ದೇಶದಲ್ಲಿ ತರಕಾರಿ ಸೇರಿದಂತೆ ಎಲ್ಲವೂ ತುಟ್ಟಿಯಾಗಿರುವಾಗ ಬಡವರಿಗೆ ಅನುಕೂಲವಾಗಲೆಂಬ ಉದ್ದೇಶದಿಂದ ಬಾಗಲಕೋಟೆಯ ಜಿಲ್ಲೆಯ ರಬಕವಿ-ಬನಹಟ್ಟಿಯಲ್ಲಿ ಶಿಕ್ಷಕರೋರ್ವರು ಕೇವಲ 12 ರೂಪಾಯಿಯಲ್ಲಿ ಊಟ ಬಡಿಸುತ್ತಿದ್ದಾರೆ. ಆ ಮೂಲಕ ಸದ್ದಿಲ್ಲದೇ ಸಮಾಜ ಸೇವೆಯೊಂದನ್ನು ಮಾಡುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ.
ರಬಕವಿ-ಬನಹಟ್ಟಿಯ ಚಿಕ್ಕಪಡಸಲಗಿಯ ಶಿವಶರಣ ಹರಳಯ್ಯ ಸ್ಮಾರಕ ಪ್ರೌಢಶಾಲೆಯಲ್ಲಿ ವಿಜ್ಞಾನ ಶಿಕ್ಷಕರಾಗಿರುವ ಬಸವರಾಜ ಜಾಲೋಜಿಯವರೇ ಈ ಕಾರ್ಯದಲ್ಲಿ ತೊಡಗಿರುವವರು. ಕಳೆದ ಮೂರು ವರ್ಷಗಳಿಂದ ಈ ರೀತಿಯ ಸೇವೆಯನ್ನು ಸಲ್ಲಿಸುತ್ತಿದ್ದಾರೆ.
ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆವರೆಗೆ ಬಿಸಿ ಬಿಸಿ ಜುನಕಾ, ಬಿಸಿ ರೊಟ್ಟಿ ನೀಡುವ ಕಾಯಕದಲ್ಲಿ ನಿರತವಾಗಿದ್ದಾರೆ. ಶಿಕ್ಷಕರಾಗಿರುವ ಬಸವರಾಜ ಜಾಲೋಜಿ ಯಾವುದೇ ಅಪೇಕ್ಷೆಯಿಲ್ಲದೆ, ಮತ್ತೊಬ್ಬರ ಸಹಾಯ- ಸಹಕಾರವಿಲ್ಲದೆ ಇಂತಹ ಮಹತ್ವದ ಕಾರ್ಯದಲ್ಲಿ ತೊಡಗಿರುದ್ದೇವೆ ಎಂದು ತಿಳಿಸಿದರು.
12 ರೂಪಾಯಿಗೆ ಟಿ-ಕಾಫಿ ಸಿಗದ ಈ ಕಾಲದಲ್ಲಿ ಅಮ್ಮ ಫೌಂಡೇಶನ್ ಎಂಬ ಸಂಸ್ಥೆಯ ಮೂಲಕ ಬನಹಟ್ಟಿಯ ಮಂಗಳವಾರ ಪೇಟೆಯ ಈಶ್ವರಲಿಂಗ ಮೈದಾನ ಹತ್ತಿರವಿರುವ ಊಟದ ಮನೆಯಲ್ಲಿ ಕೇವಲ 12 ರೂ.ಗಳಲ್ಲಿ ಬಡವರ, ನಿರ್ಗತಿಕರ ಹಸಿವು ನೀಗಿಸುವ ಕೆಲಸ ಮಾಡುತ್ತಿದ್ದಾರೆ.

ಪ್ರಸ್ತುತ ದಿನಂಪ್ರತಿ 120 ರಿಂದ 150 ಜನರು ಆಹಾರ ಸೇವಿಸಲು ಬರುತ್ತಾರೆ. 2 ರೊಟ್ಟಿ, ಜುನುಕದೊಂದಿಗೆ ಉಳ್ಳಾಗಡ್ಡಿ, ಸೌತೆಕಾಯಿ ನೀಡುವ ಇವರು ಈ ಭಾಗದ ಬಡವರಿಗೆ ಭಾಗ್ಯದಾತರಾಗಿದ್ದಾರೆ.
ದಿನಂಪ್ರತಿ ಕೂಲಿ ಕಾರ್ಮಿಕರಿಗೆ, ಚಿಕ್ಕ ವೇತನ ದೊರಕುವ ಸಿಬ್ಬಂದಿಗೆ, ನಿರಾಶ್ರಿತರಿಗೆ ಈ ಊಟದ ಮನೆ ಸಂಜೀವಿನಿಯಾಗಿದೆ. ಇಂದಿನ ದಿನಮಾನದಲ್ಲಿ ಕೇವಲ 12 ರೂ.ಗೆ ದಿನಂಪ್ರತಿ 2 ರೊಟ್ಟಿ ಜತೆಗೆ ಸಾಕಾಗುವಷ್ಟು ಜುನಕಾ ಒದಗಿಸುತ್ತಿರುವುದು ವಿಶೇಷ.
ಈ ದಿನ.ಕಾಮ್ ದೊಂದಿಗೆ ಮಾತನಾಡಿದ ಅಮ್ಮ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಹಾಗೂ ಶಿಕ್ಷಕ ಬಸವರಾಜ ಜಾಲೋಜಿ, “ಬಡವರಿಗೆ ಅನುಕೂಲವಾಗಲೆಂಬ ಉದ್ದೇಶದಿಂದ 3 ವರ್ಷಗಳಿಂದ ಮಾಡಿಕೊಂಡು ಬರುತ್ತಿದ್ದೇನೆ .12ರೂ.ಗೆ ರೊಟ್ಟಿ ಊಟ ನೀಡಲಾಗುತ್ತಿದೆ. ಎಲ್ಲಿಯವರೆಗೂ ಆ ದೇವರು ಶಕ್ತಿ ನೀಡುತ್ತಾನೋ, ಅಲ್ಲಿಯವರೆಗೂ ಈ ಕಾರ್ಯ ಮುಂದುವರಿಸಿಕೊಂಡು ಹೋಗುತ್ತೇನೆ” ಎಂದಿದ್ದಾರೆ.

ಕಳೆದೆರಡು ವರ್ಷಗಳಿಂದ ಇಲ್ಲಿಯೇ ನಿತ್ಯ ಊಟ ಮಾಡುತ್ತೇನೆ. ನಿತ್ಯ 80 ರಿಂದ 100 ರೂ. ಸಂಪಾದಿಸುತ್ತೇನೆ. ಕಡಿಮೆ ದರದಲ್ಲಿ ನಿತ್ಯ ಊಟ ದೊರಕುತ್ತಿರುವುದು ನನ್ನ ಪುಣ್ಯ ಎನ್ನುತ್ತಾರೆ ಬಸಪ್ಪ ಪೂಜಾರಿ.
ವೇತನ ಅಷ್ಟಕ್ಕಷ್ಟೇ ಇದ್ದರೂ ಬಡವರಿಗೆ ಊಟ ಒದಗಿಸುವದರಲ್ಲಿ ತೃಪ್ತಿ ಇದೆ. ನಿರಂತರ ಸೇವೆಯಲ್ಲಿ ನೆಮ್ಮದಿಯಿದೆ ಎನ್ನುತ್ತಾರೆ ಅಡುಗೆ ತಯಾರಕ ವಾಸಂತಿ ಮಠಪತಿ.
ಶಿಕ್ಷಕ ಬಸವರಾಜ ಜಾಲೋಜಿಯವರ ಈ ಸಮಾಜ ಸೇವೆ ಹೀಗೆಯೇ ಮುಂದುವರಿಯಲಿ ಎಂಬುದು ಊಟ ಸವಿಯುತ್ತಿರುವ ಬಡವರ ಹಾರೈಕೆ.

ರಮೇಶ ಎಸ್ ಹೊಸಮನಿ
ವಿಜಯಪುರ ಜಿಲ್ಲಾ ಸಂಯೋಜಕರು