ನಮ್ಮನ್ನು ಗೌರವಿಸುವ ಸಂವಿಧಾನ ಬೇಕು ಎಂದಿರುವ ಪೇಜಾವರ ಸ್ವಾಮೀಜಿ ಬಯಸುವ ಸಂವಿಧಾನ ಮನುಸ್ಮೃತಿ. ಸಂವಿಧಾನವನ್ನು ಅವಹೇಳನ ಮಾಡಿರುವ ಪೇಜಾವರ ಮಠದ ವಿಶ್ವೇಶ್ವರ ತೀರ್ಥ ಸ್ವಾಮೀಜಿ ವಿರುದ್ಧ ಪ್ರಕರಣ ದಾಖಲಿಸಬೇಕಿತ್ತು ಎಂದು ಹಿರಿಯ ಪತ್ರಕರ್ತ ದಿನೇಶ್ ಅಮಿನ್ ಮಟ್ಟು ಹೇಳಿದ್ದಾರೆ.
ಸಂವಿಧಾನ ದಿನದ ಅಂಗವಾಗಿ ಶಿವಮೊಗ್ಗದಲ್ಲಿ ಒಡನಾಟ ಸಂಸ್ಥೆ ಆಯೋಜಿಸಿದ್ದ ‘ಪ್ರಜಾಪ್ರಭುತ್ವ, ಮಾಧ್ಯಮ ಮತ್ತು ನಾವು’ ವಿಶೇಷ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. “ಸಂವಿಧಾನವನ್ನು ನಾವು ಗೌರವಿಸಬೇಕು. ಆದರೆ, ನಮ್ಮನ್ನು ಗೌರವಿಸುವ ಸಂವಿಧಾನ ಬೇಕು ಎಂದಿರುವ ಪೇಜಾವರ ಸ್ವಾಮೀಜಿಯ ಹೇಳಿಕೆ ಸರಿಯಲ್ಲ. ಅವರ ವಿರುದ್ಧ ಪ್ರಕರಣ ದಾಖಲಿಸಬೇಕು” ಎಂದರು.
“ಪೇಜಾವರ ಸ್ವಾಮೀಜಿ ಬಯಸಿರುವ ಸಂವಿಧಾನ ಮನುಸ್ಮೃತಿ. ಡಾ. ಅಂಬೇಡ್ಕರ್ ರಚಿಸಿದ್ದ ಸಂವಿಧಾನವನ್ನು ಮೊದಲ ಬಾರಿಗೆ ಆರ್ಎಸ್ಎಸ್ ವಿರೋಧಿಸಿತ್ತು. ಆರ್ಎಸ್ಎಸ್-ಬಿಜೆಪಿ ಸಂವಿಧಾನ ಬದಲಿಸುವ ಬಗ್ಗೆ ಮಾತನಾಡುತ್ತಿದ್ದವು. ಆದರೆ, ಸಂವಿಧಾನವನ್ನು ಬದಲಿಸಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ, ಈಗ ಅದನ್ನು ದುರ್ಬಲ ಮಾಡುವ ಪ್ರಯತ್ನ ನಡೆದಿದೆ. ಸಂವಿಧಾನದ ರಕ್ಷಕರಾದ ರಾಜ್ಯಪಾಲರು ಈಗ ಏನು ಮಾಡುತ್ತಿದ್ದಾರೆ. ಪೇಜಾವರ ಸ್ವಾಮೀಜಿ ವಿರುದ್ಧ ಅವರು ಪ್ರಕರಣ ದಾಖಲಿಸಬೇಕಿತ್ತು” ಎಂದು ಹೇಳಿದ್ದಾರೆ.
“ಸಂವಿಧಾನ ವಿರೋಧಿ ಹೇಳಿಕೆ ನೀಡುವವರ ವಿರುದ್ಧ ಧ್ವನಿ ಎತ್ತಬೇಕಾದ ಪ್ರಗತಿಪರರು ದಣಿದಿದ್ದಾರೆ ಎಂಬುದು ನನ್ನ ಭಾವನೆ. ನಿಗಮ ಮಂಡಳಿ ಅಧ್ಯಕ್ಷ ಸ್ಥಾನಕ್ಕಾಗಿ ಮುಖ್ಯಮಂತ್ರಿಗಳ ಮನೆ ಎದುರು ಕಾದು ಅಧಿಕಾರ ಪಡೆದ ಪ್ರಗತಿಪರರು, ಈಗ ನಾವು ನಿಷ್ಪಕ್ಷವಾಗಿರಬೇಕೆಂದು ಭಾವಿಸಿದಂತಿದೆ. ಹೀಗಾಗಿ, ಪ್ರತಿರೋಧ ತೋರುತ್ತಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ಒಬ್ಬ ವ್ಯಕ್ತಿಗೆ ಇರುವಷ್ಟೇ ಅಭಿವ್ಯಕ್ತಿ ಸ್ವಾತಂತ್ರ್ಯ ಮಾಧ್ಯಮಗಳಿಗೂ ಇದೆ. ಆದರೆ, ಮಾಧ್ಯಮಗಳು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮೀರಿ ನಡೆಕೊಳ್ಳುತ್ತಿದ್ದು, ನೋಟಿಸ್ಗಳನ್ನು ಪಡೆಯುತ್ತಿವೆ. ಭ್ರಷ್ಟತೆ ಎಂಬುದು ಸಮಾಜದ ಎಲ್ಲ ಹಂತಗಳಲ್ಲಿ ಬೇರು ಬಿಟ್ಟಿದೆ. ಅದಕ್ಕೆ ಮಾಧ್ಯಮವೂ ಹೊರತಾಗಿಲ್ಲ” ಎಂದಿದ್ದಾರೆ.
ಕಾರ್ಯಕ್ರಮದಲ್ಲಿ ಕುವೆಂಪು ವಿವಿ ಕುಲಪತಿ ಪ್ರೊ.ಶರತ್ ಅನಂತಮೂರ್ತಿ, ಕಾಲೇಜಿನ ಪ್ರಾಚಾರ್ಯ ಟಿ.ಅವಿನಾಶ್, ಒಡನಾಟ ಬಳಗದ ಅಕ್ಷತಾ ಹುಂಚದಕಟ್ಟೆ, ರೈತ ನಾಯಕರಾದ ಕೆ.ಟಿ.ಗಂಗಾಧರ, ಎಚ್.ಆರ್.ಬಸವರಾಜಪ್ಪ, ದಲಿತ ಸಂಘರ್ಷ ಸಮಿತಿಯ ಗುರುಮೂರ್ತಿ, ಅಂಕಣಕಾರ ಬಿ.ಚಂದ್ರೇಗೌಡ ಇದ್ದರು.