ಬೆಲೆ ಏರಿಕೆಯ ಪರಿಣಾಮವಾಗಿ ಮಕ್ಕಳ ಅಪೌಷ್ಠಿಕತೆಯು ಹೆಚ್ಚುತ್ತಿರುವ ಪರಿಸ್ಥಿತಿಯಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆಯ ನಿಧಿ ಹಂಚಿಕೆಯಲ್ಲಿ ಪುಡಿಗಾಸಿನ ಏರಿಕೆಯನ್ನು ಎಐಯುಟಿಯುಸಿ ಸಂಯೋಜಿತ ಕರ್ನಾಟಕ ರಾಜ್ಯ ಸಂಯುಕ್ತ ಅಕ್ಷರ ದಾಸೋಹ ಕಾರ್ಮಿಕರ ಸಂಘ ವಿಜಯಪುರ ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸುತ್ತದೆ.
ವಿಶ್ವದ ಮೂರನೇ ಒಂದು ಭಾಗದಷ್ಟು ಅಪೌಷ್ಠಿಕ ಮಕ್ಕಳು ಭಾರತದಲ್ಲಿ ವಾಸಿಸುತ್ತಾರೆ. ಹಸಿವಿನ ಸೂಚ್ಯಂಕದಲ್ಲಿ 127 ದೇಶಗಳ ಪೈಕಿ ಭಾರತ 105ನೇ ಸ್ಥಾನ ಪಡೆದಿದೆ. ಶೇ.31.7ರಷ್ಟು ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಕುಂಠಿತ ಬೆಳವಣಿಗೆಯಿಂದ ಬಳಲುತ್ತಿದ್ದಾರೆ ಹಾಗೂ 50,000ಕ್ಕೂ ಅಧಿಕ ಮಕ್ಕಳು ತೀವ್ರ ಅಪೌಷ್ಠಿಕತೆಯಿಂದ ನರಳುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಅಪೌಷ್ಠಿಕತೆಯಿಂದ ಬಳಲುವ 11 ಲಕ್ಷಕ್ಕೂ ಅಧಿಕ ಮಕ್ಕಳು ಯಾವುದೇ ಆರೋಗ್ಯ ಕೇಂದ್ರಗಳಲ್ಲಿ ದಾಖಲಾಗದೆ ಬದುಕು ಸವೆಸುತ್ತಿವೆ.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಉದಾರವಾಗಿ ತೆರಿಗೆ ಮನ್ನಾ ನೀಡುತ್ತಿರುವಾಗ, ಸಾವಿರಾರು ಕೋಟಿ ಬ್ಯಾಂಕ್ ಸಾಲ ಸುಸ್ತಿದಾರರಿಗೆ ಮಾಫಿ ಮಾಡುತ್ತಿರುವಾಗ, ಏಕಸ್ವಾಮ್ಯ ಸಂಸ್ಥೆಗಳು ಮತ್ತು ಬಹುರಾಷ್ಟ್ರೀಯ ಸಂಸ್ಥೆಗಳಿಗೆ ಆರ್ಥಿಕ ನೆರವು ನೀಡುತ್ತಿರುವಾಗ ಶಾಲಾ ವಿದ್ಯಾರ್ಥಿಗಳ ಬಿಸಿಯೂಟ ಯೋಜನೆಯಡಿ ಪ್ರತಿ ವಿದ್ಯಾರ್ಥಿಗೆ ಹೆಚ್ಚಿಸಿರುವ ಅನುದಾನ ತೀರ ಕಡಿಮೆಯಾಗಿದೆ. ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ(1ರಿಂದ 5ನೇ ತರಗತಿ) 74 ಪೈಸೆ ಹೆಚ್ಚಳವಾದರೆ, ಮಾಧ್ಯಮಿಕ ವಿದ್ಯಾರ್ಥಿಗಳಿಗೆ ₹1.12 ಹೆಚ್ಚಳವಾಗಿದೆ. ಅಂದರೆ, ಒಟ್ಟು ಪ್ರಾಥಮಿಕ ವಿದ್ಯಾರ್ಥಿಗಳಿಗೆ ₹6.19 ಮತ್ತು ಮಾಧ್ಯಮಿಕ ವಿದ್ಯಾರ್ಥಿಗಳಿಗೆ ₹9.29 ವಿನಿಯೋಗವಾಗುತ್ತದೆ.
ಈ ಸುದ್ದಿ ಓದಿದ್ದೀರಾ? ವಿಜಯಪುರ | 19ನೇ ಅಂತರ್ ಮಹಾವಿದ್ಯಾಲಯಗಳ ಯುವಜನೋತ್ಸವದ ‘ಶಕ್ತಿ ಸಂಭ್ರಮ’
ಬಡತನದಿಂದ ಬಳಲುತ್ತಿರುವ ಶಾಲಾ ಮಕ್ಕಳಿಗೆ ಕನಿಷ್ಟ ಪೌಷ್ಠಿಕಾಂಶ ಒದಗಿಸುವುದಕ್ಕಾಗಿ ಸಮರ್ಪಕ ನಿಧಿಯನ್ನು ನೀಡಬೇಕು ಹಾಗೂ ಪೌಷ್ಠಿಕಾಂಶವುಳ್ಳ ಆಹಾರ ತಯಾರಿಸುವ ಬಿಸಿಯೂಟ ಸಿಬ್ಬಂದಿಗಳ ಕೆಲಸ ಖಾಯಂ ಸ್ವರೂಪದ್ದಾಗಿರುವುದರಿಂದ ಅವರ ಕೆಲಸವನ್ನು ಖಾಯಂಗೊಳಿಸಬೇಕು ಎಂದು ಎಐಯುಟಿಯುಸಿ ಪರವಾಗಿ ಶಶಿಕಲಾ ಮ್ಯಾಗೇರಿ ಪತ್ರಿಕಾ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.