ಶಿಬಿರಗಳು ಮಕ್ಕಳ ಕಲಿಕೆಗೆ ಪೂರಕ ವಾತಾವರಣ ನಿರ್ಮಿಸಿ ಅವರಲ್ಲಿನ ಕಲಿಕಾ ಗುಣಮಟ್ಟ ಸುಧಾರಿಸುತ್ತವೆ ಎಂದು ಅಗಸ್ತ್ಯ ಫೌಂಡೇಶನ್ ಔರಾದ್ ಮಿನಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ವಿರೇಶ ಪಾಂಚಾಳ ನುಡಿದರು.
ಅಗಸ್ತ್ಯ ಫೌಂಡೇಶನ್ ಮಿನಿ ವಿಜ್ಞಾನ ಕೇಂದ್ರ ಔರಾದ್ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಎಕಲಾರ ಸಹಯೋಗದಲ್ಲಿ ನಡೆದ 15 ದಿನಗಳ ಉಚಿತ ಚಳಿಗಾಲ ಕಲಿಕಾ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ʼಮಕ್ಕಳಲ್ಲಿನ ಗಣಿತದ ಭಯ ಹೋಗಲಾಡಿಸಿ ಬುನಾದಿ ಸಾಮರ್ಥ್ಯ ಬಲಪಡಿಸಲು ಶಿಬಿರದಲ್ಲಿ ವಿನೂತನ ಚಟುವಟಿಕೆಗಳು ಮಾಡಿಸಿದ್ದು, ಗಣಿತ ವಿಷಯವು ಅತ್ಯಂತ ಸರಳ ವಿಷಯ ಎಂದು ಮಕ್ಕಳಿಗೆ ಮನವರಿಕೆ ಮಾಡಲಾಗಿದೆʼ ಎಂದರು.
ಶಿಕ್ಷಕ ಗಜಾನನ ಮಳ್ಳಾ ಮಾತನಾಡಿ, ʼದಸರಾ ರಜೆಯಲ್ಲಿ ಮಕ್ಕಳಲ್ಲಿ ಕ್ರಿಯಾಶೀಲತೆ, ಓದುವಿಕೆ, ಆರೋಗ್ಯದ ರಕ್ಷಣೆ ಸೇರಿ ನಾನಾ ಚಟುವಟಿಕೆ ಮಾಡಿಸುವುದರಿಂದ ಅವರ ಬುದ್ಧಿಮಟ್ಟ ಸುಧಾರಣೆಯಾಗಿ, ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆʼ ಎಂದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಸಾಹಿತಿ, ಬರಹಗಾರರು ಓದುಗರಿಗೆ ನಿಷ್ಠುರವಾಗಿರಬೇಕು : ದಿನೇಶ ಅಮೀನ್ ಮಟ್ಟು
ಶಾಲೆಯ ಗಣಿತ ಶಿಕ್ಷಕ ಬಾಲಾಜಿ ಅಮರವಾಡಿ ಶಿಬಿರದ ಚಟುವಟಿಕೆಗಳನ್ನು ಕುರಿತು ಮಾಹಿತಿ ನೀಡಿ ಅಗಸ್ತ್ಯ ಫೌಂಡೇಶನ್ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಶಾಲೆಯ ವಿದ್ಯಾರ್ಥಿನಿ ಸಾಕ್ಷಿ ಶಿವಕುಮಾರ್, ಸಾಧನಾ ಬಾಬುಗೊಂಡ್ ತಮ್ಮ ಅನಿಸಿಕೆ ಹಂಚಿಕೊಂಡರು.ಮುಖ್ಯ ಶಿಕ್ಷಕ ಪ್ರಭು ಬಾಳೂರೆ, ಗ್ರಂಥಾಲಯ ಮೇಲ್ವಿಚಾರಕ ರಮೇಶ ಹಿಪ್ಪಳಗಾವೆ, ಶಿಕ್ಷಕರಾದ ವೀರಶೆಟ್ಟಿ ಗಾದಗೆ, ಅಂಕುಶ ಪಾಟೀಲ್, ರೂಪಾ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.