ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಇಲಾಖೆ ಅಡಿಯಲ್ಲಿ ಬರುವ ಹಾಸ್ಟೆಲ್ಗಳ ವಿದ್ಯಾರ್ಥಿಗಳ ಮಾಸಿಕ ನಿರ್ವಹಣಾ ಹಣವನ್ನು ಪ್ರತಿ ವಿದ್ಯಾರ್ಥಿನಿಗೆ ₹5,000ಕ್ಕೆ ಹೆಚ್ಚಿಸುವುದು ಸೇರಿದಂತೆ ಹಲವು ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ವಿದ್ಯಾರ್ಥಿ ಸಂಘಟನೆಯಿಂದ ಕನ್ನಡ ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿಯವರಿಗೆ ಮನವಿ ಸಲ್ಲಿಸಿದರು.
“ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಬಿಸಿಎಂ ಹಾಸ್ಟೆಲ್ಗಳ ಮಾಸಿಕ ನಿರ್ವಹಣಾ ಹಣವನ್ನು ಪ್ರಸ್ತುತದಲ್ಲಿ ಪ್ರತಿ ವಿದ್ಯಾರ್ಥಿನಿಗೆ ಕೇವಲ ₹1,750(ದಿನಕ್ಕೆ ₹56) ಮಾತ್ರ ಹಣ ಜಮವಾಗುತ್ತಿದೆ. ಇದರಿಂದ ಮಕ್ಕಳಿಗೆ ಆಹಾರವನ್ನು ಒದಗಿಸಲು ಸಾಧ್ಯವಾಗುತ್ತಿಲ್ಲ. ನಿರ್ವಹಣಾ ಹಣವನ್ನು ಹೆಚ್ಚಿಸಬೇಕು” ಎಂದು ಆಗ್ರಹಿಸಿದರು.
“ಕೊರೊನಾ ನಂತರದಲ್ಲಿ ಎಲ್ಲ ಆಹಾರ, ದಿನಸಿ ಪದಾರ್ಥಗಳ ಬೆಲೆ ಏರಿಕೆಯಾಗಿದೆ. ತರಕಾರಿಗಳ ದರ ನಿತ್ಯವೂ ಹೆಚ್ಚಳವಾಗುತ್ತಿರುತ್ತದೆ. ಮಕ್ಕಳಿಗೆ ಪೌಷ್ಠಿಕ ಗುಣಮಟ್ಟದ ಆಹಾರ ಸೇವಿಸುವ ಸಲುವಾಗಿ ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಪ್ರತಿ ವಿದ್ಯಾರ್ಥಿನಿಗೆ ಮಾಸಿಕ ₹5,000ಕ್ಕೆ ಹೆಚ್ಚಿಸಬೇಕು” ಎಂದು ಮನವಿ ಮಾಡಿದರು.
“ಮಕ್ಕಳಿಗೆ ಒಂದು ದಿನಕ್ಕೆ ₹166ರಂತೆ ಹಣ ಬರುತ್ತದೆ. ಇದರಿಂದ ಮಕ್ಕಳಿಗೆ ಅನುಕೂಲವಾಗಬಹುದು. ವಿದ್ಯಾಭ್ಯಾಸದಲ್ಲಿ ಮುಂದುವರೆಯಲು ಮಕ್ಕಳಿಗೆ ಯಾವುದೇ ಅಡೆತಡೆ ಸಂಭವಿಸುವುದಿಲ್ಲ” ಎಂದು ಹೇಳಿದರು.
“ಎಲ್ಲ ಹಾಸ್ಟೆಲ್ಗಳಲ್ಲಿಯೂ ಗುಣಮಟ್ಟ ಆಹಾರ ನೀಡುವುದರಲ್ಲಿ ವಿಫಲರಾಗಿದ್ದಾರೆ. ಕಳಪೆ ಊಟದಿಂದಾಗಿ ವಿದ್ಯಾರ್ಥಿಗಳು ಮೇಲ್ವಿಚಾರಕರೊಡನೆ ಕಿತ್ತಾಡುವಂತಹ ಪರಿಸ್ಥಿತಿಯೂ ನಿರ್ಮಾಣವಾಗಿದೆ. ಹಾಸ್ಟೆಲ್ಗಳಲ್ಲೂ ಪ್ರವೇಶಾತಿ ಹೆಚ್ಚುತ್ತಿರುವುದರಿಂದ ಹೆಚ್ಚಿನ ಹಾಸ್ಟೆಲ್ಗಳನ್ನು ಪ್ರಾರಂಭಿಸಬೇಕು. ಅಂಕಗಳ ಶ್ರೇಣಿಕೃತ ಆಧಾರದಲ್ಲಿ ಕೊಡುವಂತಹ ಪ್ರವೇಶಾತಿ ಪದ್ಧತಿಯನ್ನು ಕೂಡಲೇ ನಿಲ್ಲಿಸಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ದಲಿತರ ಏಳಿಗೆಗೆ ಸರ್ಕಾರ ಮೀಸಲಿಟ್ಟ ಅನುದಾನ ಸಮರ್ಪಕ ಬಳಕೆಯಾಗುತ್ತಿಲ್ಲ: ರಮೇಶ್ ವೀರಾಪೂರು
“ಸದ್ಯ ಡಿಜಿಟಲ್ ಮುಂದುವರೆಯುವುದರಿಂದ ವಿದ್ಯಾರ್ಥಿಗಳಿಗೆ ಹಾಸ್ಟೆಲ್ನಲ್ಲಿ ವೈಫೈ ಸೌಲಭ್ಯ ಒದಗಿಸಬೇಕು. ಕ್ರೀಡಾ ಸಾಮಾಗ್ರಿಗಳನ್ನು ಕಾಲಕಾಲಕ್ಕೆ ಪೂರೈಕೆ ಮಾಡಬೇಕು. ಎಲ್ಲ ಹಾಸ್ಟೆಲ್ಗಳಲ್ಲಿಯೂ ಪ್ರತಿ ವಾರಕ್ಕೆರಡು ದಿನದಂತೆ ಸ್ಪರ್ಧಾತ್ಮಕ ತರಗತಿಗಳನ್ನು ಏರ್ಪಡಿಸಬೇಕು” ಎಂದು ಒತ್ತಾಯಿಸಿದರು.
ಈ ವೇಳೆ ಕರ್ನಾಟಕ ವಿದ್ಯಾರ್ಥಿ ಸಂಘಟನೆ ರಾಜ್ಯ ಮುಖಂಡ ದುರುಗೇಶ್ ಬರಗೂರು, ಯಮುನಮ್ಮ, ಶರಣಬಸವ, ಯಮನೂರು, ರಾಜಣ್ಣ, ಲಕ್ಷ್ಮಿ ಸೇರಿದಂತೆ ಇತರರು ಇದ್ದರು.
