ಶಿಕ್ಷಕರ ಪರಿಶ್ರಮ ವಿದ್ಯಾರ್ಥಿಗಳ ಏಳಿಗೆಯಲ್ಲಿ ಅಡಗಿದೆ. ಮಕ್ಕಳು ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ವ್ಯಕ್ತಿತ್ವ ರೂಪಿಸಿಕೊಳ್ಳಬೇಕಾದರೆ ಶಿಕ್ಷಕರ ಪಾತ್ರ ಬಹುಮುಖ್ಯವಾಗಿದೆ ಎಂದು ಸ್ಪರ್ಧಾ ಸಂಕಲ್ಪ ಅಕಾಡೆಮಿ ಮುಖ್ಯಸ್ಥ ನಾಗೇಶ ಸ್ವಾಮಿ ಮಸ್ಕಲ್ ಹೇಳಿದರು.
ಬೀದರ್ ನಗರದ ಸ್ಪರ್ಧಾ ಸಂಕಲ್ಪ ಅಕಾಡೆಮಿಯ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಶಿಕ್ಷಕರ ವಿಕಾಸ ಪರಿಷತ್ ಹಾಗೂ ಸ್ಪರ್ಧಾ ಸಂಕಲ್ಪ ಅಕಾಡೆಮಿ ಸಹಯೋಗದಲ್ಲಿ ಜರುಗಿದ ರಾಷ್ಟ್ರೀಯ ಶಿಕ್ಷಕರ ದಿನಾಚರಣೆ ಮತ್ತು ಗುರುವಂದನಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ʼಶಿಕ್ಷಕರು ಮಕ್ಕಳಿಗೆ ಗುಣಮಟ್ಟ ಶಿಕ್ಷಣ ಜತೆಗೆ ವಿನಯಶೀಲತೆ, ಆತ್ಮವಿಶ್ವಾಸ, ಸಂಸ್ಕಾರ ಹಾಗೂ ಗುರು-ಹಿರಿಯರನ್ನು ಗೌರವಿಸುವುದು ಕಲಿಸಬೇಕು. ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ ಬೆಳೆಸಲು ಶಿಕ್ಷಕರು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕುʼ ಎಂದರು.
ಲೇಖಕ ಡಾ.ಸಂಗಮೇಶ ಹಿರೇಮಠ ಮಾತನಾಡಿ, ʼಉತ್ತಮ ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಮುಖ್ಯವಾಗಿದೆ. ಪ್ರತಿಯೊಬ್ಬರ ಜೀವನದಲ್ಲಿ ಗುರು ಮತ್ತು ಗುರಿ ಇರಲೇಬೇಕು. ವಿದ್ಯಾರ್ಥಿಗಳ ಯಶಸ್ವಿ ಬದುಕಿಗೆ ಶಿಕ್ಷಕರ ಬೋಧನೆ ಪರಿಣಾಮಕಾರಿಯಾಗಬಲ್ಲದುʼ ಎಂದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ ಹಲಬರ್ಗಾ ರಾಚೋಟೇಶ್ವರ ವಿರಕ್ತ ಮಠದ ಹಾವಲಿಂಗೇಶ್ವರ ಶಿವಾಚಾರ್ಯ ಮಾತನಾಡಿ, ʼಸಮಾಜದಲ್ಲಿ ಎಲ್ಲ ವೃತ್ತಿಗಿಂತ ಶಿಕ್ಷಕರ ವೃತ್ತಿ ಅತ್ಯಂತ ಪವಿತ್ರವಾದದ್ದು, ಶಿಕ್ಷಕ ಸಮಾಜದ ನಿರ್ಮಾಪಕ ಇದ್ದಂತೆ, ಉತ್ತಮ ನಾಗರಿಕರನ್ನಾಗಿ ರೂಪಿಸುವ ಕಾರ್ಯ ಶಿಕ್ಷಕರಿಂದ ಮಾತ್ರ ಸಾಧ್ಯʼ ಎಂದು ನುಡಿದರು.
ಮಾಜಿ ಜಿಲ್ಲಾ ಪಂಚಾಯತ ಅಧ್ಯಕ್ಷೆ ಗೀತಾ ಪಂಡಿತರಾವ ಚಿದ್ರಿ ಮಾತನಾಡಿ, ʼಮಕ್ಕಳ ಭವಿಷ್ಯ ರೂಪಿಸುವರು ಶಿಕ್ಷಕರೇ ರೂವಾರಿಗಳು. ಮಕ್ಕಳ ಸರ್ವಾಂಗೀಣ ವಿಕಾಸಕ್ಕೆ ಶಿಕ್ಷಕರ ಕರ್ತವ್ಯ ಮಹತ್ವದ್ದು, ಜೀವನದಲ್ಲಿ ಉತ್ತಮ ರಾಜಕಾರಣಿ ಆಗುವುದು ಸುಲಭವಿದೆ. ಆದರೆ ಆದರ್ಶ ಶಿಕ್ಷಕರಾಗುವುದು ತೀರ ಸರಳವಲ್ಲ. ನಾವೆಲ್ಲರೂ ಶಿಕ್ಷಕರನ್ನು ಗೌರವಿಸಬೇಕುʼ ಎಂದು ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕರ್ನಾಟಕ ರಾಜ್ಯ ಶಿಕ್ಷಕರ ವಿಕಾಸ ಪರಿಷತ್ತಿನ ಕಾರ್ಯದರ್ಶಿ ಸಂಜೀವಕುಮಾರ ಸ್ವಾಮಿ ಮಾತನಾಡಿ, ʼದೇಶದಲ್ಲಿ ಮಹೋನ್ನತ ಸಾಧನೆಗೈದ ವಿದ್ಯಾರ್ಥಿಗಳಿಗೆ ತಮ್ಮ ವಿದ್ಯಾಗುರುಗಳೇ ಆಗಿರುತ್ತಾರೆ. ಉತ್ತಮ ಶಿಕ್ಷಕನಿಂದ ಮಾತ್ರ ಉತ್ತಮ ಸಮಾಜ ನಿರ್ಮಾಣವಾಗಲು ಸಾಧ್ಯವಿದೆʼ ಎಂದು ಅಭಿಪ್ರಾಯಪಟ್ಟರು.
ಲಾಡಗೇರಿ ಹಿರೇಮಠದ ಗಂಗಾಧರ ಶಿವಾಚಾರ್ಯರು ಶಿಕ್ಷಕರಿಗೆ ʼಆದರ್ಶ ಶಿಕ್ಷಕ ಪ್ರಶಸ್ತಿʼ ಪ್ರದಾನ ಮಾಡಿದರು. ಕಲ್ಯಾಣ ಕರ್ನಾಟಕ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪಾಂಡುರಂಗ ಬೆಲ್ದಾರ, ಉದ್ಯಮಿ ರಾಜಶೇಖರ ಚಂದಾ, ಬಾಬುರಾವ ದಾನಿ ಮಾತನಾಡಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಹೃದಯಾಘಾತ : ಕರ್ತವ್ಯ ನಿರತ ಪೊಲೀಸ್ ಪೇದೆ ಸಾವು
ಕಾರ್ಯಕ್ರಮದಲ್ಲಿ ಶಿಕ್ಷಕರಾದ ಅನಂತ ಕುಲಕರ್ಣಿ, ಪ್ರಶಾಂತ ರಾಗಾ, ಓಂಪ್ರಕಾಶ ದಡ್ಡೆ, ದತ್ತಾತ್ರಿ ಸಂಪಾತೆ, ಬಸಯ್ಯಸ್ವಾಮಿ, ಬಳವಂತರಾವ ರಾಠೋಡ್, ರವಿ ಕುಮನೂರ, ವೈಜಿನಾಥ ಸಾಳೆ, ಶಿವರಾಜ್ ಜುಲಾಂಡೆ, ಮಲ್ಲಿಕಾರ್ಜುನ್ ಹಿಪ್ಪಳಗಾವೆ, ಸೂರ್ಯಕಾಂತ ಮಡಿವಾಳ, ಹನುಮಂತರಾವ , ಶಿವರಾಜ್ ಅಗ್ರೆ, ರಾಮರಾವ್ ಪಾಂಡ್ರೆ, ಗಣಪತಿ ಸಿದ್ದೇಶ್ವರ, ಶಶಿಕಾಂತ್ ಜೋಶಿ, ಮಲ್ಲಿಕಾರ್ಜುನ್ ಸಿಂದಗೇರಾ , ರಾಮಲಿಂಗ, ಲಕ್ಷ್ಮಿಬಾಯಿ ಬಿರಾದರ್, ಅಂಬಿಕಾ ಹಳ್ಳಿಖೇಡೆ, ಪೂಜಾ, ರಾಯಣ್ಣೂರ್, ರಾಖಿ, ಬಸವರಾಜ ಕಾಡೆ, ವೀರಭದ್ರಯ್ಯ ಸ್ವಾಮಿ, ವಿಶ್ವನಾಥ ಸ್ವಾಮಿ, ಮನೋಹರ ಸಿಂಗ್ ಪಾಟೀಲ್, ಮಾರುತಿ ಬಿರಾದಾರ, ವಿಜಯಕುಮಾರ ಪಾಟೀಲ್, ಗೋವಿಂದ ಪೂಜಾರಿ, ಹಿರೇಮಠ ಶಿವಕುಮಾರ, ಸಿದ್ರಾಮಯ್ಯ ಸ್ವಾಮಿ, ಮಹದೇವ ಮಠಪತಿ, ಅಲ್ಪಾ, ಅನಿತಾ, ಜಗದೇವಿ ಭೋಸ್ಲೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.