ವಿಶೇಷಚೇತನ ವ್ಯಕ್ತಿಗಳಿಗೆ ರಾಷ್ಟ್ರೀಯ ವಯೋಶ್ರೀ ಯೋಜನೆ ಹಾಗೂ ಸಹಾಯ ಯೋಜನೆಯಡಿ ಚಾಮರಾಜನಗರ ಜಿಲ್ಲೆಯ 240 ಮಂದಿ ಹಿರಿಯ ನಾಗರಿಕರು ಹಾಗೂ 417 ಮಂದಿ ವಿಶೇಷಚೇತನರು ಸೇರಿದಂತೆ ಒಟ್ಟು 657 ಫಲಾನುಭವಿಗಳಿಗೆ ₹60 ಲಕ್ಷ ಮೊತ್ತದ ಸಾಧನ, ಸಲಕರಣೆಗಳನ್ನು ಉಚಿತವಾಗಿ ವಿತರಿಸಲಾಯಿತು.
ಚಾಮರಾಜನಗರದ ಡಾ ಬಿ ಆರ್ ಅಂಬೇಡ್ಕರ್ ಭವನದಲ್ಲಿ ‘ಅಂತರಾಷ್ಟ್ರೀಯ ಹಿರಿಯ ನಾಗರಿಕರ ದಿನಾಚರಣೆ’ ಅಂಗವಾಗಿ ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಹಿರಿಯ ನಾಗರಿಕರ ಸಬಲೀಕರಣ ಹಾಗೂ ವಿಕಲಚೇತನರ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಆರ್ಟಿಫಿಶಿಯಲ್ ಲಿಂಬ್ಸ್ ಮ್ಯಾನುಫ್ಯಾಕ್ಚರಿಂಗ್ ಕಾರ್ಪೋರೇಷನ್ ಆಫ್ ಇಂಡಿಯಾ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಸಾಧನ, ಸಲಕರಣೆ ವಿತರಣೆ ಕಾರ್ಯಕ್ರಮವನ್ನು ಎಂಎಸ್ಐಎಲ್ ಅಧ್ಯಕ್ಷ ಹಾಗೂ ಶಾಸಕ ಸಿ ಪುಟ್ಟರಂಗಶೆಟ್ಟಿ ಐದು ಮಂದಿ ಫಲಾನುಭವಿಗಳಿಗೆ ಸಾಂಕೇತಿಕವಾಗಿ ವಿತರಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ಶಾಸಕ ಸಿ ಪುಟ್ಟರಂಗಶೆಟ್ಟಿ ಮಾತನಾಡಿ, “ದೇಹದ ಯಾವುದೇ ಭಾಗದಲ್ಲಿ ಊನವಾದರೂ ಅವರು ವಿಶೇಷಚೇತನರೇ, ಈ ಊನತೆ ಹುಟ್ಟಿನಿಂದ ಅಥವಾ ಹುಟ್ಟಿದ ಬಳಿಕ ಬರಬಹುದು. ಊನತೆ ಕತ್ತಲೆಯ ಬದುಕಾಗಿದೆ. ಹಾಗಂತ ಯಾವುದೇ ವಿಶೇಷ್ಚೇತನರು ಧೃತಿಗೆಡಬಾರದು. ಅಗತ್ಯ ಸೌಲಭ್ಯಗಳನ್ನು ನೀಡಿ ಅವರ ಬಾಳಿನಲ್ಲಿ ಬೆಳಕು ಮೂಡಿಸಲು ಸರ್ಕಾರದೊಂದಿಗೆ ವಿವಿಧ ಸಂಘ ಸಂಸ್ಥೆಗಳು ನೆರವಾಗಿವೆ. ಅವುಗಳಲ್ಲಿ ಅಲಿಂಕೋ ಸಂಸ್ಥೆಯು ಒಂದಾಗಿದೆ” ಎಂದರು.
ಶಾಸಕ ಎ ಆರ್ ಕೃಷ್ಣಮೂರ್ತಿ ಮಾತನಾಡಿ ಸಾಮಾಜಿಕ ವ್ಯವಸ್ಥೆಯಲ್ಲಿ ಹಿರಿಯರು ಹಾಗೂ ವಿಶೇಷ ಚೇತನರನ್ನು ಎಲ್ಲರಂತೆ ಗೌರವದಿಂದ ನಡೆಸಿಕೊಳ್ಳಬೇಕಾಗಿದೆ. ಜಿಲ್ಲೆಯಲ್ಲಿ 18416 ವಿಶೇಷಚೇತನರನ್ನು ಗುರುತಿಸಲಾಗಿದ್ದು, ಅವರಿಗೆ ಸರ್ಕಾರದ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ತಲುಪಿಸಬೇಕಾದ ಜವಾಬ್ದಾರಿ ನಮ್ಮೆಲ್ಲರಿಗಿದೆ. ಇತ್ತೀಚೆಗೆ ಪ್ಯಾರಿಸ್ನಲ್ಲಿ ನಡೆದ ಪ್ಯಾರಾಲಂಪಿಕ್ನಲ್ಲಿ ವಿಶೇಷಚೇತನರು 60 ಪದಕಗಳನ್ನು ಗೆದ್ದು ದೇಶಕ್ಕೆ ಕೀರ್ತಿ ತಂದಿದ್ದಾರೆ. ಈ ನಿಟ್ಟಿನಲ್ಲಿ ವಿಶೇಷಚೇತನರಿಗೆ ಸಮಾನಾವಕಾಶ ನೀಡಿ ಗುರಿಮುಟ್ಟಲು ಪ್ರೇರೆಪಿಸಬೇಕು ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಮಾತನಾಡಿ, “ವಿಶೇಷಚೇತನರಿಗೆ ಅನುಕಂಪ ಬೇಡ, ಅವಕಾಶ ನೀಡಬೇಕು. ಸರ್ಕಾರ ವಿಶೇಷಚೇತನರ ಪುನರ್ವಸತಿಗಾಗಿ ಹಲವಾರು ಸೌಲಭ್ಯಗಳನ್ನು ಜಾರಿಗೊಳಿಸಿದೆ. ವಿಶೇಷಚೇತನರಿಗೆ ಮೀಸಲಾಗಿರುವ ಸೌಲಭ್ಯಗಳನ್ನು ತಲುಪಿಸಿ, ಸಮಾಜದಲ್ಲಿ ಎಲ್ಲರಂತೆ ಬದುಕಲು ಅವಕಾಶ ಮಾಡಿಕೊಡಬೇಕು. ಗೌರವದಿಂದ ನೋಡಿಕೊಳ್ಳಬೇಕು. ಆಗ ಮಾತ್ರ ಸಮಸಮಾಜ ನಿರ್ಮಾಣ ಸಾಧ್ಯವಾಗಲಿದೆ” ಎಂದರು.
“ವಿಪರ್ಯಾಸ ಎಂದರೆ ನಾವು ಆಧುನಿಕತೆಗೆ ಮಾರುಹೋಗಿ ಮಾನವೀಯ ಮೌಲ್ಯಗಳನ್ನು ಕಳೆದುಕೊಳ್ಳುತ್ತಿದ್ದೇವೆ. ಹಿರಿಯ ಜೀವಗಳನ್ನು ವೃದ್ದಾಶ್ರಮಕ್ಕೆ ದೂಡುತ್ತಿದ್ದೇವೆ. ಮುಂದುವರಿದ ಸಮಾಜ ಹಾಗೂ ಅನುಕೂಲಕರ ವ್ಯಕ್ತಿಗಳೇ ಹಿರಿಯರನ್ನು ಸಹಿಸಿಕೊಳ್ಳಲಾಗದೇ ವೃದ್ಧಾಶ್ರಮಕ್ಕೆ ಕಳುಹಿಸುತ್ತಿದ್ದು, ಇದು ತಪ್ಪಬೇಕು. ತಂದೆ-ತಾಯಿಗಳೇ ಕಣ್ಣಿಗೆ ಕಾಣುವ ನಿಜವಾದ ದೇವರುಗಳು. ಹಿರಿಯ ನಾಗರಿಕರ ಜ್ಞಾನ, ಅನುಭವ ನಮಗೆ, ನಮ್ಮ ಮುಂದಿನ ಪೀಳಿಗೆಗೆ ಅವಶ್ಯವಾಗಿದೆ” ಎಂದು ಕಿವಿಮಾತು ಹೇಳಿದರು.
ಈ ಸುದ್ದಿ ಓದಿದ್ದೀರಾ? ಬೆಳಗಾವಿ | ಖಾನಾಪುರ ಪಶ್ಚಿಮ ಭಾಗದ ಕಾಡಂಚಿನ ರೈತರ ಸಮಸ್ಯೆಗಳಿಗೆ ಸ್ಪಂದಿಸಿ: ಸಿದ್ದಗೌಡ ಮೋದಗಿ
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ ಎಸ್ ಚಿದಂಬರ, ನಗರಸಭೆ ಅಧ್ಯಕ್ಷ ಎಸ್ ಸುರೇಶ್, ಪಂಚಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಎಚ್ ವಿ ಚಂದ್ರು, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ರಾಮಚಂದ್ರರಾಜೇ ಅರಸ್, ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಮಂಜುನಾಥ್, ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಸಕಲೇಶ್ವರ, ಅಲಿಂಕೋ ಸಂಸ್ಥೆಯ ಕಿರಿಯ ವ್ಯವಸ್ಥಾಪಕ ರಿಷಭ್ ಮಲ್ಲೋತ್ರ, ಇತರೆ ಅಧಿಕಾರಿಗಳು ಇದ್ದರು.