ರಾಮನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ನ ಕನ್ನಡ ಭವನಕ್ಕೆ ನಿವೇಶನ ನೀಡುವಂತೆ ಆಗ್ರಹಿಸಿ ಕಸಾಪ ರಾಮನಗರ ಜಿಲ್ಲಾಧ್ಯಕ್ಷ ಬಿ ಟಿ ನಾಗೇಶ್ ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕೆ ಸತೀಶ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
“ಸ್ವಂತ ಕಟ್ಟಡ ನಿರ್ಮಾಣಕ್ಕೆ ನಿವೇಶನ ನೀಡುವಂತೆ ಹಲವು ದಿನಗಳಿಂದ ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸುತ್ತ ಬಂದಿದ್ದು, ಈವರೆಗೂ ಕಸಾಪಕ್ಕೆ ನಿವೇಶನ ನೀಡಿಲ್ಲ. ಈ ಬಗ್ಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಗಮನಹರಿಸಿ ನಿವೇಶನ ಕೊಡಿಸುವಲ್ಲಿ ಕ್ರಮವಹಿಸಬೇಕು” ಎಂದು ಆಗ್ರಹಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕೆ ಸತೀಶ್ ಮನವಿ ಸ್ವೀಕರಿಸಿ ಮಾತನಾಡಿ, “ನಮ್ಮ ಇಲಾಖೆಯಿಂದ ಕಸಾಪ ಮನವಿ ಮೇರೆಗೆ ವರದಿ ತಯಾರಿಸಿ, ನಿವೇಶನ ನೀಡುವಂತೆ ಜಿಲ್ಲಾಡಳಿತದ ಗಮನಕ್ಕೆ ತರಲಾಗುತ್ತದೆ” ಎಂದರು.
ರಾಮನಗರ ತಹಶೀಲ್ದಾರ್ ತೇಜಶ್ವಿನಿ ಮಾತನಾಡಿ, “ನಿವೇಶನ ನೀಡುವ ಅಧಿಕಾರ ನಮ್ಮ ತಾಲೂಕು ಆಡಳಿತಕ್ಕೆ ಇಲ್ಲ. ನಗರ ವ್ಯಾಪ್ತಿಯಲ್ಲಿ ಸರ್ಕಾರಿ ಜಾಗವಿದ್ದರೆ ಗುರುತಿಸಿ, ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ವರದಿ ನೀಡಿಲಾಗುತ್ತದೆ. ಬಳಿಕ ಅವರಿಂದ ನೀವೇಶನಕ್ಕೆ ಮಂಜೂರು ಪಡೆದುಕೊಳ್ಳಬೇಕು” ಎಂದರು.

ಸಾಹಿತಿ ಡಾ. ಬೈರೇಗೌಡ ಮಾತನಾಡಿ, “ಜಿಲ್ಲೆಯ ಐದು ತಾಲೂಕುಗಳಲ್ಲಿಯೂ ಸ್ವಂತ ಕಟ್ಟಡ ಅಥವಾ ಕಚೇರಿಗಾಗಿ ಒಂದು ಕೊಠಡಿಯೂ ಇಲ್ಲದಿರುವುದು ಶೋಚನೀಯ. ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್ ಅವರ ಕನಸಿನ ಕೂಸು ಕನ್ನಡ ಸಾಹಿತ್ಯ ಪರಿಷತ್ ಆರಂಭವಾಗಿ ಶತಮಾನ ಕಳೆದಿದೆ. ಆರುಕೋಟಿ ಕನ್ನಡಿಗರ ಸಾರ್ವಭೌಮ ಸಂಸ್ಥೆ ನಾಡು ನುಡಿಯ ಏಳಿಗೆಗಾಗಿ ಸದಾ ದುಡಿಯುತ್ತಿರುವ ಕನ್ನಡ ಸಾಹಿತ್ಯ ಪರಿಷತ್ತಿಗೆ ತನ್ನದೇ ಆದ ಸಾಂಸ್ಕೃತಿಕ ಸಮುಚ್ಛಯವಿರಲಿ” ಎಂದರು.
“ರಾಮನಗರ ಜಿಲ್ಲೆಯಾಗಿ ಹದಿನಾರು ವರ್ಷಗಳು ಕಳೆದಿವೆ. ಇಡೀ ಕರ್ನಾಟಕದಲ್ಲಿಯೇ ಹೆಚ್ಚು ಕಲೆಗಳು, ಕಲಾವಿದರು, ಕಲಾ ವೈಶಿಷ್ಟ್ಯತೆ, ವಿಭಿನ್ನ ಸಂಸ್ಕೃತಿಗಳನ್ನು ಮೈಗೂಡಿಸಿಕೊಂಡಿರುವ, ವಿಶಿಷ್ಟ ಬೆಟ್ಟಗುಡ್ಡಗಳಿಂದ ಜಗತ್ತಿನ ಗಮನ ಸೆಳೆದಿರುವ ರಾಮನಗರ ಜಿಲ್ಲಾ ಕೇಂದ್ರದಲ್ಲಿ ವ್ಯವಸ್ಥಿತ ಸಾಂಸ್ಕೃತಿಕ ಸಮುಚ್ಛಯವಿಲ್ಲದಿರುವುದು ಎಲ್ಲರೂ ತಲೆತಗ್ಗಿಸುವ ವಿಚಾರವೇ ಸರಿ. ಸಾಂಸ್ಕೃತಿಕ ಸಮುಚ್ಛಯವಿರಲಿ, ಇಲ್ಲಿಯ ತನಕ ಒಂದು ಬಾಡಿಗೆ ಕೊಠಡಿಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಚೇರಿ ಇರುವುದನ್ನು ತಿಳಿಸಲು ವಿಷಾದವೆನಿಸುತ್ತದೆ” ಎಂದು ಬೇಸರ ವ್ಯಕ್ತಪಡಿಸಿದರು.
ಇದನ್ನು ಓದಿದ್ದೀರಾ? ಮಂಡ್ಯ | ಸಂವಿಧಾನದ ಆಶಯದಂತೆ ಬದುಕಿದರೆ ಸಾರ್ಥಕ ಜೀವನ : ಜಿಲ್ಲಾಧಿಕಾರಿ ಡಾ.ಕುಮಾರ್
ಕಸಾಪ ಜಿಲ್ಲಾಧ್ಯಕ್ಷ ಬಿ ಟಿ ನಾಗೇಶ್ ಮಾತನಾಡಿ, “ಕನ್ನಡಪರ ವಿವಿಧ ಸಂಘ ಸಂಸ್ಥೆಗಳು, ಕನ್ನಡಪರ ಚಟುವಟಿಕೆಗಳಿಗೆ, ಸಾಂಸ್ಕೃತಿಕ ವೈವಿಧ್ಯತೆಗಳನ್ನು ಅಭಿವ್ಯಕ್ತಿಸಲು ಅಗತ್ಯವಾದ ಒಂದು ವೇದಿಕೆ ಬೇಡವೇ? ಕನ್ನಡ ಪರವಾದ ಯಾವುದೇ ಉತ್ಸವಗಳು ನಡೆಯಬೇಕಾದರೂ ಕನ್ನಡ ಸಾಹಿತ್ಯ ಪರಿಷತ್ ಮುಂಚೂಣಿಯಲ್ಲಿ ನಿಲ್ಲುತ್ತದೆ. ಇಂತಹ ಸ್ವಾಯುತ್ತ ಸಂಸ್ಥೆಗೆ ಅಗತ್ಯವಾದ ಒಂದೆರಡು ಎಕರೆ ಭೂಪ್ರದೇಶದಲ್ಲಿ ಸಾಂಸ್ಕೃತಿಕ ಸಮುಚ್ಛಯದ ಅಗತ್ಯವಿದೆಯೆಂದು ಯಾರಿಗೂ ಅನಿಸುತ್ತಿಲ್ಲವೇ? ಈಗಲಾದರೂ ಈ ದಿಸೆಯಲ್ಲಿ ಕಾರ್ಯಮಗ್ನರಾಗಿ ಕನ್ನಡ ಸಾಹಿತ್ಯ ಪರಿಷತ್ಗೆ ಜಿಲ್ಲಾಕೇಂದ್ರ ಮತ್ತು ತಾಲೂಕು ಕೇಂದ್ರಗಳಲ್ಲಿ ಸಾಂಸ್ಕೃತಿಕ ಸಮುಚ್ಛಯಕ್ಕೆ ಅಗತ್ಯ ಭೂಮಿ ಮತ್ತು ಕಟ್ಟಡಗಳನ್ನು ನಿರ್ಮಿಸಿಕೊಡುವ ನಿಟ್ಟಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಜಿಲ್ಲಾಡಳಿತ ಕಾರ್ಯೋನ್ಮುಖರಾಗಬೇಕು” ಎಂದು ಮನವಿ ಮಾಡಿದರು.
ಈ ವೇಳೆ ರಾಮನಗರ ತಾ ಪಂ ಇಒ ಪ್ರದೀಪ್, ತಾಲೂಕು ಅಧ್ಯಕ್ಷ ಬಿ ಟಿ ದಿನೇಶ್, ಡಾ.ಬೈರೇಗೌಡ ಹಾಗೂ ಪದಾಧಿಕಾರಿಗಳು, ಮಾಗಡಿ ತಾಲೂಕಿನ ಇ ಒ ಡಿ ಜೈಪಾಲ್, ಕಸಾಪ ಪದಾಧಿಕಾರಿ ಸಮದ್, ಯುವ ಕರ್ನಾಟಕ ಸಂಘಟನೆಯ ಸಿ ಕುಮಾರ್, ರಾಮಣ್ಣ, ತುಂಬೇನಹಳ್ಳಿ ಪುನೀತ್ ಇದ್ದರು.