ಸಾಧಕರು ಸದಾ ಜೀವಂತವಾಗಿರುತ್ತಾರೆ. ಸಮಯ ಸಾಧಕರು ಆ ಕ್ಷಣದಲ್ಲಿ ಮಾತ್ರವೇ ಇದ್ದು ಶಾಶ್ವತವಾಗಿ ಮರೆಯಾಗುತ್ತಾರೆ. ದಸಂಸ ಪ್ರಾರಂಭವಾದ ಕಾಲಘಟ್ಟದಲ್ಲಿ ಕರಪತ್ರ ಹಂಚುವ, ಘೋಷಣೆ ಕೂಗುವ, ಹೋರಾಟ ಮಾಡುವ ಮೂರೂ ಸಂದರ್ಭಗಳಲ್ಲಿ ಕೆ ಎನ್ ಎಸ್ ಮತ್ತು ಬಿ ಜಿ ಎಂ ಜೊತೆ ನಾನಿದ್ದದ್ದು ನನ್ನ ಅದೃಷ್ಟ ಎಂದು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ಹೇಳಿದರು.
ಗೌರಿಬಿದನೂರು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವೈಚಕೂರಹಳ್ಳಿಯ ಅಮಾಸ ಸಾಂಸ್ಕೃತಿಕ ಕೇಂದ್ರ ಮತ್ತು ಇಡಗೂರಿನ ಗೌತಮ ಬುದ್ಧ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಘ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಇತ್ತೀಚೆಗೆ ಭಾರತ ಸಂವಿಧಾನ ದಿನದ ಅಂಗವಾಗಿ ಆಯೋಜಿಸಿದ್ದ ʼಮರೆಯಲಾಗದ ಮಹನೀಯರುʼ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಅವರು ತಮ್ಮ ಜೀವನವನ್ನೇ ಸಂಘಟನೆಗಾಗಿ, ಸಮಾನತೆಗಾಗಿ, ಸಮ ಸಮಾಜಕ್ಕಾಗಿ ಮುಡುಪಾಗಿಟ್ಟವರು. ಪಿನಾಕಿನಿ ನದಿಯ ದಂಡೆಯ ಮೇಲೆ ನೀಲಿ ಮತ್ತು ಕೆಂಪು ಹೂವುಗಳನ್ನು ಅರಳಿಸಿದವರು ಇವರಿಬ್ಬರು. ಕೆ ಎನ್ ಎಸ್ ಪ್ರಶಾಂತ ನೀಲ ಸಾಗರವಾದರೆ, ಬಿ ಜಿ ಎಂ ಭೋರ್ಗರೆವ ನದಿಯಂತಿದ್ದವರು. ಇಬ್ಬರೂ ನಮ್ಮ ಹೋರಾಟಗಳ ಎರಡು ಕಣ್ಣುಗಳು ಎಂದರು.
ಇದನ್ನೂ ಓದಿ : ಚಿಂತಾಮಣಿ | ಅಧಿಕ ಬೆಲೆಗೆ ಔಷಧಿ ಮಾರಾಟ; ಮೆಡಿಕಲ್ ಶಾಪ್ಗೆ ಬೀಗ
ಅಧ್ಯಕ್ಷೀಯ ನುಡಿಗಳನ್ನಾಡಿದ ಕಾಲೇಜಿನ ಪ್ರಾಂಶುಪಾಲರಾದ ಡಾ.ರಮೇಶಚಂದ್ರ ದತ್ತ ಮಾತನಾಡಿ, ಅವಿಭಜಿತ ಕೋಲಾರ ಜಿಲ್ಲೆಯ ಬಹುತೇಕ ಎಲ್ಲಾ ಹೋರಾಟಗಳಲ್ಲೂ ಕೆ ಎನ್ ಎಸ್ ಮತ್ತು ಬಿ ಜಿ ಎಂ ಭಾಗವಹಿಸಿದ್ದಾರೆ. ಗೌರಿಬಿದನೂರಿನಲ್ಲಿ ಹ.ಮಾ.ರಾಮಚಂದ್ರ ಮತ್ತು ಕೊಮ್ಮಣ್ಣರವರು ದಸಂಸ ಕಟ್ಟಲು ಬಂದಾಗ ಅವರಿಗೆ ಮಾರ್ಗದರ್ಶಕರಾಗಿದ್ದರು. ತಿನ್ನಲು ಅನ್ನವಿಲ್ಲದಿದ್ದರೂ ತಾನು ಹುಟ್ಟಿರುವ ಫ್ಯೂಡಲ್ ಜಾತಿಯನ್ನು ಮೆದುಳಿನಲ್ಲಿಟ್ಟುಕೊಂಡು ಮೆರೆಯುವವರ ನಡುವೆ, ಸಮಾನತೆಗಾಗಿ ಸದಾ ತುಡಿದವರು ಇವರಿಬ್ಬರು. ವಿದುರಾಶ್ವತ್ಥದಲ್ಲಿರುವ ವೀರಸೌಧದಂತಹ ಮತ್ತೊಂದು ಸ್ವಾತಂತ್ರ್ಯ ಹೋರಾಟದ ಫೋಟೋ ಗ್ಯಾಲರಿಯನ್ನು ಇಡೀ ಭಾರತದಲ್ಲಿ ಬೇರೆಲ್ಲೂ ನೋಡಲು ಸಾಧ್ಯವಿಲ್ಲ. ಅದು ಸಾಧ್ಯವಾಗಿದ್ದು ಬಿ ಜಿ ಎಂ ರವರ ಆಲೋಚನೆ ಮತ್ತು ಮಾಜಿ ಶಾಸಕರಾದ ಎನ್.ಎಚ್.ಶಿವಶಂಕರರೆಡ್ಡಿಯವರ ಬದ್ಧತೆಯಿಂದ ಎಂದು ಹೊಗಳಿದರು.

ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ.ಎಚ್.ಎಲ್.ಪುಷ್ಪ ಮಾತನಾಡಿ, ಪ್ರೊ. ಬಿ ಜಿ ಎಂ ರವರು ನನಗೆ ನ್ಯಾಷನಲ್ ಕಾಲೇಜಿನಲ್ಲಿ ಗುರುಗಳಾಗಿದ್ದವರು. ಪ್ರೊ ಕೆ ಎನ್ ಎಸ್ ರವರನ್ನು ಅವರ ಹೋರಾಟ ಮತ್ತು ಬರಹಗಳಿಂದ ಹಾಗೂ ಬೇರೆಯವರು ಹೇಳುವುದನ್ನು ಕೇಳಿ ಬಲ್ಲೆ. ಇವರಿಬ್ಬರು ಕೇಳಿದ್ದನ್ನೆಲ್ಲಾ ಕೊಡುವ ಕಾಮಧೇನು ಮತ್ತು ಕಲ್ಪವೃಕ್ಷಗಳಿದ್ದಂತೆ. ಭಾರತ ಸಂವಿಧಾನ ದಿನವಾದ ಇಂದು ಈ ಇಬ್ಬರನ್ನೂ ನೆನಪು ಮಾಡಿಕೊಳ್ಳುತ್ತಿರುವುದು ಶ್ಲಾಘನೀಯ. ಈ ಇಬ್ಬರು ಅನೇಕ ಹೋರಾಟಗಳಲ್ಲಿ ಪಾಲ್ಗೊಂಡವರು. ಸಮಾನತೆಗಾಗಿ ಶ್ರಮಸಿದವರು. ತಮ್ಮ ಶಿಷ್ಯಂದಿರಲ್ಲಿ ಚಿಂತನೆಗಳನ್ನು ಹಚ್ಚಿದವರು. ಅವರ ದಾರಿಯಲ್ಲಿ ನಾವೂ ನಡೆಯಬೇಕಿದೆ ಎಂದು ಹೇಳಿದರು.
ಕರ್ನಾಟಕ ಜನಶಕ್ತಿ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಮಲ್ಲಿಗೆ ಸಿರಿಮನೆ ಮಾತನಾಡಿ, ದಿವಂಗತ ಕೆ ಎನ್ ಎಸ್ ಮತ್ತು ದಿವಂಗತ ಬಿ ಜಿ ಎಂ ಈ ಇಬ್ಬರೂ ಮರೆಯಲಾಗದ ಮಹನೀಯರು. ಜೀವನದಲ್ಲಿ ನಾವೆಲ್ಲರೂ ಯಾವ ನಿಟ್ಟಿನಲ್ಲಿ ಸಾಗಬೇಕು, ಸಮಾಜಮುಖಿ ನಡೆ ಹೇಗಿರಬೇಕು ಎಂದು ತೋರಿಸಿಕೊಟ್ಟವರು. ವೈಚಾರಿಕವಾಗಿ ನಮ್ಮಂತಹ ಅನೇಕರನ್ನು ಬೆಳೆಸಿದವರು ಕೆ ಎನ್ ಎಸ್ ಮತ್ತು ಬಿ ಜಿ ಎಂ. ವಚನ ಚಳುವಳಿಯ ಕಾಲದಿಂದ ಹಿಡಿದು ಇಂದಿನವರೆಗೂ ವೈಚಾರಿಕತೆಯನ್ನು ನಮ್ಮಲ್ಲಿ ಮೂಡಿಸುವ ನೂರಾರು ಮಹನೀಯರು ಕರ್ನಾಟಕದಲ್ಲಿ ಆಗಿ ಹೋಗಿದ್ದಾರೆ ಹಾಗು ನಮ್ಮಗಳ ಮೇಲೆ ಪ್ರಭಾವ ಬೀರಿದ್ದಾರೆ. ಕೆ ಎನ್ ಎಸ್ ಮತ್ತು ಬಿ ಜಿ ಎಂ ನಮ್ಮ ನಡುವಿನ ಜೀವ ತೋರಣಿಗರು ಎಂದರು.
ಕಾರ್ಯಕ್ರಮದಲ್ಲಿ ವಾಣಿಜ್ಯ ಇಲಾಖೆಯ ನಿವೃತ್ತ ಅಪರ ಆಯುಕ್ತರಾದ ಮುದುಗೆರೆಯ ನಾಗರಾಜಪ್ಪ ಮಾತನಾಡಿದರು.
ಕನ್ನಡ ಕೋಗಿಲೆ ಖ್ಯಾತಿಯ ಕುಮಾರಿ ವೈ.ಜಿ.ಉಮಾ ಮತ್ತು ಬೇರು ಬೆವರು ಬಳಗದ ಚಂದ್ರಶೇಖರ್ ಸಂಗೀತ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
ಇದನ್ನೂ ಓದಿ : ಈ ದಿನ ಸಂಪಾದಕೀಯ | ಭಾರತೀಯ ಜನತಾ ಪಕ್ಷಕ್ಕೆ ನೀತಿಯೂ ಇಲ್ಲ, ರೀತಿಯೂ ಇಲ್ಲ
ಗೌತಮ ಬುದ್ಧ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷ ವೈ.ಟಿ.ಪ್ರಸನ್ನ ಕುಮಾರ್, ಅಮಾಸ ಸಾಂಸ್ಕೃತಿಕ ಕೇಂದ್ರದ ಕೆ.ವಿ.ನಾಯಕ, ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಸುಜಾತ ಮತ್ತಿತರರಿದ್ದರು.