ಸದ್ಯ ಚರ್ಚೆಯಲ್ಲಿರುವ ದೆಹಲಿ ಮುಖ್ಯಮಂತ್ರಿ ನಿವಾಸ ವಿವಾದವು ಆರೋಪ ಪ್ರತ್ಯಾರೋಪಗಳಿಗೆ ಸಾಕ್ಷಿಯಾಗಿದೆ. ಮತ್ತೆ ದೆಹಲಿ ಸರ್ಕಾರ ಮತ್ತು ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ, ಬಿಜೆಪಿ ನಡುವೆ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ. ದೆಹಲಿ ಮುಖ್ಯಮಂತ್ರಿ ಆತಿಶಿ ನಿವಾಸವನ್ನು ಸೀಲ್ ಮಾಡಲಾಗಿದೆ. ಪಿಡಬ್ಲ್ಯೂಡಿ ದೆಹಲಿ ಸಿಎಂ ನಿವಾಸಕ್ಕೆ ಬೀಗ ಜಡಿದಿದೆ, ಆತಿಶಿ ಅವರ ಸಾಮಗ್ರಿಗಳನ್ನು ಹೊರಕ್ಕೆ ಎಸೆಯಲಾಗಿದೆ ಎಂಬುದು ಆಮ್ ಆದ್ಮಿ ಪಕ್ಷ(ಎಎಪಿ)ದ ಆರೋಪವಾಗಿದೆ.
ಆದರೆ ಅಧಿಕೃತ ಪ್ರಕ್ರಿಯೆಗಳು ಮುಗಿದಿಲ್ಲ, ಸರಿಯಾದ ರೀತಿಯಲ್ಲಿ ವರ್ಗಾವಣೆಯಾಗಿಲ್ಲ ಎಂಬುದು ಪಿಡಬ್ಲ್ಯೂಡಿ ವಾದವಾಗಿದೆ. ಒಟ್ಟಿನಲ್ಲಿ ಸಿಎಂ ನಿವಾಸ ಹಂಚಿಕೆ ವಿಚಾರವು ಈಗ ಬಿಜೆಪಿ ಮತ್ತು ಎಎಪಿ ನಡುವಿನ ಹಗ್ಗ ಜಗ್ಗಾಟವಾಗಿದೆ. ಅದರೊಂದಿಗೆ ರಾಜಕೀಯವೂ ಪ್ರವೇಶ ಪಡೆದಿದೆ.
ದೇಶದ ರಾಜಧಾನಿಯಾದ ದೆಹಲಿಯು ಸಂಪೂರ್ಣವಾಗಿ ದೆಹಲಿ ಸರ್ಕಾರದಡಿಯಲ್ಲಿಯೂ ಇಲ್ಲ, ಸಂಪೂರ್ಣವಾಗಿ ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿಯೂ ಬರಲ್ಲ. ಕರ್ನಾಟಕ ಸೇರಿದಂತೆ ಬಹುತೇಕ ರಾಜ್ಯಗಳಲ್ಲಿ ಪೊಲೀಸ್ ನಿಯಂತ್ರಣ ರಾಜ್ಯ ಸರ್ಕಾರದ ಗೃಹ ಸಚಿವಾಲಯಕ್ಕೆ ಸೇರುತ್ತದೆ. ಆದರೆ ಕೇಂದ್ರಾಡಳಿತ ಪ್ರದೇಶವಾದ ದೆಹಲಿಯಲ್ಲಿ ಪೊಲೀಸ್ ನಿಯಂತ್ರಣ ಕೇಂದ್ರ ಗೃಹ ಸಚಿವಾಲಯದಡಿ ಬರುತ್ತದೆ.
ಇದನ್ನು ಓದಿದ್ದೀರಾ? ದೆಹಲಿ ಮುಖ್ಯಮಂತ್ರಿಯಾಗಿ ಆತಿಶಿ ಪ್ರಮಾಣವಚನ ಸ್ವೀಕಾರ; ಕಿರಿಯ ಸಿಎಂ ಎಂಬ ಹೆಗ್ಗಳಿಕೆ
ಇನ್ನು ಸಾಮಾನ್ಯವಾಗಿ, ಬಹುತೇಕ ಎಲ್ಲಾ ರಾಜ್ಯಗಳಲ್ಲಿ ಒಂದು ಅಧಿಕೃತವಾದ ಮುಖ್ಯಮಂತ್ರಿ ನಿವಾಸ ಇರುತ್ತದೆ. ಕರ್ನಾಟಕದಲ್ಲಿ ಕಾವೇರಿ ನಿವಾಸ, ಉತ್ತರ ಪ್ರದೇಶ ಕಾಳಿದಾಸ ಮಾರ್ಗ, ಕೇರಳದಲ್ಲಿ ಕ್ಲಿಫ್ ಹೌಸ್ ಹೀಗೆ ಬೇರೆ ಬೇರೆ ರಾಜ್ಯದಲ್ಲಿ ಸಿಎಂಗಳಿಗೆ ಅಧಿಕೃತ ನಿವಾಸವಿದೆ. ಆದರೆ ದೆಹಲಿಯ ವಿಚಾರಕ್ಕೆ ಬಂದಾಗ ಅಲ್ಲಿ ಹಲವು ನಿಯಮಗಳು ಬದಲಾಗುತ್ತವೆ.
ಕೇಂದ್ರಾಡಳಿತ ಪ್ರದೇಶದ ಮೂರನೇ ಮಹಿಳಾ ಮುಖ್ಯಮಂತ್ರಿಯಾಗಿದ್ದ ಶೀಲಾ ದೀಕ್ಷಿತ್ ಅವರಿಗೆ ಎಬಿ-17 ಮಥುರಾ ರಸ್ತೆಯಲ್ಲಿರುವ ಬಂಗಲೆಯನ್ನು ಸಿಎಂ ನಿವಾಸವಾಗಿ ನೀಡಲಾಗಿತ್ತು. ಅದಾದ ಬಳಿಕ ಅರವಿಂದ್ ಕೇಜ್ರಿವಾಲ್ ಅವರು ಮುಖ್ಯಮಂತ್ರಿಯಾದಾಗ ಸಿವಿಲ್ ಲೈನ್ಸ್ ಪ್ರದೇಶದ ಫ್ಲ್ಯಾಗ್ಸ್ಟಾಫ್ ರಸ್ತೆಯಲ್ಲಿರುವ ನಿವಾಸವನ್ನು ಅವರಿಗೆ ನೀಡಲಾಗಿತ್ತು. ಹೀಗೆ ದೆಹಲಿಯಲ್ಲಿ ನಿರ್ದಿಷ್ಟ ಬಂಗಲೆಗಳು ಸಿಎಂ ನಿವಾಸವಾಗಿರುವುದಿಲ್ಲ.
ಅರವಿಂದ್ ಕೇಜ್ರಿವಾಲ್ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ತಾನಿದ್ದ ಬಂಗಲೆಯನ್ನು ಖಾಲಿ ಮಾಡಿದ್ದು, ಅದರ ಕೀಲಿಯನ್ನು ನೂತನ ಸಿಎಂ ಆತಿಶಿ ಅವರಿಗೆ ನೀಡಿದ್ದಾರೆ. ಇಲ್ಲಿಂದ ಶುರುವಾಯ್ತು ದೆಹಲಿ ಮುಖ್ಯಮಂತ್ರಿ ನಿವಾಸ ವಿವಾದ.
ದೆಹಲಿಯಲ್ಲಿ ಯಾವ ಸರ್ಕಾರಿ ಬಂಗಲೆ ಖಾಲಿಯಾಗಿರುತ್ತದೆಯೋ ಆ ಬಂಗಲೆಯನ್ನು ಹಂಚಿಕೆ ಮಾಡಲಾಗುತ್ತದೆ. ಅದೇ ರೀತಿ ಆತಿಶಿಗೆ ನೀಡಿರುವ ಬಂಗಲೆಯೇ ಬೇರೆ ಎಂಬುವುದು ಪಿಡಬ್ಲ್ಯೂಡಿ ವಾದವಾಗಿದೆ.
ಪಿಡಬ್ಲ್ಯೂಡಿ ಅಧಿಕಾರಿಗಳ ಪ್ರಕಾರ ಆತಿಶಿ ಅವರಿಗೆ ಅಧಿಕೃತವಾಗಿ ಈ ಹಿಂದೆ ಅರವಿಂದ್ ಕೇಜ್ರಿವಾಲ್ ಅವರಿದ್ದ ನಿವಾಸವನ್ನು ನೀಡಲಾಗಿಲ್ಲ. ಕಳೆದ ವಾರ, ಕೇಜ್ರಿವಾಲ್ ಮತ್ತು ಮನೀಶ್ ಸಿಸೋಡಿಯಾ ಅವರನ್ನು ಎಎಪಿಯ ರಾಜ್ಯಸಭಾ ಸದಸ್ಯರಾಗಿ ನಿಯೋಜಿಸಿದ ಬಳಿಕ ಅವರಿಗೆ ಹೊಸ ಬಂಗಲೆ ಅಥವಾ ನಿವಾಸಗಳನ್ನು ಮಂಜೂರು ಮಾಡಲಾಗಿದೆ.
ಇದನ್ನು ಓದಿದ್ದೀರಾ? ದೆಹಲಿಯ ನೂತನ ಸಿಎಂ ಆತಿಶಿ ಮಾರ್ಲೆನಾ ಸಿಂಗ್ ಅವರ ಹಿಂದಿನ ಕುತೂಹಲಕಾರಿ ಕಥೆ
ಕೇಜ್ರಿವಾಲ್ ಫಿರೋಜ್ ಷಾ ರಸ್ತೆಯಲ್ಲಿರುವ ಎಎಪಿ ಸಂಸದ ಅಶೋಕ್ ಮಿತ್ತಲ್ ಅವರಿಗೆ ಮಂಜೂರು ಮಾಡಿದ ಕೇಂದ್ರ ಸರ್ಕಾರದಡಿಯಲ್ಲಿ ಬರುವ ನಿವಾಸಕ್ಕೆ ಸ್ಥಳಾಂತರಗೊಂಡರೆ, ಸಿಸೋಡಿಯಾ ಮತ್ತು ಅವರ ಕುಟುಂಬಕ್ಕೆ ಈ ಹಿಂದೆ ನೀಡಲಾಗಿದ್ದ ಎಬಿ -17 ಮಥುರಾ ರಸ್ತೆಯಲ್ಲಿರುವ ನಿವಾಸದಿಂದ ಮತ್ತೊಬ್ಬ ಎಎಪಿ ರಾಜ್ಯಸಭಾ ಸಂಸದ ಹರ್ಭಜನ್ ಸಿಂಗ್ ಅವರಿಗೆ ಹಂಚಿಕೆಯಾದ 32, ರಾಜೇಂದ್ರ ಪ್ರಸಾದ್ ರಸ್ತೆಯಲ್ಲಿರುವ ನಿವಾಸಕ್ಕೆ ಸ್ಥಳಾಂತರಗೊಂಡರು. ಎಬಿ -17 ಮಥುರಾ ರಸ್ತೆಯಲ್ಲಿರುವ ನಿವಾಸವನ್ನು ಸದ್ಯ ದೆಹಲಿ ಸಿಎಂ ಆತಿಶಿಗೆ ಹಂಚಿಕೆ ಮಾಡಲಾಗಿದೆ.
ಹೀಗೆ ದೆಹಲಿಯಲ್ಲಿ ನಿವಾಸ ಹಂಚಿಕೆಯಲ್ಲಿರುವ ಗೊಂದಲಗಳನ್ನು ನಾವು ಅಲ್ಲಗಳೆಯುವಂತಿಲ್ಲ. ಜೊತೆಗೆ ಈ ಗೊಂದಲಗಳನ್ನು ಬಳಸಿಕೊಂಡು ಎಎಪಿ ಮತ್ತು ಬಿಜೆಪಿ ತಮ್ಮ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿವೆ. ಅರವಿಂದ್ ಕೇಜ್ರಿವಾಲ್ ಸಿಎಂ ಆಗಿದ್ದಾಗ ಸುಮಾರು 45 ಕೋಟಿ ರೂಪಾಯಿ ವೆಚ್ಚದಲ್ಲಿ ನಿವಾಸವನ್ನು ನವೀಕರಿಸಿದ್ದಾರೆ. ಈಗಾಗಲೇ ಈ ವಿಚಾರವು ಎಎಪಿ ಸರ್ಕಾರದ ವಿರುದ್ಧ ಬಿಜೆಪಿ ಟೀಕೆಗೆ ಒಂದು ಕಾರಣವನ್ನು ನೀಡಿದೆ. ಇದೀಗ ಅದೇ ನಿವಾಸಕ್ಕೆ ಆತಿಶಿ ತೆರಳಿ ಬಿಜೆಪಿಯ ಟೀಕೆಗೆ ಮತ್ತಷ್ಟು ಬಲ ತುಂಬಿದಂತಾಗಿದೆ.
ನಿಯಮ ಪ್ರಕಾರವಾಗಿ ಅರವಿಂದ್ ಕೇಜ್ರಿವಾಲ್ ಅವರು ತಾನು ಸಿಎಂ ಆಗಿದ್ದಾಗ ನೀಡಿದ ನಿವಾಸವನ್ನು ಅಧಿಕೃತವಾಗಿ ಹಿಂದಿರುಗಿಸಬೇಕು. ಅದಾದ ಬಳಿಕ ಆ ನಿವಾಸವನ್ನು ಹಂಚಿಕೆ ಮಾಡಲಾಗುತ್ತದೆ. ಆದರೆ ಕೇಜ್ರಿವಾಲ್ ಸಿಎಂ ನಿವಾಸವನ್ನು ಹಿಂದಿರುಗಿಸದೆ ಅದರ ಕೀಲಿಯನ್ನು ನೂತನ ಸಿಎಂಗೆ ನೀಡಿದ್ದಾರೆ. ಇನ್ನು ಈ ಹಿಂದೆ ಸಚಿವೆಯಾಗಿದ್ದ ಆತಿಶಿ ಈಗಾಗಲೇ ತಾನು ಪಡೆದಿದ್ದ ಬಂಗಲೆಯನ್ನು ಇನ್ನೂ ಹಿಂದಿರುಗಿಸಿಲ್ಲ.
ಆತಿಶಿ ಅವರಿಗೆ ಅಧಿಕೃತವಾಗಿ ಬೇರೆ ನಿವಾಸ ಹಂಚಿಕೆ ಮಾಡಿರುವಾಗ ಅರವಿಂದ್ ಕೇಜ್ರಿವಾಲ್ ಈ ಹಿಂದೆ ನೆಲೆಸಿದ್ದ ನಿವಾಸಕ್ಕೆ ಸ್ಥಳಾಂತರಗೊಂಡಿದ್ದೇಕೆ? ಅಥವಾ ಎಎಪಿ ಹೇಳುವಂತೆ ಕೇಜ್ರಿವಾಲ್ ಇದ್ದ ನಿವಾಸವನ್ನು ಬಿಜೆಪಿ ನಾಯಕರಿಗೆ ನೀಡುವ ಉದ್ದೇಶದಿಂದಲೇ ಆತಿಶಿಗೆ ಈ ನಿವಾಸ ಹಂಚಿಕೆ ಮಾಡಿಲ್ಲವೇ? ಹೀಗೆ ಹಲವು ಪ್ರಶ್ನೆಗಳು ಹುಟ್ಟುತ್ತದೆ.
ಆರಂಭದಲ್ಲಿ ನಮಗೆ ಯಾವುದೇ ಬಂಗಲೆ, ಕಾರುಗಳು ಬೇಡ ಎಂದಿದ್ದ ಎಎಪಿ ಬಳಿಕ ಬಂಗಲೆ, ಐಷಾರಾಮಿ ಕಾರುಗಳನ್ನು ಪಡೆದುಕೊಂಡಿದೆ. ನಿವಾಸಗಳ ನವೀಕರಣವನ್ನೂ ಮಾಡಿದೆ. ಇದೀಗ, ಆತಿಶಿ ನಡೆ ಕೇಜ್ರಿವಾಲ್ 45 ಕೋಟಿ ರೂಪಾಯಿ ವೆಚ್ಚದಲ್ಲಿ ಬಂಗಲೆ ನವೀಕರಣ ಮಾಡಿರುವ ಆರೋಪವನ್ನು ಮತ್ತೆ ಕೆದಕಿ ಎಎಪಿಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ವಿವಾದವನ್ನು ತಾವಾಗಿಯೇ ಮೈಮೇಲೆ ಎಳೆದುಕೊಂಡಂತಾಗಿದೆ.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.