ಒಳಮೀಸಲಾತಿ ಜಾರಿಯಾಗುವವರೆಗೆ ಬ್ಯಾಕ್ಲಾಗ್ ಸೇರಿದಂತೆ ಯಾವುದೇ ಹುದ್ದೆ, ನೇಮಕಾತಿ ತುಂಬಬಾರದು ಎಂದು ಆಗ್ರಹಿಸಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿ ಹೋರಾಟ ಸಮಿತಿಯ ಯಾದಗಿರಿ ಜಿಲ್ಲಾ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ನಗರದ ತಹಶೀಲ್ದಾರ್ ಕಚೇರಿಯಿಂದ ಬೃಹತ್ ಪ್ರತಿಭಟನೆ ಮೆರವಣಿಗೆ ನಡೆಸಿ ಶಾಸ್ತ್ರೀ ಸರ್ಕಲ್, ಸುಭಾಶ್ಚಂದ್ರ ಬೋಸ್ ವೃತ್ತದಲ್ಲಿ ಸರ್ಕಾರ ವಿರುದ್ದ ಘೋಷಣೆ ಕೂಗಿ ಒಳಮೀಸಲಾತಿ ಜಾರಿ ಮಾಡುವಂತೆ ಆಗ್ರಹಿಸಿದರು. ಬಳಿಕ ಯಾದಗಿರಿ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಿದರು.
ಮನವಿ ಪತ್ರ ಸಲ್ಲಿಸಿ ರಾಜ್ಯ ಅಲೆಮಾರಿ ಹಾಗೂ ಅರೆ ಅಲೆಮಾರಿ ಮಾಜಿ ಅಧ್ಯಕ್ಷ ದೇವೇಂದ್ರ ನಾಥ ನಾದ ಮಾತನಾಡಿ, “ಜನಗಣತಿ ವರದಿ ವಿಚಾರವನ್ನು ಮುನ್ನೆಲೆಗೆ ತಂದು ಎಸ್ ಸಿ ಒಳಮೀಸಲಾತಿ ಜಾರಿಗೊಳಿಸುವಲ್ಲಿ ನಿರ್ಲಕ್ಷ್ಯ ಧೋರಣೆ ಸಲ್ಲದು ಸುಪ್ರೀಂ ಕೋರ್ಟ್ ತೀರ್ಪು ಉಲ್ಲಂಘನೆಯ ಒಳ ಹುನ್ನಾರವನ್ನು ಮುಂದುವರಿಸಿದರೆ ಮುಂದೆ ಅತ್ಯಂತ ಗಂಭೀರ ಹೋರಾಟವನ್ನು ಸರಕಾರವು ಎದುರಿಸಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.
“ಆಗಸ್ಟ್ ಒಂದರಂದು ಸರ್ವೋಚ್ಚ ನ್ಯಾಯಾಲಯದ ಪೂರ್ಣ ಪೀಠವು ಎಸ್ ಸಿ ಮೀಸಲಾತಿಯಲ್ಲಿ ಉಪವರ್ಗಿಕರಿಸಲು ಆಯಾ ರಾಜ್ಯ ಸರಕಾರಕ್ಕೆ ಅಧಿಕಾರವಿದೆ. ಸಂವಿಧಾನದ 341 ರ ಪರಿಚ್ಛೇದ ತಿದ್ದುಪಡಿಯ ಅವಶ್ಯಕತೆ ಇಲ್ಲ ಎಂದು ತೀರ್ಪು ನೀಡಿದೆ. ಒಳಮೀಸಲಾತಿ ಜಾರಿಗೊಳಿಸಲು 2023 ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ 6 ನೇ ಗ್ಯಾರಂಟಿ ಘೋಸಿಸಿದಂತೆ ಒಳಮೀಸಲಾತಿ ಜಾರಿಗೊಳಿಸಬೇಕು. ಇಲ್ಲವಾದಲ್ಲಿ, ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು” ಎಂದು ಒತ್ತಾಯಿಸಿದರು.
ನ್ಯಾಯವಾದಿ ನಿಂಗಪ್ಪ ಬಡ್ನಳ್ಳಿ ಮಾತನಾಡಿ, “ಈಗಾಗಲೇ ಸಂವಿಧಾನದ ಪರಿಚ್ಛೇದ 15(4)ನೇಯ ಹಾಗೂ 16(4) ನೇ ವಿಧಿಗಳ ಅಡಿಯಲ್ಲಿ ಅಧಿಕಾರವನ್ನು ಬಳಸಿ ರಾಜ್ಯ ಸರಕಾರಗಳು ಸಾಮಾಜಿಕ, ಆರ್ಥಿಕವಾಗಿ ಹಿಂದುಳಿದಿರುವಿಕೆಯನ್ನು ಗುರುತಿಸಿಕೊಂಡು ಮೀಸಲಾತಿಯಂತಹ ವಿಶೇಷ ಅವಕಾಶಗಳನ್ನು ಕಲ್ಪಿಸಲು ರಾಜ್ಯ ಸರಕಾರವು ಮುಕ್ತವಾಗಿದೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ತೀರ್ಪುನಲ್ಲಿ ಹೇಳಿದ್ದಾರೆ” ಎಂದು ತಿಳಿಸಿದರು.
“ಸುಪ್ರೀಂ ಕೋರ್ಟ್ ತೀರ್ಪುನ್ನು ಕೂಡಲೇ ರಾಜ್ಯ ಸರಕಾರವು ಜಾರಿಗೊಳಿಸಬೇಕು. ಪರಿಶಿಷ್ಟ ಜಾತಿಗಳಲ್ಲಿ ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಅತಿ ಹೆಚ್ಚು ಹಿಂದುಳಿದಿರುವ ಜಾತಿಗಳ ಅಭಿವೃದ್ಧಿಯ ಸದುದ್ದೇಶದಿಂದ ಆಯಾ ಜಾತಿಗಳಿಗೆ ಸೇರಿದವರಿಗೆ ಮೀಸಲಾತಿ ಸೌಲಭ್ಯ ತಲುಪಲು ಒಳಮೀಸಲಾತಿ ನೀಡುವ ಸಾಂವಿಧಾನಿಕ ಅಧಿಕಾರ ಆಯಾ ರಾಜ್ಯಗಳಿವೆ ಎಂದು ಸರ್ವೋಚ್ಚ ನ್ಯಾಯಾಲಯ ತೀರ್ಪು ನೀಡಿದ್ದರೂ, ಸರ್ಕಾರ ಮಾತ್ರ ನಮಗೆ ಅನ್ಯಾಯ ಮಾಡುತ್ತಿದೆ” ಎಂದರು.
ಶಾಂತರಾಜ ಮೋಟ್ಟನಳ್ಳಿ, ಭೀಮಾಶಂಕರ ಬಿಲವ್, ವಾಸುದೇವ ಕಟ್ಟಿಮನಿ, ಬಸರಾಜ ಮೇತ್ರಿ ನಾಯ್ಕಲ್ ಮಾತನಾಡಿ, “ಪರಿಶಿಷ್ಟ ಜಾತಿಗಳು ಸಾಮಾಜಿಕವಾಗಿ ಏಕರೂಪಿಯಾಗಿಲ್ಲ ಎಂದು ಏಳು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀರವು ಹೇಳಿದೆ. ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿಯವರು ಇದರ ನೇತೃತ್ವ ವಹಿಸಿದ್ದರು. 6;1 ಬಹುಮತದ ತೀರ್ಪು ನೀಡುವುದರೋಂದಿಗೆ ಒಟ್ಟು 565 ಪುಟಗಳ ಒಮ್ಮತದ ತೀರ್ಪು ನೀಡಿದೆ. ಆದರೂ, ಆಡಳಿತದಲ್ಲಿರುವ ಕಾಂಗ್ರೆಸ್ ಸರ್ಕಾರ ಮಾತ್ರ ಒಳಮೀಸಲಾತಿ ಜಾರಿ ಮಾಡದೆ ಮೀನಮೇಷ ಮಾಡುತ್ತಿರುವುದು ಖಂಡನಾರ್ಹವಾಗಿದೆ. ಕೂಡಲೇ ಒಳಮೀಸಲಾತಿ ಜಾರಿ ಮಾಡಬೇಕೆಂದು” ಆಗ್ರಹಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಹಣಮಂತ ಇಟಗಿ, ನಗರಸಭೆ ಸದಸ್ಯ ಸ್ವಾಮಿದೇವ ದಾಸನಕೇರಿ, ಶಿವರಾಜ್ ದಾಸನಕೇರಿ, ಹಣಮಂತ ಲಿಂಗೇರಿ, ಡಾ.ಶಿವು ಮುದ್ನಾಳ್, ಜಗದೀಶ್ ದಾಸನಕೇರಿ, ಸಾಬು ಹೊರುಂಚಾ, ಆನಂದ್ ಮ್ಯಾಗೇರಿ, ಸಾಮುವೇಲ್ ಯಡ್ಡಳ್ಳಿ, ಮಂಜುನಾಥ ಮಲ್ಹಾರ್, ಸಾಬಣ್ಣ ಸೈದಾಪುರ, ಮಲ್ಲು ಬಬಲಾದ್, ರಾಜು ಪೂಜಾರಿ,ಅಶೋಕ ಗುರುಮಠಕಲ್, ಶರಣಪ್ಪ ಪೂಜಾರಿ, ರವಿ ಬುರನೋರ್ ಎಮ್ ಟಿ ಪಲ್ಲಿ, ಚಂದ್ರಶೇಖರ ನಡುವಿನಮನಿ, ಚಂದ್ರು ಕಡೆಸೂರ್, ಶರಣು ದಾಸನಕೇರಿ, ರಾಜು ಕಡೆಚೂರ್, ವಿಲ್ಸನ್, ಚಂದ್ರು ಮುಂಡರಗಿ, ಮಲ್ಲು ಬೆಳಗೇರಿ, ದೇವು ಲಿಂಗೇರಿ, ಭೀಮಶಪ್ಪ ಗುರುಮಠಕಲ್, ಸಾಮುವೇಲ ಯಡ್ಡಳ್ಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಗುರುಮಠಕಲ್, ಸೈದಾಪುರ,ವಡಗೇರಾ, ಹತ್ತಿಕುಣಿ, ಶಹಾಪುರ, ಸುರಪುರ, ಕಕ್ಕೇರಾ, ಹುಣಸಗಿ ಭಾಗದ ಮಂದಿ ಕೂಡ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
