ಬಸವಣ್ಣನವರಿಗೆ ಅಪಮಾನವಾಗುವ ಮಾತುಗಳನ್ನಾಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ರಾಜ್ಯದ ಜನರ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಕಾನೂನು ಹೋರಾಟ ಎದುರಿಸಬೇಕಾಗುತ್ತದೆ ಎಂದು ಜಾಗತಿಕ ಲಿಂಗಾಯತ ಮಹಾಸಭಾ ರಾಜ್ಯ ಕಾರ್ಯದರ್ಶಿ ಮಹಾಂತೇಶ್ ಅಂಗಡಿ ಎಚ್ಚರಿಕೆ ನೀಡಿದರು.
ದಾವಣಗೆರೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “12ನೇ ಶತಮಾನದ ಕಾಯಕ ಯೋಗಿ, ನುಡಿದಂತೆ ನಡೆದ ವಿಶ್ವಗುರು ಸಾಂಸ್ಕೃತಿಕ ನಾಯಕ ಬಸವಣ್ಣನವರು ಈ ನೆಲದ ಅಸ್ಮಿತೆ. ಕನ್ನಡ ನೆಲದ ಅಸ್ಮಿತೆ ಹಾಗೂ ಸಕಲ ಜೀವಾತ್ಮರಿಗೂ ಲೇಸನ್ನು ಬಯಸಿ, ಅದನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಸಾಮಾಜಿಕ ಸುಧಾರಣೆ ಮಾಡಿದವರು. ಕಳೆದ ಕೆಲ ದಿನಗಳ ಹಿಂದೆ ಶಾಸಕ ಬಸವನಗೌಡ ಯತ್ನಾಳ್ ಬಸವಣ್ಣನವರನ್ನು ಅಪಮಾನಗೊಳಿಸುವ ನಿಟ್ಟಿನಲ್ಲಿ ನೀಡಿರುವ ಹೇಳಿಕೆಯನ್ನು ನಾವು ಖಂಡಿಸುತ್ತೇವೆ” ಎಂದು ತಿಳಿಸಿದರು.
“ಶಾಸಕ ಯತ್ನಾಳ್ ಬಹಿರಂಗವಾಗಿ ತನ್ನ ಹೇಳಿಕೆಗೆ ಕ್ಷಮೆ ಕೇಳದೇ ಹೋದರೆ ನಾವು ಕಾನೂನು ಹೋರಾಟಕ್ಕೂ ಮುಂದಾಗುತ್ತೇವೆ. ಎಂಬುದನ್ನು ಗಮನಕ್ಕೆ ತರುತ್ತೇವೆ” ಎಂದು ಎಚ್ಚರಿಸಿದರು.
“ಚಂದ್ರಶೇಖರ ಶ್ರೀ, ಪೇಜಾವರ ಶ್ರೀಗಳ ಇತ್ತೀಚಿನ ಹೇಳಿಕೆಗಳೂ ಕೂಡ ಸಂವಿಧಾನ ವಿರೋಧಿಯಾಗಿವೆ. ಅವು ಒಪ್ಪತಕ್ಕದ್ದಲ್ಲ. ಭಾರತದ ಸಂವಿಧಾನ, ಕಾನೂನಿನ ಮುಂದೆ ಯಾವುದೇ ಮಠಾಧೀಶರಾಗಲಿ, ರಾಜಕಾರಣಿಗಳಾಗಲಿ, ಬಂಡವಾಳಶಾಹಿಗಳಾಗಲಿ, ಶ್ರೀಮಂತರಾಗಲಿ ದೊಡ್ಡವರಲ್ಲ. ನಮ್ಮ ಸಂವಿಧಾನ ಎಲ್ಲರಿಗೂ ಒಂದೇ ಹಕ್ಕು ಕಲ್ಪಿಸಿಕೊಟ್ಟಿದೆ. ಹೀಗಾಗಿ ಸಮಾಜದ ಶಾಂತಿಗೆ, ಸಂವಿಧಾನದ ಆಶಯಗಳಿಗೆ ಧಕ್ಕೆ ತರುವ ರೀತಿಯಲ್ಲಿ ಯಾರೇ ನಡೆದುಕೊಂಡರೂ ನಾವು ಅದನ್ನು ಸೈದ್ಧಾಂತಿಕ ನೆಲೆಯಲ್ಲಿ ಖಂಡಿಸುತ್ತೇವೆ. ಸಂವಿಧಾನಕ್ಕೆ ಅವಮಾನವಾಗುವ ನಿಟ್ಟಿನಲ್ಲಿ ಯಾರೇ ಹೇಳಿಕೆ ನೀಡಿದರೂ ದೇಶದ್ರೋಹದ ಅಡಿಯಲ್ಲಿ ಬಂಧಿಸುವ ಕಾಯ್ದೆಯನ್ನು ಜಾರಿಗೆ ತರಬೇಕೆಂದು ಸರ್ಕಾರಕ್ಕೆ ಒತ್ತಾಯಿಸುತ್ತೇವೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ದಕ್ಷಿಣ ಕನ್ನಡ | ಜೀವನದಲ್ಲಿ ಮೌಲ್ಯಗಳನ್ನು ಅಳವಡಿಸಿಕೊಂಡ ವಿದ್ಯಾರ್ಥಿಗಳಿಗೆ ಯಶಸ್ಸು ಸಾಧ್ಯ: ಪ್ರೊ. ಬಿ ಎಸ್ ಶರ್ಫುದ್ದೀನ್
ಸುದ್ದಿಗೋಷ್ಠಿಯಲ್ಲಿ, ಶರಣ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಎಸ್ ಬಿ ರುದ್ರಗೌಡ ಗೋಪನಾಳ್, ಜಾಗೃತ ಭಾರತ ವಿಚಾರ ವೇದಿಕೆ ಸಂಚಾಲಕ ಕೆ ಎ ಓಬಳೇಶ್, ಜಾಗತಿಕ ಲಿಂಗಾಯತ ಮಹಾಸಭಾ ಮಹಿಳಾ ಘಟಕ ಜಿಲ್ಲಾಧ್ಯಕ್ಷೆ ಕುಸುಮ ಲೋಕೇಶ್, ಉಪಾಧ್ಯಕ್ಷೆ ವಿನೋದ ಅಜಗಣ್ಣನವರ, ಹಡಪದ ಅಪ್ಪಣ್ಣ ಸಮಾಜ ಜಿಲ್ಲಾಧ್ಯಕ್ಷ ಶಶಿಧರ್ ಬಸಾಪುರ ಇದ್ದರು.