- ದೇಶದಲ್ಲಿ ವಾರ್ಷಿಕವಾಗಿ ₹90 ಸಾವಿರ ಕೋಟಿ ಮೊತ್ತದ ಆಹಾರ ಪೋಲು
- ವಿಶ್ವ ಆಹಾರ ದಿನಾಚರಣೆ- 2024ರ ಕಾರ್ಯಕ್ರಮ ಉದ್ಘಾಟಿಸಿದ ಮುನಿಯಪ್ಪ
ನಮ್ಮ ದೇಶದಲ್ಲಿ ತಯಾರಾಗಿರುವ ಆಹಾರ ಪದಾರ್ಥಗಳು ಹೋಟೆಲ್, ಕಲ್ಯಾಣ ಮಂಟಪಗಳು ಮೂಲಕ ವ್ಯರ್ಥವಾಗುತ್ತಿರುವುದನ್ನು ತಡೆಯಲು ಸದ್ಯದಲ್ಲಿಯೇ ಕಾನೂನು ರೂಪಿಸುತ್ತೇವೆ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಕೆ ಹೆಚ್ ಮುನಿಯಪ್ಪ ಹೇಳಿದರು.
ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಆಹಾರ ವಿಜ್ಞಾನ ಮತ್ತು ಪೋಷಣೆ ವಿಭಾಗದ ವತಿಯಿಂದ ಡಾ.ಬಾಬು ರಾಜೇಂದ್ರ ಪ್ರಸಾದ್ ಅಂತಾರಾಷ್ಟ್ರೀಯ ಸಮಾವೇಶ ಭವನದಲ್ಲಿ ವಿಶ್ವ ಆಹಾರ ದಿನಾಚರಣೆ- 2024ರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
“ಆಹಾರ ಪದಾರ್ಥಗಳು ವಾರ್ಷಿಕವಾಗಿ ಸುಮಾರು 90 ಸಾವಿರ ಕೋಟಿ ರೂ.ಗಳಷ್ಟು ದೇಶದಲ್ಲಿ ಪೋಲಾಗುತ್ತಿದೆ. ‘ಅನ್ನಂ ಪರಬ್ರಹ್ಮ ಸ್ವರೂಪಂ’ ಎಂಬ ವಾಕ್ಯದಂತೆ ದೇಶದಲ್ಲಿ ಅನ್ನಕ್ಕಿರುವ ಬೆಲೆ ಬೇರೆ ಯಾವುದಕ್ಕೂ ಇಲ್ಲ.ಆಹಾರದ ಮಹತ್ವ, ಜನರ ಭಕ್ಷ್ಯಮಾನದ ಹಕ್ಕು, ಹಸಿವು ನಿರ್ಮೂಲನೆಗೆ ಜಾಗೃತಿ ಮೂಡಿಸುವುದಾಗಿದೆ” ಎಂದರು.
“ನಮ್ಮ ಅಹಾರ ವ್ಯವಸ್ಥೆಯನ್ನು ಪರಿವರ್ತಿಸಲು ಮತ್ತು ಹಸಿವು ನಿವಾರಿಸುವುದು ಎಂಬ ಚಿಂತನೆಯೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ರವರ ನೇತೃತ್ವದಲ್ಲಿ ನಮ್ಮ ಸರ್ಕಾರ ಅನ್ನಭಾಗ್ಯ ಯೋಜನೆ ಜಾರಿಗೆ ತಂದು, ರಾಜ್ಯದ ಕಟ್ಟ ಕಡೆಯ ಪ್ರಜೆಯೂ ಹಸಿವಿನಿಂದ ಮಲಗಬಾರದು ಎಂಬ ಉದ್ದೇಶದಿಂದ ಸರ್ಕಾರ ಅನ್ನಭಾಗ್ಯ ಯೋಜನೆ ಜಾರಿಗೆ ತಂದಿದೆ” ಎಂದು ಹೇಳಿದರು.
“ವಿಶ್ವ ಆಹಾರ ದಿನ (World Food Day) ವಿಶ್ವಾದ್ಯಂತ ಅಕ್ಟೋಬರ್ 16ರಂದು ಆಚರಿಸಲಾಗುತ್ತದೆ. 1945ರಲ್ಲಿ ಸಂಯುಕ್ತ ರಾಷ್ಟ್ರಗಳ ಆಹಾರ ಮತ್ತು ಕೃಷಿ ಸಂಘಟನೆಯ (FAO) ಸ್ಥಾಪನೆಯನ್ನು ಗೌರವಿಸುವುದಾಗಿ ಈ ದಿನವನ್ನು ನಿಶ್ಚಿತಗೊಳಿಸಲಾಗಿದೆ” ಎಂದರು.
“ಭಾರತ ದೇಶದಲ್ಲಿ ಸುಮಾರು ಶೇಕಡಾ 70 ರಷ್ಟು ಜನರು ಕೃಷಿಯನ್ನು ಅವಲಂಭಿಸಿದ್ದಾರೆ. ಈ ಜಗತ್ತಿನಲ್ಲಿ ಸಿರಿದಾನ್ಯಗಳ ಬಳಕೆ ಹೆಚ್ಚಾಗಬೇಕು ಮತ್ತು ಇಂದಿನ ಮಕ್ಕಳು ಅವುಗಳನ್ನು ಉಪಯೋಗಿಸಿದಾಗ ಆರೋಗ್ಯದ ಸಮಸ್ಯೆಗಳನ್ನು ಸುಧಾರಿಸಲು ಸಹಕಾರಿಯಾಗುತ್ತದೆ. 1960 ರಿಂದ 1965 ರ ಅವಧಿಯಲ್ಲಿ ನಾನು ಪ್ರೌಢಶಾಲಾ ವಿದ್ಯಾಭ್ಯಾಸ ಮಾಡುವ ಸಂದರ್ಭದಲ್ಲಿ 4 ನಾಲ್ಕು ವರ್ಷಗಳ ಕಾಲ ಮಳೆ ಅಭಾವವಾಗಿತ್ತು ಅಂದು ನಾನು ವ್ಯವಸಾಯದಲ್ಲಿ ತೊಡಗಿಸಿಕೊಂಡಿದ್ದೆ” ಎಂದು ತಿಳಿಸಿದರು.
“ಅಂದಿನ ಪ್ರಧಾನಿ ಲಾಲ್ ಬಹಾದೂರ್ ಶಾಸ್ತ್ರಿ ರವರು ದೇಶದಲ್ಲಿ ಆಹಾರದ ಕೊರತೆ ಇದ್ದಾಗ ಜನರು ಒಂದು ಒತ್ತಿನ ಊಟವನ್ನು ಬಿಡಬೇಕು ಎಂಬ ಆದೇಶವನ್ನು ಮಾಡಿದರು. ನಂತರ ಎಲ್ಲರೂ ಅದನ್ನು ಅನುಸರಿಸಿ ಆಹಾರದ ಅಭಾವವನ್ನು ಕಡಿಮೆ ಮಾಡಲು ಈ ನಿರ್ಧಾರವನ್ನು ಮಾಡಿದ್ದರು. ಪ್ರಸ್ತುತದ ನಮ್ಮ ಭಾರತ ದೇಶದಲ್ಲಿ ಮೂರು ವರ್ಷಗಳಿಗೆ ಆಗುವಷ್ಟು ಆಹಾರ ದವಸದಾನ್ಯಗಳನ್ನು ನಾವು ಶೇಕರಣೆಮಾಡಿದ್ದೇವೆ. ಮತ್ತು ಇತರೆ ದೇಶಗಳಿಗೆ ರಫ್ತು ಮಾಡುವಷ್ಟು ಬಲಿಷ್ಠವಾಗಿದ್ದೇವೆ. ಸಿರಿದಾನ್ಯಗಳ ಬೆಳೆಯುವ ಪ್ರಮಾಣ ಕಡಿಮೆಯಾಗಿದ್ದು, ಇವನ್ನು ರೈತರು ತಮ್ಮ ಜಮೀನಿನಲ್ಲಿ ನವಣೆ, ಆರ್ಕಾ,ರಾಗಿ ಭತ್ತ, ಸಜ್ಜೆ ಮುಂತಾದ ಧಾನ್ಯಗಳನ್ನು ಬೆಳೆಯುವ ಕಡೆ ಗಮಣವಹಿಸಬೇಕು” ಎಂದು ಸಚಿವರು ಹೇಳಿದರು.
“ನಮ್ಮ ಕುಟುಂಬ ಕೃಷಿ ಅವಲಂಭಿಸಿ ಇಲ್ಲಿವರೆಗೂ ಬೆಳೆದಿದ್ದು, ನಾನು 1968ರಲ್ಲಿ ಎತ್ತು ಕಟ್ಟುವ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಅಂದಿನ ಕೃಷಿ ಸಚಿವ ರಾಚಯ್ಯರವರಿಂದ ಬಹುಮಾನ ಪಡೆದಿದ್ದೆ” ಎಂದು ನೆನಪಿಸಿಕೊಂಡರು. ಇದೇ ವೇಳೆ ಸಚಿವರು ಸರ್ಕಾರದ ವತಿಯಿಂದ ಎಲ್ಲ ರೀತಿಯ ಸಹಕಾರ ಕೃಷಿ ವಿಶ್ವ ವಿದ್ಯಾಲಯಕ್ಕೆ ಇರುತ್ತದೆ” ಎಂದರು.
ಈ ಸಂದರ್ಭದಲ್ಲಿ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಎಸ್.ವಿ.ಸುರೇಶ್, ಸಿಂಡಿಕೇಟ್ ಸದಸ್ಯರಾದ ಪ್ರಭಾಕರ ಶೆಟ್ಟಿ, ಹರೀಶ್, ಚಂದ್ರೇಗೌಡ, ನಾರಾಯಣಸ್ವಾಮಿ, ಡೀನ್ ಪ್ರಕಾಶ್, ಸಂಶೋಧನಾ ನಿರ್ದೇಶಕ ಶಿವರಾಮ್, ಪ್ರಾಧ್ಯಾಪಕ ಉಷಾ ರವೀಂದ್ರ, ಕಲ್ಪನಾ ಹಾಗೂ ಸಿಬ್ಬಂದಿಯವರು ಉಪಸ್ಥಿತರಿದ್ದರು.