ಮಂಡ್ಯದ ಎಲ್ಲ ಜನಪರ ಸಂಘಟನೆಗಳು ಒಗ್ಗಟ್ಟಿನಿಂದ ಮಾಡುತ್ತಿರುವ ಬೆಟ್ಟಿಂಗ್ ದಂಧೆ ವಿರುದ್ಧ ಪೋಸ್ಟರ್ ಅಭಿಯಾನದ ಉದ್ದೇಶ ಸಮಾಜಕ್ಕೆ ಪೂರಕವಾಗಿದ್ದು, ಸಹಾಯವಾಣಿಗೆ ಬರುವ ದೂರುಗಳನ್ನು ಗಂಭೀರವಾಗಿ ಪರಿಗಣಿಸಿ, ದಂಧೆ ಮಾಡುವವರ ಮೇಲೆ ಪೊಲೀಸ್ ಇಲಾಖೆ ಕ್ರಮ ಜರುಗಿಸಲಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಹೇಳಿದರು.
ಮಂಡ್ಯದ ಜನಪರ ಸಂಘಟನೆಗಳು ರೂಪಿಸಿರುವ ಬೆಟ್ಟಿಂಗ್ ಸಹಾಯವಾಣಿ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದರು.
ಕರ್ನಾಟಕ ಜನಶಕ್ತಿ ಸಂಘಟನೆಯ ರಾಜ್ಯ ಕಾರ್ಯದರ್ಶಿ ಜಿ. ಪೂರ್ಣಿಮಾ ಮಾತನಾಡಿ, “ಪೊಲೀಸ್ ಇಲಾಖೆ ಬೆಟ್ಟಿಂಗ್ ನಿಯಂತ್ರಿಸಲು ಸಹಾಯವಾಣಿ ಆರಂಭಿಸಿದೆ. ಯುವಜನರನ್ನು ದಿಕ್ಕುತಪ್ಪಿಸುತ್ತಿರುವ ಶಕ್ತಿಗಳನ್ನು ಮಟ್ಟಹಾಕುವ ಸಲುವಾಗಿ ಈಗ ಪೋಸ್ಟರ್ ಅಭಿಯಾನ ಆರಂಭಿಸುತ್ತಿದ್ದೇವೆ. ಎಲ್ಲ ಸಮಾನ ಮನಸ್ಕ ಗೆಳೆಯರು ಜತೆಯಾಗಿ ಬೆಟ್ಟಿಂಗ್ ಮುಕ್ತ ಮಂಡ್ಯ ನಿರ್ಮಾಣಕ್ಕೆ ಕೈ ಜೋಡಿಸಿ” ಎಂದು ಕರೆ ನೀಡಿದರು.
ಅಖಿಲ ಭಾರತ ವಕೀಲರ ಸಂಘದ ಬಿ ಟಿ ವಿಶ್ವನಾಥ್ ಮಾತನಾಡಿ, “ಮಂಡ್ಯ ಜಿಲ್ಲಾದ್ಯಂತ ಜನಜಾಗೃತಿ ಮೂಡಿಸಲು ಮೂರು ಸಾವಿರ ಪೋಸ್ಟರ್ ಮತ್ತು ಏಳು ಸಾವಿರ ಕರಪತ್ರಗಳನ್ನು ಹಂಚುತ್ತಿದ್ದೇವೆ. ಸಮಾಜದ ಹಿತ ಬಯಸುವವರು ಈ ಪೋಸ್ಟರನ್ನು ಪ್ರಿಂಟ್ ತೆಗೆದುಕೊಂಡು, ನಿಮ್ಮ ಹೆಸರು, ಸಂಘ ಸಂಸ್ಥೆಯ ಹೆಸರಿನಲ್ಲಿ ಮುದ್ರಿಸಿ ಶಾಲಾ ಕಾಲೇಜುಗಳಲ್ಲಿ ಮತ್ತು ನಿಮ್ಮ ನಿಮ್ಮ ಊರುಗಳಲ್ಲಿ ಮುಕ್ತವಾಗಿ ಹಂಚಬಹುದು” ಎಂದು ಹೇಳಿದರು.
ಕರುನಾಡ ಸೇವಕರು ಸಂಘಟನೆಯ ಎಂ ಬಿ ನಾಗಣ್ಣಗೌಡ ಮಾತನಾಡಿ, “ಜಿಲ್ಲೆಯ ಎಲ್ಲ ಗ್ರಾಮ ಪಂಚಾಯತ್ ಕಚೇರಿಗಳು, ಪೊಲೀಸ್ ಸ್ಟೇಷನ್ಗಳು ಮತ್ತು ಸಾರ್ವಜನಿಕ ಆಸ್ಪತ್ರೆಗಳ ಜತೆಗೆ ಯುವಜನರು ಹೆಚ್ಚಾಗಿ ಒಂದೆಡೆ ಸೇರುವ ಶಾಲಾ ಕಾಲೇಜು, ಕ್ರೀಡಾಂಗಣ, ಬಸ್ ನಿಲ್ದಾಣ, ಟೀ ಶಾಪ್ಗಳಲ್ಲಿ ಈ ಪೋಸ್ಟರ್ ಅಂಟಿಸಿ, ಜಾಗೃತಿ ಮೂಡಿಸುವುದರಿಂದ ಬದಲಾವಣೆ ಸಾಧ್ಯವಿದೆ. ನಮ್ಮೊಂದಿಗೆ ಕೈ ಜೋಡಿಸಿ” ಎಂದು ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ಮಂಡ್ಯ | ಲಂಚ ಪಡೆಯುತ್ತಿದ್ದ ಗ್ರಾಪಂ ಸದಸ್ಯ ಲೋಕಾಯುಕ್ತ ಬಲೆಗೆ
ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಶಿವಳ್ಳಿ ಚಂದ್ರು ಮಾತನಾಡಿ, “ಹಳ್ಳಿಗಳ ರೈತರ ಮಕ್ಕಳ ಆತ್ಮಹತ್ಯೆಗಳು ಬಹುತೇಕ ಬೆಟ್ಟಿಂಗ್, ಇಸ್ಪೀಟ್ ದಂಧೆಗಳಿಂದ ನಡೆಯುತ್ತಿದ್ದು, ಪೊಲೀಸ್ ಇಲಾಖೆ ಆರಂಭಿಸಿರುವ ಸಹಾಯವಾಣಿಗೆ ದೂರು ನೀಡುವ ಕೆಲಸವನ್ನು ರೈತಸಂಘವೂ ಮಾಡಲಿದೆ. ಕ್ರಮ ಜರುಗಿಸುವ ಹೊಣೆಗಾರಿಕೆ ಪೊಲೀಸರದಾಗಿದೆ” ಎಂದು ಹೇಳಿದರು.
ಸಿಐಟಿಯು ಸಂಘಟನೆ ಸಿ ಕುಮಾರಿ, ಕರ್ನಾಟಕ ರಕ್ಷಣಾ ವೇದಿಕೆಯ ಜಯರಾಮ್, ಮಹಿಳಾ ಮುನ್ನಡೆಯ ಶಿಲ್ಪ ಸೇರಿದಂತೆ ಹತ್ತಾರು ಸಂಘಟನೆಗಳ ಮುಖಂಡರು ಇದ್ದರು.