ಕೇರಳದ ನಿಲಂಬೂರು ಕ್ಷೇತ್ರದಿಂದ ಎಡಪಕ್ಷವನ್ನು ಪ್ರತಿನಿಧಿಸಿ ಸ್ಪರ್ಧಿಸಿ ಗೆದ್ದಿದ್ದರೂ ಕೂಡಾ ಸದ್ಯ ಸಿಪಿಐ(ಎಂ) ಜೊತೆಗಿನ ಎಲ್ಲ ರಾಜಕೀಯ ಸಂಬಂಧವನ್ನು ಕಡಿದುಕೊಂಡಿರುವ ಬಂಡಾಯ ಶಾಸಕ ಪಿ ವಿ ಅನ್ವರ್ ಈಗ ಹೊಸ ರಾಜಕೀಯ ಪಕ್ಷವನ್ನು ಕಟ್ಟಲು ಮುಂದಾಗಿದ್ದಾರೆ.
ಏಪ್ರಿಲ್ 19-20ರಂದು ನಡೆದ ತ್ರಿಶೂರ್ ಪೂರಂ ಉತ್ಸವದಲ್ಲಿ ವಿಧ್ವಂಸಕ ಕೃತ್ಯ ನಡೆದಿದೆ ಎನ್ನಲಾಗಿದೆ. ಲೋಕಸಭೆ ಚುನಾವಣೆಯ ವೇಳೆ ಬಿಜೆಪಿಗೆ ಚುನಾವಣಾ ಲಾಭ ಮಾಡಿಕೊಡಲು ಪೂರಂ ಉತ್ಸವವನ್ನು ಹಾಳುಮಾಡಲಾಗಿದೆ ಮತ್ತು ಎಡಿಜಿಪಿ ಅಜಿತ್ ಕುಮಾರ್ ಈ ಸಂಚಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ವಿಪಕ್ಷ ಆರೋಪಿಸಿದೆ. ಈ ಆರೋಪಕ್ಕೆ ಶಾಸಕ ಪಿ ವಿ ಅನ್ವರ್ ಕೂಡಾ ಧ್ವನಿಗೂಡಿಸಿದ್ದರು.
ಎಡಿಜಿಪಿ ಅಜಿತ್ ಕುಮಾರ್ ಅವರು ಮುಖ್ಯಮಂತ್ರಿ ವಿಜಯನ್ ಅವರ ಆಪ್ತರೆಂದೇ ಹೆಸರುವಾಸಿಯಾಗಿದ್ದಾರೆ. ಹಾಗಾಗಿ ಇದು ಕೇರಳ ರಾಜಕೀಯದಲ್ಲಿ ಭಾರೀ ಗದ್ದಲಕ್ಕೆ ಕಾರಣವಾಗಿದೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಕೇರಳದಲ್ಲಿ ಹೊಸ ರಾಜಕೀಯ ಪಕ್ಷವನ್ನು ರಚಿಸುವುದಾಗಿ ಶಾಸಕ ಪಿ ವಿ ಅನ್ವರ್ ಬುಧವಾರ ಹೇಳಿಕೊಂಡಿದ್ದಾರೆ.
ಇದನ್ನು ಓದಿದ್ದೀರಾ? ಕೇರಳದಲ್ಲಿ ಬಿಜೆಪಿಗೆ ನೆರವು ನೀಡಿದವರಾರು?; ಸಿಎಂ ಪಿಣರಾಯಿ ಸರ್ಕಾರಕ್ಕೆ ಸವಾಲಿನ ಪ್ರಶ್ನೆ
“ನಾನು ಎತ್ತಿರುವ ಸಮಸ್ಯೆಗಳು ಈಗ ಚಳವಳಿಯಾಗಿ ಮಾರ್ಪಟ್ಟಿದೆ. ಅದೀಗ ರಾಜಕೀಯ ಪಕ್ಷವಾಗಿ ಪರಿವರ್ತನೆಯಾಗಲಿದೆ. ಹಾಗಾಗಿ ನಾನು ಹೊಸ ರಾಜಕೀಯ ಪಕ್ಷವನ್ನು ಕಟ್ಟುತ್ತೇನೆ. ಯಾಕೆಂದರೆ ಪಕ್ಷವಿಲ್ಲದೆ ಚುನಾವಣೆ ಸ್ಪರ್ಧಿಸಲಾಗದು. ಈ ಹೊಸ ಪಕ್ಷವು ರಾಜ್ಯದಲ್ಲಿ ಮುಂಬರುವ ಎಲ್ಲಾ ಚುನಾವಣೆಗಳಲ್ಲಿ ಸ್ಪರ್ಧಿಸಲಿದೆ” ಎಂದು ತಿಳಿಸಿದ್ದಾರೆ. ಇನ್ನು ಕೇರಳದಲ್ಲಿ ಲಕ್ಷಾಂತರ ಯುವಕರು ತನಗೆ ಬೆಂಬಲ ನೀಡುವ ಭರವಸೆಯನ್ನು ಕೂಡಾ ಪಿ ವಿ ಅನ್ವರ್ ವ್ಯಕ್ತಪಡಿಸಿದ್ದಾರೆ.
ಕಳೆದ ಕೆಲವು ವಾರಗಳಿಂದ ಕೇರಳ ಮುಖ್ಯಮಂತ್ರಿ ಪಿಣರಾಯಿ ಮತ್ತು ಸಿಪಿಐಎಂ ನೀಡಿದ ಬಹುತೇಕ ಎಲ್ಲಾ ಹೇಳಿಕೆಗಳನ್ನು ಟೀಕಿಸುತ್ತಿರುವ ಶಾಸಕ ಅನ್ವರ್ ಮಂಗಳವಾರ ವಿಜಯನ್ ನೀಡಿದ ಹೇಳಿಕೆಯನ್ನೂ ಟೀಕಿಸಿದ್ದಾರೆ.
“ರಾಜ್ಯದಲ್ಲಿ ಆಡಳಿತಾರೂಢ ಸಿಪಿಐ(ಎಂ) ಬಹುಸಂಖ್ಯಾತ ಮತ್ತು ಅಲ್ಪಸಂಖ್ಯಾತ ಕೋಮುವಾದವನ್ನು ವಿರೋಧಿಸುತ್ತದೆ. ಯಾವುದೇ ಪಕ್ಷದೊಂದಿಗೆ ರಾಜಿ ಮಾಡಿಕೊಳ್ಳುವುದಿಲ್ಲ” ಎಂದು ವಿಜಯನ್ ಮಂಗಳವಾರ ಹೇಳಿಕೆ ನೀಡಿದ್ದಾರೆ. ಇದನ್ನು ‘ನಾಟಕ’ ಎಂದು ಬಣ್ಣಿಸಿರುವ ಅನ್ವರ್, ಇತ್ತೀಚಿನ ಲೋಕಸಭೆ ಚುನಾವಣೆಯಲ್ಲಿ ಎಲ್ಡಿಎಫ್ ಸೋಲಿನ ನಂತರ ಸಿಎಂ ಮತ್ತು ಸಿಪಿಐ(ಎಂ) ಮತಕ್ಕಾಗಿ ಆರ್ಎಸ್ಎಸ್ ಮತ್ತು ಹಿಂದುತ್ವ ಕೋಮುವಾದಿಗಳನ್ನು ಓಲೈಸುತ್ತಿದ್ದಾರೆ ಎಂದು ಆರೋಪಿಸಿದರು.
ಇದನ್ನು ಓದಿದ್ದೀರಾ? ನಿರೀಕ್ಷಣಾ ಜಾಮೀನು ಕೋರಿ ಕೇರಳ ಹೈಕೋರ್ಟ್ ಮೆಟ್ಟಿಲೇರಿದ ಮಲಯಾಳಂ ಚಿತ್ರ ನಿರ್ದೇಶಕ ರಂಜಿತ್
ಇನ್ನು ಈಗಾಗಲೇ ಕೊಟ್ಟಾಯಂ ಮೂಲದ ಕರುಕಾಚಲ್ ಪೊಲೀಸರು ಅನ್ವರ್ ವಿರುದ್ಧ ಫೋನ್ ಕದ್ದಾಲಿಕೆ ಆರೋಪದಡಿ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಐಪಿಸಿಯ ಸೆಕ್ಷನ್ 192ರ ಅಡಿಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಅನ್ವರ್ ಅಕ್ರಮವಾಗಿ ಫೋನ್ ಕರೆಗಳನ್ನು ಟ್ಯಾಪ್ ಮಾಡುವ ಮೂಲಕ ಇತರರ ಗೌಪ್ಯತೆಗೆ ಧಕ್ಕೆ ಉಂಟು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಈ ನಡುವೆ ಸಿಎಂ, ಅವರ ರಾಜಕೀಯ ಕಾರ್ಯದರ್ಶಿ ಪಿ.ಶಶಿ ಮತ್ತು ಅಜಿತ್ ಕುಮಾರ್ ವಿರುದ್ಧ ಅಪಪ್ರಚಾರ ಮಾಡಿದ ಅನ್ವರ್ ವಿರುದ್ಧ ಸರ್ಕಾರ ಸೇಡು ತೀರಿಸಿಕೊಳ್ಳುತ್ತಿದೆ. ಅನ್ವರ್ ವಿರುದ್ಧ ಇನ್ನಷ್ಟು ಪ್ರಕರಣಗಳು ದಾಖಲಾಗಬಹುದು ಎಂದು ಕಾಂಗ್ರೆಸ್ ಮುಖಂಡರ ಅಭಿಪ್ರಾಯವಾಗಿದೆ.
