ಆರ್ಥಿಕ ಸಂಕಷ್ಟದಲ್ಲಿರುವ ಜಾನಪದ ಕಲಾವಿದರಿಗೆ ಸರ್ಕಾರ ಮೀಸಲಾತಿ ಕಲ್ಪಿಸಬೇಕು ಎಂದು ಹಿರಿಯ ಸಾಹಿತಿ ಡಾ.ವಾಸುದೇವ ಸೇಡಂ ಹೇಳಿದರು.
ಕಲಬುರಗಿ ನಗರದ ಕನ್ನಡ ಭವನದ ಸುವರ್ಣ ಸಭಾ ಭವನದಲ್ಲಿ ಶ್ರೀದೇವಿ ಸಂಗೀತ ಸಾಂಸ್ಕೃತಿಕ ಛಾಯಾಚಿತ್ರ ಕಲಾ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಜರುಗಿದ ಜಾನಪದ ಸಂಗೀತ ಸಾಂಸ್ಕೃತಿಕ ನೃತೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ʼಜಾನಪದ ತಳಸಮುದಾಯ ಬುಡಕಟ್ಟು ಜನಾಂಗದಲ್ಲಿ ಬಂದಿರುವ ಕಲೆ, ಜಾನಪದ ಇಂದು ಅಳಿವಿನ ಅಂಚಿನಲ್ಲಿದೆ. ಸರ್ಕಾರ ಜಾನಪದ ಕಲಾವಿದರಿಗೆ ಪ್ರೋತ್ಸಾಹಿಸುವುದು ತುಂಬಾ ಅವಶ್ಯಕತೆ ಇದೆ. ಕಲಾವಿದರಿಗೆ ಮಾಶಾಸನ, ಜಾನಪದ ಭವನಗಳು ನಿರ್ಮಾಣವಾಗಬೇಕು. ಕಲಾವಿದರಿಗೆ ಹಾಗೂ ಅವರ ಮಕ್ಕಳಿಗೆ ಮೀಸಲಾತಿ ಕಲ್ಪಿಸಬೇಕು, ಅಂದಾಗ ಮಾತ್ರ ಜಾನಪದ ಉಳಿಯಲು ಸಾಧ್ಯʼ ಎಂದು ಹೇಳಿದರು.
ಹಿರಿಯ ಮುಖಂಡ ನೀಲಕಂಠರಾವ್ ಮೂಲಗೆ ಮಾತನಾಡಿ, ʼಜಾನಪದಕ್ಕೆ ತನ್ನದೆ ಆದ ಶಕ್ತಿಯಿದೆ. ಗ್ರಾಮೀಣ ಭಾಗದ ಅನಕ್ಷರಸ್ಥರೂ ಜಾನಪದ ಸಂಗೀತದ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಜಾನಪದವು ಮುಗ್ಧ ಕಲಾವಿದರಿಂದ ಹುಟ್ಟಿ ಬಂದ ಕಲೆಯಾಗಿದೆʼ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿವಿಧ ಕಲಾವಿದರು ಹಿಂದುಸ್ತಾನಿ ಸಂಗೀತ, ಸುಗಮ ಸಂಗೀತ, ತತ್ವಪದ ಗಾಯನ, ಜಾನಪದ ಗಾಯನ, ವಚನ ಗಾಯನ, ಸಾಂಪ್ರದಾಯಕ ಹಾಡುಗಳು ಸೇರಿದಂತೆ ವಿವಿಧ ಕಲೆಗಳನ್ನು ನಡೆಸಿಕೊಟ್ಟರು.
ಬಸವರಾಜ ತೋಟದ ಪ್ರಾಸ್ತಾವಿಕವಾಗಿ ಮಾತನಾಡಿ, ʼವಿವಿಧ ಕ್ಷೇತ್ರದಲ್ಲಿ ಎಲೆಮರೆ ಕಾಯಿಯಂತೆ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡ ಮಹಾನೀಯರನ್ನು ಗುರುತಿಸಿ ಕಾಯಕ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ. ಸಮಾಜದಲ್ಲಿ ನಿಸ್ವಾರ್ಥದಿಂದ ದುಡಿಯುವ ಸಾಧಕರಿಗೆ ಸಂಘ-ಸಂಸ್ಥೆಗಳು ಗುರುತಿಸಿ ಪ್ರೋತ್ಸಾಹಿಸುವುದು ಬಹಳ ಮುಖ್ಯವಾಗಿದೆʼ ಎಂದರು.
ಸಾಧಕರಿಗೆ ಕಾಯಕ ರತ್ನ ಪ್ರಶಸ್ತಿ ಪ್ರದಾನ :
ವಿಜಯಕುಮಾರ ಜಿಡಗಿ (ಪತ್ರಕರ್ತರು), ಗೋಪಿ ಕುಲಕರ್ಣಿ (ಪತ್ರಕರ್ತರು), ಡಾ.ವೈಜನಾಥ ಮಮ್ಮಾಣಿ (ಪಶು ಆರೋಗ್ಯ ಇಲಾಖೆ), ವೈ.ಡಿ.ಬಡಿಗೇರ (ದೇವದಾಸಿ ಪುನರ್ವಸತಿ ಯೋಜನೆ), ಚಂದ್ರಶಾ ದೊಡ್ಡಮನಿ (ಪೋಲಿಸ್ ಇಲಾಖೆ), ಸದಾನಂದ ಹುಗ್ಗೆಕರ್ (ಸಣ್ಣ ನೀರಾವರಿ ಇಲಾಖೆ), ಮಲ್ಲಿಕಾರ್ಜುನ ಮಾಡಬುಳಕರ್ (ಸಮಾಜ ಸೇವಕರು), ವೀರಸಂಗಪ್ಪಾ ಪಾಟೀಲ್ (ಸಮಾಜ ಸೇವಕರು), ಶರಣಬಸಪ್ಪಾ ಮಾಲಿಪಾಟೀಲ್ (ಧಾರ್ಮಿಕ ಹಾಗೂ ಸಮಾಜ ಸೇವಕರು), ರಾಜಶೇಖರ ನಂದೂರ (ಜೆಸ್ಕಾಂ) ಅವರನ್ನು ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಸುದ್ದಿ ಓದಿದ್ದೀರಾ? ಮೈಸೂರು | 1,700 ಹೆಣ್ಣು ಮಕ್ಕಳ ಶಿಕ್ಷಣಕ್ಕೆ ನೆರವಾಗುವ ಹಾಸ್ಟೆಲ್ ನಿರ್ಮಾಣ: ಸಿಎಂ ಸಿದ್ದರಾಮಯ್ಯ
ಹಿರಿಯ ಪತ್ರಕರ್ತ ಶಿವಲಿಂಗಪ್ಪಾ ದೊಡ್ಡಮನಿ, ಮಹಮ್ಮದ್ ಅಯಾಜ್ಯೊದಿನ ಪಟೇಲ್, ಬಿ.ಎಮ.ರಾವುರ, ಎಂ.ಬಿ.ನಿಂಗಪ್ಪ, ನಾಗೇಂದ್ರ ಸಕ್ಕರಗಿ, ಸಂಸ್ಥೆಯ ಅಧ್ಯಕ್ಷ ಶರಣಪ್ಪ ಸಿಂಪಿ ಉಪಸ್ಥಿತರಿದ್ದರು. ವಿಶ್ವನಾಥ ತೋಟ್ನಳ್ಳಿ ನಿರೂಪಿಸಿದರು, ಮಲ್ಲಿಕಾರ್ಜುನ ದೊಡ್ಡಿ ವಂದಿಸಿದರು.