ಚುನಾವಣೆ ವೇಳೆ ಮತಗಳನ್ನು ಮಾರಿಕೊಳ್ಳುವುದು ಪ್ರಜಾಪ್ರಭುತ್ವಕ್ಕೆ ಮಾರಕ. ಇಂತಹ ಕೆಟ್ಟ ನಿದರ್ಶನಕ್ಕೆ ಹಳೇ ಮೈಸೂರು ಭಾಗದ ಭಾಗಶಃ ಎಲ್ಲ ಕ್ಷೇತ್ರಗಳು ಸಾಕ್ಷಿಯಾಗಿವೆ. ಅದರಲ್ಲೂ ಮೊದಲ ಬಾರಿಗೆ ಮತ ಚಲಾಯಿಸಿದ ಯುವಜನರೂ ಈ ತುಚ್ಛ ನಡೆಯಲ್ಲಿ ಭಾಗಿಯಾಗಿದ್ದು, ತಮ್ಮ ಮೊದಲ ಮತವನ್ನೇ ಮಾರಿಕೊಂಡಿದ್ದಾರೆ. ಅದರೊಂದಿಗೆ ಪ್ರಜಾಪ್ರಭತ್ವವನ್ನು ಅಣಕಿಸಿದ್ದಾರೆ.
ಈ ಬಾರಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸಬೇಕೆಂದು ಜಿಲ್ಲಾಡಳಿತ ಹಾಗೂ ವ್ಯವಸ್ಥಿತ ಮತದಾರರ ಶಿಕ್ಷಣ ಮತ್ತು ಚುನಾವಣಾ ಭಾಗವಹಿಸುವಿಕೆ ಸಮಿತಿಗಳು ಸಾಕಷ್ಟು ಸಿದ್ಧತೆಗಳನ್ನು ನಡೆಸಿದ್ದವು. ಆದರೂ, ಯುವ ಮತದಾರರ ಮತಗಳು ಮಾರಾವಾಗಿವೆ. ಮೈಸೂರು ಜಿಲ್ಲೆಯ ನಗರ ಹಾಗೂ ಗ್ರಾಮೀಣ ಭಾಗದ ಹಲವು ಮತಗಟ್ಟೆಗಳಲ್ಲಿ ಇದು ಸ್ಪಷ್ಟವಾಗಿ ಕಂಡುಬಂದಿದೆ. ಮತದಾನಕ್ಕೂ ಮುನ್ನ ಹಲವರು ಮತಕ್ಕಾಗಿ ಹಣ ಹಂಚುವವರನ್ನು ಸಂಪರ್ಕಿಸಿದ್ದಾರೆ. ಹಣ ಪಡೆದ ಬಳಿಕ ಮತಗಟ್ಟೆಗೆ ತೆರಳಿ ಮತಚಲಾಯಿಸಿರುವುದು ಕಂಡುಬಂದಿದೆ.
ಜಿಲ್ಲೆಯಲ್ಲಿ 50,000ಕ್ಕೂ ಹೆಚ್ಚು ಯುವಜನರು ಹೊಸದಾಗಿ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಂಡಿದ್ದರು. ಇವರಲ್ಲಿ ಬಹುಸಂಖ್ಯೆಯ ಯುವ ಮತದಾರರು 500 ರೂ.ನಿಂದ 1,500 ರೂ.ವರೆಗೆ ತಮ್ಮ ಮತಗಳನ್ನು ಮಾರಿಕೊಂಡಿದ್ದಾರೆ. ಎಚ್ಡಿ ಕೋಟೆ ತಾಲೂಕಿನ ಹೈರಿಗೆ ಗ್ರಾಮದಲ್ಲಿ ಕಾಲೇಜು ವಿದ್ಯಾರ್ಥಿಯೊಬ್ಬ ಜೆಡಿಎಸ್ ಮುಖಂಡರೊಬ್ಬರ ಬಳಿ 1,000 ರೂ. ಕೊಟ್ಟರೆ ಜೆಡಿಎಸ್ಗೆ ಮತ ಹಾಕುವುದಾಗಿ ಹೇಳಿದ್ದಾರೆ. ಅಲ್ಲದೆ, ಇನ್ನೂ ನಾಲ್ವರಿಂದ ಮತ ಹಾಕಿಸುವುದಾಗಿ 1,500 ರೂ. ಪಡೆದಿದ್ದಾರೆಂದು ‘ಟಿಎನ್ಐಎ’ ವರದಿ ಮಾಡಿದೆ.
ಈ ಸುದ್ದಿ ಓದಿದ್ದೀರಾ? ಈಗೇನಿದ್ದರೂ `ಆಪರೇಷನ್’ದೇ ಮಾತುಕತೆ!
ಇನ್ನು, ಕೃಷ್ಣರಾಜ ಕ್ಷೇತ್ರದ ಕುರುಬರಹಳ್ಳಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಲು ಯುವ ಮತದಾರರು ಹಣಕ್ಕೆ ಬೇಡಿಕೆ ಇಟ್ಟಿರುವುದು ಕಂಡುಬಂದಿದೆ. 31 ಮಂದಿಯ ಗುಂಪೊಂದು ಕಾಂಗ್ರೆಸ್ ಮುಖಂಡನನ್ನು ಸಂಪರ್ಕಿಸಿ, ಪ್ರತಿ ಮತಕ್ಕೆ 1,500 ರೂಪಾಯಿ ನೀಡಿದರೆ, ಮತ ಹಾಕುವುದಾಗಿ ಬೇಡಿಕೆ ಇಟ್ಟಿದೆ ಎಂದು ತಿಳಿದುಬಂದಿದೆ.
ರಾಜ್ಯದಲ್ಲಿ ಮೊದಲ ಬಾರಿಗೆ ಮತ ಚಲಾಯಿಸಿದ ಎಲ್ಲ ಯುವಜನರು ವಿದ್ಯಾವಂತರೇ. ಶಿಕ್ಷಣ ಸಂಸ್ಥೆಗಳ ಶಿಕ್ಷಕರಿಂದ ಹಿಡಿದು ಚುನಾವಣಾಧಿಕಾರಿಗಳವರೆಗೆ ಎಲ್ಲೆಡೆ ಮತಗಳನ್ನು ಮಾರಿಕೊಳ್ಳಬಾರದು ಎಂದು ಜಾಗೃತಿ ಮಾಡಿಸಿದ್ದಾರೆ. ಶಿಕ್ಷಕರು ತರಗತಿಗಳಲ್ಲಿ ಮತದಾನ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳ ಬಗ್ಗೆ ಬೋಧನೆ ಮಾಡಿದ್ದಾರೆ. ಆದರೂ, ಯುವಜನರು ತಮ್ಮ ಮತಗಳನ್ನು ಮಾರಿಕೊಂಡಿರುವುದು ಪ್ರಸ್ತುತದಲ್ಲಿ ಮಾತ್ರವಲ್ಲ, ಭವಿಷ್ಯದಲ್ಲಿಯೇ ರಾಜಕಾರಣದ ಅಧೋಗತಿಗೆ ಕಾರಣವಾಗಬಹುದು ಎಂದು ಚುನಾವಣಾ ವಿಶ್ಲೇಷಕರು ಹೇಳುತ್ತಿದ್ದಾರೆ.
ನೊಟಾ ಮತದಾನದ ಬಗ್ಗೆ ಸಕಾರಾತ್ಮಕ ಪ್ರಚಾರ ಒಂದೇ ಇದಕ್ಕೆಲ್ಲಾ ಪರಿಹಾರ…
ಪ್ರಶಾಂತ ಮುಚ್ಚಂಡಿ ಹಾನಗಲ್ಲ-581104
9986155644
[email protected]