದ್ದಾರೆ” ಎಂದು ಆರೋಪಿಸಿದರು.
“ಕಾಂಗ್ರೆಸ್ ಪಕ್ಷವೇ ವರದಿಯ ಜಾರಿಗೆ ಅನುಮೋದನೆ ನೀಡಿ ಈಗ ವರದಿ ಕೈಬಿಡುವುದನ್ನು ಹೇಳುತ್ತಿರುವುದು ತೀರಾ ಹಾಸ್ಯಾಸ್ಪದ. ವರದಿಯನ್ನು ಬದಲಾವಣೆ ಮಾಡುವ, ತಿದ್ದುಪಡಿ ಮಾಡುವ ಅವಕಾಶ ಈಗಲೂ ಇದೆ” ಎಂದರು.
ಈ ಸುದ್ದಿ ಓದಿದ್ದೀರಾ? ಗುಬ್ಬಿ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆ : ಒಳಚರಂಡಿ ಮಲೀನ ನೀರು ಶುದ್ಧೀಕರಣ ಘಟಕ ಸ್ಥಾಪನೆಗೆ ಅಸ್ತು
“ಬಿಜೆಪಿ ಸರ್ಕಾರ ರೈತರಿಗೆ ಅನುಕೂಲವಾಗುವ ಹಲವಾರು ಯೋಜನೆಗಳನ್ನು ಜಾರಿಗೆ ತಂದಿತ್ತು. ಆದರೆ ಸಿದ್ದರಾಮಯ್ಯ ಸರ್ಕಾರ ಹಗರಣದೊಳಗೆ ಸಿಲುಕಿ ರಾಜ್ಯದಲ್ಲಿ ಅಭಿವೃದ್ಧಿ ಕುಂಠಿವಾಗಿದೆ” ಎಂದು ಲೇವಡಿ ಮಾಡಿದರು.
ಸಭೆಯಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನೆಲ್ಲಿರ ಚಲನ್ ಕುಮಾರ್, ಹುದಿಕೇರಿ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಅಜ್ಜಿಕುಟ್ಟಿರ ಮುತ್ತಪ್ಪ, ಮಾಜಿ ಬಿಜೆಪಿ ಜಿಲ್ಲಾಧ್ಯಕ್ಷ ಮಾಚಿಮಡ ರವೀಂದ್ರ, ಹುದಿಕೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಪ್ಪಣಮಾಡ ಕಾವೇರಮ್ಮ, ಸಾಮಾಜಿಕ ಜಾಲತಾಣದ ಅಧ್ಯಕ್ಷ ಚಿರಿಯಪಂಡ ಸಚಿನ್, ಬೊಜ್ಜಂಗಡ ಸುನಿಲ್ ಕುಮಾರ್ ಸೇರಿದಂತೆ ಇತರರು ಇದ್ದರು.