ಹೆಚ್ಚುವರಿ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರು ಹಾಗೂ ಪ್ರೌಢಶಾಲಾ ಶಿಕ್ಷಕರ ಹುದ್ದೆಗಳನ್ನು ಹೆಚ್ಚಿಸಲು ಆಗ್ರಹಿಸಿ ಎಸ್ಎಫ್ಐ ಹಾಗೂ ಅತಿಥಿ ಶಿಕ್ಷಕರ ನೇತೃತ್ವದಲ್ಲಿ ರಾಯಚೂರು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.
ರಾಯಚೂರು ನಗರದ ಬಸವೇಶ್ವರ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಮೆರವಣಿಗೆ ಮೂಲಕ ಆಗಮಿಸಿ, ಸರ್ಕಾರದ ವಿರುದ್ದ ಘೋಷಣೆ ಹಾಕಿದರು. ನಂತರ ಗ್ರೇಡ್ 2 ತಹಶೀಲ್ದಾರ್ ಪರಶುರಾಮ ಅವರಿಗೆ ಹಕ್ಕೊತ್ತಾಯ ಮನವಿ ಪತ್ರವನ್ನು ಸಲ್ಲಿಸಿದರು.
ಕಲ್ಯಾಣ ಕರ್ನಾಟಕದಲ್ಲಿ 14,107 ಶಿಕ್ಷಕರ ಹುದ್ದೆ ಖಾಲಿ ಇವೆ. ಕನಿಷ್ಟ 10,000 ಅಧಿಕವಾಗಿ ಪ್ರಾಥಮಿಕ ಮತ್ತು ಪ್ರೌಢ(ಮಾಧ್ಯಮಿಕ) ಶಿಕ್ಷಕರ ನೇಮಕಾತಿಯನ್ನು ಹೆಚ್ಚಿಸಬೇಕು. ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ 10,000 ಮತ್ತು ಪ್ರೌಢಶಾಲೆ ಶಿಕ್ಷಕರು 3500 ಸೇರಿದಂತೆ ಒಟ್ಟು 14,107ಹುದ್ದೆಗಳು ಖಾಲಿ ಇದ್ದು, ಅಂದರೆ ಡಿ.ಎಡ್ ಪದವೀಧರರಿಗೆ 4428 ಹುದ್ದೆಗಳು, ಪದವೀಧರ ಪ್ರಾಥಮಿಕ ಶಿಕ್ಷಕರ ಹುದ್ದೆಗಳು 78 ಹುದ್ದೆಗಳು ಪ್ರೌಢಶಾಲಾ ಶಿಕ್ಷಕರ 121 ಹುದ್ದೆಗಳ ನೇಮಕ ಅವೈಜ್ಞಾನಿಕವಾಗಿದೆ. ಆದ್ದರಿಂದ ಖಾಲಿ ಇರುವ ಹುದ್ದೆಗಳಿಗೆ ಶೇ.80ರಷ್ಟು ಶಿಕ್ಷಕರ ನೇಮಕ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರು ಹಾಗೂ ಪ್ರೌಢಶಾಲಾ ಶಿಕ್ಷಕರ ಹುದ್ದೆಗಳನ್ನು ಹೆಚ್ಚಿಸಿ ಕಲ್ಯಾಣ ಕರ್ನಾಟಕ ಪ್ರದೇಶವನ್ನು ಶೈಕ್ಷಣಿಕವಾಗಿ ಬಲಗೊಳಿಸಬೇಕು. ಕಳೆದ 2022ರ ನೇಮಕಾತಿಯಲ್ಲಿ ಉಳಿಕೆ ಸ್ಥಾನಗಳು 800-900 ಸೇರಿಸಿ ನೇಮಕಾತಿ ಮಾಡಬೇಕು. ಇದಕ್ಕೆ ಹಣಕಾಸು ಇಲಾಖೆ ಅನುಮತಿ ಬೇಕಾಗಿರುವುದಿಲ್ಲ ಹಾಗೂ 2022-23 ರ ಹಣಕಾಸು ಇಲಾಖೆ 2300 ಹೈಸ್ಕೂಲ್ ಶಿಕ್ಷಕರ ನೇಮಕಾತಿಗೆ ಹಣಕಾಸು ಇಲಾಖೆ ಅನುಮೋದನೆ ನೀಡಿದ್ದು, ಅದನ್ನು ಕೂಡ ನೇಮಕಾತಿ ಮಾಡಬೇಕು ಎಂದು ಮನವಿ ಮಾಡಿದರು. ಪದವಿ ಮತ್ತು ಬಿ.ಎಡ್ ಅಂಕಗಳನ್ನು ಕೈಬಿಟ್ಟು ಸಿಇಟಿ, ಮತ್ತು ಟಿಇಟಿ ಅಂಕಗಳನ್ನು ಮೆರಿಟ್ ಪಟ್ಟಿಗೆ ಪರಿಗಣಿಸಬೇಕೆಂದು ಆಗ್ರಹಿಸಿದರು.
ಇದನ್ನು ಓದಿದ್ದೀರಾ? ಮೂಡಿಗೆರೆ | ಸಮುದಾಯ ಭವನವನ್ನೇ ದಾಸ್ತಾನನ್ನಾಗಿಸಿಕೊಂಡು ದುರ್ಬಳಕೆ ಮಾಡಿಕೊಂಡ ಗುತ್ತಿಗೆದಾರ!
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ರಮೇಶ ವೀರಾಪುರ, ಪವನ್ ಕುಮಾರ್ ಕಮದಾಳ, ಖಾಸೀನಾಥ್,ರಂಗಪ್ಪ ನಾಯಕ , ಚಂದ್ರು ಎಂ , ಮಹಾಲಿಂಗ ದೊಡ್ಡಮನಿ, ಖಾಸಿಂ ಪಟೇಲ್, ಅಮೀರ್ ಬಹದ್ದೂರು, ಈರನಗೌಡ, ದೇವೇಂದ್ರ, ಶರಣು, ರಾಜೇಶ್ವರಿ, ಶಿವಾನಂದ, ಆಂಜನಪ್ಪ, ಸುರೇಶ್, ವೆಂಕಟೇಶ ಈರೆಡ್ಡಿ, ಮಹಾದೇವಿ ಅನೇಕರು ಇದ್ದರು.
