ಒಳಮೀಸಲಾತಿ ಜಾರಿಯಾಗುವವರಿಗೆ ನೇಮಕಾತಿ ಪ್ರಕ್ರಿಯೆ ತಡೆಹಿಡಿಯುವಂತೆ ಒತ್ತಾಯಿಸಿ ಮಾದಿಗ-ಛಲವಾದಿ ಸಮುದಾಯ ಒಕ್ಕೂಟದಿಂದ ದಾವಣಗೆರೆಯಲ್ಲಿ ಅಕ್ಟೋಬರ್ 23ರಂದು ಹೋರಾಟ ಹಮ್ಮಿಕೊಳ್ಳಲಾಗಿದ್ದು, ಎರಡು ಸಮುದಾಯಗಳು ಸೇರಿದಂತೆ ಪರಿಶಿಷ್ಟ ಜಾತಿಗಳ ಸಾವಿರಾರು ಮಂದಿ ಪಾಲ್ಗೊಳ್ಳಲಿದ್ದಾರೆ. ಈ ಮೂಲಕ ಶೀಘ್ರ ಒಳಮಿಸಲಾತಿ ಅನುಷ್ಠಾನಕ್ಕೆ ಒತಾಯಿಸಲಿದ್ದೇವೆ ಎಂದು ಸಮುದಾಯಗಳ ಮುಖಂಡರು ತಿಳಿಸಿದರು.
ದಾವಣಗೆರೆಯ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಬಳಿಕ ನಗರದ ಡಾ. ಬಿ ಆರ್ ಅಂಬೇಡ್ಕರ್ ವೃತ್ತದಿಂದ ಉಪವಿಭಾಗಾಧಿಕಾರಿಗಳ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ನೀಡಿದರು.
ನಿವೃತ್ತ ಡಿವೈಎಸ್ಪಿ ರವಿನಾರಾಯಣ್ ಮಾತನಾಡಿ, “ಅಸ್ಪೃಶ್ಯರಿಗೆ ಡಾ. ಅಂಬೇಡ್ಕರ್ ಅವರು ಸಂವಿಧಾನಬದ್ಧವಾಗಿ ಮೀಸಲಾತಿ ನೀಡಿದ್ದಾರೆ. 1970ರ ದಶಕದಲ್ಲಿ ಭೋವಿ ಲಂಬಾಣಿ ಸಮುದಾಯಗಳನ್ನು ಪರಿಶಿಷ್ಟ ಜಾತಿಗಳ ಪಟ್ಟಿಗೆ ಸೇರಿಸಿದ್ದು, ಆ ಸಮಯದಲ್ಲಿ ಅವರಿಗೆ ಅಗತ್ಯವಿತ್ತೋ ಅಥವಾ ಆ ಕಾಲಘಟ್ಟಕ್ಕೆ ಅದನ್ನು ಸೇರ್ಪಡೆಗೊಳಿಸಿದ್ದಾರೆ. ಆದರೆ ಮುಂದುವರಿದ ಸಾಮಾಜಿಕ ಪರಿಸ್ಥಿತಿಯಲ್ಲಿ ಶೈಕ್ಷಣಿಕ ಮತ್ತು ಔದ್ಯೋಗಿಕವಾಗಿ ಕ್ರಮೇಣ ಅವರಿಗೇ ಮಾತ್ರವೇ ಪರಿಶಿಷ್ಟ ಜಾತಿಯಲ್ಲಿನ ಅವಕಾಶಗಳು ಸಿಕ್ಕಿದವು. ಆದರೆ ಅಸ್ಪೃಶ್ಯರಾದ ನಾವು ಅಂದಿನಿಂದ ಇಂದಿನವರೆಗೂ ಕೂಡ ಅವಮಾನಕರ ಪರಿಸ್ಥಿತಿಯಲ್ಲಿದ್ದೇವೆ” ಎಂದರು.
“ಅತ್ಯಂತ ಕೆಳ ಸಮುದಾಯದ ಅಸ್ಪೃಶ್ಯರಾದ ನಮಗೆ ಶೈಕ್ಷಣಿಕ ಮತ್ತು ಉದ್ಯೋಗ, ಆರ್ಥಿಕವಾಗಿ ಮೀಸಲಾತಿಯಲ್ಲಿ ವಂಚನೆಯಾಗಿದೆ. ದಾವಣಗೆರೆ ಬಹಳ ಹಿಂದಿನಿಂದಲೂ ದಲಿತ ಹೋರಾಟದ ಜಿಲ್ಲೆ. ದೇಹಕ್ಕೆ ಎರಡೂ ಕೈಗಳಂತೆ ಮಾದಿಗ ಮತ್ತು ಛಲವಾದಿ ಸಮುದಾಯಗಳು ಸೋದರ ಸಮುದಾಯಗಳು. ಎರಡೂ ಸಮುದಾಯಗಳು ಒಟ್ಟಿಗೆ ಒಳಮೀಸಲಾತಿ ಜಾರಿಗೆ ಒತ್ತಾಯಿಸುತ್ತಿದ್ದೇವೆ. ಹಾಗಾಗಿ ಸರ್ಕಾರ ತಕ್ಷಣವೇ ಒಳಮೀಸಲಾತಿ ಜಾರಿಗೊಳಿಸಬೇಕು ಮತ್ತು ಒಳಮೀಸಲಾತಿ ಜಾರಿಯಾಗುವವರೆಗೂ ನೇಮಕಾತಿ ಪ್ರಕ್ರಿಯೆ ತಡೆಹಿಡಿಯಬೇಕು” ಎಂದು ಒತ್ತಾಯಿಸಿದರು.
ನಿವೃತ್ತ ಪೊಲೀಸ್ ಅಧಿಕಾರಿ ಪುರುಷೋತ್ತಮ ಮಾತನಾಡಿ, “ಎಸ್ ಎಂ ಕೃಷ್ಣ ಸರ್ಕಾರ ಸದಾಶಿವ ಆಯೋಗ ರಚಿಸಿ ವರದಿ ನೀಡಲು ತಿಳಿಸಿತು. ಆಯೋಗದ ವರದಿಗೆ ಬಿಎಸ್ವೈ ಚಾಲನೆ ನೀಡಿದರು. ಸದಾಶಿವ ಆಯೋಗದ ವಿಸ್ತೃತ ವರದಿ ಇದೆ. 2008ರಲ್ಲಿ ಚಿತ್ರದುರ್ಗದ ಮಾದಾರ ಪೀಠದಲ್ಲಿ ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯ, ಯಡಿಯೂರಪ್ಪ ಎಲ್ಲರೂ ಭಾಗವಹಿಸಿದ ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯನವರು ʼಮೀಸಲಾತಿ ಭಿಕ್ಷೆಯಲ್ಲ, ಅದು ನಿಮ್ಮ ಹಕ್ಕುʼ ಎಂದು ಹೇಳಿಕೆ ನೀಡಿದ್ದರು” ಎಂದರು.
“ಅಧಿಕಾರಕ್ಕೆ ಬಂದ ನಂತರ ಸಿಎಂ ಸಿದ್ದರಾಮಯ್ಯನವರ ಮೇಲೆ ವಿಶ್ವಾಸವಿತ್ತು. ಅವರು ಅಹಿಂದ ಚಳವಳಿಯ ನೇತೃತ್ವ ವಹಿಸಿದ್ದರು. ಹಾಗಾಗಿ ಇವರು ಸಾಮಾಜಿಕ ನ್ಯಾಯವನ್ನು ಒಳಮೀಸಲಾತಿಯ ಪರವಾಗಿ ನಿರ್ಣಯ ಕೈಗೊಳ್ಳುತ್ತಾರೆಂಬ ವಿಶ್ವಾಸವಿತ್ತು. ಆದರೆ ಒಳಮೀಸಲಾತಿ ಜಾರಿಗೆ ಇದುವರೆಗೂ ಖಚಿತ ನಿಲುವು ತೆಗೆದುಕೊಳ್ಳದಿರುವುದು ಸಮುದಾಯಗಳಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ” ಎಂದರು.
ದಲಿತ ಸಂಘಟನೆಗಳ ಒಕ್ಕೂಟದ ಸಂಚಾಲಕ ಮಲ್ಲೇಶ್ ಮಾತನಾಡಿ, “ಇದು ಮಾದಿಗ ಛಲವಾದಿ ಸೇರಿದಂತೆ ಎಲ್ಲರ ಒಕ್ಕೊರಲ ಹೋರಾಟ. ಸುಪ್ರೀಂ ಕೋರ್ಟ್ ತೀರ್ಪು ಜಾರಿಯಾದ ನಂತರ ಸಿಎಂ ಸಿದ್ದರಾಮಯ್ಯ ಸ್ವಾಗತಿಸಿದರು. ನಂತರ ಅದಕ್ಕೆ ಸಂಬಂಧಿಸಿದಂತೆ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ. ಇದು ಬೇರೆ ಕಾರಣಕ್ಕೆ ಮುಂದೆ ಹೋಗಬಾರದು. ಒಳಮೀಸಲಾತಿ ಜಾರಿಯ ವಿಳಂಬಕ್ಕೆ ಕಾರಣ ಗೊತ್ತಿಲ್ಲ. ನಮಗೆ ಸಾಂವಿಧಾನಿಕ ಹಕ್ಕುಗಳನ್ನು ಒದಗಿಸಿಕೊಡಬೇಕು. ಚುನಾವಣೆ ಕಾರಣಕ್ಕಾದರೂ ಶೀಘ್ರ ನಿರ್ಧಾರ ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಧಾರವಾಡ | ಇಪಿಎಸ್ ನಿವೃತ್ತರ ಪಿಂಚಣಿ ಹೆಚ್ಚಿಳಕ್ಕೆ ಒತ್ತಾಯಿಸಿ ಪ್ರತಿಭಟನೆ
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಹಾಲೇಶ್, ಉದಯಕುಮಾರ್, ಗೋಣೆಪ್ಪ, ಗೋವಿಂದರಾಜ್, ಹೆಗ್ಗೆರೆ ರಂಗಪ್ಪ, ನಾಗಭೂಷಣ್, ಮಂಜುನಾಥ್ ಕುಂದವಾಡ, ಏಕಾಂತಪ್ಪ, ಸಾಗರ್, ಬಿಎಮ್ ನಿರಂಜನ್, ರಾಮಯ್ಯ, ಮಹಾಲಿಂಗಪ್ಪ, ಆಲೂರು ನಿಂಗರಾಜ್, ಎಚ್ ಕೆ ಬಸವರಾಜ, ಶೇಖರಪ್ಪ, ನೀಲಗಿರಿಯಪ್ಪ, ಗೋವಿಂದರಾಜ್, ಅಂಜಿನಪ್ಪ, ಜಯಪ್ರಕಾಶ್, ಓಂಕಾರಪ್ಪ ಹಾಗೂ ಮಾದಿಗ ಮತ್ತು ಚಲವಾದಿ ಸಮಾಜದ ಮುಖಂಡರುಗಳು, ದಲಿತ ಸಂಘಟನೆಯ ಕಾರ್ಯಕರ್ತರುಗಳು ಇದ್ದರು.