ಕಾಂಗ್ರೆಸ್ನವರು ಇಂದು ಪೇಪರ್ಗಳಲ್ಲಿ ಜಾಹೀರಾತು ಕೊಟ್ಟು, ದುಷ್ಟಶಕ್ತಿಗಳ ಎದುರು ಸತ್ಯದ ಜಯ ಅಂತೆ ಹೇಳಿದ್ದಾರೆ. ಇವರು ಯಾವತ್ತು ಸತ್ಯ ಹಾಗೂ ಧರ್ಮವನ್ನು ಉಳಿಸಿದ್ದಾರೆ ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಶುಕ್ರವಾರ ಚಾಮುಂಡೇಶ್ವರಿ ದರ್ಶನ ಪಡೆದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, “ಕರ್ನಾಟಕ ರಾಜ್ಯವನ್ನು ವಾಮಾಮಾರ್ಗ, ಮೋಸದಿಂದ ಅಸ್ಥಿರಗೊಳಿಸುತ್ತಿದ್ದಾರೆ ಎಂದು ಜಾಹೀರಾತಿನಲ್ಲಿ ತಿಳಿಸಿದ್ದಾರೆ. ಆದರೆ, ವಾಮಾಮಾರ್ಗ, ಮೋಸವನ್ನು ಸ್ಥಿರಗೊಳಿಸಲು ಹೊರಟಿರುವ ಸರ್ಕಾರವಿದು” ಎಂದು ಟೀಕಿಸಿದ್ದಾರೆ.
“ಮಹರ್ಷಿ ವಾಲ್ಮೀಕಿ ನಿಗಮದಿಂದ ಬಡವರಿಗೆ ಕೊಡಬೇಕಾದ ಹಣವನ್ನು ನುಂಗಿದ್ದಾರೆ. ಸರ್ಕಾರಕ್ಕೆ ಮೋಸ ಮಾಡಿ ಮುಡಾ ನಿವೇಶನ ತೆಗೆದುಕೊಂಡಿದ್ದಾರೆ. ಬಳಿಕ ಪರಿಸ್ಥಿತಿ ವ್ಯತಿರಿಕ್ತವಾದಾಗ ವಾಪಸ್ ಕೊಟ್ಟಿದ್ದಾರೆ. ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಹಣ ದುರುಪಯೋಗ ಆಗಿದೆ. ಇವರೇ ಆರ್ಥಿಕ ಸಚಿವರು, ಇವರ ಇಲಾಖೆಗೆ ಸಂಬಂಧಪಟ್ಟ ಹಣ ಬಿಡುಗಡೆ ಆಗಿದೆ. ಅದರ ಸತ್ಯಾಂಶಗಳು ಹೊರಬರುವ ಕಾಲ ದೂರವಿಲ್ಲ” ಎಂದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಜಾತಿ ಜನಗಣತಿ ಎತ್ತುವ ಹಲವು ಪ್ರಶ್ನೆಗಳು
“ಸಿದ್ರಾಮಣ್ಣನ ಬಗ್ಗೆ ಹಿನಕಲ್ ಸಾಕಮ್ಮನ ಕೇಳಿದರೆ ಗೊತ್ತಾಗುತ್ತದೆ. ಯಾವ ವಾಮ ಮಾರ್ಗದಲ್ಲಿ ನಿವೇಶನ ಪಡೆದಿದ್ದಾರೆ ಎಂಬುದು ಗೊತ್ತಾಗುತ್ತದೆ. ಇದೆಲ್ಲ ಇತಿಹಾಸ ಇದೆ. ಹಾಗಾಗಿ ಇಲ್ಲಿ ಸ್ಥಿರಗೊಳಿಸುವುದು, ಅಸ್ಥಿರಗೊಳಿಸೊದು ನಮ್ಮ ಕೈಯಲ್ಲಿಲ್ಲ. ಎಲ್ಲ ಚಾಮುಂಡೇಶ್ವರಿ ಅಮ್ಮನ ಕೈಯಲ್ಲಿದೆ” ಎಂದು ತಿರುಗೇಟು ನಿಡಿದರು.
“ಡಿನ್ನರ್ ಮೀಟಿಂಗ್ ಅಥವಾ ಬ್ರೇಕ್ ಫಾಸ್ಟ್ ಮೀಟಿಂಗ್ ಬೆಳವಣಿಗೆಗಳೆಲ್ಲಾ ಕಾಂಗ್ರೆಸ್ನವರಿಗೆ ಸೇರಿದ್ದು. ಮುಖ್ಯಮಂತ್ರಿ ಬದಲಾವಣೆ ವಿಚಾರ ಅವರ ಪಕ್ಷಕ್ಕೆ ಸೇರಿದ್ದು. ನಾನು ಮುಖ್ಯಮಂತ್ರಿ ಇದ್ದಾಗ ಜಾತಿಗಣತಿ ವರದಿ ಸ್ವೀಕರಿಸಲಿಲ್ಲ ಎಂದು ಆರೋಪ ಮಾಡಿದ್ದರು. ನಾನು 14 ತಿಂಗಳು ಸಿಎಂ ಆಗಿದ್ದೆ. ಸಿದ್ದರಾಮಯ್ಯ ಅವರು ಬಂದು 15 ತಿಂಗಳಾಗಿವೆ. ಏಕೆ ವರದಿಯನ್ನು ಇನ್ನೂ ಬಿಡುಗಡೆ ಮಾಡಿಲ್ಲ” ಎಂದು ಪ್ರಶ್ನಿಸಿದರು.