ರಾಜ್ಯಾದ್ಯಂತ ಎಲ್ಲ 34 ಮತ ಎಣಿಕೆ ಕೇಂದ್ರಗಳಲ್ಲಿ ಶನಿವಾರ ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಗಲಿದೆ. ಮೈಸೂರು ಜಿಲ್ಲೆಯ ವರುಣಾ ಕ್ಷೇತ್ರದ ಫಲಿತಾಂಶಕ್ಕಾಗಿ ಕರ್ನಾಟಕ ಕುತೂಹಲದಿಂದ ಕಾಯುತ್ತಿದೆ. ಕ್ಷೇತ್ರದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಬಿಜೆಪಿ ಸಚಿವ ವಿ ಸೋಮಣ್ಣ ಕಣದಲ್ಲಿದ್ದಾರೆ. ಅವರಿಬ್ಬರ ಸ್ಪರ್ಧೆಯಿಂದ ಕ್ಷೇತ್ರವು ಹೈ-ವೊಲ್ಟೇಜ್ ಕಣವಾಗಿ ಗುರುತಿಸಿಕೊಂಡಿದೆ.
ಕ್ಷೇತ್ರದಲ್ಲಿ 2018ರ ಚುನಾವಣೆಗೆ ಹೋಲಿಸಿದರೆ, ಈ ಬಾರಿ 24,000 ಹೆಚ್ಚು ಮತದಾನವಾಗಿದೆ. ಕ್ಷೇತ್ರದ ಒಟ್ಟು 2,34,533 ಮತದಾರರಲ್ಲಿ 1,98,740 ಜನರು ಮತ ಚಲಾಯಿಸಿದ್ದಾರೆ. ಅಂದರೆ, ಶೇ.84.74% ಮತದಾನವಾಗಿದೆ. ಕಳೆದ ಚುನಾವಣೆಯಲ್ಲಿ ಒಟ್ಟು 2,21,050 ಮತದಾರರಲ್ಲಿ 1,74,457 ಜನರು ಮತ ಚಲಾಯಿಸಿದ್ದರು ಮತ್ತು ಆಗ ಮತದಾನದ ಪ್ರಮಾಣ 79.2% ಆಗಿತ್ತು.
2008ರ ಕ್ಷೇತ್ರ ಮರುವಿಂಗಣೆ ಸಮಯದಲ್ಲಿ ವರುಣಾ ಕ್ಷೇತ್ರ ರಚನೆಯಾಯಿತು. ಅಂದಿನಿಂದ ಇಂದಿನವರೆಗೂ ಕ್ಷೇತ್ರವು ಕಾಂಗ್ರೆಸ್ (ಸಿದ್ದರಾಮಯ್ಯ-ಯತೀಂದ್ರ ಸಿದ್ದರಾಮಯ್ಯ) ತೆಕ್ಕೆಯಲ್ಲಿದೆ. ಕ್ಷೇತ್ರದಲ್ಲಿ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಸುವುದಾಗಿ ಹೇಳುತ್ತಿದ್ದ ಬಿಜೆಪಿ, 2018ರಲ್ಲಿ ಹಿಂದೆ ಸರಿದಿತ್ತು. ಅಂತಿಮವಾಗಿ ಈ ಬಾರಿ ಸೋಮಣ್ಣ ಅವರನ್ನು ಕಣಕ್ಕಿಳಿಸಿತ್ತು. ಸದ್ಯ, ಮತದಾನ ಮುಗಿದಿದ್ದು, ಸಿದ್ದರಾಮಯ್ಯರನ್ನು ಸೋಮಣ್ಣ ಮಣಿಸಲು ಸಾಧ್ಯವಿಲ್ಲವೆಂದು ಕ್ಷೇತ್ರದಲ್ಲಿ ಮಾತುಗಳು ಕೇಳಿಬಂದಿವೆ. ಆದರೂ, ಫಲಿತಾಂಶದಲ್ಲಿ ಏನಾಗಲಿದೆ ಎಂಬ ಕೌತಕವಿದ್ದು, ಎಲ್ಲರ ಚಿತ್ತ ವರುಣಾ ಕ್ಷೇತ್ರದ ಮೇಲಿದೆ.
ಮತದಾನದ ಬಳಿಕ, ಕ್ಷೇತ್ರದ ಎಲ್ಲ ಮತಗಟ್ಟೆಗಳಿಂದ ಇವಿಎಂಗಳನ್ನು ಜಿಲ್ಲಾಧಿಕಾರಿ ಕೆ.ವಿ ರಾಜೇಂದ್ರ ಸಮ್ಮುಖದಲ್ಲಿ ಮೈಸೂರಿನ ಮಹಾರಾಣಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಮತ ಎಣಿಕೆ ಕೇಂದ್ರದಲ್ಲಿ ಇರಿಸಲಾಗಿದೆ. ಶನಿವಾರ, ಸಿಸಿ ಕ್ಯಾಮೆರಾಗಳ ಕಣ್ಗಾವಲಿನಲ್ಲಿ ಮತ ಎಣಿಕೆ ನಡೆಯಲಿದೆ.
ಕಾಂಗ್ರೆಸ್ನ ಸಾಂಪ್ರದಾಯಿಕ ಮತದಾರರು ತಮ್ಮ ನಾಯಕ ಸಿದ್ದರಾಮಯ್ಯ 25,000 ಮತಗಳ ಅಂತರದಿಂದ ಗೆಲ್ಲುತ್ತಾರೆ ಎಂಬ ವಿಶ್ವಾಸದಲ್ಲಿದೆ. ಸೋಮಣ್ಣ ಲಿಂಗಾಯತ ಸಮುದಾಯಕ್ಕೆ ಸೇರಿದವರಾಗಿದ್ದು, ಲಿಂಗಾಯತರು ಪ್ರಬಲವಾಗಿರುವ ಕ್ಷೇತ್ರದ ವ್ಯಾಪ್ತಿಯ ನಂಜನಗೂಡು ತಾಲೂಕಿನಲ್ಲಿ ಭಾರೀ ಮತದಾನವಾಗಿದೆ. ಸೋಮಣ್ಣ ಸುಮಾರು 5,000-11,000 ಮತಗಳ ಅಂತರದಿಂದ ಗೆಲ್ಲಲಿದ್ದಾರೆ. ಆ ಮೂಲಕ ಸಿದ್ದರಾಮಯ್ಯರ ಕೋಟೆಯನ್ನು ಛಿದ್ರಗೊಳಿಸುತ್ತಾರೆ ಎಂಬ ಭರವಸೆಯಲ್ಲಿ ಸೋಮಣ್ಣ ಬೆಂಬಲಿಗರಿದ್ದಾರೆ.
ಹಿಂದಿನ ಚುನಾವಣೆಯ ಅಂತಿಮ ಮತದಾನಕ್ಕಿಂತ ಸುಮಾರು 24,283 ಹೆಚ್ಚು ಮತಗಳು ಚಲಾವಣೆಗೊಂಡಿವೆ. ಮತದಾನದ ಹೆಚ್ಚಳಕ್ಕೆ ಇಬ್ಬರೂ ನಾಯಕರು ತಮ್ಮದೇ ಆದ ವಿವರಣೆಯನ್ನು ಹೊಂದಿದ್ದಾರೆ. ‘ಎಲ್ಲ ಹಿಂದುಳಿದ ವರ್ಗದವರು ಪಕ್ಷವನ್ನು ಬೆಂಬಲಿಸಲು ಬಂದಿದ್ದಾರೆ’ ಎಂದು ಕಾಂಗ್ರೆಸ್ ಹೇಳಿಕೊಂಡರೆ, ‘ಈ ಬಾರಿ ದಲಿತರು ಮತ್ತು ಲಿಂಗಾಯತರು ಸಂಖ್ಯೆಯಲ್ಲಿ ಮತದಾನ ಮಾಡಿದ್ದು, ಸೋಮಣ್ಣ ಅವರಿಗೆ ಮತ ಹಾಕಿದ್ದಾರೆ’ ಎಂದು ಬಿಜೆಪಿ ಹೇಳಿಕೊಂಡಿದೆ. ಸಿದ್ದರಾಮಯ್ಯ ಮತ್ತು ಸೋಮಣ್ಣ ಇಬ್ಬರೂ ತಮಗೆ ಎಲ್ಲ ಸಮುದಾಯಗಳ ಬೆಂಬಲವಿದೆ ಮತ್ತು ಅವರೆಲ್ಲರೂ ತಮಗೆ ಮತ ಹಾಕಿದ್ದಾರೆ ಎಂದು ಹೇಳಿಕೊಂಡಿದ್ದಾರೆ.
“ಸೋಮಣ್ಣ ಅವರನ್ನು ಬೆಂಬಲಿಸಿ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರು ಚುನಾವಣಾ ಪ್ರಚಾರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರಲಿಲ್ಲ. ಇದು ಲಿಂಗಾಯತ ಮತಗಳಲ್ಲಿ 40%ರಷ್ಟು ವಿಭಜನೆಯಾಗುವ ಸೂಚನೆಯಾಗಿದೆ” ಎಂದು ಕಾಂಗ್ರೆಸ್ ಕಾರ್ಯಕರ್ತರು ಹೇಳಿದ್ದಾರೆ.
ಆದಾಗ್ಯೂ, ಸೋಮಣ್ಣ ರಾಜಕಾರಣಿಯಾಗಿದ್ದು, ಅವರು ಕಣಕ್ಕೆ ಇಳಿಯುವ ಮೊದಲೇ ಯಡಿಯೂರಪ್ಪ ಜೊತೆಗಿನ ಭಿನ್ನಮತವನ್ನು ಸೂಕ್ಷ್ಮವಾಗಿ ಪರಿಹರಿಸಿದ್ದಾರೆ. ಅವರು ವರುಣಾದಲ್ಲಿ ಯಡಿಯೂರಪ್ಪ ಅವರ ಬೆಂಬಲಿಗರನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದಾರೆ” ಎಂದು ಬಿಜೆಪಿ ಬೆಂಬಲಿಗರು ವಾದಿಸುತ್ತಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಮೈಸೂರು | ತಮ್ಮ ಮೊದಲ ಮತವನ್ನೇ ಮಾರಿಕೊಂಡ ಯುವಜನರು!
ಚುನಾವಣೆ ಮುಗಿದ ನಂತರ ಸಿದ್ದರಾಮಯ್ಯ ಅವರು ಸುಲಭವಾಗಿ ಗೆಲ್ಲುತ್ತೇವೆ ಎಂದು ಪುನರುಚ್ಚರಿಸಿದ್ದಾರೆ. “ಬಿಜೆಪಿ ನಾಯಕರು ಜಾತಿ ಕಾರ್ಡ್ನಲ್ಲಿ ಚುನಾವಣೆ ಎದುರಿಸಲು ಪ್ರಯತ್ನಿಸಿದರು. ಆದರೆ, ಅದು ವಿಫಲವಾಗಿದೆ. ಜೆಡಿಎಸ್ ಬೆಂಬಲಿಗರು ಸಹ ಬಿಜೆಪಿಗೆ ಮತ ಹಾಕಿದ್ದಾರೆ. ಆದರೂ, ನಾನು ಗೆಲ್ಲುತ್ತೇನೆ,” ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
“ಮತದಾನದ ಶೇಕಡಾವಾರು ಹೆಚ್ಚಳವು ಕಾಂಗ್ರೆಸ್ ಪರವಾಗಿರುವುದನ್ನು ಸೂಚಿಸುತ್ತದೆ. ಈ ಬಾರಿ ಎಲ್ಲ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಮತದಾನ ಮಾಡಿದ್ದಾರೆ. ಲಿಂಗಾಯತ ಸೇರಿದಂತೆ ಇತರೆ ಸಮುದಾಯದ ಮತದಾರರು ಕೂಡ ಸಿದ್ದರಾಮಯ್ಯ ಅವರನ್ನು ಬೆಂಬಲಿಸಿದ್ದಾರೆ” ಎಂದು ಮೈಸೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ಜೆ. ವಿಜಯ್ಕುಮಾರ್ ಹೇಳಿದ್ದಾರೆ.