ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆ ಹಂಡೇಲು ಬಳಿ ಖಾಸಗಿ ಬಸ್ ಓವರ್ ಟೇಕ್ ಮಾಡುವ ಭರದಲ್ಲಿ ಭೀಕರ ಅಪಘಾತ ನಡೆದಿದ್ದು, ದ್ವಿಚಕ್ರ ವಾಹನದ ಮೇಲೆ ಹರಿದು ತಾಯಿ-ಮಗಳು ಗಂಭೀರ ಗಾಯಗೊಂಡ ಘಟನೆ ಸೋಮವಾರ ಬೆಳಗ್ಗೆ ನಡೆದಿದೆ.
ಮಾಸ್ಟರ್ ಎಂಬ ಹೆಸರಿನ ಬಸ್ ಮೂಡುಬಿದಿರೆಯಿಂದ ಮಂಗಳೂರಿನತ್ತ ತೆರಳುತ್ತಿತ್ತು. ತೋಡಾರ್ ಮೈಟ್ ಕಾಲೇಜು ಎದುರು ಕಾಲೇಜು ಬಸ್ಸೊಂದನ್ನು ಓವರ್ ಟೇಕ್ ಮಾಡಲು ಬಸ್ ಚಾಲಕ ವಿಪರೀತ ವೇಗದಿಂದ ಬಸ್ಸನ್ನು ಮುನ್ನುಗ್ಗಿಸಿದ್ದು, ಈ ವೇಳೆ ಎದುರಿನಿಂದ ಬರುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ದ್ವಿಚಕ್ರ ವಾಹನದಲ್ಲಿದ್ದ ತಾಯಿ, ಮಗಳಿಗೆ ಗಂಭೀರವಾಗಿ ಗಾಯವಾಗಿದೆ. ಅಪಘಾತದ ತಕ್ಷಣವೇ ಬಸ್ ಚಾಲಕ ಪರಾರಿಯಾಗಿದ್ದಾನೆ. ಘಟನೆಯಲ್ಲಿ ಗಾಯಗೊಂಡವರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ತಿಳಿದುಬಂದಿದೆ.
ಬಸ್ಸಿನ ಅಜಾಗರೂಕತೆ ಚಾಲನೆ ವಿರುದ್ಧ ಸಿಟ್ಟಿಗೆದ್ದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಬಸ್ಸಿನ ಗಾಜು ಪುಡಿ ಪುಡಿ ಮಾಡಿದ್ದಾರೆ. ವಿದ್ಯಾರ್ಥಿಗಳ ಆಕ್ರೋಶಕ್ಕೆ ಚಾಲಕ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.

ಮಂಗಳೂರು -ಮೂಡಬಿದ್ರೆ ರೂಟಿನಲ್ಲಿ ಖಾಸಗಿ ಬಸ್ಸಿನ ಶರವೇಗದ ಚಾಲನೆ, ರಾಷ್ಟ್ರೀಯ ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿ ಇಲ್ಲಿ ದಿನನಿತ್ಯ ಅಪಘಾತಕ್ಕೆ ಕಾರಣವಾಗುತ್ತಿದ್ದು, ಸಂಬಂಧಪಟ್ಟವರು ಇತ್ತ ಗಮನ ಹರಿಸುವಂತೆ ಆಗ್ರಹಿಸುತ್ತಿದ್ದಾರೆ.
ಖಾಸಗಿ ಬಸ್ಗಳ ಮಾಫಿಯಾಕ್ಕೆ ಕಡಿವಾಣ ಯಾವಾಗ?
ಮಂಗಳೂರು-ಮೂಡಬಿದ್ರೆ ರೂಟಿನಲ್ಲಿ ಸಂಚರಿಸುವ ಖಾಸಗಿ ಬಸ್ ಗಳ ಧಾವಂತಕ್ಕೆ ದ್ವಿಚಕ್ರ ಸವಾರರು ಬಲಿಯಾಗುತ್ತಿರುವ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇತ್ತೀಚೆಗೆ ಗುರುಪುರ ಜಂಕ್ಷನ್ ಬಳಿ ಬಸ್ ಡಿಕ್ಕಿಯಾಗಿ ದ್ವಿಚಕ್ರ ಸವಾರ ಸಾವನ್ನಪ್ಪಿದ ಘಟನೆಯನ್ನು ಖಂಡಿಸಿ ಸಾರ್ವಜನಿಕರು ಅಂದು ಗುರುಪುರ-ಕೈಕಂಬ ಜಂಕ್ಷನ್ ನಲ್ಲಿ ವಾಹನಗಳನ್ನು ತಡೆದು ಪ್ರತಿಭಟನೆ ನಡೆಸಿದ್ದರು.
ಖಾಸಗಿ ಬಸ್ಸುಗಳ ಧಾವಂತಕ್ಕೆ ಇತ್ತೀಚೆಗೆ ದ್ವಿಚಕ್ರ ವಾಹನಗಳ ಅಪಘಾತ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೈಕಂಬ ಜಂಕ್ಷನ್ನಲ್ಲಿ ಅಂದು ವಾಹನಗಳನ್ನು ತಡೆದು ಪ್ರತಿಭಟನೆ ನಡೆಸಲಾಗಿತ್ತು. ನೂರಾರು ಮಂದಿ ಸಾರ್ವಜನಿಕರು ಸೇರಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದರು.

ಮೂಡಬಿದ್ರೆ-ಮಂಗಳೂರು ರೂಟಿನಲ್ಲಿ ಕನಿಷ್ಠ ಒಂದೇ ಒಂದು ಸರಕಾರಿ ಬಸ್ ಓಡಾಟ ನಡೆಸುತ್ತಿಲ್ಲ. ಇದರಿಂದಾಗಿ ಈ ರೂಟಿನಲ್ಲಿ ಏನಿದ್ದರೂ ಖಾಸಗಿ ಬಸ್ಸುಗಳದ್ದೇ ದರ್ಬಾರು ನಡೆಯುತ್ತಿದೆ. ಇವರ ಆರ್ಭಟಕ್ಕೆ ಕಡಿವಾಣ ಹಾಕುವವರೇ ಇಲ್ಲವೆಂಬಂತಾಗಿದೆ.
ಈ ರೂಟಿನಲ್ಲಿ ಸಂಚರಿಸುವ ಖಾಸಗಿ ಬಸ್ಸುಗಳ ಆರ್ಭಟಕ್ಕೆ ಎಷ್ಟೋ ಅಮಾಯಕರು ಈಗಾಗಲೇ ತಮ್ಮ ಜೀವವನ್ನು ಕಳಕೊಂಡಿದ್ದಾರೆ. ಮೂಡಬಿದ್ರೆ ಅಳ್ವಾಸ್ ಕಾಲೇಜು ವಿದ್ಯಾರ್ಥಿಯೊಬ್ಬ ಖಾಸಗಿ ಬಸ್ಸೊಂದರ ಅಜಾಗರೂಕತೆಯ ಚಾಲನೆಯಿಂದಾಗಿ ತನ್ನ ಪ್ರಾಣವನ್ನೇ ಬಲಿಕೊಡಬೇಕಾಯಿತು. ಅವತ್ತು ಮೂಡಬಿದ್ರೆ, ಎಡಪದವು ಬಾಗದಲ್ಲಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿ, ಈ ಬಗ್ಗೆ ಮೂಡಬಿದ್ರೆಯ ಸಮಾಜ ಮಂದಿರದಲ್ಲಿ ಸಭೆಯು ನಡೆದು ಕೆಲವು ಅಶ್ವಾಸನೆ, ಭರವಸೆ ನೀಡಿ ವಾರ ಕಳೆಯುವುದರೊಳಗೆ ಖಾಸಗಿ ಬಸ್ಸಿನ ಆರ್ಭಟಕ್ಕೆ ಗುರುಪುರ ಬಳಿ ಯುವಕನೊಬ್ಬ ಪ್ರಾಣ ಕಳಕೊಳ್ಳುವಂತಾಯಿತು.
ಇದನ್ನು ಓದಿದ್ದೀರಾ? ಪರಶುರಾಮ ಥೀಮ್ ಪಾರ್ಕ್ ಅಕ್ರಮ | ತಲೆಮರೆಸಿಕೊಂಡಿದ್ದ ಶಿಲ್ಪಿ ಕೃಷ್ಣ ನಾಯಕ್ ಬಂಧನ
ಆದರೆ ಸಂಬಂಧಪಟ್ಟ ಸಾರಿಗೆ ಇಲಾಖೆಯವರು ಈ ಬಗ್ಗೆ ಯಾವ ಕ್ರಮವನ್ನು ತೆಗೆದುಕೊಳ್ಳದಿರುವುದು ಮಾತ್ರ ವಿಪರ್ಯಾಸ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.

