ಕನ್ನಡ ಸಾಹಿತ್ ಪರಿಷತ್ನ (ಕಸಾಪ) ಅಧ್ಯಕ್ಷ ಮಹೇಶ್ ಜೋಶಿಗೆ ಸಚಿವ ಸಂಪುಟದ ದರ್ಜೆಯ ಸ್ಥಾನಮಾನ ನೀಡಲಾಗಿದೆ. ಆ ಸ್ಥಾನಮಾನವನ್ನು ದುರುಪಯೋಗಪಡಿಸಿಕೊಂಡು, ಜೋಶಿ ಅವರು ಕಸಾಪ ಅಧ್ಯಕ್ಷ ಸ್ಥಾನದ ಘನತೆಗೆ ಕುಂದುಂಟು ಮಾಡುತ್ತಿದ್ದಾರೆ. ಅವರಿಗೆ ನೀಡಲಾಗಿರುವ ಸಚಿವ ದರ್ಜೆಯ ಸ್ಥಾನಮಾನವನ್ನು ಹಿಂಪಡೆಯಬೇಕು ಎಂದು ಭಾರತ ಕಮ್ಯುನಿಸ್ಟ್ ಪಕ್ಷ-ಮಾಕ್ಸ್ವಾದಿ (ಸಿಪಿಐ-ಎಂ) ಆಗ್ರಹಿಸಿದೆ.
ಸಿಪಿಐಎಂನ ಮಂಡ್ಯ ಜಿಲ್ಲಾ ಸಮಿತಿಯು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು, ಒತ್ತಾಯಿಸಿದೆ. “ಕಸಾಪ ಅಧ್ಯಕ್ಷ ಸ್ಥಾನ ಇರುವುದು ಸಾಹಿತ್ಯ ಪರಿಚಾರಿಕೆ ಮಾಡಲೇ ಹೊರತು ಅಧಿಕಾರ ಚಲಾವಣೆಗಲ್ಲ. ಈ ಹಿಂದಿನ ಸರ್ಕಾರ ರಾಜಕೀಯ ಕಾರಣಗಳಿಗಾಗಿ ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ಸಚಿವ ಸಂಪುಟ ದರ್ಜೆಯ ಸ್ಥಾನಮಾನ ದಯಪಾಲಿಸಿದೆ. ಇದನ್ನು ಕೂಡಲೇ ಹಿಂಪಡೆದು ಪರಿಷತ್ತಿನ ಘನತೆಯನ್ನು ಎತ್ತಿ ಹಿಡಿಯಬೇಕು” ಎಂದು ಆಗ್ರಹಿಸಿದೆ.
“ಕಸಾಪ ಅಧ್ಯಕ್ಷ ಮಹೇಶ್ ಜೋಶಿಯವರು ತಮ್ಮ ಸ್ಥಾನದ ಘನತೆಯನ್ನು ಮರೆತು, ಸಚಿವ ದರ್ಜೆಯ ಸ್ಥಾನಮಾನವನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಹಿರಿಯ ಸಾಹಿತಿಗಳು, ಜಿಲ್ಲಾಡಳಿತ ಮತ್ತು ಸ್ಥಳೀಯ ಜನ ಪ್ರತಿನಿಧಿಗಳು ಸೇರಿದಂತೆ ಎಲ್ಲರ ಮೇಲೂ ಅಧಿಕಾರ ಚಲಾಯಿಸುವ, ಅಹಂಕಾರ ಮೆರೆಯುವ ಕೆಲಸ ಮಾಡುತ್ತಿದ್ದಾರೆ. ಆದ್ದರಿಂದ ಸಾಹಿತಿಗಳು ಮತ್ತು ಸಾಹಿತ್ಯ ಪ್ರೇಮಿಗಳು ಮುಜುಗರ ಪಡುವಂತಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದೆ.
“ಪಂಪನಿಂದ ದೇವನೂರು ಮಹಾದೇವ ವರೆಗಿನ ಕನ್ನಡ ಸಾಹಿತ್ಯ ಪರಂಪರೆ ಬಹಳ ದೊಡ್ಡದು ಮತ್ತು ಘನತೆಯದು. ಅದು ಎಲ್ಲರನ್ನೂ ಒಳಗೊಂಡ, ಅಪ್ಪಿಕೊಂಡ ಪರಂಪರೆ. ಆದರೆ ಈಗಿನ ಅಧ್ಯಕ್ಷ ಜೋಶಿಯವರು ತಮ್ಮ ಜಾತಿ ಶ್ರೇಷ್ಠತೆ ಮತ್ತು ಅಧಿಕಾರದ ಅಹಂನಿಂದ ಎಲ್ಲರನ್ನೂ ದೂರ ತಳ್ಳುವ ಕನ್ನಡವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ಆದ್ದರಿಂದ ಅಧ್ಯಕ್ಷರಿಗೆ ನೀಡಿರುವ ಸಚಿವ ಸ್ಥಾನಮಾನ ತೆಗೆದು ಪರಿಷತ್ತಿನ ಅಧ್ಯಕ್ಷರ ನೈಜ ಜವಾಬ್ದಾರಿ ಏನು ಎನ್ನುವುದನ್ನು ಜೋಶಿಯವರು ಅರಿತು ಮುನ್ನಡೆಯುವಂತೆ ಮಾಡಬೇಕು” ಎಂದು ಆಗ್ರಹಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಿಪಿಐಎಂ ಬರೆದಿರುವ ಪತ್ರದಲ್ಲಿ ಟಿ.ಎಲ್ ಕೃಷ್ಣೇಗೌಡ, ಎಂ.ಪುಟ್ಟಮಾದು, ದೇವಿ, ಟಿ.ಯಶವಂತ, ಸಿ.ಕುಮಾರಿ, ಎನ್.ಎಲ್. ಭರತ್ರಾಜ್ ಸಹಿಹಾಕಿದ್ದಾರೆ.
ಜೋಷಿಯ ಸಂಪುಟ ದಜೆ೯ಯ ಸ್ಥಾನಮಾನ ತೆಗೆಯುದರಲ್ಲಿ ತಪ್ಪಿಲ್ಲ