ಕೊಡಗು ಜಿಲ್ಲೆಯಲ್ಲಿ ಅಕ್ಟೋಬರ್ 25ರಿಂದ ನವೆಂಬರ್ 03ರವರೆಗೆ ‘ಅನೈರ್ಮಲ್ಯ ಶೌಚಾಲಯ ಹಾಗೂ ಮ್ಯಾನ್ಯುವೆಲ್ ಸ್ಕ್ಯಾವೆಂಜರ್ಗಳ’ ಸಮೀಕ್ಷೆ ನಡೆಯಲಿದ್ದು, ಸರ್ವೋಚ್ಚ ನ್ಯಾಯಾಲಯ ನಿರ್ದೇಶನ ಹಾಗೂ ಸರ್ಕಾರದ ಮಾರ್ಗಸೂಚಿಯಂತೆ ವ್ಯವಸ್ಥಿತವಾಗಿ ಸಮೀಕ್ಷೆ ಕಾರ್ಯ ನಡೆಸುವಂತೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಸಂಬಂಧಪಟ್ಟ ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಿದರು.
ಕೊಡಗು ಜಿಲ್ಲೆಯ ಮಡಿಕೇರಿ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ‘ಅನೈರ್ಮಲ್ಯ ಶೌಚಾಲಯ ಹಾಗೂ ಮ್ಯಾನ್ಯುವೆಲ್ ಸ್ಕ್ಯಾವೆಂಜರ್’ ಸಮೀಕ್ಷೆ ಕುರಿತ ಸಭೆಯಲ್ಲಿ ಮಾತನಾಡಿದರು.
“ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅನೈರ್ಮಲ್ಯ ಶೌಚಾಲಯ ಹಾಗೂ ಮ್ಯಾನ್ಯುವೆಲ್ ಸ್ಕ್ಯಾವೆಂಜರ್ ಸಮೀಕ್ಷೆ ನಡೆಸಿ ಕಾಲಮಿತಿಯಲ್ಲಿ ನಿಖರ ಮಾಹಿತಿ ಒದಗಿಸಬೇಕು” ಎಂದು ಜಿಲ್ಲಾಧಿಕಾರಿ ಸೂಚಿಸಿದರು.
“ನಗರಾಭಿವೃದ್ಧಿ ಕೋಶ ಜತೆಗೆ ಪಂಚಾಯತ್ ರಾಜ್ ಇಲಾಖೆಗಳು ತಮ್ಮ ವ್ಯಾಪ್ತಿಯಲ್ಲಿ ಸರಿಯಾಗಿ ಮಾಹಿತಿ ಸಂಗ್ರಹಿಸಬೇಕು” ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ನಿರ್ದೇಶನ ನೀಡಿದರು.
ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಶೇಖರ್ ಮಾಹಿತಿ ನೀಡಿ, “ಸರ್ವೋಚ್ಚ ನ್ಯಾಯಾಲಯದ ರಿಟ್ ಅರ್ಜಿ ಸಂಖ್ಯೆ 324/2020 ತೀರ್ಪಿನ ಅನ್ವಯ ರಾಜ್ಯದಲ್ಲಿ ಅನೈರ್ಮಲ್ಯ ಶೌಚಾಲಯ ಹಾಗೂ ಮ್ಯಾನ್ಯುವೆಲ್ ಸ್ಕ್ಯಾವೆಂಜರ್ಗಳ ಸಮೀಕ್ಷೆ ಕೈಗೊಂಡು ಕೇಂದ್ರ ಸರ್ಕಾರದ ‘ನಮಸ್ತೆ ಪೋರ್ಟಲ್’ನ ಎಂ ಎಸ್ ಸರ್ವೇ ಆ್ಯಪ್ನಲ್ಲಿ ಅಪ್ಲೋಡ್ ಮಾಡಬೇಕಿದೆ” ಎಂದು ಮಾಹಿತಿ ನೀಡಿದರು.
“ಅನೈರ್ಮಲ್ಯ ಶೌಚಾಲಯ ಹಾಗೂ ಮ್ಯಾನ್ಯುವೆಲ್ ಸ್ಕ್ಯಾವೆಂಜರ್ಗಳ ಸಮೀಕ್ಷೆ ಸಂಬಂಧ ಅಕ್ಟೋಬರ್ 25ರಿಂದ ಸಮೀಕ್ಷೆ ಕಾರ್ಯವನ್ನು ಕೈಗೊಳ್ಳಲಾಗುತ್ತದೆ. ಈ ಸಂಬಂಧ ನಗರಾಭಿವೃದ್ಧಿ, ಪೌರಾಡಳಿತ ಹಾಗೂ ಪಂಚಾಯತ್ ರಾಜ್ ಇಲಾಖೆ ವ್ಯಾಪ್ತಿಯ ಅಧಿಕಾರಿಗಳು ಸಹಕರಿಸಬೇಕು” ಎಂದು ಕೋರಿದರು.
“ಸಮೀಕ್ಷೆಗೆ ಸಂಬಂಧಿಸಿದಂತೆ ಅರ್ಜಿಯ ಮಾನ್ಯತೆಯನ್ನು ಪರಿಶೀಲಿಸಿ ವ್ಯಾಲಿಡೇಟರ್ ಲಾಗ್ಇನ್ಗೆ ಕಳುಹಿಸಲು ಕ್ರಮವಹಿಸಬೇಕು. ಹಾಗೆಯೇ ಸಮೀಕ್ಷಾ ಲಾಗಿನ್ನಿಂದ ಬಂದ ಅರ್ಜಿಯನ್ನು ಕೂಲಂಕಷವಾಗಿ ಪರಿಶೀಲಿಸಿ ಅರ್ಜಿಯ ನೈಜತೆ ಬಗ್ಗೆ ಖಾತರಿಪಡಿಸಿಕೊಂಡು ಪರಿಶೀಲಿಸಿ ಜಿಲ್ಲಾ ವ್ಯಾಲಿಡೇಟರ್ ಲಾಗಿನ್ಗೆ ಅರ್ಜಿಯನ್ನು ಕಳುಹಿಸಬೇಕು. ಸಮೀಕ್ಷೆ ಕಾರ್ಯದ ಅರ್ಜಿಯು ತಪ್ಪಾಗಿದ್ದಲ್ಲಿ ತಿರಸ್ಕರಿಸಬೇಕು” ಎಂದು ಹೇಳಿದರು.
ಜಿಲ್ಲಾ ವ್ಯಾಲಿಡೇಟರ್ಗೆ ಬಂದ ಅರ್ಜಿಯ ಮಾನ್ಯತೆ ಪರಿಶೀಲಿಸಿ ಸರಿ ಕಂಡುಬಂದಲ್ಲಿ ರಾಜ್ಯ ವ್ಯಾಲಿಡೇಟರ್ ಲಾಗಿನ್ಗೆ ಅರ್ಜಿಯನ್ನು ಕಳುಹಿಸಲು ಕ್ರಮವಹಿಸಬೇಕಿದೆ. ನಂತರ ಸ್ವೀಕೃತಗೊಂಡ ಅರ್ಜಿಯನ್ನು ಜಿಲ್ಲಾ ಮಟ್ಟದ ಮ್ಯಾನ್ಯುವೆಲ್ ಸ್ಕ್ಯಾವೆಂಜರ್ ಸಮೀಕ್ಷೆ ಸಮಿತಿ ಸಭೆಯಲ್ಲಿ ಅನುಮೋದಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲು ಕ್ರಮವಹಿಸಬೇಕಿದೆ.
“ನಗರ ಪ್ರದೇಶದ ವ್ಯಾಪ್ತಿಯಲ್ಲಿ ಸಮೀಕ್ಷೆಗಾರರಾಗಿ ನಗರ ಸ್ಥಳೀಯ ಸಂಸ್ಥೆಯ ಆರೋಗ್ಯಾಧಿಕಾರಿಗಳು, ಪರಿಶೀಲನಾ ಅಧಿಕಾರಿಗಳಾಗಿ ನಗರ ಸ್ಥಳೀಯ ಸಂಸ್ಥೆಯ ಸಹಾಯಕ ಅಭಿಯಂತರರು, ವ್ಯಾಲಿಡೇಟರ್ಗಳಾಗಿ ಪಟ್ಟಣ ಪಂಚಾಯಿತಿ ಹಾಗೂ ಪುರಸಭೆಯ ಮುಖ್ಯಾಧಿಕಾರಿಗಳು, ಜಿಲ್ಲಾ ವ್ಯಾಲಿಡೇಟರ್ ಆಗಿ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು ಕಾರ್ಯನಿರ್ವಹಿಸಲಿದ್ದಾರೆ” ಎಂದು ಮಾಹಿತಿ ನೀಡಿದರು.
ಈ ಸುದ್ದಿ ಓದಿದ್ದೀರಾ? ಕೊಡಗು | ಹೋಬಳಿ ಘಟಕಗಳು ಕನ್ನಡ ಸಾಹಿತ್ಯ ಪರಿಷತ್ನ ಬೇರುಗಳು: ಕೇಶವ ಕಾಮತ್
“ಗ್ರಾಮೀಣ ಪ್ರದೇಶದಲ್ಲಿ ಸಮೀಕ್ಷೆಗಾರರಾಗಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಪರಿಶೀಲನಾ ಅಧಿಕಾರಿಗಳಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಹಾಯಕ ನಿರ್ದೇಶಕರು, ವ್ಯಾಲಿಡೇಟರ್ ಆಗಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳು, ಜಿಲ್ಲಾ ವ್ಯಾಲಿಡೇಟರ್ ಆಗಿ ಜಿಪಂ ಉಪ ಕಾರ್ಯದರ್ಶಿ ಕಾರ್ಯನಿರ್ವಹಿಸಲಿದ್ದಾರೆ” ಎಂದು ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರು ಮಾಹಿತಿ ನೀಡಿದರು.
ಸಮಿತಿ ಸದಸ್ಯರಾದ ರಂಗಸ್ವಾಮಿ, ಆರ್ಮೂಗಂ, ಓಬಳಿ, ಜಿಪಂ ಉಪ ಕಾರ್ಯದರ್ಶಿ ಧನರಾಜ್, ನಗರಾಭಿವೃದ್ಧಿ ಯೋಜನಾ ಶಾಖೆಯ ಯೋಜನಾ ನಿರ್ದೇಶಕರ ಬಿ ಬಸಪ್ಪ, ಡಿವೈಎಸ್ಪಿ ರವಿ, ತಾಪಂ ಇಒ ಅಪ್ಪಣ್ಣ, ಪರಮೇಶ್ ಕುಮಾರ್, ಜಿಪಂ ಸಹಾಯಕ ನಿರ್ದೇಶಕ ಶ್ರೀನಿವಾಸ್, ಪೌರಾಯುಕ್ತ ಎಚ್ ಆರ್ ರಮೇಶ್, ಪುರಸಭೆ ಮುಖ್ಯಾಧಿಕಾರಿ ಕೃಷ್ಷಪ್ರಸಾದ್, ಪಿ ಕೆ ನಾಚಪ್ಪ, ರೀತು ಸಿಂಗ್ ಇದ್ದರು.