ಪೇಜಾವರ ಮಠದ ವಿಶ್ವೇಶರತೀರ್ಥ ಸ್ವಾಮೀಜಿ, ʼತಮ್ಮನ್ನು ಗೌರವಿಸುವ ಸಂವಿಧಾನ ಬೇಕುʼ ಎಂದು ಹೇಳುವ ಮೂಲಕ ಸಂವಿಧಾನ ವಿರೋಧಿ ಹೇಳಿಕೆಯನ್ನು ನೀಡಿರುವುದರಿಂದ ಅವರ ವಿರುದ್ಧ ಕೂಡಲೇ ದೇಶದ್ರೋಹದ ಕೇಸ್ ದಾಖಲಿಸಬೇಕು ಎಂದು ಬಹುಜನ ಸಮಾಜ ಪಕ್ಷದ ರಾಯಚೂರು ಜಿಲ್ಲಾ ಸಂಚಾಲಕ ಎಂ ಆರ್ ಭೇರಿ ಹೇಳಿದರು.
ರಾಯಚೂರು ನಗರದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ, “ಶಿವಮೊಗ್ಗದಲ್ಲಿ ಒಡನಾಟ ಸಮಿತಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಪೇಜಾವರ ಸ್ವಾಮಿ ಮಾತನಾಡಿ ತಮ್ಮನ್ನು ಗೌರವಿಸುವ ಸಂವಿಧಾನ ಬೇಕೆಂದು ಹೇಳಿಕೆ ನೀಡಿದ್ದಾರೆ. ತಮಗೆ ಬೇಕಾಗುವ ಸಂವಿಧಾನವೇ ಬೇಕಿದ್ದರೆ ಪ್ರತ್ಯೇಕ ದೇಶವನ್ನು ಕಟ್ಟಿಕೊಂಡು ರೂಪಿಸಬೇಕೇ ಹೊರತು ಸಂವಿಧಾನ ಅಗೌರವಿಸುವ ಹಾಗೂ ಪ್ರಚೋದಿಸುವ ಮಾತನಾಡುವುದು ಸಮಂಜಸವಲ್ಲ. ಕೂಡಲೇ ಇವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು” ಎಂದರು.
“ಸಂವಿಧಾನದಲ್ಲಿರುವ ಲೋಪವಾದರೂ ಏನೆಂದು ಹೇಳಬೇಕಿತ್ತು. ಶ್ರೇಣಿಕೃತ ಸಮಾಜವನ್ನು ಆರಾಧಿಸುತ್ತಿರುವ ಪೇಜಾವರ ಶ್ರೀ ಸಮಸಮಾಜದ ಸಂವಿಧಾನವನ್ನು ಒಪ್ಪುತ್ತಿಲ್ಲ ಎಂಬದು ಸ್ಪಷ್ಟವಾಗಿ ಕಾಣುತ್ತಿದೆ. ರಾಷ್ಟ್ರ ಧ್ವಜವನ್ನು ಗೌರವಿಸದಿರುವ ಆರ್ಎಸ್ಎಸ್ ಸಂಘಟನೆ ಇಂದಿಗೂ ಸಂವಿಧಾನವನ್ನು ಗೌರವಿಸುತ್ತಿಲ್ಲ. ರಾಷ್ಟ್ರ ಧ್ವಜ, ರಾಷ್ಟ್ರಲಾಂಛನ, ರಾಷ್ಟ್ರಗೀತೆಯನ್ನು ಗೌರವಿಸುವದು ಸಂವಿಧಾನ ಒಪ್ಪಿರುವ ಎಲ್ಲರ ಕರ್ತವ್ಯವಾಗಿದೆ. ಸಂವಿಧಾನ ವಿರೋಧಿ ಹೇಳಿಕೆಯನ್ನು ರಾಷ್ಟ್ರದ್ರೋಹವೆಂದು ಪರಿಗಣಿಸಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಮದ್ದೂರು | ಮಣ್ಣಿನ ಆರೋಗ್ಯ, ರೈತರ ಕಲ್ಯಾಣಕ್ಕೆ ಸರ್ಕಾರ ಗಮನಹರಿಸಲಿ: ಚಂದನ್ ಗೌಡ
ಬಿಎಸ್ಪಿ ರಾಜ್ಯ ಕಾರ್ಯದರ್ಶಿ ಬಸವರಾಜ ಭಂಡಾರಿ ಮಾತನಾಡಿ, “ಸಂವಿಧಾನ ವಿರೋಧಿಸುವುದು ಮನುವಾದಿಗಳ ಮನಸ್ಥಿತಿಯಲ್ಲಿರುವುದರಿಂದ ನಡೆಯುತ್ತಿದೆ. ಸಂವಿಧಾನದ ಮೇಲೆ ನಂಬಿಕೆ ಇಲ್ಲದೇ ಇದ್ದರೆ ನಿತ್ಯಾನಂದ ಸ್ವಾಮಿಯಂತೆ ಪ್ರತ್ಯೇಕ ದೇಶ ಕಟ್ಟಿಕೊಳ್ಳಬಹುದು. ಸಂವಿಧಾನಕ್ಕೆ ಅಗೌರವಿಸುವುದು ದೇಶದ್ರೋಹ ಕೆಲಸವಾಗಿದೆ” ಎಂದರು.
ಈ ಸಂದರ್ಭದಲ್ಲಿ ಬಿಎಸ್ಪಿ ಜಿಲ್ಲಾಧ್ಯಕ್ಷ ಜೈ ಭೀಮ, ರಾಜ್ಯ ಕಾರ್ಯದರ್ಶಿ ಹನುಮಂತಪ್ಪ ಅತ್ತನೂರು, ಬುಡ್ಡಪ್ಪ ಕೆ, ಸೈಯದ್ ಅಬ್ದುಲ್ ಇದ್ದರು.
