ನಮ್ಮ ರಾಜ್ಯದಲ್ಲಿ ಸರ್ಕಾರಿ ಶಾಲೆಗಳು ಮುಚ್ಚಲೇಬೇಕೆಂದು ಪಣ ತೊಟ್ಟಿರುವ ರಾಜಕೀಯ ನಾಯಕರ ಪಡೆಯೇ ಇದೆ. ಇದು ಮುಂದುವರೆದರೆ ಕನ್ನಡಕ್ಕೆ ಆತಂಕವಿದೆʼ ಎಂದು ಕನ್ನಡ ಸಾರಥಿ ಪ್ರಶಸ್ತಿ ಪುರಸ್ಕೃತ, ಇನ್ಸೈಟ್ಸ್ ಐಎಎಸ್ ತರಬೇತಿ ಸಂಸ್ಥಾಪಕ ವಿನಯಕುಮಾರ್ ಜಿ.ಬಿ ಹೇಳಿದರು.
ಬೀದರ್ ನಗರದ ಡಾ.ಚೆನ್ನಬಸವ ಪಟ್ಟದ್ದೆವರು ಜಿಲ್ಲಾ ರಂಗಮಂದಿರದಲ್ಲಿ ಶ್ರೀ ಕೇತಕಿ ಸಂಗಮೇಶ್ವರ ಶೈಕ್ಷಣಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಂಸ್ಥೆ ಮತ್ತು ಹಣ್ಮು ಪಾಜಿ ಗೆಳೆಯರ ಬಳಗದಿಂದ ಆಯೋಜಿಸಿದ್ದ 50 ವರ್ಷ ಕರ್ನಾಟಕ ಸಂಭ್ರಮ ಹಾಗೂ ಸಾಂಸ್ಕೃತಿಕ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ʼರಾಷ್ಟ್ರಮಟ್ಟದಲ್ಲಿ ಕನ್ನಡಿಗರು ರಾಜಕೀಯ ನಾಯಕರಾಗಿ ಬೆಳೆಯಬೇಕು. ಆದರೆ, ರಾಷ್ಟ್ರರಾಜಕಾರಣದಲ್ಲಿ ರಾಜಕೀಯ ನಾಯಕತ್ವ ನಶಿಸುತ್ತಿದೆ. ಇಂದಿನ ಯುವಕರಲ್ಲಿ ರಾಜಕೀಯ ಹುಮ್ಮಸ್ಸು ಕಾಣುತ್ತಿಲ್ಲ. ಇಂದಿನ ಯುವಸಮೂಹ ಹೆಚ್ಚಿನ ಸಂಖ್ಯೆಯಲ್ಲಿ ರಾಜಕೀಯ ಕ್ಷೇತ್ರ ಪ್ರವೇಶಿಸುವುದು ಅಗತ್ಯವಿದೆ. ಕರ್ನಾಟಕದಿಂದ ಆಯ್ಕೆಯಾದ ಸಂಸದರು ಸಂಸತ್ತಿನಲ್ಲಿ ಕರ್ನಾಟಕದ ಭಾಷೆ, ನೆಲ, ಜಲ ಹಾಗೂ ಶಿಕ್ಷಣದ ವಿಷಯ ಕುರಿತು ಧ್ವನಿಯೆತ್ತುವುದಿಲ್ಲ. ಅಂತವರನ್ನು ನಾವು ಚುನಾವಣೆಯಲ್ಲಿ ಆಯ್ಕೆ ಮಾಡುತ್ತಿದ್ದೇವೆʼ ಎಂದರು.

ʼಸರ್ಕಾರಿ ಶಾಲೆಗಳು ನಶಿಸಿದರೆ ಕನ್ನಡವೂ ನಶಿಸುತ್ತದೆ. ಇಂದು ಎಲ್ಲದರೂ ಕನ್ನಡ ಉಳಿದಿದ್ದರೆ ಅದು ಸರ್ಕಾರಿ ಶಾಲೆಗಳಲ್ಲಿ ಮಾತ್ರ. ಆದರೆ, ಖಾಸಗಿ ಶಾಲೆಗಳು ಬೆಳೆಸುವ ವ್ಯವಸ್ಥಿತ ಸಂಚಿನಿಂದ ರಾಜಕಾರಣಿಗಳು ರಾಜ್ಯದ ಸರ್ಕಾರಿ ಶಾಲೆಗಳು ನಶಿಸು ಹೋಗುವ ರೀತಿಯಲ್ಲಿ ವ್ಯವಸ್ಥೆ ಹುಟ್ಟು ಹಾಕಿದ್ದಾರೆ. ನಮ್ಮ ರಾಜ್ಯದಲ್ಲಿ ಸರ್ಕಾರಿ ಶಾಲೆಗಳು ಮುಚ್ಚಲೇಬೇಕೆಂದು ಪಣ ತೊಟ್ಟಿರುವ ರಾಜಕೀಯ ನಾಯಕರ ಪಡೆಯೇ ಇದೆ. ಇದು ಮುಂದುವರೆದರೆ ಕನ್ನಡಕ್ಕೆ ಆತಂಕವಿದೆʼ ಎಂದು ಕಳವಳ ವ್ಯಕ್ತಪಡಿಸಿದರು.
ʼಕುವೆಂಪು ಅವರ ಕಾನೂರು ಹೆಗ್ಗಡತಿ, ಮಲೆಗಳಲ್ಲಿ ಮದುಮಗಳು, ರಾಮಾಯಣ ದರ್ಶನಂ ಮಹಾಕಾವ್ಯ ಐವತ್ತು ವರ್ಷಗಳ ಹಿಂದೆ ಯಥವತ್ತಾಗಿ ಇಂಗ್ಲಿಷ್ಗೆ ಅನುವಾದ ನಡೆದಿದ್ದರೆ ಕುವೆಂಪು ಅವರಿಗೆ ಪ್ರಪಂಚದ ಶ್ರೇಷ್ಠ ಸಾಹಿತ್ಯ ಕ್ಷೇತ್ರದ ನೊಬೆಲ್ ಪ್ರಶಸ್ತಿ ಸಿಗುತ್ತಿತ್ತು. ಆ ಕೆಲಸ ಮಾಡದೇ, ಅವರನ್ನು ಕೂಡ ಒಂದು ಜಾತಿಗೆ ಸೀಮಿತ ಮಾಡುವ ವ್ಯವಸ್ಥೆ ನಮ್ಮಲ್ಲಿದೆ. ನಮ್ಮ ಕನ್ನಡಿಗರು ರಾಷ್ಟ್ರದ ಅತ್ಯುನ್ನತ ಹುದ್ದೆಗಳು ಹೆಚ್ಚಿನ ಸಂಖ್ಯೆಯಲ್ಲಿ ಅಲಂಕರಿಸಿದರೆ ಕನ್ನಡ ಭಾಷೆ ಇನ್ನಷ್ಟು ಸಮೃದ್ಧಿಯಾಗಿ ಬೆಳೆಯುತ್ತದೆʼ ಎಂದು ಸಲಹೆ ನೀಡಿದರು.
ಶಿಕ್ಷಕ, ಸಾಹಿತಿ ಬಿ.ಎಂ ಅಮರವಾಡಿ ಮಾತನಾಡಿ, ʼಜಾತಿ, ಧರ್ಮದ ಹೆಸರಿನಲ್ಲಿ ಛಿದ್ರವಾಗುತ್ತಿರುವ ನಾವುಗಳು ಕನ್ನಡ ಕಟ್ಟಲು ಸಾಧ್ಯವೇ. ಆಲೂರು ವೆಂಕಟರಾವ್, ಕುವೆಂಪು, ದೇವರಾಜ್ ಅರಸುರವರ ಏಕತೆಯ ಆದರ್ಶಗಳು ಕನ್ನಡಿಗರಿಗೆ ಸದಾ ಆದರ್ಶವಾಗಿವೆʼ ಎಂದರು.
ಜಿಲ್ಲಾ ಕಸಾಪ ಅಧ್ಯಕ್ಷ ಸುರೇಶ ಚೆನ್ನಶೆಟ್ಟಿ, ಕನ್ನಡಪರ ಹೋರಾಟಗಾರರಾದ ವಿರೂಪಾಕ್ಷ ಗಾದಗಿ, ಲಕ್ಷ್ಮಣ ದಸ್ತಿ ಮಾತನಾಡಿದರು. ರವೀಂದ್ರ ಚವ್ಹಾಣ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮಕ್ಕೂ ಮುನ್ನ ಮೈಲೂರ ಕ್ರಾಸ್ ಕಿತ್ತೂರು ರಾಣಿ ವೃತ್ತದಿಂದ ನಗರದ ಪ್ರಮುಖ ಬೀದಿಗಳ ಮೂಲಕ ರಂಗಮಂದಿರದವರೆಗೆ ಅಲಂಕೃತ ರಥದಲ್ಲಿ ಕನ್ನಡ ಭುವನೇಶ್ವರಿ ಭಾವಚಿತ್ರ ಮೆರವಣಿಗೆ ಜರುಗಿತು. ವಿವಿಧ ಶಾಲಾ-ಕಾಲೇಜು ಹಾಗೂ ಮಕ್ಕಳು ಹಾಗೂ ಕಲಾ ತಂಡಗಳು ಭಾಗವಹಿಸಿದ್ದವು.

ಕಾರ್ಯಕ್ರಮದಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಸದಸ್ಯ ಸಂಜೀವಕುಮಾರ ಅತಿವಾಳೆ, ವನ್ಯ ಜೀವಿ ಮಂಡಳಿ ಸದಸ್ಯ ವಿನಯಕುಮಾರ ಮಾಳಗೆ ಅವರಿಗೆ ವಿಶೇಷವಾಗಿ ಸನ್ಮಾನಿಸಲಾಯಿತು. ರಾಜ್ಯೋತ್ಸವ ನಿಮಿತ್ತ ಆಯೋಜಿಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಹಾಗೂ ಸಾಹಿತ್ಯ, ಕಲೆ, ಶಿಕ್ಷಣ, ವೈದ್ಯಕೀಯ, ಪೊಲೀಸ್, ಕಾನೂನು ಸೇರಿದಂತೆ ವಿವಿಧ ಕ್ಷೇತ್ರದ 69 ಗಣ್ಯ ಸಾಧಕರಿಗೆ ರಾಜ್ಯ ಮಟ್ಟದ ಕನ್ನಡ ಸೇವಾ ರತ್ನಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಸುದ್ದಿ ಓದಿದ್ದೀರಾ? ಬೀದರ್ | ಗಾಂಧೀಜಿ ವಿಚಾರಧಾರೆಗಳು ಇಂದಿಗೂ ಪ್ರಸ್ತುತ : ವಿಜಯಕುಮಾರ್ ಬಾವಗಿ
ಕಾರ್ಯಕ್ರಮದಲ್ಲಿ ಪ್ರಮುಖರಾದ ಪೀರಪ್ಪ ಯರನಳ್ಳಿ, ಜೈರಾಜ ಖಂಡ್ರೆ, ಲಿಂಗಾಯತ ಮಹಾಮಠದ ಪ್ರಭುದೇವರು, ಈಶ್ವರಸಿಂಗ್ ಠಾಕೂರ್ ಹಣಮಂತ ಮಲ್ಕಾಪುರೆ, ಅಭಿಷೇಕ ಮಠಪತಿ, ಮಲ್ಲಿಕ್ ಮಡಕೆ, ಪ್ರಶಾಂತ್ ದೊಡ್ಡಿ, ಲಕ್ಷ್ಮಿಬಾಯಿ ಹಂಗರಗಿ, ರಮೇಶ ಚಿಟ್ಟಾ, ಉಮೇಶ, ಶಹಾಪೂರೆ ಸೇರಿದಂತೆ ಇತರರಿದ್ದರು. ನಾಗರಾಜ ಜೋಗಿ ನಿರೂಪಿಸಿದರು. ಅಭಿಷೇಕ ಮಠಪತಿ ಸ್ವಾಗತಿಸಿದರು.