ಜನವರಿಯೊಳಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಬೀಳಲಿದೆ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಹೇಳಿದ್ದಾರೆ. ಅವರು ಭವಿಷ್ಯ ಹೇಳಿಲ್ಲ, ವಾಸ್ತವ ನುಡಿದ್ದಾರೆ ಎಂದು ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್ ಡಿ ದೇವೇಗೌಡ ಹೇಳಿದರು.
ಚನ್ನಪಟ್ಟಣದಲ್ಲಿ ಎನ್ ಡಿಎ ಮೈತ್ರಿಕೂಟದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರ ಪರ ನಡೆದ ಬೃಹತ್ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿ, “ಡಿಸಿಎಂ ಡಿಕೆಶಿ ಸೊಕ್ಕು ಮುರಿಯಲು ಚನ್ನಪಟ್ಟಣದ ಮಹಾಜನತೆ ನಿಖಿಲ್ ಕುಮಾರಸ್ವಾಮಿ ಅವರನ್ನು ಗೆಲ್ಲಿಸಬೇಕು” ಎಂದು ಮತದಾರರಿಗೆ ಮನವಿ ಮಾಡಿದರು.
“ಹಾಸನದ ಪ್ರಕರಣವನ್ನು ಬಳಸಿಕೊಂಡು ಇಡೀ ದೇವೇಗೌಡರ ಕುಟುಂಬ ಮುಗಿಸಲು ಹುನ್ನಾರ ನಡೆದಿತ್ತು. ಒಂದು ಕಾಲದಲ್ಲಿ ನಾನು ಮತ್ತು ಯಡಿಯೂರಪ್ಪ ಕಿತ್ತಾಡಿದ್ದೆವು. ಆದರೆ, ನಾವಿಬ್ಬರು ಈಗ ಒಂದಾಗಿರುವುದೇ ಈ ಭ್ರಷ್ಟ ಕಾಂಗ್ರೆಸ್ ಸರ್ಕಾರವನ್ನು ಕಿತ್ತೆಸೆಯಲು” ಎಂದು ಅವರು ಯಡಿಯೂರಪ್ಪ ಅವರ ಕೈ ಹಿಡಿದು ಆಕ್ರೋಶ ವ್ಯಕ್ತಪಡಿಸಿದರು.
ಡಿಕೆಶಿ ಮೇಲೆ ವಾಗ್ದಾಳಿ
ಪ್ರಧಾನಿ ನರೇಂದ್ರ ಮೋದಿ ಹಾಗೂ ಕುಮಾರಸ್ವಾಮಿ ಅವರನ್ನು ಅರೆಸ್ಟ್ ಮಾಡಬೇಕು ಎಂದು ಡಿಸಿಎಂ ಡಿಕೆ ಶಿವಕುಮಾರ್ ನೀಡಿರುವ ಹೇಳಿಕೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ, “ಡಿಕೆಶಿ ಅವರಿಗೆ ಅವರ ಮಾತುಗಳೇ ಮುಳುವಾಗಲಿದೆ. ತಮ್ಮ ಮಗನನ್ನು ಚುನಾವಣೆಗೆ ನಿಲ್ಲಿಸಲು ₹50 ಕೋಟಿ ಹಣಕ್ಕಾಗಿ ಮಹಾನುಭಾವನೊಬ್ಬನಿಗೆ ಬೆದರಿಕೆ ಹಾಕಿದ್ದಾರೆ ಎಂಬ ಆರೋಪಿ ಸ್ಥಾನದಲ್ಲಿ ಕುಮಾರಸ್ವಾಮಿ ಇದ್ದಾರೆ. ಆದರೆ, ಇದೇ ಚನ್ನಪಟ್ಟಣದ ಮಹಾಜನತೆಯಿಂದಲೇ ಸಿಎಂ ಆಗಿದ್ದ ಕುಮಾರಸ್ವಾಮಿಗೆ ಅಂತಹ ಅನಿವಾರ್ಯತೆಯಿಲ್ಲ. ಕಾಂಗ್ರೆಸ್ ಎಂದಿಗೂ ನಂಬಿಕೆಗೆ ಅರ್ಹರಲ್ಲ ಎಂದು ಅವರ ಜತೆ ಸಹವಾಸವೇ ಬೇಡ ಎಂದು ಕುಮಾರಸ್ವಾಮಿಗೇ ಹೇಳಿದ್ದೆ. ಆದರೆ, ಎಚ್ಡಿಕೆ ಮೇಲೆ ಒತ್ತಡ ಹಾಕಿ, ಅವರೊಂದಿಗೆ ಕಾಂಗ್ರೆಸ್ ಸರಕಾರ ರಚಿಸಲಾಗಿತ್ತು” ಎಂದು ವಿಷಾದಿಸಿದರು.
ಈ ಸುದ್ದಿ ಓದಿದ್ದೀರಾ? ಸಮಾಜದ ಗೌರವಕ್ಕಾಗಿ ದೇವೇಗೌಡರ ಅಪಮಾನ ಸಹಿಸಿಕೊಂಡಿದ್ದೇವೆ: ಮಾಜಿ ಸಂಸದ ಡಿ ಕೆ ಸುರೇಶ್
“ನಿಖಿಲ್ ಕುಮಾರಸ್ವಾಮಿ ಅವರ ನಮ್ಮ ಅಭ್ಯರ್ಥಿ ಎಂದು 11 ದಿನದ ಹಿಂದೆ ಯಾರು ಹೇಳಿರಲಿಲ್ಲ. ಆದರೆ, 6 ತಿಂಗಳಿನಿಂದ ನಾನೇ ಅಭ್ಯರ್ಥಿ ಎಂದು ಹೇಳಿಕೊಳ್ಳುತ್ತಿದ್ದ ಡಿ.ಕೆ.ಶಿವಕುಮಾರ್ಗೆ ಈಗ ಏನಾಗಿದೆ? ಅವರ ಬದಲು ಮತ್ತೊಬ್ಬರು ಅಖಾಡದಲ್ಲಿದ್ದಾರೆ” ಎಂದು ತಿರುಗೇಟು ಕೊಟ್ಟರು.
“ಸಿದ್ದರಾಮಯ್ಯ ಅವರನ್ನು ಹಣಕಾಸು ಸಚಿವರನ್ನಾಗಿ ಮಾಡಿದ್ದೆ ಈ ದೇವೇಗೌಡ. ಮತ್ತೆ ಅವರೇನು ಮಾ ಎಂದು ಹೇಳಲು ನಾನು ಹೋಗಲ್ಲ. ನಿಖಿಲ್ ನನ್ನ ಮೊಮ್ಮಗ ಎನ್ನುವ ಮಾತು ಬೇಕಿಲ್ಲ. ನಾಮಪತ್ರ ಸಲ್ಲಿಸುವವರೆಗೂ ನಿಖಿಲ್ ಹೆಸರನ್ನು ನಾನು ಉಲ್ಲೇಖಿಸಲೇ ಇಲ್ಲ. ಮಹಾನುಭಾವ ಎನ್ನುವ ಡಿಕೆಶಿಯ ಸೊಕ್ಕು ಮುರಿಯಲು ನಿಖಿಲ್ ಗೆಲುವು ಅನಿವಾರ್ಯ. ಪುಣ್ಯಾತ್ಮರಾದ ಮತದಾರರ ನಿರ್ಣಯವೇ ಎಲ್ಲದಕ್ಕೂ ಉತ್ತರ ನೀಡಲಿದೆ” ಎಂದರು.
“ನಾನು ಮತ್ತೆ ಕ್ಷೇತ್ರಕ್ಕೆ ಬರುತ್ತೇನೆ. ಕ್ರಮ ಸಂಖ್ಯೆ 1ಕ್ಕೆ ಎಲ್ಲರೂ ತಪ್ಪದೇ ಮತದಾನ ಮಾಡಿ. ಇದೇ ತಿಂಗಳ 24ರ ಬೆಳಗ್ಗೆ ನಾನು ಹಾಗೂ ಯಡಿಯೂರಪ್ಪ ಅವರು ಒಟ್ಟಿಗೆ ಬಂದು ಮತದಾರರಿಗೆ ಕೃತಜ್ಞತೆ ಸಲ್ಲಿಸುತ್ತೆವೆ” ಎಂದು ದೇವೇಗೌಡರು ಹೇಳಿದರು.