ಗ್ರಾಮಗಳ ಸ್ವಚ್ಚತೆಯ ಜವಾಬ್ದಾರಿ ನಿರ್ವಹಿಸಿ ಗ್ರಾಮೀಣ ಜನತೆಯ ನೈರ್ಮಲ್ಯ ಕಾಪಾಡುತ್ತಿರುವ ಸ್ವಚ್ಛವಾಹಿನಿ ನೌಕರರಿಗೆ ಸರ್ಕಾರ ಕೆಲಸ ಒದಗಿಸಿ, ಘನತೆಯ ಬದುಕನ್ನು ಖಾತ್ರಿಪಡಿಸಬೇಕು ಎಂದು ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಎಂ ಬಿ ನಾಡಗೌಡ ಒತ್ತಾಯಿಸಿದರು.
ಹಾವೇರಿ ಪಟ್ಟಣದ ಸರ್ಕಾರಿ ನೌಕರರ ಸಂಘದ ಸಭಾ ಭವನದಲ್ಲಿ ಸಿಐಟಿಯು ಸಂಯೋಜಿತ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತ ಸ್ವಚ್ಛವಾಹಿನಿ ನೌಕರರ ಜಿಲ್ಲಾ ಮಟ್ಟದ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಜಿಲ್ಲಾ ಪಂಚಾಯತ್ ಸಹಾಯಕ ನಿರ್ದೇಶಕ ವಿ ಕೆ ಶಿವಲಿಂಗಪ್ಪ ಅವರಿಗೆ ಮನವಿ ಸಲ್ಲಿಸಿದರು.
“ಕಸ ವಿಲೇವಾರಿ ಮಾಡುವ ಕಾರ್ಮಿಕರಿಗೆ ಕನಿಷ್ಠ ಮೂಲಸೌಕರ್ಯಗಳನ್ನು ಒದಗಿಸದೇ ಶೋಷಣೆಗೆ ಒಳಪಡಿಸುತ್ತಿರುವುದು ಖಂಡನೀಯ. ಕೂಡಲೇ ಸರ್ಕಾರ ತರಬೇತಿ ಪಡೆದ ಎಲ್ಲ ಸ್ವಚ್ಛವಾಹಿನಿ ನೌಕರರಿಗೆ ಗ್ರಾಮ ಪಂಚಾಯತಿಗಳಲ್ಲಿ ಕೆಲಸ ನೀಡಬೇಕು. ಪ್ರತಿ ತಿಂಗಳು ವೇತನ ಪಾವತಿ ಮಾಡಬೇಕು” ಎಂದು ಎಂ ಬಿ ನಾಡಗೌಡ ಆಗ್ರಹಿಸಿದರು.
ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಮಾತನಾಡಿ, “ಸಮಾಜದ ನೈರ್ಮಲ್ಯ ಕಾಪಾಡುವ ಸ್ವಚ್ಛವಾಹಿನಿ ಸಿಬ್ಬಂದಿಗಳ ಜೀವನವೂ ಸಹ ನಮ್ಮ ನಾಗರಿಕ ಸಮಾಜದಲ್ಲಿ ಘನತೆಯಿಂದ ಕೂಡಿರಬೇಕು. ಆದರೆ ಸರ್ಕಾರಗಳು ಕನಿಷ್ಠ ಮೂಲಸೌಲಭ್ಯಗಳನ್ನು ಒದಗಿಸದಿರುವುದು ನಾಚಿಕೆಗೇಡಿನ ಸಂಗತಿ. ಎಲ್ಲ ನೌಕರರು ಸಂಘಟಿತರಾಗಿ ಐಕ್ಯತೆಯಿಂದ ಹೋರಾಡಿ ನಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಮುಂದಾಗಬೇಕು” ಎಂದು ಕರೆ ನೀಡಿದರು.
ಗ್ರಾಮ ಪಂಚಾಯಿತ ನೌಕರರ ಸಂಘದ ಜಿಲ್ಲಾಧ್ಯಕ್ಷ ಅಂದಾನೆಪ್ಪ ಹೆಬಸೂರು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಮಾವೇಶದಲ್ಲಿ ರಾಜ್ಯ ಮುಖಂಡ ಡಿ.ಎಂ ಮರಿಯಪ್ಪ, ಸಂಘಟನೆಯ ಜಿಲ್ಲಾ ಮುಖಂಡ ಸುಭಾಸ್ ಸೊಟ್ಟಪ್ಪನವರ, ಶಿಲ್ಪಾ ಶೇಷಗಿರಿ, ಗೀತಾ ಬಾಗಿಲದ, ರಚನಾ ಎಚ್, ಫಕ್ಕಿರೇಶ ಹಕ್ಕಿಮರೆಣ್ಣನವರ ಸೇರಿದಂತೆ ಇತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಜಿಲ್ಲೆಯ ವಿವಿಧ ತಾಲೂಕುಗಳ ನೂರಾರು ಸ್ವಚ್ಛವಾಹಿನಿ ಸಿಬ್ಬಂದಿಗಳು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.