- ಬೆಂಗಳೂರಿನ ಅರಮನೆ ಮೈದಾನದಲ್ಲಿ ಜೆಡಿಎಸ್ ಆತ್ಮವಿಮರ್ಶೆಯ ಸಭೆ
- ಕೆಲವು ಅಭ್ಯರ್ಥಿಗಳಿಗೆ ನೆರವಾಗುವುದರಲ್ಲಿ ವಿಫಲನಾದೆ: ಎಚ್ಡಿಕೆ
“ಕಾಂಗ್ರೆಸ್ಸಿನ ಕುತಂತ್ರ ರಾಜಕಾರಣದಿಂದ ನಾವು ಈ ಚುನಾವಣೆ ಸೋಲಬೇಕಾಯಿತು. ಮಲ್ಲಿಕಾರ್ಜುನ ಖರ್ಗೆ ಅವರನ್ನು ಮುಂದೆ ಬಿಟ್ಟು ನಮ್ಮ ಮತಗಳನ್ನು ಒಡೆಯಲಾಗಿದೆ. ಬಿಜೆಪಿ ಜೊತೆ ಕೈ ಜೋಡಿಸಲಿದ್ದಾರೆ ಎಂದು ಸುಳ್ಳು ಸುದ್ದಿಯನ್ನು ಕಾಂಗ್ರೆಸ್ ಹರಡಿದ್ದರಿಂದ ನಾವು ಸೋತಿದ್ದೇವೆ” ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಹೇಳಿದರು.
ಗುರುವಾರ ಅರಮನೆ ಮೈದಾನದಲ್ಲಿ ನಡೆದ ಜೆಡಿಎಸ್ ಆತ್ಮವಿಮರ್ಶಾ ಸಭೆಯಲ್ಲಿ ಅವರು ಮಾತನಾಡಿ, “ರಾಜ್ಯದ ಜನತೆ ಪ್ರಥಮ ಬಾರಿಗೆ ಇಂತಹ ಫಲಿತಾಂಶವನ್ನು ಜೆಡಿಎಸ್ಗೆ ಕೊಟ್ಟಿದೆ. ಇದನ್ನು ನಾವು ನಿರೀಕ್ಷೆ ಮಾಡಿರಲಿಲ್ಲ” ಎಂದರು.
“ಈ ಚುನಾವಣಾ ಫಲಿತಾಂಶದಿಂದ ಯಾರೂ ಧೃತಿಗೆಡಬೇಕಿಲ್ಲ. ನಾವು ನಮ್ಮ ಹೋರಾಟದಿಂದ ಹಿಮ್ಮುಖರಾಗಬಾರದು. ಇದು ಶಾಶ್ವತ ಫಲಿತಾಂಶ ಅಲ್ಲ. ನಮ್ಮನ್ನು ನಾವು ವಿಮರ್ಶೆ ಮಾಡಿಕೊಂಡು ಮುಂದಿನ ಹೆಜ್ಜೆಗಳನ್ನು ಇಡೋಣ” ಎಂದು ಧೈರ್ಯ ತುಂಬಿದರು.
“ಅತ್ಯಂತ ಶ್ರಮವಹಿಸಿ ದುಡಿದಿದ್ದೀರಿ. ನಮ್ಮ ನಿರೀಕ್ಷೆ ಸುಳ್ಳಾಗಿದೆ. ಚುನಾವಣೆ ಸಮಯದಲ್ಲಿ ನಾನು ಕೆಲವು ಅಭ್ಯರ್ಥಿಗಳನ್ನು ಕೈಹಿಡಿದು ನಡೆಸುವಲ್ಲಿ ವಿಫಲನಾದೆ. ʼಎʼ ಕೆಟಗರಿ ಅಭ್ಯರ್ಥಿಗಳಿಗಷ್ಟೇ ಒತ್ತು ನೀಡಿದೆ. ದಯವಿಟ್ಟು ನನ್ನನ್ನು ಕ್ಷಮಿಸಿ” ಎಂದು ಕುಮಾರಸ್ವಾಮಿ ಕ್ಷಮೆ ಕೇಳಿದರು.
“ಕೆಲವು ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿಗಳು ಮೈಮರೆತರು. ಇನ್ನೂ ಕೆಲವು ಕ್ಷೇತ್ರಗಳಲ್ಲಿ ನಾನು ಆರ್ಥಿಕವಾಗಿ ಹಿನ್ನಡೆ ಅನುಭವಿಸಿದ್ದೇವೆ. ಇನ್ನಾದರೂ ನಾವು ಎಚ್ಚೆತ್ತುಕೊಳ್ಳೋಣ. ಹಣದಿಂದ ಚುನಾವಣೆ ಎದುರಿಸುವುದು ಬೇಡ. ಜನರ ಮನಸ್ಸನ್ನು ಬದಲಿಸಿ ಚುನಾವಣೆಗೆ ನಿಲ್ಲೋಣ” ಎಂದು ಪ್ರೇರಣೆ ನೀಡಿದರು.
“ಪಕ್ಷದ ಜಿಲ್ಲಾ ಘಟಕಗಳು ಬಹಳ ನಿಷ್ಕ್ರಿಯವಾಗಿವೆ. 224 ಕ್ಷೇತ್ರಗಳಲ್ಲಿ ನಾನೇ ಅಭ್ಯರ್ಥಿಗಳನ್ನು ಹುಡುಕಲು ಸಾಧ್ಯವಿಲ್ಲ. ಇನ್ನಾದರೂ ಎಚ್ಚೆತ್ತುಕೊಂಡು ಪ್ರತಿ ಸಮುದಾಯದಿಂದ ಫೇಸ್ ವ್ಯಾಲ್ಯೂ ಇರುವ ಮುಖಂಡರನ್ನು ಹುಟ್ಟುಹಾಕಿ. ನಿಮ್ಮ ಜೊತೆ ನಾನು ಇರುತ್ತೇನೆ” ಎಂದು ಕುಮಾರಸ್ವಾಮಿ ಭರವಸೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಜೆಡಿಎಸ್ ಯುವ ಘಟಕದ ಅಧ್ಯಕ್ಷ ಸ್ಥಾನಕ್ಕೆ ನಿಖಿಲ್ ಕುಮಾರಸ್ವಾಮಿ ರಾಜೀನಾಮೆ
ಕಾಂಗ್ರೆಸ್ ಮುಳುಗುವ ಹಡಗು
“ಕಾಂಗ್ರೆಸ್ ಈಗ ಬಹುಮತ ಬಂದಿರಬಹುದು. ಸರ್ಕಾರ ರಚನೆಯೊಂದಿಗೆ ಆಂತರಿಕ ಕಲಹ ಆರಂಭವಾಗಿದೆ. ಇದು ಬಹಳ ದಿನ ಹೋಗಲ್ಲ. ಲೋಕಸಭೆ ಚುನಾವಣೆ ಮುಗಿದ ಬಳಿಕ ರಾಜ್ಯದಲ್ಲಿ ಏನು ಬೇಕಾದರೂ ಆಗಬಹುದು. ನಾವು ಈಗಿನಿಂದಲೇ ಸಿದ್ಧರಾಗೋಣ” ಎಂದರು.
“ಪಕ್ಷಕ್ಕೆ ಜೀವ ತುಂಬುವ ಕಡೆ ಯೋಚಿಸಿ. ಕಾಂಗ್ರೆಸ್ನವರು ತಮ್ಮ ಗ್ಯಾರಂಟಿ ಯೋಜನೆಗಳಿಗೆ ನೀತಿ ನಿಯಮ ರೂಪಿಸುತ್ತಿದ್ದಾರೆ. ಜನರಿಗೆ ಈ ಬಗ್ಗೆ ಮನವರಿಕೆ ಮಾಡಿಸಿ. ನಿಮ್ಮ ನಿಮ್ಮ ಕ್ಷೇತ್ರದಲ್ಲಿ ಆಂದೋಲನ ಮಾಡಿ ಜಾಗೃತಿ ಮೂಡಿಸಿ” ಎಂದು ಕರೆ ನೀಡಿದರು.
ದೇವೇಗೌಡರ ಕುಟುಂಬದ ಹಣೆಪಟ್ಟಿ ಅಳಿಸಿಹಾಕಿ
“ಜೆಡಿಎಸ್ ಪಕ್ಷಕ್ಕೆ ದೇವೇಗೌಡರ ಕುಟುಂಬದ ಹಣೆಪಟ್ಟಿಯನ್ನು ಕಾಂಗ್ರೆಸ್ ಕಟ್ಟಿದೆ. ಇದನ್ನು ಅಳಿಸಿಹಾಕಿ ಪಕ್ಷ ಕಟ್ಟೋಣ. ಎಲ್ಲರೂ ಮುಂದೆ ಬನ್ನಿ. ಪಕ್ಷ ಬಲಪಡಿಸೋಣ” ಎಂದರು.
“ಯಾರನ್ನಾದರೂ ಹಾಳು ಮಾಡಬೇಕು ಅಂದ್ರೆ ಅವರನ್ನು ಅಭ್ಯರ್ಥಿ ಮಾಡಿದರೆ ಸಾಕು ಎನ್ನುವ ಅನುಭವ ಈ ಚುನಾವಣೆಯಲ್ಲಿ ನನಗೆ ಆಗಿದೆ. ಮುಂದಿನ ಬಾರಿ ಅಭ್ಯರ್ಥಿಯಾಗಿ ನಿಲ್ಲಿ ಎನ್ನುವ ಧೈರ್ಯ ನನಗಿಲ್ಲ. ಹಣ ಪಡೆದ ಮತದಾರರು ಯಾವ ರೀತಿ ತೀರ್ಮಾನ ಮಾಡುತ್ತಾರೆ ಎನ್ನುವುದು ನಿಮ್ಮ ಎದುರು ಇದೆ. ಹಣ ಖರ್ಚು ಮಾಡಿ ಮುಂದಿನ ಚುನಾವಣೆ ಎದುರಿಸುವುದು ಬೇಡ” ಎಂದರು.
“ಕೆಲವು ಜಿಲ್ಲೆಗಳಲ್ಲಿ ನಮ್ಮ ನಾಯಕರು ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡರು. ಇದು ಪಕ್ಷ ಕಟ್ಟುವ ನಡೆಯಲ್ಲ. ದಯವಿಟ್ಟು ಅಂತಹವರು ಇದ್ದರೆ ಮುಂದಿನ ದಾರಿ ಬಗ್ಗೆ ಯೋಚಿಸಿ. ನಮಗೆ ಪಕ್ಷನಿಷ್ಠರು ಬೇಕು” ಎಂದರು.