ಹಿಂದುಳಿದ ವರ್ಗಗಳ ಸಬಲೀಕರಣಕ್ಕಾಗಿ ಕಾಂತರಾಜ ಆಯೋಗ ವರದಿ ಜಾರಿಗೆ ಒತ್ತಾಯಿಸಿ ಅಹಿಂದ ಸಂಘಟನೆ, ಕಾಂಗ್ರೆಸ್ನ ಹಿಂದುಳಿದ ಘಟಕದಿಂದ ಮುಧೋಳ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಬಾಗಲಕೋಟೆ ಜಿಲ್ಲೆಯ ಮುಧೋಳ ನಗರದ ರನ್ನ ಸರ್ಕಲ್ನಿಂದ ತಹಶೀಲ್ದಾರ್ ಕಚೇರಿವರೆಗೆ ಪಾದಯಾತ್ರೆ ತೆರಳಿ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಿದರು.
ಕಾಂಗ್ರೆಸ್ ಹಿಂದುಳಿದ ಘಟಕದ ಜಿಲ್ಲಾಧ್ಯಕ್ಷ ಮುದಕಣ್ಣ ಅಂಬಿಗೇರ ಮಾತನಾಡಿ, “ಜಾತಿ ಜನಾಂಗದ ಸಬಲೀಕರಣದ ಗುರಿ ಹೊಂದಲು ಮತ್ತು ಸರ್ಕಾರದ ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನಗೊಳಿಸಲು ʼಕಾಂತರಾಜ ಆಯೋಗದ ವರದಿʼ ಜಾರಿಗೆ ತರಬೇಕು” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಒತ್ತಾಯಿಸಿದರು.
ಅಹಿಂದ ಸಂಘಟನೆಗಳ ಅಧ್ಯಕ್ಷ ಗೋವಿಂದ ಕೌಲಗಿ ಮಾತನಾಡಿ, “ರಾಜ್ಯದಲ್ಲಿ ಅತಿ ಹಿಂದುಳಿದ ವರ್ಗಗಳ ಕಲ್ಯಾಣ ಮತ್ತು ರಾಜಕೀಯ, ಆರ್ಥಿಕ ಹಾಗೂ ಶೈಕ್ಷಣಿಕ ಸಬಲೀಕರಣಕ್ಕಾಗಿ ಯಾವುದೇ ಒತ್ತಡಕ್ಕೆ ಮಣಿಯದೆ ಜಾತಿಗಣತಿ ಜಾರಿ ಮಾಡುವ ಮೂಲಕ ಇತಿಹಾಸದ ಪುಟದಲ್ಲಿ ತಮ್ಮ ಹೆಸರು ಉಳಿಯುತ್ತದೆ. ಹಿಂಜರಿಯದೆ ಹಿಂದುಳಿದ ವರ್ಗಗಳ ಕಲ್ಯಾಣ ಕಾರ್ಯಗಳಿಗೆ ಸದಾ ನಾವು ಬೆಂಬಲಸುತ್ತ ಬಂದಿದ್ದೇವೆ, ಮುಂದೆಯೂ ಕೂಡ ನಿಮ್ಮ ಬೆಂಬಲಕ್ಕೆ ಗಟ್ಟಿಯಾಗಿ ನಿಂತು ಹೋರಾಡುತ್ತೇವೆ” ಎಂದು ಮನವಿ ಮಾಡಿಕೊಂಡರು.
ವಿಜಯಪುರ ಮತ್ತು ಬಾಗಲಕೋಟೆ ಹಾಲು ಒಕ್ಕೂಟದ ನಿರ್ದೇಶಕ ಲಕ್ಷ್ಮಣ ಮಾಲಗಿ ಮಾತನಾಡಿ, “ಸಮಾಜದಲ್ಲಿ ಹಿಂದುಳಿದ ವರ್ಗಗಳು ಪ್ರಬಲವಾದ ರಾಜಕೀಯ, ಆರ್ಥಿಕವಾಗಿ ವಾಣಿಜ್ಯೋದ್ಯಮದಲ್ಲಿ ಧ್ವನಿ ಹೊಂದಲು ಕಾಂತರಾಜ ಆಯೋಗದ ವರದಿ ಕೂಡಲೇ ಜಾರಿಗೆ ಬಂದರೆ ಮಾತ್ರ ಸಮಾನತೆ ಮತ್ತು ನ್ಯಾಯವನ್ನು ಸಾಧಿಸಲು ಸಾಧ್ಯ” ಎಂದು ನುಡಿದರು.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಎಸ್ಬಿಯುಡಿಎ ನಿವೇಶನ ಹಂಚಿಕೆಯಲ್ಲಿ ಪಾರದರ್ಶಕತೆ ಇರಲಿ: ಇಮ್ರಾನ್
“ಹಿಂದುಳಿದ ವರ್ಗಗಳ ಸಬಲೀಕರಣಕ್ಕೆ ನಿಮ್ಮ ಬದ್ಧತೆಗೆ ಹಿಂದುಳಿದ ವರ್ಗದ ಜನರು ತಮ್ಮನ್ನು ಬೆಂಬಲಿಸುತ್ತ ಬಂದಿದೆ. ಸದಾ ನಿತ್ಯವೂ ನಿಮ್ಮ ಜತೆಗೆ ನಿಲ್ಲುತ್ತೇವೆ. ಯಾವುದೇ ಕಾರಣದಿಂದ ಜಾತಿ ಜನಗಣತಿಯಿಂದ ಹಿಂದೆ ಸರಿಯದೆ ಜಾರಿ ಮಾಡಿ ಅನುಷ್ಠಾನ ಮಾಡುತ್ತಾರೆ. ಸಿಎಂ ಸಿದ್ದರಾಮಯ್ಯನವರ ಮೇಲೆ ಅಚಲವಾದ ನಂಬಿಕೆಯಿದೆ” ಎಂದು ಕಾಂಗ್ರೆಸ್ ಮುಖಂಡ ಸಂಗಪ್ಪ ಇಮ್ಮನವರ ಹೇಳಿದರು.
ಕಾಂಗ್ರೆಸ್ ಅಲ್ಪಸಂಖ್ಯಾತ ಜಿಲ್ಲಾಧ್ಯಕ್ಷ ಶೇಪಿಕ ಬೇಪಾರಿ ಗಣೇಶ ಮೇತ್ರಿ, ಅಹಿಂದ ಉಪಾಧ್ಯಕ್ಷ ಜಾವೇದ ಹವಾಲ್ದಾರ, ರವಿ ರೊಡ್ಡಪ್ಪನವರ, ಲಕಪ್ಪ ಕರೊಲಿ, ಶಿವಾನಂದ ಮ್ಯಾಗೇರಿ, ಶಿದ್ದಣ್ಣ ಬಾಡಿಗೆ, ಯಲ್ಲಪ್ಪ ಗಳಕಣವರ, ಮಲ್ಲಿಕಾರ್ಜುನ ಬಡಿಗೇರ, ಶಿವಪ್ಪ ಡೊಳ್ಳಿ, ನೂರಲ್ಲಿ ಶೇಖ, ಸಂಗಪ್ಪ ಅಮೋತಿ, ಲಕ್ಷ್ಮಣ ಮರಡಿ, ಸುರೇಶ್ ಸಿದ್ದಾಪುರ ಸೇರಿದಂತೆ ಅನೇಕರು ಇದ್ದರು.