ಈ ವರ್ಷದ ಅಂತ್ಯದಲ್ಲಿ (ನವೆಂಬರ್/ಡಿಸೆಂಬರ್) ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ನಡೆಯಲಿದೆ. ಚುನಾವಣೆಗೆ ಬಿಜೆಪಿ, ಕಾಂಗ್ರೆಸ್ ಹಾಗೂ ಶಿವಸೇನೆ-ಎನ್ಸಿಪಿ ಎರಡೆರಡು ಬಣಗಳು ಸಿದ್ದತೆ ನಡೆಸುತ್ತಿವೆ. ಮಹಾರಾಷ್ಟ್ರದಲ್ಲಿ ತನ್ನ ನೆಲೆಯನ್ನು ಮರಳಿ ಗಟ್ಟಿ ಮಾಡಿಕೊಳ್ಳಲು ಕಾಂಗ್ರೆಸ್ ಮುಂದಾಗಿದೆ. ಉತ್ತಮ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಮೂಲಕ, ಹೆಚ್ಚು ಸ್ಥಾನಗಳನ್ನು ಗೆಲ್ಲಬೇಕೆಂಬ ಗುರಿ ಮುಂದಿಟ್ಟುಕೊಂಡಿದೆ.
ಮಹಾರಾಷ್ಟ್ರದಲ್ಲಿ ಎನ್ಸಿಪಿ (ಶರದ್ ಪವಾರ್ ಬಣ) ಮತ್ತು ಶಿವಸೇನೆ (ಉದ್ದವ್ ಬಣ)ದೊಂದಿಗೆ ಮೈತ್ರಿ ಮಾಡಿಕೊಂಡಿರುವ ಕಾಂಗ್ರೆಸ್, ವಿಧಾನಸಭಾ ಚುನಾವಣೆಗೆ ಇನ್ನೂ ಸೀಟು ಹಂಚಿಕೆಯ ಮಾತುಕತೆ ಆರಂಭಿಸಿಲ್ಲ. ಅದಾಗ್ಯೂ, ಮಹಾರಾಷ್ಟ್ರದ 288 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಟಿಕೆಟ್ ಪಡೆಯುವ ಆಕಾಂಕ್ಷಿಗಳನ್ನು ಗುರುತಿಸಲು ಕಾಂಗ್ರೆಸ್ ಮುಂದಾಗಿದೆ. ಅವರೆಲ್ಲರನ್ನೂ ಸಂದರ್ಶನ ಮಾಡಿ, ವರದಿ ಪಡೆದು, ಅರ್ಹರನ್ನು ಆಯ್ಕೆ ಮಾಡಲಿದೆ. ಮೈತ್ರಿ ಪಕ್ಷಗಳೊಂದಿಗೆ ಸೀಟು ಹಂಚಿಕೆಯ ಮಾತುಕತೆ ಮುಗಿದ ಬಳಿಕ, ಯಾರಿಗೆ ಟಿಕೆಟ್ ನೀಡಬೇಕೆಂದು ನಿರ್ಧರಿಸಲಿದೆ ಎಂದು ತಿಳಿದುಬಂದಿದೆ.
ಆ ರಾಜ್ಯದ 288 ಸ್ಥಾನಗಳಿಗೆ ಬರೋಬ್ಬರಿ 1,688 ಟಿಕಟ್ ಆಕಾಂಕ್ಷಿಗಳು ಕಾಂಗ್ರೆಸ್ನಲ್ಲಿದ್ದಾರೆ ಎಂದು ಗುರುತಿಸಲಾಗಿದೆ. ಹೀಗಾಗಿ, ಎಲ್ಲರನ್ನೂ ಒಳಗೊಳ್ಳಲು, ಯಾರೂ ಬಂಡಾಯ ಏಳದಂತೆ ನೋಡಿಕೊಳ್ಳಲು ಕಾಂಗ್ರೆಸ್ ಸಂದರ್ಶನದ ತಂತ್ರ ಪ್ರಯೋಗಿಸಿದೆ. ರಾಜ್ಯ ನಾಯಕರು ಮತ್ತು ಉಸ್ತುವಾರಿಗಳು ಆಕಾಂಕ್ಷಿಗಳನ್ನು ಸಂದರ್ಶಿಸಿ, ವರದಿಯನ್ನು ಹೈಕಮಾಂಡ್ಗೆ ಕಳಿಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಸಂದರ್ಶನವು ಅಕ್ಟೋಬರ್ 1ರಿಂದ 8ರವರೆಗೆ ನಡೆಯಲಿದ್ದು, ಅಕ್ಟೋಬರ್ 10ರಂದು ವರದಿ ಸಲ್ಲಿಸುವ ಸಾಧ್ಯತೆ ಇದೆ. ಸಂದರ್ಶನದಲ್ಲಿ ಆಕಾಂಕ್ಷಿಗಳು ತಮ್ಮ ಇಚ್ಛೆ, ಉದ್ದೇಶ, ನಿಲುವುಗಳನ್ನು ವ್ಯಕ್ತಪಡಿಸಲಿದ್ದಾರೆ. ಅದರ ಆಧಾರದ ಮೇಲೆ ಮುಂದಿನ ಚುನಾವಣೆಗೆ ಟಿಕೆಟ್ ಯಾರಿಗೆ ಎಂಬುದು ನಿರ್ಧಾರವಾಗಲಿದೆ ಎಂದು ವರದಿಯಾಗಿದೆ.
ಈ ವರದಿ ಓದಿದ್ದೀರಾ?: ತಿರುಪತಿ ಲಡ್ಡು ವಿವಾದ | ಪ್ರಾಣಿ ಕೊಬ್ಬು ಬಳಕೆ ಬಗ್ಗೆ ಸಾರ್ವಜನಿಕ ಹೇಳಿಕೆ; ಆಂಧ್ರ ಸಿಎಂಗೆ ಸುಪ್ರೀಂ ಚಾಟಿ
ಆಕಾಂಕ್ಷಿಗಳ ಸಂದರ್ಶನಕ್ಕಾಗಿ 6 ತಂಡಗಳನ್ನು ಕಾಂಗ್ರೆಸ್ ರಚಿಸಿದೆ. ಪೃಥ್ವಿರಾಜ್ ಚೌಹಾಣ್, ನಸೀಮ್ ಖಾನ್, ಸಂಸದ ಚಂದ್ರಕಾಂತ್ ಹಂದೋರೆ, ಪ್ರಣಿತಿ ಶಿಂಧೆ, ಸತೇಜ್ ಪಾಟೀಲ್, ಅಮಿತ್ ದೇಶಮುಖ್, ನಿತಿನ್ ರಾವುತ್ ಮತ್ತು ಯಶೋಮತಿ ಠಾಕೂರ್ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ತಂಡಗಳ ಭಾಗವಾಗಿದ್ದಾರೆ.
ಇತ್ತೀಚೆಗೆ, ಚುನಾವಣೆಯಲ್ಲಿ ಸ್ಪರ್ಧಿಸಲು ಇಚ್ಛೆಯುಳ್ಳ ಆಕಾಂಕ್ಷಿಗಳಿಂದ ಅರ್ಜಿ ಆಹ್ವಾನಿಸಿತ್ತು. ಅದರಂತೆ 1,688 ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ವರದಿಯಾಗಿದೆ.