ಗುಬ್ಬಿ ತಾಲೂಕಿನ ಕಸಬ ಹೋಬಳಿ ತೊರೇಹಳ್ಳಿ ಗ್ರಾಮದ ಬಳಿಯ ಅಣೆಯ ಮೇಲಿನ ರಸ್ತೆ ಮುಳುಗಿ ತುಂಬಿ ಹರಿದ ಮಳೆ ನೀರಿಗೆ ಗೂಡ್ಸ್ ವಾಹನ ಕೊಚ್ಚಿ ಹೋಗಿ ತಕ್ಷಣ ಎಚ್ಚೆತ್ತ ಚಾಲಕ ಹೊರ ಬಂದು ಪಾರಾದ ಘಟನೆ ಸೋಮವಾರ ರಾತ್ರಿ ನಡೆದಿದೆ.
ಮೂಲ ಶಿಂಷಾ ನದಿಯ ಈ ಹರಿವು ಪ್ರತಿ ವರ್ಷ ಮಳೆಗಾಲದಲ್ಲಿ ನಾಲ್ಕು ತಿಂಗಳು ಅತ್ಯಧಿಕ ನೀರು ಹರಿಯುತ್ತದೆ. ತೊರೇಹಳ್ಳಿ ಅಣೆ ತುಂಬಿ ರಸ್ತೆ ಸಂಚಾರವೇ ಸ್ಥಗಿತಗೊಳ್ಳಲಿದೆ. ಚಿಕ್ಕನಾಯಕನಹಳ್ಳಿ ಭಾಗದಿಂದ ಕಾರ್ಯ ನಿಮಿತ್ತ ಬಂದ ಟಾಟಾ ಏಸ್ ಗೂಡ್ಸ್ ವಾಹನ ಮಾಮೂಲಿ ರಸ್ತೆ ಎಂದೇ ನೀರಿಗೆ ಇಳಿದು ರಭಸಕ್ಕೆ ಕೊಚ್ಚಿ ಹೋಗಿದೆ. ಚಾಲಕ ಕೂಡಲೇ ದಡಕ್ಕೆ ಧಾವಿಸಿ ಅಪಾಯದಿಂದ ಪಾರಾಗಿದ್ದಾನೆ. ರಾತ್ರಿ ಮುಳುಗಡೆಯಾದ ವಾಹನ ಬೆಳಿಗ್ಗೆ ಕ್ರೇನ್ ಮೂಲಕ ಮೇಲೆತ್ತುವ ಕೆಲಸ ಮಾಡಲಾಯಿತು.
ನೀರಿನಲ್ಲಿದ್ದ ವಾಹನ ಹುಡುಕಿ ಹೊರ ತೆಗೆಯಲು ಗ್ರಾಮಸ್ಥರ ಸಹಕಾರದಿಂದ ಸತತ ನಾಲ್ಕೈದು ಗಂಟೆ ಕಾಲ ಕಾರ್ಯಾಚರಣೆ ಮಾಡಲಾಯಿತು. ಈ ಹಿಂದೆ ಬೈಕ್ ಗಳು ಕೊಚ್ಚಿ ಹೋದ ಘಟನೆಗಳನ್ನು ಸ್ಮರಿಸಿದ ಸ್ಥಳೀಯರು ಅಣೆ ಪಕ್ಕದ ನಮ್ಮ ತೋಟಗಳಿಗೆ ಹೊಸಹಳ್ಳಿ ಮಾರ್ಗವಾಗಿ ಹತ್ತು ಕಿಮೀ ಬಳಸಿ ಬರುವಂತ ದುಸ್ಥಿತಿ ಎದುರಾಗಿದೆ ಎಂದು ಅಳಲು ತೋಡಿಕೊಂಡರು.
“ಎರಡು ದಶಕದಿಂದ ತೊರೇಹಳ್ಳಿ ಅಣೆಗೆ ಸೇತುವೆ ನಿರ್ಮಿಸಿಕೊಡಲು ಸ್ಥಳೀಯರು ಬೇಡಿಕೆ ಸಲ್ಲಿಸುತ್ತಲೇ ಬಂದಿದ್ದರು. ಅಧಿಕಾರಿಗಳು, ಜನ ಪ್ರತಿನಿಧಿಗಳು ಇತ್ತ ಕಡೆ ಗಮನಹರಿಸಿಲ್ಲ. ಪ್ರತಿ ವರ್ಷ ನಾಲ್ಕು ತಿಂಗಳು ವಾಹನ ಸಂಚಾರ ಸ್ಥಗಿತವಾಗಿ ತೊರೇಹಳ್ಳಿ ಸೇರಿದಂತೆ ಮಡೇನಹಳ್ಳಿ, ಗೋಳೆನಹಳ್ಳಿ, ಹೊನ್ನಶೆಟ್ಟಿಹಳ್ಳಿ ಮಾರ್ಗವಾಗಿ ಕಡಬ ಸೇರುವ ಈ ಮಾರ್ಗ ಸಂಪೂರ್ಣ ಸ್ಥಗಿತವಾಗುತ್ತದೆ. ವಾಹನಗಳು ಕೊಚ್ಚಿ ಹೋಗುವ ಅಣೆ ರಸ್ತೆಗೆ ಕೂಡಲೇ ಸೇತುವೆ ನಿರ್ಮಿಸಿ ಪ್ರಾಣ ಹಾನಿಗಳು ಆಗುವ ಮುನ್ನ ಎಚ್ಚರಿಕೆ ವಹಿಸುವಂತೆ ಹೇರೂರು ಗ್ರಾಪಂ ಮಾಜಿ ಅಧ್ಯಕ್ಷ ಟಿ. ಬಿ. ರಂಗನಾಥ್ ಅಗ್ರಹಿಸಿದ್ದಾರೆ.