ಮನುಷ್ಯನಿಗೆ ಹಣಕ್ಕಿಂತಲೂ ಜ್ಞಾನ ಬಹಳ ಮುಖ್ಯ ಎಂದು ಎಐಡಿಎಸ್ಒ ರಾಜ್ಯ ಉಪಾಧ್ಯಕ್ಷೆ ಅಭಯಾ ದಿವಾಕರ್ ಅಭಿಪ್ರಾಯ ವ್ಯಕ್ತಪಡಿಸಿದರು.
ಯಾದಗಿರಿ ನಗರದ ವಾಲ್ಮೀಕಿ ಭವನದಲ್ಲಿ ಎಐಡಿಎಸ್ಒ ವತಿಯಿಂದ ಹಮ್ಮಿಕೊಂಡಿದ್ದ ಯಾದಗಿರಿ ಜಿಲ್ಲಾ ಮಟ್ಟದ ಮಕ್ಕಳ ಶಿಬಿರ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಕ್ಕಳ ಶಿಬಿರದ ಎರಡನೇ ದಿನದಂದು ಆಂಟನ್ ಚೆಕಾವ್ ಅವರ ಸವಾಲು(ದಿ ಬೆಟ್) ಎನ್ನುವ ಕಥೆ ಹೇಳುತ್ತ, ಮನುಷ್ಯನಿಗೆ ದುಡ್ಡಿಗಿಂತಲೂ ಜ್ಞಾನ ಬಹಳ ಮುಖ್ಯ ಎಂದು ಹೇಳಿದರು.
“ಸಾಂಸ್ಕೃತಿಕವಾಗಿ ಹದಗೆಡುತ್ತಿರುವ ಇಂದಿನ ಸಮಾಜದ ಪರಿಸ್ಥಿತಿ ಬಹಳ ಚಿಂತಾಜನಕವಾಗಿದೆ. ಚಿಕ್ಕವಯಸ್ಸಿನ ಮಕ್ಕಳೂ ಕೂಡಾ ಅನೇಕ ದುಶ್ಚಟಗಳಿಗೆ ಬಲಿಯಾಗಿ ಕುಸಂಸ್ಕೃತಿ ಹೆಚ್ಚುತ್ತಿದ್ದು, ಅಪರಾಧಿ ಕೃತ್ಯಗಳಲ್ಲಿ ಭಾಗಿಯಾಗುತ್ತಿರುವುದು ದುರಂತ. ಪ್ರಸ್ತುತ ವ್ಯವಸ್ಥೆಯು ವಿದ್ಯಾರ್ಥಿಗಳ ಸಾಂಸ್ಕೃತಿಕ ಬೆನ್ನೆಲೆಬನ್ನು ಮುರಿಯಲು ದೃಶ್ಯ ಮಾಧ್ಯಮದ ಮೂಲಕ ಅಶ್ಲೀಲತೆಯನ್ನು ಬಿತ್ತುತ್ತಿದೆ. ಇದಕ್ಕೆ ಪರ್ಯಾಯವಾಗಿ ಉನ್ನತ ನೀತಿ-ನೈತಿಕತೆಯನ್ನು ಬಿತ್ತಲು ಸಮಾಜಮುಖಿ ಸಾಹಿತ್ಯವು ಮಹತ್ವದ ಪಾತ್ರ ವಹಿಸುತ್ತದೆ. ಇಂತಹ ಸಂದರ್ಭದಲ್ಲಿ ಮಕ್ಕಳು ಓದುವ ಹವ್ಯಾಸ ಬೆಳೆಸಿಕೊಳ್ಳುವ ಜತೆಗೆ ನಿಸ್ವಾರ್ಥ ಮೌಲ್ಯಗಳನ್ನು ರೂಢಿಸಿಕೊಳ್ಳುವುದು ಅತ್ಯಗತ್ಯ” ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ನಿಸರ್ಗದ ಅನೇಕ ಘಟನೆಗಳ ಹಿಂದಿನ ನಿಯಮಗಳ ತಿಳುವಳಿಕೆ ಇರದಿದ್ದ ಸಂದರ್ಭದಲ್ಲಿ ಮೌಢ್ಯ ಬೆಳೆದುಬಂತು. ಆದರೆ ಅನೇಕ ಪ್ರಶ್ನೆಗಳಿಗೆ ಉತ್ತರದ ಹುಡುಕಾಟದಲ್ಲಿ ಬೆಳೆದು ಬಂದದ್ದು ವಿಜ್ಞಾನ. ಈ ವಿಜ್ಞಾನದ ಕುರಿತು ಮಕ್ಕಳಲ್ಲಿ ಅರಿವು ಮೂಡಿಸಲು ಪವಾಡ ರಹಸ್ಯ ಬಯಲು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಇದನ್ನು ಎಐಡಿಎಸ್ಒ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಹೇಮಂತ್ ಅವರು ನಡೆಸಿಕೊಟ್ಟರು.
ಈ ಸುದ್ದಿ ಓದಿದ್ದೀರಾ? ಕೊಡಗು | ಗ್ರೇಟರ್ ರಾಜಾಸೀಟ್ ಕಾಮಗಾರಿಯಲ್ಲಿ ಬಹುಕೋಟಿ ಹಗರಣ; ಲೋಕಾಯುಕ್ತ ತನಿಖೆ ಆರಂಭ
ಶಿಬಿರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ಎರಡು ದಿನದ ಕಾರ್ಯಾಗಾರದ ತರಬೇತಿಯಲ್ಲಿ ಹಾಡುಗಳು, ನಾಟಕಗಳು ಹಾಗೂ ನೃತ್ಯಗಳ ಪ್ರದರ್ಶನ ನೀಡಲಾಯಿತು.
ಎಐಡಿಎಸ್ಒ ಸಮಿತಿಯ ಸದಸ್ಯೆ ದೇವೀಂದ್ರಮ್ಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಎಐಡಿಎಸ್ಒ ಯಾದಗಿರಿ ಜಿಲ್ಲಾ ಸಂಚಾಲಕಿ ಶಿಲ್ಪಾ ಬಿ ಕೆ, ಅಖಿಲ ಭಾರತ ಅಧ್ಯಕ್ಷ ವಿ ಎನ್ ರಾಜಶೇಖರ್ ಸೇರಿದಂತೆ ವಿವಿಧ ಶಾಲೆಗಳ 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಶಿಬಿರದಲ್ಲಿ ಭಾಗವಹಿಸಿದ್ದರು.