ಯಾಸೀರ್ ಖಾನ್ ಪಠಾಣ್ ವಿರುದ್ಧ ರೌಡಿಶೀಟರ್ ಪ್ರಕರಣದ ಬಗ್ಗೆ ಸ್ವತಃ ಹಾವೇರಿ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ್ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಪಠಾಣ್ ಮೇಲೆ ರೌಡಿಶೀಟ್ ಇಲ್ಲ ಎಂದು ಸ್ಪಷ್ಟಪಡಿಸಿ, ಈ ಮೂಲಕ ಎಲ್ಲಾ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.
ಹೌದು, ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಖಾನ್ ಪಠಾಣ್ ಮೇಲೆ ರೌಡಿಶೀಟರ್ ಪ್ರಕರಣ ಇದೆ ಎಂದು ಮಾಜಿ ಸಿಎಂ, ಸಂಸದ ಬಸವರಾಜ್ ಬೊಮ್ಮಾಯಿ ಆರೋಪ ಮಾಡಿದ್ದರು. ಆದರೆ ಪಠಾಣ್ ಅವರು ತಮ್ಮ ನಾಮಪತ್ರದಲ್ಲಿ ಯಾವುದೇ ಪ್ರಕರಣಗಳಿಲ್ಲ ಎಂದು ತಿಳಿಸಿದ್ದಾರೆ. ಹೀಗಾಗಿ ಬೊಮ್ಮಾಯಿ ಕಾನೂನು ಹೋರಾಟಕ್ಕೆ ಮುಂದಾಗಿದ್ದು, ಇದರ ಮಧ್ಯೆ ಪಠಾಣ್ ಮೇಲೆ ಯಾವುದೇ ರೌಡಿಸೀಟರ್ ಪ್ರಕರಣ ಇಲ್ಲವೆಂದು ಹಾವೇರಿ ಎಸ್ಪಿ ಸ್ಪಷ್ಟನೆ ನೀಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಯಾಸೀರ್ ಪಠಾಣ್ ಅವರ ಮೇಲೆ ರೌಡಿಶೀಟ್ ಇದೆ ಎಂದು ಕೆಲವು ಮಾಧ್ಯಮಗಳಲ್ಲಿ ಪ್ರಸಾರವಾಗಿದೆ. ಈ ಸಂಬಂಧ ಶಿಗ್ಗಾಂವಿ ಡಿಎಸ್ಪಿ ಹಾಗೂ ಪಿಎಸ್ಐ ಕಚೇರಿಯಿಂದ ದಾಖಲೆಗಳನ್ನು ಪರಿಶೀಲಿಸಿದ್ದು, ಯಾಸೀರ್ ಪಠಾಣ್ ಅವರ ಮೇಲೆ ಯಾವುದೇ ರೀತಿಯ ರೌಡಿಶೀಟ್ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಹಲವು ಕೇಸ್ಗಳು ಇವೆ. ಆದರೆ ಅವರು ಅಫಿಡೆವಿಟ್ನಲ್ಲಿ ತಿಳಿಸಿಲ್ಲ. ಈ ಮೂಲಕ ಚುನಾವಣಾಧಿಕಾರಿಗಳು ಪಕ್ಷಪಾತ ಮಾಡಿದ್ದಾರೆ. ರಾಜ್ಯ ಹಾಗೂ ಕೇಂದ್ರ ಚುನಾವಣೆಗೆ ನಾವು ಅರ್ಜಿ ಸಲ್ಲಿಸುತ್ತೇವೆ. ಜಿಲ್ಲಾಧಿಕಾರಿ ಮೇಲೆ ದೊಡ್ಡ ಜವಾಬ್ದಾರಿ ಇದ್ದು, ಸ್ಟೇಟಸ್ ಏನಿದೆ ಎಂದು ಸ್ಪಷ್ಟಪಡಿಸಲಿ. ಇಲ್ಲದಿದ್ದರೆ ಅಧಿಕಾರಿಗಳು ಕಟಕಟೆಯಲ್ಲಿ ನಿಲ್ಲಬೇಕಾಗುತ್ತೆ ಎಂದು ಬೊಮ್ಮಾಯಿ ಎಚ್ಚರಿಕೆ ನೀಡಿದ್ದರು.
ಈ ವರದಿ ಓದಿದ್ದೀರಾ? ಶಿಗ್ಗಾವಿ ಉಪಚುನಾವಣೆ | ಬಿಜೆಪಿಯವರು ಎಷ್ಟೇ ತಿಪ್ಪರಲಾಗ ಹಾಕಿದರೂ ಪ್ರಯೋಜನವಾಗದು: ಈಶ್ವರ ಖಂಡ್ರೆ
ಕೆಲ ದಿನಗಳ ಹಿಂದೆ ಕಾಂಗ್ರೆಸ್’ನ ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿ ತಮಗೆ ಬೈ ಎಲೆಕ್ಷನ್ ಟಿಕೆಟ್ ಕೈತಪ್ಪಿದ ಬಳಿಕ ಪಠಾಣ್ ಓರ್ವ ರೌಡಿಶೀಟರ್ ಎಂದು ಆರೋಪಿಸಿದ್ದರು. ಇದನ್ನೇ ಇಟ್ಟುಕೊಂಡು ಇದೀಗ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು, ಪಠಾಣ್ ಮೇಲೆ ರೌಡಿ ಶೀಟರ್ ಕೇಸ್ ಇದೆ, ವಿವಿಧ ಪ್ರಕರಣ ಇರೋದನ್ನು ಆಫಿಡಿವೇಟ್ನಲ್ಲಿ ಮುಚ್ಚಿಟ್ಟಿದ್ದಾರೆ ಎಂದು ಗಂಭೀರ ಆರೋಪ ಮಾಡುತ್ತಿದ್ದಾರೆ. ಅಲ್ಲದೇ ಈ ಬಗ್ಗೆ ಕೇಂದ್ರ ಹಾಗೂ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ನೀಡುವುದಾಗಿ ಬೊಮ್ಮಾಯಿ ತಿಳಿಸಿದ್ದರು.